ಮೀಸಲಾತಿ ಪಾಲಿಟಿಕ್ಸ್ ಮಾಡುತ್ತಿರುವ ಬಿಜೆಪಿ ಸರ್ಕಾರಕ್ಕೆ ಮೀಸಲಾತಿಯೇ ಶಾಪವಾಗಿ ಪರಿಣಮಿಸುವ ಸಾಧ್ಯತೆಗಳು ದಟ್ಟವಾಗಿವೆ. ನಾಳೆ ಅಂದರೆ ಡಿಸೆಂಬರ್ 29ರಂದು ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವುದಾಗಿ ಸಿಎಂ ತಾಯಿ ಮೇಲೆ ಪ್ರಮಾಣ ಮಾಡಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದರು. ಡಿಸೆಂಬರ್ 29ರಂದು ಸಚಿವ ಸಂಪುಟ ಸಭೆ ಹಾಗು ಸರ್ವಪಕ್ಷ ಸಭೆಯಲ್ಲಿ ಚರ್ಚೆ ನಡೆಸಿ ಮೀಸಲಾತಿ ಕೊಟ್ಟೇ ಕೊಡುತ್ತೇವೆ ಎಂದಿದ್ದಾರೆ ಎನ್ನಲಾಗಿತ್ತು. ಇದೀಗ ಸಿಎಂ ಪಂಚಮಸಾಲಿಗಳಿಗೆ 2A ಮೀಸಲಾತಿ ಕೊಟ್ಟರೂ ಕೊಡಬಹುದು. ಆದರೆ ಪಂಚಮಸಾಲಿಗಳು ಮೇಲ್ವರ್ಗಕ್ಕೆ ಸೇರಿದವರಾಗಿದ್ದಾರೆ. ಅವರಿಗೆ 2A ಮೀಸಲಾತಿ ಕೊಡಬಾರದು ಎನ್ನುವ ಕೂಗು ಕೇಳಿ ಬಂದಿದೆ. ಒಂದು ವೇಳೆ 2A ಮೀಸಲಾತಿ ಉಗ್ರ ಹೋರಾಟ ಮಾಡುವುದಾಗಿಯೂ ಘೋಷಣೆ ಮಾಡಲಾಗಿದೆ.
ಮೊದಲು ಎಸ್ಟಿಗೆ ಸೇರ್ಪಡೆ ಮಾಡಿ, ಆಮೇಲೆ ಪಂಚಮಸಾಲಿಗೆ ಕೊಡಿ..!
2A ಮೀಸಲಾತಿ ಅಡಿಯಲ್ಲಿ ಈಗಾಗಲೇ ಸಾಕಷ್ಟು ಸಮುದಾಯಗಳು ಆಶ್ರಯ ಪಡೆದುಕೊಂಡಿವೆ. ಅದರಲ್ಲಿ ಕುರುಬ ಜನಾಂಗವೂ ಒಂದು. ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎನ್ನುವ ಆಗ್ರಹ ಸಾಕಷ್ಟು ದಿನಗಳಿಂದ ಕೇಳಿ ಬರುತ್ತಿದೆ. ಇದೀಗ ಕಾಗಿನೆಲೆ ಗುರುಪೀಠದ ಸಿದ್ಧರಾಮಾನಂದ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಕುರುಬರಿಗೆ ಎಸ್ಟಿ ಮೀಸಲಾತಿ ನೀಡಿದ ಬಳಿಕ ಪಂಚಮಸಾಲಿಗಳನ್ನು 2A ಅಡಿಗೆ ತನ್ನಿ, ಕುರುಬರಿಗೆ ಎಸ್ಟಿ ಮೀಸಲಾತಿ ಕೊಡದಿದ್ದರೆ ಪಂಚಮಸಾಲಿಗಳಿಗೆ 2A ಮೀಸಲಾತಿ ಪ್ರಕ್ರಿಯೆ ನಿಲ್ಲಿಸಿ ಎಂದಿದ್ದಾರೆ. ಆರ್ಥಿಕವಾಗಿ ಸಬಲವಾಗಿರುವ ಸಮುದಾಯಗಳಿಗೆ 2A ಮೀಸಲಾತಿ ನೀಡುವುದು ಸರಿಯಲ್ಲ, ಒಂದು ನಮ್ಮ ಮನವಿಗೆ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸದೆ ಇದ್ದರೆ ದೊಡ್ಡ ಮಟ್ಟದ ಹೋರಾಟವನ್ನು ರೂಪಿಸುತ್ತೇವೆ ಎಂದಿದ್ದಾರೆ.
