ಮಂಗಳೂರು : ಆಝಾನ್ ವಿಚಾರವಾಗಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ನೀಡಿದ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಮಂಗಳೂರಿನಲ್ಲಿ ವಿಪಕ್ಷ ಉಪನಾಯಕ ಯು.ಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಶ್ವರಪ್ಪನ ಮಾತಿಗೂ ಅವರ ಮೆದುಳಿಗೂ ಕನೆಕ್ಷನ್ ಇಲ್ಲ. ಈ ಬಾರಿಯ ಚುನಾವಣೆಯಲ್ಲಿ ಸೀಟು ಸಿಗೋದಿಲ್ಲ ಅಂತಾ ಅವರ ಪಕ್ಷದ ನಾಯಕರು ಈಶ್ವರಪ್ಪರಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ. ಇದರಿಂದ ಅಸ್ತವ್ಯಸ್ತಗೊಂಡಿರುವ ಈಶ್ವರಪ್ಪ ಈ ರೀತಿಯ ಹೇಳಿಕೆಗಳನ್ನು ನೀಡ್ತಿದ್ದಾರೆ ಅಂತಾ ಕಿಡಿಕಾರಿದ್ದಾರೆ.
ಈಶ್ವರಪ್ಪ ಹೇಗಾದರೂ ಮಾಡಿ ಹೈಕಮಾಂಡ್ ಮೆಚ್ಚಿಸುವ ಸಾಹಸದಲ್ಲಿದ್ದಾರೆ. ಅದಕ್ಕಾಗಿಯೇ ಈ ರೀತಿಯ ಹೇಳಿಕೆಗಳನ್ನು ನೀಡ್ತಿದ್ದಾರೆ . ಪ್ರತಿಯೊಂದು ಧರ್ಮಕ್ಕೂ ಅದರದ್ದೇ ಆದ ಮೌಲ್ಯವಿದೆ. ಹೀಗಾಗಿ ಚುನಾವಣೆಯ ಸಂದರ್ಭದಲ್ಲಿ ಈ ರೀತಿಯ ಭಾವನಾತ್ಮಕ ಹೇಳಿಕೆ ನೀಡುವುದು ಸರಿಯಲ್ಲ. ಒಂದು ಧರ್ಮದ ಬಗ್ಗೆ ಅಪಹಾಸ್ಯ ಮಾಡಿದ ಮಾತ್ರಕ್ಕೆ ಆ ಧರ್ಮಕ್ಕೆ ಏನೂ ಆಗೋದಿಲ್ಲ. ಆದರೆ ಆ ರೀತಿಯ ಹೇಳಿಕೆ ನೀಡಿದ ವ್ಯಕ್ತಿಯ ನೀಚತನ, ಸಂಸ್ಕೃತಿ ಏನು ಅನ್ನೋದು ತಿಳಿಯುತ್ತೆ ಎಂದು ಗುಡುಗಿದ್ದಾರೆ.
ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧವೂ ಆಕ್ರೋಶ ಹೊರಹಾಕಿದ ಅವರು, ರಾಜ್ಯ ಸರ್ಕಾರ ತಮ್ಮ ಅಂಗಡಿಗೆ ಶಟರ್ ಎಳೆಯುವ ಸ್ಥಿತಿಗೆ ಬಂದು ತಲುಪಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಸರ್ಕಾರ ತಮ್ಮ ಕಚೇರಿಗಳನ್ನು ಬಂದ್ ಮಾಡಿ ವಿಜಯಸಂಕಲ್ಪ ಯಾತ್ರೆಯಲ್ಲಿ ಬ್ಯುಸಿಯಾಗಿದೆ. ಇದು ವಿಜಯ ಸಂಕಲ್ಪ ಯಾತ್ರೆ ಅಲ್ಲ 40 ಪರ್ಸೆಂಟ್ ಕಮಿಷನ್ ಯಾತ್ರೆ ಎಂದು ಯು.ಟಿ ಖಾದರ್ ಆಕ್ರೋಶ ಹೊರ ಹಾಕಿದ್ದಾರೆ.