ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ನಿರ್ಮಾಣದ, ಸಂತೋಷ್ ಆನಂದ್ ರಾಮ್ ನಿರ್ದೇಶನದ ವಂದೇ ಮಾತರಂ ವಿಡಿಯೋ ಭಾರೀ ಸದ್ದು ಮಾಡುತ್ತಿದ್ದು ಪ್ರಧಾನಿ ನರೇಂದ್ರ ಮೋದಿ ಈ ಆಲ್ಬಮ್ ಸಾಂಗ್ಅನ್ನು ನೋಡಿ ಹಾಡಿ ಹೊಗಳಿದ್ದಾರೆ.
ಈ ವಿಡಿಯೋವನ್ನು ಖುದ್ದು ಪ್ರಧಾನಿ ಮೋದಿ ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆಗೈದ ಕರ್ನಾಟಕದ ಅಪ್ರತಿಮ ಸಾಧಕರ ಅತ್ಯುತ್ತಮ ಪ್ರಯತ್ನ ಎಂಬ ಅಡಿಬರಹವನ್ನ ನೀಡಿ ರಿಟ್ವೀಟ್ ಮಾಡಿದ್ದಾರೆ.
ಹಾಡಿನಲ್ಲಿ ನಟರಾದ ಶಿವರಾಜ್ಕುಮಾರ್, ಸುದೀಪ್, ರವಿಚಂದ್ರನ್, ಜಗ್ಗೇಶ್, ರಮೇಶ್ ಅರವಿಂದ್, ಅನಂತನಾಗ್, ಅರ್ಜುನ್ ಸರ್ಜಾ, ಗಣೇಶ್, ಶ್ರೀಮುರಳಿ, ಧನಂಜಯ, ರಿಷಬ್ ಶೆಟ್ಟಿ, ಧ್ರುವ ಸರ್ಜಾ, ಹಿರಿಯ ಸಾಹಿತಗಳಾದ ಎಸ್.ಎಲ್. ಬೈರಪ್ಪ, ವೃಕ್ಷಮಾತೆ ಸಾಲುಮರದ ತಿಮ್ಮಕ್ಕ, ರಾಷ್ಟ್ರಪ್ರಶಸ್ತಿ ಪುರಸ್ಕೃತರಾದ ಜೋಗತಿ ಮಂಜಮ್ಮ, ಕ್ರಿಕೆಟ್ ಆಟಗಾರ ವೆಂಕಟೇಶ್ ಪ್ರಸಾದ್ ಕಾಣಿಸಿಕೊಂಡಿದ್ದಾರೆ.
ವಿಡಿಯೋ ಕುರಿತು ಮಾತನಾಡಿರುವ ನಟ ಜಗ್ಗೇಶ್ ನನಗೆ ಇಂತಹ ಒಂದು ಹಾಡನ್ನು ನಮ್ಮ ಕನ್ನಡ ಚಿತ್ರರಂಗದ ಕಲಾವಿದರ ಸಮಾಗಮದಲ್ಲಿ ಮಾಡಬೇಕೆಂಬ ಆಸೆ ತುಂಬಾ ದಿನಗಳಿಂದ ಇತ್ತು. ನನಗೆ ಮಿಲೇ ಸುರ್ ಮೇರಾ ತುಮಾರ ಹಾಡೆಂದರೆ ಚಿಕ್ಕವಯಸ್ಸಿನಿಂದಲ್ಲೇ ತುಂಬಾ ಇಷ್ಟ ನನ್ನ ಗೆಳೆಯ ಶ್ರೀನಿಧಿ ಬಹು ದಿನಗಳ ಹಿಂದೆ ಇದರ ಬಗ್ಗೆ ನನ್ನ ಬಳಿ ಪ್ರಸ್ತಾಪಿಸಿದ್ದರು ನಾನು ನಿರ್ಮಾಣ ಮಾಡಲು ಮುಂದಾದೆ 13 ದಿನಗಳ ಅಂತರದಲ್ಲಿ ಈ ಹಾಡನ್ನು ನಿರ್ಮಣ ಮಾಡಲಾಗಿದೆ ಎಂದು ರಾಜ್ಯಸಭಾ ಸದಸ್ಯ ಜಗ್ಗೇಶ್ ತಿಳಿಸಿದ್ದಾರೆ.
ನಿರ್ದೇಶಕ ಸಂತೋಷ್ ಆನಂದ್ರಾಮ್ ಮಾತನಾಡಿ ವಂದೇ ಮಾತರಂ ಎಂದರೆ ಜಾತಿ, ಮತ, ಧರ್ಮ ಎಲ್ಲವನ್ನು ದಾಟಿ ನಾವೆಲ್ಲರು ಒಂದೇ ಎಂದು ಭಾರತಮಾತೆಯ ಮಕ್ಕಳು ಸಾರುವ ಸಾರಾಂಶ ದೇಶವನ್ನು ಯಾವ ರೀತಿಯಲ್ಲಿ ವಿವರಿಸಲು ಹೋದಾಗ ನಾವು ಗೋಮಾತೆಯನ್ನು ತಾಯಿಯ ರೀತಿ ಪೂಜಿಸುತ್ತೇವೆ ಆ ಪಾತ್ರದಲ್ಲಿ ಶಿವರಾಜ್ಕುಮಾರ್ ಅಭಿನಯಿಸಿದ್ದಾರೆ. ನಾಲ್ಕೂವರೆ ದಿನದಲ್ಲಿ ಹಾಡನ್ನು ಚಿತ್ರೀಕರಿಸಿದ್ದೇವೆ ಎಂದು ನಿರ್ದೇಶಕ ಸಂತೋಷ್ ತಿಳಿಸಿದ್ದಾರೆ.
ವಂದೇ ಮಾತರಂ ವಿಡಿಯೋ ಸಾಂಗ್ಗೆ ಪ್ರವೀನ್ ಡಿ ಸಂಗೀತ ಸಂಯೋಜಿಸಿದ್ದು ವಿಜಯ್ ಪ್ರಕಾಶ್ ಹಾಡಿಗೆ ದನಿಯಾಗಿದ್ದಾರೆ. ಶ್ರೀಶ ಕುದುವಳ್ಳಿ ಕ್ಯಾಮರಾ ಕೈಚಳಕ ತೋರಿದ್ದಾರೆ.