ಜನವರಿ 16, 2020ರಂದು JNU ವಿದ್ಯಾರ್ಥಿ ಶಾರ್ಜಿಲ್ ಇಮಾಮ್ ಅವರು ಅಸ್ಸಾಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಜನರಿಗೆ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಕರೆಕೊಟ್ಟರು. ರಸ್ತೆಗಳನ್ನು ಬಂದ್ ಮಾಡಿ, ರೈಲು ಹಳಿಗಳನ್ನು ಬಂದ್ ಮಾಡಿ ಅಸ್ಸಾಂ ಮತ್ತು ಇತರ ಈಶಾನ್ಯಾ ರಾಜ್ಯಗಳ ಸಂಪರ್ಕವನ್ನು ತಡೆಹಿಡಿಯಲು ಅವರು ಕರೆ ನೀಡಿದ್ದರು. ಸರಿಯಾಗಿ 12 ದಿನಗಳ ನಂತರ ಅಂದರೆ, ಜನವರಿ 28, 2020ರಂದು ಶಾರ್ಜಿಲ್ ಇಮಾಮ್ ಅವರನ್ನು ಕರಾಳ UAPA (ಅಕ್ರಮ ಚಟುವಟಿಕೆ ನಿಯಂತ್ರಣ ಕಾಯ್ದೆ) ಅಡಿಯಲ್ಲಿ ಬಂಧಿಸಲಾಯಿತು.
ಈ ಘಟನೆ ನಡೆದು ಸುಮಾರು ಒಂದೂವರೆ ವರ್ಷಗಳ ನಂತರ, ಅಸ್ಸಾಂ-ಮಿಜೋರಾಂ ನಡುವಿನ ಗಡಿ ವಿವಾದ ತಾರಕಕ್ಕೇರಿದ ಬಳಿಕ ಜುಲೈ 29ರಂದು ಅಸ್ಸಾಂನ ಲಲಿತಪುರ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಕೌಶಿಕ್ ರೈ ಅವರು, ಸಮಾವೇಶವೊಂದರಲ್ಲಿ ಮಿಜೋರಾಂ ರಾಜ್ಯದ ವಿರುದ್ದ ‘ಸೇಡು ತೀರಿಸಿಕೊಳ್ಳುವಂತೆ’ ಜನರಿಗೆ ಬಹಿರಂಗವಾಗಿ ಕರೆಕೊಟ್ಟರು. ಇದರೊಂದಿಗೆ ಮಿಜೋರಾಂಗೆ ಸರಬರಾಜಾಗುವ ಅಗತ್ಯ ವಸ್ತುಗಳು, ಗ್ಯಾಸ್, ಎಣ್ಣೆ ಎಲ್ಲಾ ಬಂದ್ ಮಾಡಿಸಿ ಅಲ್ಲಿನ ಜನರು ಹಸಿವಿನಿಂದ ಸಾಯುವವರೆಗೂ ಬಿಡಬೇಡಿ, ಎಂದು ಹೇಳಿದ್ದಾರೆ. ಈ ಹೇಳಿಕೆ ನೀಡಿ ವಾರವಾಗುತ್ತಾ ಬಂದರೂ ಕನಿಷ್ಟ ಒಂದು ಎಫ್ಐಆರ್ ಕೂಡಾ ದಾಖಲಾಗಿಲ್ಲ.
ಶಾರ್ಜಿಲ್ ಇಮಾಮ್ ಅವರ ವಿರುದ್ದ ದೇಶದ್ರೋಹ, ಗುಂಪುಗಳ ನಡುವೆ ನಡುವೆ ಧಾರ್ಮಿಕ, ಜನಾಂಗೀಯ ಹಾಗೂ ಪೂರ್ವಾಗ್ರಹಪೀಡಿತವಾದ ದ್ವೇಷ ಭಾವನೆಯನ್ನು ಉಂಟು ಮಾಡಿದ್ದು, ಸಾರ್ವಜನಿಕ ಸ್ಥಳದಲ್ಲಿ ಕಿಡಿಗೇಡಿತನ ಹಾಗೂ ಅಕ್ರಮ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಕ್ಕೆ UAPA ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿತ್ತು.
