ದಿನದಿಂದ ದಿನಕ್ಕೆ ಡಾಲರ್ ಎದುರು ರೂಪಾಯಿ ನಿರಂತರವಾಗಿ ಕುಸಿಯುತ್ತಿದೆ. ಮಂಗಳವಾರ ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಕುಸಿತ ಕಂಡಿದ್ದು, ರೂಪಾಯಿ 80ಕ್ಕೆ ತಲುಪಿದೆ ಈ ವಿಚಾರವಾಗಿ ತೀವ್ರ ಅಸಮಾಧಾನ ವ್ಯಕ್ತಿಪಡಿಸಿರುವ ಬಹುಭಾಷಾ ನಟ ಪ್ರಕಾಶ್ ರೈ ಅವರು, “ಒಂದು ಕಾಲದಲ್ಲಿ. ನನ್ನ ದೇಶದಲ್ಲಿ” ಎಂದು ಟ್ವೀಟ್ ಮಾಡಿದ್ದಾರೆ.
“ಒಂದು ಕಾಲದಲ್ಲಿ. ನನ್ನ ದೇಶದಲ್ಲಿ.. #justasking” ಎಂದು ಟ್ವೀಟ್ ಮಾಡಿರುವ ಪ್ರಕಾಶ್ ರೈ, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಡಾಲರ್ ಎದುರು ರೂಪಾಯಿ ಕುಸಿತ ಕಂಡಾಗ ಸರ್ಕಾರವನ್ನು ಪ್ರಶ್ನಿಸಿ 2012-2013 ರಲ್ಲಿ ಅಮಿತಾಬ್ ಬಚ್ಚನ್, ಶಿಲ್ಪಾ ಶೆಟ್ಟಿ ಕುಂದ್ರಾ , ಅನುಪಮ ಕೇರ್, ವಿವೇಕ್ ಅಗ್ನಿಹೋತ್ರಿ , ಜೂಹಿ ಚವ್ಲಾ ಮುಂತಾದ ಸೆಲೆಬ್ರಿಟಿಗಳು ಮಾಡಿದ ಟ್ವೀಟ್ ಲಗತ್ತಿಸಿ ತಮ್ಮ ಅಸಮಾಧಾನ ತೋರ್ಪಡಿಸಿಕೊಂಡಿದ್ದಾರೆ.
ಅಂದು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪ್ರಶ್ನಿಸಿದ ಈ ಕಲಾವಿದರು ಇಂದು ಯಾಕೆ ಸುಮ್ಮನಿದ್ದಾರೆ ಎಂಬುದೇ ಪ್ರಕಾಶ್ ರೈ ಅವರ ಟೀಕೆಯಾಗಿದೆ.
ಈ ಟ್ವೀಟ್ಗೆ ಹಲವರು ಪ್ರತಿಕ್ರಿಯಿಸಿದ್ದು, ಅದರಲ್ಲಿ ಒಂದು ಟ್ವೀಟಿಗ, “ನಮ್ಮ ದೇಶದ ಹೆಮ್ಮೆಯ ಪ್ರಧಾನಿಗಳು ಡಾ.ಮನಮೋಹನ್ ಸಿಂಗ್ ಅವರು ತಾವು ಮಾತನಾಡದೆ ಮೌನಿಯಾಗಿದ್ದು, ಬೇರೆ ಅವರಿಗೆ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದರು..ಆದರೆ ಈಗ ಇದೆಲ್ಲವನ್ನು ಕಿತ್ತುಕೊಳ್ಳಲಾಗಿದೆ..ಅವರು ಮಾತ್ರ ಮಾತನಾಡುತ್ತಾರೆ, ಇವರೆಲ್ಲರೂ ಮೌನಿಗಳಾಗಿದ್ದಾರೆ” ಎಂದಿದ್ದಾರೆ.