ದೇಶದ ಮೊದಲ ಪ್ರಧಾನಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಜವಾಹರಲಾಲ್ ನೆಹರು ಅವರ ವಿರುದ್ಧ ಬಿಜೆಪಿ ಹಾಗೂ ಆರ್ ಎಸ್ ಎಸ್ ಅಸಮಾಧಾನ ಮುಂದುವರಿದಿದ್ದು, ಅವರ ಹೆಸರಿನಲ್ಲಿ ನಡೆಯುತ್ತಿರುವ ರಾಜಕೀಯ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ವೇಳೆಯೂ ತಮ್ಮ ರಾಜಕೀಯ ದ್ವೇಷವನ್ನು ಮುಂದುವರಿಸಿದೆ.
ಹೌದು, ಬಿಜೆಪಿ ಮತ್ತು ಆರ್ ಎಸ್ ಎಸ್ ಅವರ ನೆಹರು ವಿರುದ್ಧದ ರಾಜಕೀಯ ದ್ವೇಷ ಮತ್ತೆ ಹೊರಬರಲು ಕಾರಣ ಅಮೃತ ಮಹೋತ್ಸವದ ಅಂಗವಾಗಿ ರಾಜ್ಯದ ವಿವಿಧ ಪತ್ರಿಕೆಗಳಿಗೆ ನೀಡಿದ ಜಾಹಿರಾತಿನಲ್ಲಿ ನೆಹರು ಹೆಸರು ಮಾಯವಾಗಿರುವುದು.
ರಾಜ್ಯದಲ್ಲಿ ಇದುವರೆಗೂ ಬಂದ ಸರಕಾರಗಳು ರಾಜಕೀಯ ದ್ವೇಷ ಅಥವಾ ಅಸಮಾಧಾನ ಏನೇ ಇದ್ದರೂ ಸರಕಾರದ ವತಿಯಿಂದ ಕಾರ್ಯಕ್ರಮಗಳು ನಡೆದಾಗ ಬೇರೆ ಪಕ್ಷದವ ಕೊಡುಗೆಯನ್ನು ಸ್ಮರಿಸುವುದು ಸಂಪ್ರದಾಯ. ಆದರೆ ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಈ ಸಂಪ್ರದಾಯಕ್ಕೂ ತಿಲಾಂಜಲಿ ನೀಡಿದೆ.
ಜವಾಹರಲಾಲ್ ನೆಹರು ಅವರನ್ನು ಜಾಹಿರಾತಿನಿಂದ ಮಾತ್ರ ಕೈಬಿಟ್ಟಿಲ್ಲ. ಬದಲಾಗಿ ದೇಶ ವಿಭಜನೆಯಲ್ಲಿ ಅವರ ಪಾತ್ರವೂ ಇದೆ ಎಂದು ಪ್ರಚಾರ ಮಾಡುವ ಮೂಲಕ ಅವರ ವಿರುದ್ಧ ಅಪಪ್ರಚಾರವನ್ನೂ ಕೂಡ ಮಾಡಲಾಗುತ್ತಿದೆ.
ರಾಜಕೀಯ ದ್ವೇಷ ಏನೇ ಇರಬಹುದು. ಆದರೆ ಅವರು ಈ ದೇಶದ ಮೊದಲ ಪ್ರಧಾನಿ. ಮೂರು ಬಾರಿ ಸತತವಾಗಿ ಪ್ರಧಾನಿ ಸ್ಥಾನ ಅಲಂಕರಿಸಿದ್ದೂ ಅಲ್ಲದೇ ಏನೂ ಇಲ್ಲದ ನಿರ್ಗತಿಕವಾಗಿದ್ದ ಭಾರತ ದೇಶವನ್ನು ರೂಪಿಸಿದವರು. ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರಲ್ಲಿ ಅವರೂ ಒಬ್ಬರು. ಅತ್ಯಂತ ಶ್ರೀಮಂತ ಮನೆತನದವರಾಗಿದ್ದೂ 7 ವರ್ಷ ಜೈಲು ಶಿಕ್ಷೆ ಅನುಭವಿಸಿದವರು. ಆದರೆ ಅವರ ಕೊಡುಗೆಗಳನ್ನು ಕಡೆಗಣಿಸಿರುವುದು ರಾಜ್ಯ ಸರಕಾರಕ್ಕೆ ನೆಹರುಗೆ ಮಾಡಿದ ಅಪಮಾನ ಎಂದೇ ಹೇಳಬಹುದು.
ತಪ್ಪು ಮಾಡಿದ್ದೂ ಅಲ್ಲದೇ ಅದನ್ನು ಸಮರ್ಥಿಸಿಕೊಳ್ಳಲು ಮುಂದಾಗಿರುವುದು ಮತ್ತೊಂದು ವಿಪರ್ಯಾಸ. ಮೈಸೂರು-ಕೊಡಗು ಬಿಜೆಪಿ ಸಂಸದ ನೆಹರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಯೇ ಇರಲಿಲ್ಲ ಎಂದು ಹೇಳಿರುವುದು ಅವರ ಮನಸ್ಥಿತಿ ಮಾತ್ರವಲ್ಲ, ಬಿಜೆಪಿಯ ಮನಸ್ಥಿತಿಯನ್ನೂ ತೋರಿಸುತ್ತದೆ.