ಕೋವಿಡ್ ಎರಡನೇ ಅಲೆಯಿಂದ ತತ್ತರಿಸಿ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಜಗತ್ತಿಗೆ ದಕ್ಷಿಣಾ ಆಫ್ರಿಕಾದಲ್ಲಿ ಪತ್ತೆಯಾದ B.1.1.529 ಅಥವಾ ಓಮಿಕ್ರಾನ್ ಮತ್ತೆ ತಲೆನೋವಾಗಿ ಪರಿಣಮಿಸುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಈಗಾಗಲೇ ಭಾರತವೂ ಸೇರಿದಂತೆ ಪ್ರಪಂಚದ ಅನೇಕ ರಾಷ್ಟ್ರಗಳು ದ.ಆಫ್ರಿಕಾಗೆ ಪ್ರಯಾಣ ನಿಷೇಧಿಸಿದೆ. ಹಲವು ರಾಷ್ಟ್ರಗಳು ತಮ್ಮ ಅಂತರರಾಷ್ಟ್ರೀಯ ಗಡಿಗಳನ್ನು ಮುಚ್ಚುವ ಕುರಿತು ಯೋಚಿಸುತ್ತಿದೆ.
ಓಮಿಕ್ರಾನ್ ಡೆಲ್ಟಾ ರೂಪಾಂತರಕ್ಕಿಂತ ತುಸು ಭಿನ್ನವಾಗಿದ್ದು ವೇಗವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಡೆಲ್ಟಾದಷ್ಟು ಗಂಭೀರವಲ್ಲ ಎನ್ನುವುದು ವಿಜ್ಞಾನಿಗಳ ಅಂಬೋಣ. ಈಗಾಗಲೇ ಸೋಂಕಿಗೊಳಗಾದವರು ಮತ್ತೊಮ್ಮೆ ಸೋಂಕಿಗೆ ಒಳಗಾಗುವ ಸಾಧ್ಯತೆ ಕಡಿಮೆ ಎನ್ನುವುದು ವಿಜ್ಞಾನಿಗಳ ಅಭಿಪ್ರಾಯ. ಭಾರತದಲ್ಲಿ 85% ಜನರು ಈಗಾಗಲೇ ಸೋಂಕಿಗೆ ಒಳಗಾಗಿದ್ದು ಅನಗತ್ಯ ಭೀತಿ ಪಡುವ ಅಗತ್ಯವಿಲ್ಲ ಎಂದು ವೈದ್ಯಕೀಯ ತಜ್ಞರು ಹೇಳುತ್ತಾ ಬಂದಿದ್ದಾರೆ.
ಈ ಹಿನ್ನಲೆಯಲ್ಲಿ ಜನ ಭೀತಿಗೊಳಗಾಗದಂತೆ ಸರ್ಕಾರ ತೆಗೆದುಕೊಳ್ಳಬೇಕಾದ, ತೆಗೆದುಕೊಳ್ಳಬಾರದ ಕ್ರಮಗಳನ್ನು ಇಲ್ಲಿ ಚರ್ಚಿಸಲಾಗಿದೆ.
ಸರ್ಕಾರ ಕೈಗೊಳ್ಳಬಾರದ ಕ್ರಮಗಳು
ಮೊದಲನೆಯದಾಗಿ ಭಾರತವೂ ಸೇರಿದಂತೆ ಹೆಚ್ಚು ಜನಸಂಖ್ಯೆ ಇರುವ, ಹೆಚ್ಚು ಬಡವರಿರುವ ದೇಶಗಳಲ್ಲಿ ವಿವೇಚನೆ ಇಲ್ಲದ ಲಾಕ್ಡೌನ್ ಪ್ರಾಯೋಗಿಕವಾಗಿ ಕಾರ್ಯಸಾಧುವಲ್ಲ. ದಕ್ಷಿಣ ಆಫ್ರಿಕಾದಲ್ಲಿ ಕಳೆದ 3 ಅಲೆಗಳಲ್ಲಿ ಸೋಂಕುಗಳನ್ನು ಕಡಿಮೆ ಮಾಡುವಲ್ಲಿ ಇದು ವಿಫಲವಾಗಿದೆ. ಅಲ್ಲಿ ಮಾಡಲಾದ ಸಮೀಕ್ಷೆಯೊಂದರ ಪ್ರಕಾರ 60% -80% ಜನರು ಒಮ್ಮೆ ಸೋಂಕಿಗೆ ಒಳಗಾದವರೇ. ಇತ್ತ ಭಾರತದಲ್ಲೂ ಇದೇ ಪರಿಸ್ಥಿತಿ ಇದೆ. ಕಠಿಣ ಲಾಕ್ಡೌನ್ ಹೇರಲ್ಪಟ್ಟರೂ ಭಾರತದ 85% ಜನ ಒಮ್ಮೆ ಸೋಂಕಿಗೊಳಗಾಗಿ ಪಾರಾಗಿ ಬಂದವರೇ ಆಗಿದ್ದಾರೆ.
