ಬಿಹಾರದ ರಾಜಕೀಯ ಸ್ಥಾನಪಲ್ಲಟದ ಕುರಿತು ಉತ್ತರ ಪ್ರದೇಶದ ಸಮಾಜವಾದಿ ಪಕ್ಷ ನಾಯಕ ಅಖಿಲೇಶ್ ಯಾದವ್ ಹರ್ಷ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಬಿಜೆಪಿ ದೇಶದಲ್ಲಿ ಇನ್ನಷ್ಟು ಬಲವಾದರೆ ಜನರು ಮತದಾನದ ಹಕ್ಕನ್ನೂ ಕಳೆದುಕೊಳ್ಳುತ್ತಾರೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.
“ನೆರೆ ರಾಷ್ಟ್ರ ಚೀನಾದಲ್ಲಿ ಮತದಾನದ ಹಕ್ಕಿದೆಯೇ? ರಷ್ಯಾದಲ್ಲಿ ಮತದಾನವೆಂಬುದು ಇದೆಯೇ? ಪಾಕಿಸ್ತಾನದಲ್ಲಿ ಸೇನೆಯು ತನಗೆ ಬೇಕಾದವರನ್ನು ಅಧಿಕಾರದಲ್ಲಿ ಕೂರಿಸುತ್ತದೆ. ಮಯನ್ಮಾರ್’ನಂತಹ ದೇಶಗಳಲ್ಲಿ ಚುನಾವಣೆ ಇದೆಯೇ? ಜಾಗರೂಕರಾಗಿರಿ,” ಎಂದು ಅವರು ಹೇಳಿದ್ದಾರೆ.
ದಲಿತ ಮತ್ತು ಹಿಂದುಳಿದ ವರ್ಗಗಳ ಮತಗಳನ್ನು ಪಡೆದ ಬಿಜೆಪಿ ಅವರಿಗೆ ನ್ಯಾಯಯುತವಾಗಿ ದಕ್ಕಬೇಕಾದ ಹಕ್ಕುಗಳನ್ನು ನೀಡಿಲ್ಲ. ನಮ್ಮ ಉದ್ಯೋಗಗಳನ್ನು ಕಸಿದುಕೊಂಡು ನೇರವಾಗಿ ಸಂವಿಧಾನದ ಮೇಲೆ ದಾಳಿ ನಡೆಸುತ್ತಿದ್ದಾರೆ. ಬಿಜೆಪಿ ದೇಶದಲ್ಲಿ ಇನ್ನಷ್ಟು ಸದೃಢಗೊಂಡರೆ ನಿಮ್ಮ ಮತದಾನದ ಹಕ್ಕನ್ನು ಕೂಡಾ ನಿಮ್ಮಿಂದ ಕಸಿದುಕೊಳ್ಳುತ್ತಾರೆ. ಇದು ತಮಾಷೆಯಲ್ಲ, ಎಂದು ಎಚ್ಚರಿಕೆ ನೀಡಿದ್ದಾರೆ.
ಇಂದಿನ ಬಿಜೆಪಿ ಸರ್ಕಾರ ದೇಶದ ಆಸ್ತಿಯನ್ನೆಲ್ಲಾ ಉದ್ಯಮಿಗಳಿಗೆ ಮಾರಿದೆ. ಮುಂದೆ ದೇಶವನ್ನೂ ಮಾರಲಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ನಾವೆಲ್ಲಾ ಉದ್ಯಮಿಗಳ ಗುಲಾಮರಾಗಿ ಬದುಕಲಿದ್ದೇವೆ. ಬ್ರಿಟಿಷರು ದೇಶದಲ್ಲಿ ವ್ಯಾಪಾರ ಮಾಡಲು ಬಂದರು. ನಂತರ ಕಾನೂನುಗಳನ್ನು ಬದಲಾವಣೆ ಮಾಡಿ ಸರ್ಕಾರವನ್ನೇ ರಚಿಸಿದರು. ಇಂದಿನ ಸರ್ಕಾರ ಕೂಡಾ ಉದ್ಯಮಿಗಳ ಸರ್ಕಾರವಷ್ಟೇ ಹೊರತು ಜನರ ಸರ್ಕಾರವಲ್ಲ, ಎಂದಿದ್ದಾರೆ.
ಬಿಹಾರ ಬೆಳವಣಿಗೆಯ ಕುರಿತು ಮಾತನಾಡಿರುವ ಅವರು, ‘ಬಿಜೆಪಿ ಭಾರತ ಬಿಟ್ಟು ತೊಲಗಲಿ’ ಎಂಬ ಧ್ಯೇಯ ವಾಕ್ಯಕ್ಕೆ ಬಿಹಾರದಲ್ಲಿ ಉತ್ತಮ ಆರಂಭ ಲಭಿಸಿದೆ. ‘ಬ್ರೀಟಿಷರೇ ಭಾರತ ಬಿಟ್ಟು ತೊಲಗಿ’ ಎಂಬ ಧ್ಯೇಯ ವಾಕ್ಯ ಆರಂಭವಾದ ದಿನವೇ ‘ಬಿಜೆಪಿ ಭಾರತ ಬಿಟ್ಟು ತೊಲಗಲಿ’ ಎಂಬ ಧ್ಯೇಯ ವಾಕ್ಯವೂ ಹುಟ್ಟಿಕೊಂಡಿದೆ. ಶೀಘ್ರದಲ್ಲಿಯೇ ಆಯಾ ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಬಿಜೆಪಿಯ ವಿರುದ್ಧ ರಣಕಹಳೆ ಮೊಳಗಿಸುವ ಸಾಧ್ಯತೆಯಿದೆ, ಎಂದಿದ್ದಾರೆ.