ಸಾಂಕ್ರಾಮಿಕ ರೋಗದ ಎರಡನೇ ಅಲೆಗೆ ದೇಶಾದ್ಯಂತ ಕನಿಷ್ಠ 420 ವೈದ್ಯರು ಬಲಿಯಾಗಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಭಾನುವಾರ ತಿಳಿಸಿದೆ. ಈ ಸಾವುಗಳಲ್ಲಿ ಸುಮಾರು ನಾಲ್ಕನೇ ಒಂದು ಭಾಗ ದೆಹಲಿಯಿಂದ ವರದಿಯಾಗಿದೆ ಎಂದು ಅದು ಹೇಳಿಕೆಯಲ್ಲಿ ಬಿಡುಗಡೆ ಮಾಡಿದೆ.
ಮಾಜಿ ಆರೋಗ್ಯ ಸಚಿವ ಮತ್ತು ವೈದ್ಯ ಎ.ಕೆ.ವಾಲಿಯಾ, ಖ್ಯಾತ ಹೃದ್ರೋಗ ತಜ್ಞ ಮತ್ತು ಐಎಂಎ ಮಾಜಿ ಮುಖ್ಯಸ್ಥ ಡಾ.ಕೆ.ಕೆ. ಅಗರ್ವಾಲ್ ಮತ್ತು ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ.ಆರ್.ಕೆ. ಹಿಮ್ತಾನಿ ಅವರು ಈ ವೈರಲ್ ಕಾಯಿಲೆಗೆ ಬಲಿಯಾದ ಕೆಲವು ಪ್ರಮುಖ ವೈದ್ಯರು.
ಐಎಂಎ ನೋಂದಾವಣೆಯ ಪ್ರಕಾರ, ದೆಹಲಿ-ಎನ್ಸಿಆರ್ 100 ವೈದ್ಯರ ಸಾವನ್ನಪ್ಪಿದ್ದರೆ, ಬಿಹಾರದಲ್ಲಿ 96 ಮತ್ತು ಉತ್ತರ ಪ್ರದೇಶದಲ್ಲಿ 41 ವೈದ್ಯರು ಬಲಿಯಾಗಿದ್ದಾರೆ. ಕೋವಿಡ್ನ ಮೊದಲ ಅಲೆಯಲ್ಲಿ 747 ವೈದ್ಯರು ಸಾವನ್ನಪ್ಪಿದ್ದರು.
ಕರ್ನಾಟಕದಲ್ಲಿ 61 ವೈದ್ಯರು ಕೋವಿಡ್ ಮೊದಲ ಅಲೆಯಲ್ಲಿ ಪ್ರಾಣ ಕಳೆದುಕೊಂಡಿದ್ದರೆ ಎರಡನೇ ಅಲೆಯಲ್ಲಿ ಇದುವರೆಗೆ 8 ವೈದ್ಯರು ಪ್ರಾಣ ಕಳೆದುಕೊಂಡಿದ್ದಾರೆ.
ಮೊದಲ ಅಲೆಯಲ್ಲಿ ಕರ್ತವ್ಯದಲ್ಲಿರುವಾಗ ಸಾವನ್ನಪ್ಪಿದ ವೈದ್ಯರ ಸಂಖ್ಯೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಕೇಂದ್ರ ಹೇಳಿದ ನಂತರ ಐಎಂಎ ಈ ನೋಂದಾವಣೆಯನ್ನು ನಿರ್ವಹಿಸಲು ಪ್ರಾರಂಭಿಸಿತ್ತು. “19.05.2021ರ ಲೆಕ್ಕದಂತೆ ಒಟ್ಟು 1076 ವೈದ್ಯರು ಕೋವಿಡ್ ವಿರುದ್ಧದ ಹೋರಾಟದಲ್ಲಿ ಇದುವರೆಗೆ ಪ್ರಾಣ ತ್ಯಾಗ ಮಾಡಿದ್ದಾರೆ ”ಎಂದು ಐಎಂಎ ಮಾಜಿ ಮುಖ್ಯಸ್ಥ ಡಾ.ರಾಜನ್ ಶರ್ಮಾ ಹೇಳಿದ್ದಾರೆ.
ಆರೋಗ್ಯ ಕಾರ್ಯಕರ್ತರ ಅದರಲ್ಲೂ ವೈದ್ಯರ ಈ ಸಾವುಗಳು ಆರೋಗ್ಯ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಈವರೆಗೆ ಕೇವಲ ಭಾರತದ 66% ನಷ್ಟು ಆರೋಗ್ಯ ಕಾರ್ಯಕರ್ತರು ಮಾತ್ರ ಲಸಿಕೆ ಪಡೆದಿದ್ದಾರೆ. ವೈದ್ಯಕೀಯ ಕೇಂದ್ರಗಳು ಸಾಕಷ್ಟು ಸಿಬ್ಬಂದಿಗಳನ್ನು ಹೊಂದಿಲ್ಲದೇ ಇರುವುದರಿಂದ ವೈದ್ಯರು ಅತಿಯಾದ ಕೆಲಸ ಮಾಡಬೇಕಾಗುತ್ತಿದೆ. ಇದು ಅತಿಯಾಗಿ ಕೋವಿಡ್ ರೋಗಿಗಳೊಂದಿಗೆ ನೇರ ಸಂಪರ್ಕಕ್ಕೆ ಕಾರಣವಾಗುವುದಲ್ಲದೆ ಒತ್ತಡದಂತಹ ಸಮಸ್ಯೆಗಳನ್ನೂ ಸೃಷ್ಟಿಸುತ್ತಿದೆ.
ಸರ್ಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಭಾರತದ ಆರೋಗ್ಯ ಮೂಲಸೌಕರ್ಯದ ಮಿತಿಗಳನ್ನು ಮೀರಿ ದಾಖಲಾಗುತ್ತಿರುವ ಪ್ರಕರಣಗಳು ವೈದ್ಯರ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮದ ಮೇಲೂ ಪರಿಣಾಮ ಬೀರುತ್ತಿವೆ. ರಾಜ್ಯದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಹಾಸಿಗೆಗಳನ್ನು ಕಾಯ್ದಿರಿಸುವಂತೆ ಕೋರಿ ಐಎಂಎ ರಾಜ್ಯ ಶಾಖೆ ಸರ್ಕಾರಕ್ಕೆ ಪತ್ರ ಬರೆದ ನಂತರ, ಪ್ರತಿ ಜಿಲ್ಲೆಯಲ್ಲಿ 10% ಹಾಸಿಗೆಗಳನ್ನು ಅವರಿಗೆ ಮೀಸಲಿಡಲಾಗಿದೆ. ವೈದ್ಯರ ಮತ್ತು ಆರೋಗ್ಯ ಕಾರ್ಯಕರ್ತರ ಸಾವು ನಮ್ಮ ಹೆಲ್ತ್ಕೇರ್ ವ್ಯವಸ್ಥೆಯಲ್ಲಿನ ಹುಳುಕನ್ನು, ಅಸಮರ್ಪಕತೆಯನ್ನು ಹೊರಹಾಕುತ್ತಿದೆ.