ಎರಡನೆಯದಾಗಿ ದೇಶೀಯ ಪ್ರಯಾಣ ನಿಷೇಧ ಮಾಡಬಾರದು. ಕಳೆದ ಬಾರಿ ಲಾಕ್ಡೌನ್ನಲ್ಲಿ ಇದೂ ಸಾಬೀತಾಗಿದೆ. ಅಲ್ಲದೆ ಬೆರಳೆಣಿಕೆಯಷ್ಟು ದೇಶಗಳ ಮೇಲೆ ಪ್ರಯಾಣ ನಿಷೇಧವನ್ನು ವಿಧಿಸುವುದರಿಂದ ರೂಪಾಂತರದ ಆಮದು ನಿಲ್ಲುತ್ತದೆ ಎಂದು ಭಾವಿಸುವುದೂ ಕಾರ್ಯಸಾಧುವಲ್ಲ. ಯಾಕೆಂದರೆ ‘ಕೆಂಪು ಪಟ್ಟಿ’ಯಲ್ಲಿರುವ ದೇಶಗಳ ವಿಮಾನ ಹಾರಾಟವನ್ನು ಇತರ ದೇಶಗಳು ಮುಚ್ಚದೇ ಇದ್ದರೆ ನೇರವಾಗಿ ಅಥವಾ ಪರೋಕ್ಷಾವಾಗಿ ವೈರಸ್ ಹರಡಿಯೇ ಹರಡುತ್ತದೆ.
ಮೂರನೆಯದಾಗಿ, ಸ್ಥಳೀಯ ಸನ್ನಿವೇಶದಲ್ಲಿ ಜಾರಿಗೊಳಿಸಲಾಗದ ಅಥವಾ ಜಾರಿಗೊಳಿಸಲು ಅಸಾಧ್ಯವಾದ ನಿಯಮಗಳನ್ನು ಹೇರಬಾರದು. ಮತ್ತು ಜನರು ಅವುಗಳನ್ನು ಅನುಸರಿಸಬೇಕು ಎಂದು ಬಯಸಬಾರದು.
ನಾಲ್ಕನೆಯದಾಗಿ, ಹೆಚ್ಚಿನ ಅಪಾಯಕ್ಕೊಳಗಾಗುವ ಸಾಧ್ಯತೆ ಕಡಿಮೆಇರುವ 45 ವರ್ಷ ಮೀರದ ವ್ಯಕ್ತಿಗಳಿಗೆ ಬೂಸ್ಟರ್ ಲಸಿಕೆ ಪಡೆಯುವಂತೆ ಒತ್ತಡ ಹೇರಬಾರದು.
ಐದನೆಯದಾಗಿ, ಶಾಶ್ವತ ರೋಗ ನಿರೋಧಕದ ಪರಿಕಲ್ಪನೆಯೊಂದಿಗೆ ಲಸಿಕೆ ಮಾರಾಟ ಮಾಡುವುದನ್ನು ನಿಲ್ಲಿಸಬೇಕು. ಯಾಕೆಂದರೆ ಇದು ಕಾರ್ಯರೂಪಕ್ಕೆ ಬರುವುದಿಲ್ಲ ಮತ್ತು ವಿರೋಧಾಭಾಸವಾಗಿ ಲಸಿಕೆ ವಿಶ್ವಾಸಾರ್ಹತೆಯನ್ನು ದುರ್ಬಲಗೊಳಿಸುತ್ತದೆ. ಯಾಕೆಂದರೆ ಮೊದಲ ತಲೆಮಾರಿನ ಲಸಿಕೆಗಳು ತೀವ್ರವಾದ COVID-19 ನಿಂದ ರಕ್ಷಿಸುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿವೆ, ಆದರೆ ಪ್ರತಿಕಾಯದ ಕ್ಷೀಣತೆ ಮತ್ತು ವೈರಸ್ನ ರೂಪಾಂತರಗಳಿಂದಾಗಿ ಎಲ್ಲಾ ಬಗೆಯ COVID-19 ನಿಂದ ಲಸಿಕೆ ಅದೇ ಪ್ರಮಾಣದಲ್ಲಿ ರಕ್ಷಿಸುತ್ತದೆ ಎಂದು ಊಹಿಸಲಾಗುವುದಿಲ್ಲ.
ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳು
ಮೊದಲನೆಯದಾಗಿ, ಆರೋಗ್ಯ ರಕ್ಷಣಾ ಸೌಲಭ್ಯಗಳನ್ನು ಕಾಗದದ ಮೇಲೆ ಮಾತ್ರ ಸಿದ್ಧಪಡಿಸಿ ಇಟ್ಟುಕೊಳ್ಳಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಸಿಬ್ಬಂದಿ, ವೈಯಕ್ತಿಕ ರಕ್ಷಣಾ ಸಾಧನಗಳು ಮತ್ತು ಆಮ್ಲಜನಕ ಗಳಂತಹ ವಾಸ್ತವ ಸಂಪನ್ಮೂಲ ಸಾಧನಗಳು ನಮ್ಮಲ್ಲಿ ಎಷ್ಟು ಪ್ರಮಾಣದಲ್ಲಿ ಇದೆ ಎಂದು ಖಚಿತಪಡಿಸಿಕೊಳ್ಳಬೇಕು. ಎರಡನೇ ಅಲೆಯಲ್ಲಿ ಸಂಪನ್ಮೂಲ ಸಾಧನಗಳ ಕೊರತೆಯಿಂದಲೇ ಭಾರತದಲ್ಲಿ ಅಷ್ಟು ಪ್ರಮಾಣದ ಸಾವು ನೋವು ಉಂಟಾಯಿತು ಎಂಬುವುದನ್ನು ನಾವು ಮರೆಯಬಾರದು.