ಇಷ್ಟು ಮಾತ್ರವಲ್ಲದೇ, ಅಸ್ಸಾಂ, ಉತ್ತರ ಪ್ರದೇಶ, ಅರುಣಾಚಲ ಪ್ರದೇಶ, ಮಣಿಪುರ ಹಾಗೂ ದೆಹಲಿ ಹೀಗೆ ಐದು ರಾಜ್ಯಗಳಲ್ಲಿ ಇವರ ವಿರುದ್ದ ಎಫ್ಐಆರ್ ದಾಖಲಾಗಿತ್ತು. ಇದಾದ ಬಳಿಕ, ದೆಹಲಿ ಗಲಭೆಯ ಪ್ರಕರಣದಲ್ಲಿಯೂ ಆರೋಪಿಯಾಗಿರುವ ಶಾರ್ಜಿಲ್ ಇಮಾಮ್, ಜೈಲು ಪಾಲಾಗಿದ್ದರು. ಹಲವು ಬಾರಿ ಇವರ ಜಾಮೀನು ಅರ್ಜಿ ತಿರಸ್ಕೃತಗೊಂಡಿತ್ತು. ಆದರೆ, ಜುಲೈ 15ರಂದು ಮತ್ತೆ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯಕ್ಕೆ ಇಮಾಮ್ ಅವರು ಸಲ್ಲಿಸಿದ್ದಾರೆ.
ಇನ್ನೊಂದೆಡೆ ಬಹಿರಂಗವಾಗಿ ಒಂದಿಡೀ ರಾಜ್ಯವನ್ನೇ ಹಸಿವಿನಿಂದ ನರಳುವಂತೆ ಮಾಡಲು ಕರೆ ನೀಡಿರುವ ಬಿಜೆಪಿ ಶಾಸಕನ ವಿರುದ್ದ ಮಾತ್ರ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಅಸ್ಸಾಂ-ಮಿಜೋರಾಂ ಪೊಲೀಸರ ನಡುವೆ ಉಂಟಾದ ಗಲಭೆಯಿಂದಾಗಿ ಆರು ಜನ ಪೊಲೀಸರು ಮೃತಪಟ್ಟಿದ್ದರು ಹಾಗೂ ಒಬ್ಬರು ಸಾಮಾನ್ಯ ಪ್ರಜೆಯೂ ಸಾವನ್ನಪ್ಪಿದ್ದರು. ಈ ಘಟನೆಯ ನಂತರ ಉಭಯ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಇಂತಹ ಸಂದರ್ಭದಲ್ಲಿ ಅಸ್ಸಾಂನ ಗಡಿ ಜಿಲ್ಲೆಯಾದ ಕಾಚಾರ್’ಗೆ ರಾಜ್ಯದ ಮಂತ್ರಿಗಳೊಂದಿಗೆ ಭೇಟಿ ನಿಡಿದ್ದ ಶಾಸಕ ಕೌಶಿಕ್ ರೈ, ಪ್ರಚೋದನಾಕಾರಿಯಾಗಿ ಭಾಷಣ ಮಾಡಿದ್ದಾರೆ.
“ಪೊಲೀಸರು ಏನು ಹೇಳಿದರೂ ಪರವಾಗಿಲ್ಲ. ಸರ್ಕಾರ ಏನು ಹೇಳಿದರೂ ಪರವಾಗಿಲ್ಲ. ನಾವು ಪ್ರತೀಕಾರ ತೀರಿಸಿಕೊಳ್ಳುತ್ತೇವೆ. ಆರ್ಥಿಕ ನಿರ್ಬಂಧವನ್ನು ನಾವು ತೆರವುಗೊಳಿಸುವುದಿಲ್ಲ. ನನ್ನ ಮನವಿ ಏನೆಂದರೆ, ನೀವು ಯಾರೂ ಈ ನಿರ್ಬಂಧವನ್ನು ತೆರವುಗೊಳಿಸಬಾರದು. ಅಗತ್ಯ ಬಿದ್ದರೆ, ನಾವು ಜನಪ್ರತಿನಿಧಿಗಳು ನಿಮ್ಮೊಂದಿಗೆ ಕೈಜೋಡಿಸುತ್ತೇವೆ. ನಾನು ಸಂಪೂರ್ಣ ಮನಸ್ಸಿನಿಂದ ನಿಮಗೆ ಸಹಕಾರ ಕೊಡುತ್ತೇನೆ,” ಎಂದು ಹೇಳಿದ್ದಾರೆ.
