ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದ ರೈತರ ಮೇಲೆ, ಕೇಂದ್ರ ಸರಕಾರದ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾರ ಪುತ್ರ ಆಶಿಶ್ ಮಿಶ್ರಾ ಮತ್ತು ಇನ್ನಿತರ ಆಪ್ತರು ಬೆಂಗಾವಲು ಪಡೆಯ ವಾಹನಗಳನ್ನು ಚಲಾಯಿಸಿ, ಪ್ರತಿಭಟನಾ ನಿರತ ನಾಲ್ವರು ರೈತರನ್ನು ಬರ್ಭರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಶೀಘ್ರವಾಗಿ ಮುಖ್ಯ ಆರೋಪಿ ಆಶಿಶ್ ಮಿಶ್ರಾನನ್ನೂ ಬಂಧಿಸಲಾಗುವುದು ಎಂದೂ ಹೇಳಿದ್ದಾರೆ.
ಈ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಏನು ಕ್ರಮಕೈಗೊಂಡಿದ್ದೀರಾ? ಎಂದು ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದ ಬೆನ್ನಲ್ಲೇ ಉತ್ತರ ಪ್ರದೇಶ ಪೊಲೀಸರು ಪ್ರಕರಣದ ಆರೋಪಿಗಳನ್ನು ಬೆನ್ನತ್ತುತ್ತಿದ್ದಾರೆ.
ರೈತರ ದುರ್ಮರಣ ನಡೆದ ನಂತರ ಸಾಮಾಜಿಕ ಜಾಲತಾಣ ಮತ್ತು ಜಾಗತಿಕ ಮಟ್ಟದಲ್ಲಿ ಹಲವು ವಿರೋಧಾಭಾಸಗಳು ಕೇಳಿ ಬಂದಿದ್ದು, ಹಲವು ಬಿಜೆಪಿ ವಿರೋಧ ಪಕ್ಷಗಳು, ರೈತಾಪಿ ವರ್ಗದವರು ಪ್ರಕರಣದ ವಿರುದ್ಧ ಹರಿಹಾಯ್ದಿದ್ದರು. ಇದಕ್ಕೆ ಮೂಲ ಕಾರಣಕರ್ತನಾದ ಕೇಂದ್ರ ಸರ್ಕಾರದ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾರ ಪುತ್ರ ಆಶಿಶ್ ಮಿಶ್ರಾನನ್ನು ಈ ಕೂಡಲೇ ಬಂಧಿಸಿ, ಕಠಿಣ ಶಿಕ್ಷೆ ಒದಗಿಸಬೇಕೆಂದು ಆಗ್ರಹಿಸಿದ್ದರು. ಇದೀಗ ಹಲವು ಒತ್ತಡಕ್ಕೆ ಮಣಿದು ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಆರೋಪಿಗಳನ್ನು ಬೇಟೆಯಾಡುತ್ತಿದೆ.
ಆದರೆ ಇನ್ನೂ ಕೂಡ ಪೊಲೀಸರು ಮುಖ್ಯ ಆರೋಪಿಯಾದ ಆಶಿಶ್ ಮಿಶ್ರಾನನ್ನು ಬಂಧಿಸದೆ, ಆಶಿಶ್ನ ಆಪ್ತರಾದ ಆಶಿಶ್ ಪಾಂಡೆ ಮತ್ತು ಲವಕುಶ್ ಎಂಬವರನ್ನು ಬಂಧಿಸಿದ್ದಾರೆ. ೀ ಸಂಭಂದ ಆಶಿಶ್ ಮಿಶ್ರಾಗೆ ಈಗಾಗಲೇ ಸಮನ್ಸ್ ಜಾರಿ ಮಾಡಿದ್ದು ಆದಷ್ಟು ಬೇಗ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.