ಹೊಸ ಯೋಜನೆ ಹೆಸರಿನಲ್ಲಿ ಹಳೆ ಟ್ಯಾಂಕರ್ಗಳಿಗೆ ಬಣ್ಣ ಬಳಿದು ಬೆಂಗಳೂರು ಅಭಿವೃದ್ಧಿ ಸಚಿವ ಹಾಗು ಡಿಸಿಎಂ ಡಿ.ಕೆ ಶಿವಕುಮಾರ್ ಬೆಂಗಳೂರಿನ ನಾಗರೀಕರಿಗೆ ಯಾಮಾರಿಸಿದ್ರಾ..? ಅನ್ನೋ ಪ್ರಶ್ನೆ ಎದುರಾಗಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಕಳಪೆ ಯೋಜನೆಯ ಬಣ್ಣ ಬಯಲು ಮಾಡಿದ್ದಾರೆ ಬಿಜೆಪಿ ನಾಯಕರು. ತುಕ್ಕು ಹಿಡಿದ ಟ್ಯಾಂಕರ್ಗಳಲ್ಲಿ ಅಶುದ್ಧ ನೀರನ್ನು ಪೂರೈಸಲು ಮುಂದಾಗಿರುವುದು ಕಾಂಗ್ರೆಸ್ ಸರ್ಕಾರದ 8ನೇ ಗ್ಯಾರಂಟಿ ಎಂದು ನಾಯಕರ ಕಿಡಿಕಾರಿದ್ದಾರೆ.

ನಿನ್ನೆಯಷ್ಟೇ ಟ್ಯಾಂಕರ್ ಬಿಡುಗಡೆ ಮಾಡಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್, hಒಸ ಯೋಜನೆ ಬಗ್ಗೆ ಕೊಂಡಾಡಿದ್ದರು. ಮನೆ ಬಾಗಿಲಿಗೆ ಕಾವೇರಿ ಎಂದು ಭಾಷಣ ಮಾಡಿದ್ದರು. ಇದೀಗ ಹಳೆ ಟ್ಯಾಂಕರ್ ಗಳಲ್ಲಿ ನೀರು ಪೂರೈಸುವ ಯೋಜನೆ ಬಗ್ಗೆ ಈಗ ಬಿಜೆಪಿ ನಾಯಕರು ಆಕ್ರೋಶ ಹೊರ ಹಾಕಿದ್ದಾರೆ. ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾರ್ ಟ್ಯಾಂಕರ್ಗಳ ರಿಯಾಲಿಟಿ ಚೆಕ್ ಮಾಡಿದ್ದು, ರಿಯಾಲಿಟಿ ಚೆಕಿಂಗ್ ವೇಳೆ ತುಕ್ಕು ಹಿಡಿದ ಟ್ರಾಕ್ಟರ್ ಟ್ಯಾಂಕರ್ಗಳ ಬಣ್ಣ ಬಯಲಾಗಿದೆ.
ಮನೆ ಬಾಗಿಲಿಗೆ ಶುದ್ಧ ನೀರನ್ನು ತಲುಪಿಸುವ ಹೆಸರಿನಲ್ಲಿ ತುಕ್ಕು ಹಿಡಿದ ಹಳೆಯ ಟ್ಯಾಂಕರ್ಗಳಿಗೆ ಬಣ್ಣ ಬಳಿದು ನವೀಕರಿಸಿದಂತೆ ತೋರಿಸಿ ಸಂಚಾರಿ ಕಾವೇರಿ ಎಂಬ ಯೋಜನೆಯನ್ನು ವಿಧಾನಸೌಧದಿಂದ ಆರಂಭಿಸಿದ ಕಾಂಗ್ರೆಸ್ ಸರ್ಕಾರವನ್ನು ಖಂಡಿಸುತ್ತೇವೆ. ಜನಪರ ಯೋಜನೆ ಎಂಬ ಮಂತ್ರ ಜಪಿಸುತ್ತಲೇ, ಸರ್ಕಾರ ನಿಜವಾದ ಜನಪರತೆಯಿಂದ ದೂರವಾಗಿ, ಟ್ಯಾಂಕರ್ಗಳ ಮೇಲ್ಮೈ ಬಣ್ಣವನ್ನು ಬದಲಾಯಿಸುವ ಮೂಲಕ ಜನರ ಆರೋಗ್ಯಕ್ಕೆ ಬಣ್ಣದ ಲೇಪನವನ್ನು ಹಾಕುತ್ತಿದ್ದಾರೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಯೋಜನೆಯ ರೂವಾರಿಯಾದ ಮಂತ್ರಿಗಳ ಚಿಂತನೆಗೂ ಈಗಾಗಲೇ ತುಕ್ಕು ಹಿಡಿದಿದೆ ಎಂಬುದು ಸ್ಪಷ್ಟ, ಮಾನ್ಯ ಸಚಿವರಾದ D.K ಶಿವಕುಮಾರ್ ಅವರು ಈ ಯೋಜನೆಯನ್ನು, “ಮನೆ ಬಾಗಿಲಿಗೆ ಶುದ್ಧ ನೀರನ್ನು ತಲುಪಿಸುವ” ಯೋಜನೆ ಎಂದು ಹೇಳುವ ಬದಲಿಗೆ “ತುಕ್ಕು ಹಿಡಿದ ಟ್ಯಾಂಕರ್ಗಳಲ್ಲಿ, ಮನೆ ಬಾಗಿಲಿಗೆ ಅಶುದ್ಧ ನೀರನ್ನು ತಲುಪಿಸುವ” ಯೋಜನೆ ಎಂದು ಹೇಳುವುದು ಸೂಕ್ತ ಎಂದು ವ್ಯಂಗ್ಯವಾಡಿದ್ದಾರೆ. ಅದಲ್ಲದೆ ಟ್ಯಾಂಕರ್ಗಳ ಖರೀದಿಯಲ್ಲಿ ಆಗಿರುವ ಭ್ರಷ್ಟಾಚಾರವನ್ನು ಊಹಿಸಲು ಅಸಾಧ್ಯವಾಗಿದೆ.