ಅತ್ತ ಹುಲಿ, ಇತ್ತ ದರಿ ಎತ್ತ ಪೋಗುವುದು..? ಎನ್ನುವಂತಾಗಿದೆ
ರಾಜ್ಯದಲ್ಲಿ ಪಂಚಮಸಾಲಿ ಸಮುದಾಯ ಹಾಗು ಕುರುಬ ಸಮುದಾಯದ ನಡುವೆ ಮೀಸಲಾತಿ ಜಪಾಪಟಿ ಶುರುವಾಗಿರುವುದು ಸರ್ಕಾರಕ್ಕೆ ನುಂಗಲಾರದ ಬಿಸಿ ತುಪ್ಪ ಎನ್ನುವಂತಾಗಿದೆ. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಟ್ಟರೆ, ಪಂಚಮಸಾಲಿಗಳು ಖುಷಿ ಆಗುತ್ತಾರೆ. ಬಿಜೆಪಿಗೆ ಬಹುಪರಾಕ್ ಎನ್ನುತ್ತಾರೆ. ಆದರೆ ಕುರುಬರು ಸೇರಿದಂತೆ 2A ಮೀಸಲಾತಿ ಅಡಿಯಲ್ಲಿ ಬರುವ ಸಣ್ಣಪುಟ್ಟ ಸಮುದಾಯಗಳು ಒಟ್ಟುಗೂಡಿ ಸರ್ಕಾರದ ವಿರುದ್ಧ ಮುಗಿಬೀಳುವ ಸಾಧ್ಯತೆ ಹೆಚ್ಚಾಗಿದೆ. ಈಗಿರುವ ಮೀಸಲಾತಿ ಪ್ರಮಾಣದಲ್ಲಿ ಪಂಚಮಸಾಲಿ ಸಮುದಾಯವನ್ನು ಜೊತೆಗೆ ಸೇರಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ. ಮೀಸಲಾತಿ ಕೊಟ್ಟರೂ ಬೇರೆಯವರಿಗೆ ಸಮಸ್ಯೆ ಆಗದಂತೆ ಮೀಸಲಾತಿ ಕೊಡಬೇಕಿದೆ. ಇಲ್ಲದಿದ್ದರೆ ಮತ್ತೊಂದು ರೀತಿಯಲ್ಲಿ ಇದರ ಪರಿಣಾಮವನ್ನು ಸರ್ಕಾರ ಎದುರಿಸಬೇಕಾಗುತ್ತದೆ.
ಮೀಸಲಾತಿ ಸರ್ಕಾರಕ್ಕೆ ಸಂಕಷ್ಟವನ್ನೇ ತಂದೊಡ್ಡುತ್ತಾ..?
ಕಳೆದ ಬಾರಿ ಕಾಂಗ್ರೆಸ್ ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮ ಮಾನ್ಯತೆ ಕೊಡಬೇಕು ಎನ್ನುವ ವಿಚಾರವಾಗಿ ಚರ್ಚೆಯನ್ನು ಹುಟ್ಟು ಹಾಕಿತ್ತು. ಆದರೆ ಲಿಂಗಾಯತರು ಹಾಗು ವೀರಶೈವರು ಎಲ್ಲರೂ ಒಂದೇ ಎನ್ನುವ ಪರವಾಗಿ ಬಿಜೆಪಿ ಬೆಂಬಲ ವ್ಯಕ್ತಪಡಿಸಿತ್ತು. ಇದೀಗ ಅದೇ ಲಿಂಗಾಯತರ ಒಳಪಂಗಡಕ್ಕೆ 2A ಮೀಸಲಾತಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಎರಡೂ ರಾಜಕೀಯ ಪಕ್ಷಗಳು ಒಂದಲ್ಲ ಒಂದು ರೀತಿಯಲ್ಲಿ ಸಮುದಾಯಗಳ ನಡುವೆ ತಾರತಮ್ಯ ನೀತಿಯನ್ನು ಜಾರಿ ಮಾಡುವ ಮೂಲಕ ಮತಬ್ಯಾಂಕ್ ಭದ್ರ ಮಾಡಿಕೊಳ್ಳಲು ಹವಣಿಸುತ್ತಿದ್ದಾರೆ. ಆದರೆ ಎದುರಾಳಿ ಸಮುದಾಯಗಳು ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಸಜ್ಜಾಗಲಿವೆ. ಕಳೆದ ಬಾರಿ ಕಾಂಗ್ರೆಸ್ ಅನುಭವಿಸಿದ ಹಿನ್ನಡೆ ಈ ಬಾರಿ ಭಾರತೀಯ ಜನತಾ ಪಾರ್ಟಿ ಎದುರಿಸಬೇಕಾಗಿ ಬರಬಹುದು ಎನ್ನುವುದು ರಾಜಕೀಯ ವಲಯದಲ್ಲಿ ಚರ್ಚೆ ಆಗುತ್ತಿರುವ ಮಾತು.
ಕೃಷ್ಣಮಣಿ