“ಅವರ ಸಂಸದರು ನಮ್ಮನ್ನು ಕೊಲ್ಲುವ ಧಮ್ಕಿ ಹಾಕುತ್ತಾರೆ. ನಾವೂ ತಕ್ಕ ಉತ್ತರ ನೀಡುತ್ತೇವೆ. ಆದರೆ, ಅವರ ಭಾಷೆಯಲ್ಲಿ ಅಲ್ಲ. ನಾವು ಮಿಜೋಗಳಿಗೆ ನೆನಪಿಸಬೇಕಾಗಿದೆ, ಅವರ ಅಗತ್ಯ ವಸ್ತುಗಳ ಪೂರೈಕೆಯನ್ನು ನಾವು ನಿರ್ಬಂಧಿಸಿದರೆ, ಮಿಜೋಗಳು ಹಸಿವಿನಿಂದ ಸಾಯಬೇಕಾಗುತ್ತದೆ. ಮೃತರಾದ ಆರು ಜನ ಅಸ್ಸಾಂ ಪೊಲೀಸರಿಗೆ ನ್ಯಾಯ ಒದಗಿಸಲು ಮಿಜೋರಾಂ ಮೇಲೆ ಆರ್ಥಿಕ ನಿರ್ಬಂಧ ಹೇರುವುದೇ ಸರಿಯಾದ ದಾರಿ,” ಎಂದಿದ್ದಾರೆ.
ಈ ಭಾಷಣವು, ಅಸ್ಸಾಂನ ಜನರು ರಾಷ್ಟ್ರೀಯ ಹೆದ್ದಾರಿ 306ನ್ನು ಬಂದ್ ಮಾಡಲು ಪ್ರಚೋದಿಸಿದೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ರೈ ಅವರ ಭಾಷಣವು ಅಸ್ಸಾಂ ಸರ್ಕಾರದ ಅಧಿಕೃತ ನಿರ್ಧಾರಕ್ಕೆ ವಿರುದ್ದವಾಗಿದೆ. ಅಸ್ಸಾಂ ಸಿಎಂ ಸರ್ಮಾ ಅವರು, ಯಾವುದೇ ರೀತಿಯ ಆರ್ಥಿಕ ನಿರ್ಬಂಧ ಹೇರಿಲ್ಲ ಎಂದು ಹೇಳಿಕೆ ನೀಡಿದ್ದರು. ಆದರೂ, ಅವರದ್ದೇ ಪಕ್ಷದ ನಾಯಕರು ಈ ರೀತಿ ಒಂದು ರಾಜ್ಯವನ್ನೇ ಸಂಕಷ್ಟಕ್ಕೆ ಸಿಲುಕಿಸಲು ಪ್ರಯತ್ನಿಸುತ್ತಿರುವುದರ ಕುರಿತು ಅವರು ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೂ, ಮಿಜೋರಾಂ ಕೇಂದ್ರ ಗೃಹ ಇಲಾಖೆಗೆ ಅಧಿಕೃತ ಪತ್ರವನ್ನು ಬರೆದು, ಈ ಆರ್ಥಿಕ ನಿರ್ಬಂಧವನ್ನು ತೆಗೆಯಬೇಕೆಂದು ಆಗ್ರಹಿಸಿದೆ.
ಕೇಂದ್ರ ಸರ್ಕಾರದ ನಿರ್ಧಾರಗಳ ಅಥವಾ ಕಾಯ್ದೆಗಳ ವಿರುದ್ದ ಮಾತನಾಡುವವರ ಮೇಲೆ ಯುಎಪಿಎಯಂತಹ ಕರಾಳ ಕಾನೂನುಗಳನ್ನು ಜಡಿದು, ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡುವ ಸರ್ಕಾರ, ಈ ಸಂದರ್ಭದಲ್ಲಿ ಯಾಕೆ ಮೌನ ವಹಿಸಿದೆ ಎಂಬುದು ಪ್ರಶ್ನಿಯಾಗಿದೆ. ಬಿಜೆಪಿ ನಾಯಕರೊಬ್ಬರು, ಒಂದು ರಾಜ್ಯದ ಆರ್ಥಿಕತೆಯನ್ನೇ ಬುಡಮೇಲು ಮಾಡಲು ಕರೆಕೊಟ್ಟಿರುವುದು ಒಕ್ಕೂಟ ವ್ಯವಸ್ಥೆಗೆ ವಿರುದ್ದವಲ್ಲವೇ? ಇದು ನಿಜವಾದ ದೇಶದ್ರೋಹವಲ್ಲವೇ ಎಂಬ ಪ್ರಶ್ನೆಗಳು ಹುಟ್ಟುಕೊಂಡಿವೆ.