ಎರಡನೆಯದಾಗಿ, ವ್ಯಾಕ್ಸಿನ್ನ ಒಂದೇ ಡೋಸ್ ಪಡೆದವರು ಎರಡನೇ ಡೋಸ್ ಒದಗಿಸಬೇಕು.
ಮೂರನೆಯದಾಗಿ, ಆರಾಧನಾ ಸ್ಥಳಗಳು ಮತ್ತು ಸಾರ್ವಜನಿಕ ಸಾರಿಗೆ ಸೇರಿದಂತೆ ಜನ ಸೇರುವ ಯಾವುದೇ ಸ್ಥಳಕ್ಕೆ ಪ್ರವೇಶಿಸಲು ಲಸಿಕೆ ಪಡೆದುಕೊಂಡಿರುವುದನ್ನು ಕಡ್ಡಾಯಗೊಳಿಸಬೇಕು.
ನಾಲ್ಕನೆಯದಾಗಿ ಲಸಿಕಾ ಕಾರ್ಯಕ್ರಮವನ್ನು ಇನ್ನಷ್ಟು ತೀವ್ರವಾಗಿ ನಡೆಸುವ ಮೂಲಕ ರೋಗನಿರೋಧಕ ಶಕ್ತಿಯನ್ನು ಎಲ್ಲಾ ಜನಸಾಮಾನ್ಯರಿಗೆ ತಲುಪಿಸುವ ಪ್ರಯತ್ನ ಮುಂದುವರೆಸಬೇಕು.
ಐದನೆಯದಾಗಿ, 65 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರನ್ನು ಮತ್ತು ಹೆಚ್ಚಿನ ಅಪಾಯವಿರುವ ಗುಂಪನ್ನು ತಕ್ಷಣ ಗುರುತಿಸಿ ಆದ್ಯತೆಯ ಮೇರೆಗೆ ಚಿಕಿತ್ಸೆ ನೀಡಬೇಕು.
ಆರನೆಯದಾಗಿ, ಕೆಲವೇ ಕೆಲವರ ಬೇಜವಾಬ್ದಾರಿಯಿಂದಾಗಿ ಎಲ್ಲರೂ ಶಿಕ್ಷೆ ಅನುಭವಿಸದಂತಾಗಲು ಜವಾಬ್ದಾರಿಯುತ ನಡವಳಿಕೆ ಪ್ರದರ್ಶಿಸುವಂತೆ ಜನಸಾಮಾನ್ಯರನ್ನು ಪ್ರೋತ್ಸಾಹಿಸಬೇಕು.
ಏಳನೆಯದಾಗಿ, ಸ್ಥಳೀಯವಾಗಿ ಹಾಸಿಗೆಯ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು. ಪ್ರಕರಣದ ದರಗಳು ಮತ್ತು ಆಸ್ಪತ್ರೆಗೆ ದಾಖಲಾದ ದರಗಳ ಮೇಲೆ ನಿಗಾ ಇಡುವುದರಿಂದ ಯಾವ ಪ್ರದೇಶಗಳಲ್ಲಿ ಯಾವ ಸೌಲಭ್ಯದ ಕೊರತೆ ಉಂಟಾಗಬಹುದು ಎಂದು ಊಹಿಸಬಹುದು.
ಎಂಟನೆಯದಾಗಿ, ವೈರಸ್ನೊಂದಿಗೆ ಬದುಕಲು ಕಲಿಯಬೇಕು. ಮತ್ತು ಜನಸಾಮಾನ್ಯರ ಜೀವನೋಪಾಯದ ಮೇಲೆ ಸಾಂಕ್ರಾಮಿಕದ ನೇರ ಮತ್ತು ಪರೋಕ್ಷ ಪರಿಣಾಮಗಳ ಬಗ್ಗೆ ಸಮಗ್ರ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು .
ಒಂಬತ್ತನೆಯದಾಗಿ, ವಿಜ್ಞಾನವನ್ನು ಅನುಸರಿಸಬೇಕು ಮತ್ತು ರಾಜಕೀಯ ಲಾಭಕ್ಕಾಗಿ ಅದನ್ನು ವಿರೂಪಗೊಳಿಸಬಾರದು
ಹತ್ತನೆಯದಾಗಿ, ಹಿಂದಿನ ತಪ್ಪುಗಳಿಂದ ಪಾಠ ಕಲಿತು ಮುಂದೆ ಬರಬಹುದಾದ ರೂಪಾಂತರಗಳನ್ನು ಧೈರ್ಯದಿಂದ ಎದುರಿಸುವ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು.