ಅಂಗನವಾಡಿ ಕಾರ್ಯಕರ್ತೆಯರ ಬಹುದಿನದ ಕನಸು ನನಸಾಗುವ ಸಾಧ್ಯತೆ ಇದೆ. ಅಂಗನವಾಡಿ ಕಾರ್ಯಕರ್ತರನ್ನು ಶಿಕ್ಷಕಿಯರೆಂದು ಪರಿಗಣಿಸಲು ರಾಷ್ಟ್ರೀಯ ಶಿಕ್ಷಣ ನೀತಿಯ ಶಿಫಾರಸ್ಸು ಮಾಡಿದೆ. ಒಂದು ವೇಳೆ ಈ ಶಿಫಾರಸ್ಸಿಗೆ ಅನುಮೋದನೆ ಸಿಕ್ಕಿದ್ದೇ ಆದಲ್ಲಿ ಗೌರವ ಧನ, ವೇತನವಾಗಿ ಪರಿವರ್ತನೆಯಾಗಲಿದ್ದು ಅದರ ಜೊತೆಗೆ ಸೇವಾ ಭದ್ರತೆ ಕೂಡ ದೊರೆಯಲಿದೆ.
ಅಂಗನವಾಡಿ ಕಾರ್ಯಕರ್ತೆಯರ ಬಹುದಿನದ ಬೇಡಿಕೆಗೆ ಸಿಗುತ್ತಾ ಗ್ರೀನ್ ಸಿಗ್ನಲ್.
ಅಂಗನವಾಡಿ ಕಾರ್ಯಕರ್ತೆಯರು ಅಂದ್ರೆ ಆದೇಕೊ ಸರ್ಕಾರಕ್ಕೆ ತಾತ್ಸಾರ ಎಂಬ ಮಾತು ಎಲ್ಲೆಡೆಯಿಂದ ಕೇಳಿಬರ್ತಿತ್ತು. ಇದಕ್ಕೆ ಪುಷ್ಠಿ ಎಂಬಂತೆ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ವಾರಾನುಗಟ್ಟಲೆ ಎಷ್ಟೇ ಪ್ರತಿಭಟನೆ ಮಾಡಿದರೂ ಸರ್ಕಾರಗಳು ಕ್ಯಾರೇ ಎನ್ನುತ್ತಿರಲಿಲ್ಲ. ಆದರೀಗ ಸಮಯ ಬದಲಾಗಿದೆ. ಈ ಕಾರ್ಯಕರ್ತೆಯರ ಬಹುದಿನದ ಬೇಡಿಕೆಗೆ ಸರ್ಕಾರ ಅಸ್ತು ಎನ್ನವ ಸಮಯ ಬಂದಾಗಿದೆ. ಅಂಗನವಾಡಿ ಕಾರ್ಯಕರ್ತೆಯರನ್ನು ಶಿಕ್ಷಕಿಯರೆಂದು ಪರಿಗಣಿಸಲು ರಾಷ್ಟ್ರೀಯ ಶಿಕ್ಷಣ ನೀತಿ ಶಿಫಾರಸ್ಸು ಮಾಡಿದೆ. ಇದನ್ನು ಅನುಷ್ಟಾನಗೊಳಿಸಲು ಸರ್ಕಾರ ನಿರ್ಧರಿಸಿದೆ. ಅಂಗನವಾಡಿ ಕಾರ್ಯಕರ್ತರು ಈವರೆಗೆ 3 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ನೀಡ್ತಿದ್ದರು. ಹಾಗೂ ಬಾಣಂತಿಯರು, ಗರ್ಭಿಣಿಯರ ಆರೋಗ್ಯದ ಮೇಲೆ ನಿಗಾ ಇರಿಸಲು, ಪೌಷ್ಟಿಕ ಆಹಾರ ವಿತರಣೆ ಸೇರಿದಂತೆ ಸರ್ಕಾರದ ಹಲವು ಯೋಜನೆಗಳ ಅನುಷ್ಠಾನಕ್ಕಾಗಿ ಬಳಸಿಕೊಳ್ಳಲಾಗುತ್ತಿತ್ತು. ಆದರೀಗ ಇವರನ್ನು ಶಿಕ್ಷಕರೆಂದು ಪರಿಗಣಿಸುವಂತೆ NEP ಶಿಫಾರಸ್ಸು ಮಾಡಿದೆ.