ಶುದ್ಧವಾದ ಟ್ಯಾಂಕರ್ಗಳಲ್ಲಿ ಶುದ್ಧವಾದ ನೀರನ್ನು ಕಳುಹಿಸಬೇಕಾದ ಸರ್ಕಾರ, ಅಶುದ್ಧವಾದ ಟ್ಯಾಂಕರ್ಗಳಲ್ಲು ಇವರ ಜಾಹಿರಾತನ್ನು ಶುದ್ಧವಾಗಿ ಹಾಕಿಕೊಂಡಿರುವುದು ಹಾಸ್ಯಾಸ್ಪದ. ತುಕ್ಕು ಹಿಡಿದ ಟ್ಯಾಂಕರ್ಗಳಿಗೆ ಬಣ್ಣ ಬಳಿದು ಅವುಗಳಲ್ಲಿ ಬಿ.ಐ.ಎಸ್ ಪ್ರಮಾಣಿತ ನೀರನ್ನು ಪೂರೈಸಲಾಗುತ್ತಿದೆ ಎಂಬ ನಾಟಕವನ್ನು ಜನರು ನಂಬಲಾರರು. ವಿಧಾನಸೌಧದ ಆವರಣದಲ್ಲೇ ಇಂತಹ ತುಕ್ಕು ಹಿಡಿದ ಟ್ಯಾಂಕರ್ಗಳನ್ನು ಪ್ರದರ್ಶಿಸಿದ್ದು,ಕಾಂಗ್ರೆಸ್ ಸರ್ಕಾರದ ಜನವಿರೋಧಿ ಧೋರಣೆಯ ನಿಲುವನ್ನು ಸ್ಪಷ್ಟಪಡಿಸುತ್ತದೆ. ಈ ಯೋಜನೆಯ ಟ್ಯಾಂಕರ್ಗಳಿಗೆ ಮಾತ್ರ ತುಕ್ಕು ಹಿಡಿದಿಲ್ಲ, ಯೋಜನೆ ರೂಪಿಸುವ ಕಲ್ಪನೆಗೂ, ಜವಾಬ್ದಾರಿ ನಿಯೋಜನೆಗೂ, ಸಿದ್ದರಾಮಯ್ಯ ಸರ್ಕಾರದ ಸಾರ್ವಜನಿಕ ಸೇವೆಯ ಮಾನವೀಯ ದೃಷ್ಟಿಕೋನಕ್ಕೂ ತುಕ್ಕು ಹಿಡಿದಿದೆ ಎಂದು ಕಿಡಿಕಾರಿದ್ದಾರೆ.

ಸ್ವಚ್ಛತೆ, ಸುರಕ್ಷತೆ ಮತ್ತು ಆರೋಗ್ಯಕ್ಕೆ ಆದ್ಯತೆ ನೀಡಬೇಕಾದ ಸರ್ಕಾರ, ಭ್ರಷ್ಟಾಚಾರದಲ್ಲಿ ಮುಳುಗಿ ಸಾರ್ವಜನಿಕರ ಜೀವನಕ್ಕೆ ಗ್ಯಾರಂಟಿ ಇಲ್ಲದಂತೆ ಮಾಡಿದೆ ಎಂದು ಸರ್ಕಾರದ ಮನೆ ಬಾಗಿಲಿಗೆ ಶುದ್ಧ ನೀರು ಪೂರೈಕೆ ಯೋಜನೆ ಬಗ್ಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದ ನಾರಾಯಣಸ್ವಾಮಿ ವಾಗ್ದಾಳಿ ಮಾಡಿದ್ದು, ಸರ್ಕಾರ ಈ ಕಳಪೆ ಟ್ಯಾಂಕರ್ಗಳನ್ನು ಪೂರೈಸಿರುವ ಗುತ್ತಿಗೆದಾರ ಅಥವಾ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕಿದೆ. ಇಲ್ಲದಿದ್ದರೆ ಸರ್ಕಾರವೇ ಈ ಹಳೇ ಟ್ಯಾಂಕರ್ಗೆ ಹೊಸ ಬಣ್ಣ ಹಚ್ಚಿಸಿ ಗೋಲ್ಮಾಲ್ ಮಾಡ್ತಿದೆ ಎನ್ನುವುದು ಜನರ ಭಾವನೆ ಆಗಲಿದೆ.