ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲು ನೀಡುವ ಭರವಸೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದು,ಮೀಸಲಾತಿ ಸಿಗುವವರೆಗೆ ಹೋರಾಟ ನಡೆಸಲಾಗುವುದು. ಈಗಾಗಲೇ ಮುಖ್ಯಮಂತ್ರಿ ಅವರಿಂದ ಭರವಸೆ ಸಿಕ್ಕ ಹಿನ್ನೆಲೆಯಲ್ಲಿ ಆಗಷ್ಟ್ 27 ರವರೆಗೆ ಹೋರಾಟ ಮುಂದೂಡಲಾಗಿದೆ ಎಂದು ಕೂಡಲಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ನಗರದ ಗೋಕುಲ ರಸ್ತೆ ಖಾಸಗಿ ಹೊಟೇಲ್ ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜ ಮುಖ್ಯಮಂತ್ರಿ ಅವರ ಮೇಲೆ ಭರವಸೆ ಇಟ್ಟಿದೆ. ಆದರೆ, ಅವರು ಅದನ್ನು ಕಳೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಮೀಸಲಾತಿ ನೀಡುವ ಕುರಿತು ಅವರು ತಮ್ಮ ನಿಲುವು ಏನೆಂಬುದನ್ನು ಕೂಡಲೇ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಲಾಗಿದೆ ಎಂದಿದ್ದಾರೆ.
ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 4ನೇ ಬಾರಿಗೆ ಸರಕಾರವು ಕೊಟ್ಟಿರುವ ಮಾತನಂತೆ ಮೀಸಲಾತಿ ಪಡೆಯುವ ನಿಟ್ಟಿನಲ್ಲಿ ಪಂಚ ಹಂತದ ಚಳುವಳಿಯ ಅಂಗವಾಗಿ ಧಾರವಾಡ ಜಿಲ್ಲೆ ಜಿಲ್ಲಾಧಿಕಾರಿಗಳ ಕಚೇರಿಮುಂದೆ ಒಂದು ದಿನದ ಸತ್ಯಾಗ್ರಹ ಕೈ ಕೊಳ್ಳುವ ಸಲುವಾಗಿ ಪೂರ್ವ ಬಾವಿ ಸಭೆಯನ್ನು ಜು 28 ರಂದು ರಂ ಬೆಳಿಗ್ಗೆ 11ಘಂಟೆಗೆ ನಡೆಸಲಾಗುವುದು. ಈಗಾಗಲೇ ಸಚಿವರಾದ ಸಿ.ಸಿ.ಪಾಟೀಲ್ ಹಾಗೂ ಮುಖಂಡರಾದ ಬಸನಗೌಡ ಪಾಟೀಲ ಯತ್ನಾಳ ಅವರ ಮೇಲೆ ನಂಬಿಕೆ ಇರಿಸಿ ಧರಣಿ ವಾಪಸ್ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