ಗೌರವ ಧನ ವೇತನವಾಗಿ ಪರಿವರ್ತನೆ, ಸೇವಾ ಭದ್ರತೆ ಸೌಲಭ್ಯ.
ಅಂಗನವಾಡಿಗಳ ಜೊತೆಗೆ ಒಂದು ಮತ್ತು ಎರಡನೇ ತರಗತಿಗಳನ್ನು ಸಂಯೋಜಿಸಿ ಶಾಲೆಗಳ ಸ್ವರೂಪವನ್ನು ಬದಲಾವಣೆ ಮಾಡಲು ಸಹ ಪ್ಲಾನ್ ಮಾಡಲಾಗುತ್ತಿದೆ. ಈ ಶಿಕ್ಷಕರನ್ನು 1-2 ನೇ ತರಗತಿಗೆ ಪಾಠ ಮಾಡಲು ಬಳಸಿಕೊಳ್ಳಲು ಶಿಕ್ಷಣ ಇಲಾಖೆ ನಿರ್ಧರಿಸಿದೆ ಇದರ ಜೊತೆಗೆ ಅವರು ಪಡೆಯುತ್ತಿರುವ ಗೌರವ ಧನ, ವೇತನವಾಗಿ ಪರಿವರ್ತನೆಯಾಗಲಿದ್ದು, ಸೇವಾ ಭದ್ರತೆಯೂ ಸಹ ದೊರೆಯಲಿದೆ. ಉತ್ತರಕಾಂಡ ರಾಜ್ಯದಲ್ಲಿ ಈ ಯೋಜನೆ ಈಗಾಗಲೇ ಅನುಷ್ಠಾನಗೊಂಡಿದ್ದು ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಈ ಯೋಜನೆ ಜಾರಿಗೊಳಿಸಲು ನಿರ್ಧಾರಿಸಲಾಗಿದೆ. ಈ ಬೆಳವಣಿಗೆ ಬಗ್ಗೆ ಅಂಗನವಾಡಿ ಕಾರ್ಯಕರ್ತೆ ಜಯಮ್ಮ ಮಾತನಾಡಿದ್ದು ಇದು ಕೇವಲ 20 ಸಾವಿರ ಮಂದಿಗೆ ಮಾತ್ರ ಅನ್ವಯವಾಗಲಿದೆ. ಉಳಿದ ಕಾರ್ಯಕರ್ತೆಯರು ಏನು ಮಾಡಬೇಕು ಎಂದು ಅಸಮಾಧಾನ ಹೊರ ಹಾಕಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಶಿಫಾರಸ್ಸಿಗೆ ಸರ್ಕಾರ ಯಾವ ರೀತಿ ಸ್ಪಂದಿಸುತ್ತದೆ ಎಂಬುವುದು ಸದ್ಯದ ಕುತೂಹಲ. ಒಂದು ವೇಳೆ ಒಪ್ಪಿದರೂ ಯಾವ ರೂಪದಲ್ಲಿ ಕಾರ್ಯಗತ ಮಾಡುತ್ತೆ..? ಸದ್ಯ ಇರುವ ಶಾಲೆಗಳ ಸ್ವರೂಪ ಬದಲಾಯಿಸಿ ಆ ಜಾಗಕ್ಕೆ ಹೊಸ ಶಿಕ್ಷಕರನ್ನು ನೇಮಿಸಿ ಪಾಠ ಪ್ರವಚನ ಮಾಡಿಸೋದು ಸಕ್ಸಸ್ ಆಗುತ್ತಾ ಎಂಬುದನ್ನ ಕಾದುನೋಡಬೇಕಿದೆ.