ನಾಡಹಬ್ಬ ದಸರಾ ಗಜಪಡೆಯ ಆಕರ್ಷಣೀಯ ಕೇಂದ್ರಬಿಂದುಗಳಲ್ಲಿ ಒಂದಾದ ಗೋಪಾಲಸ್ವಾಮಿ(40) ಆನೆ ಅಕಾಲಿಕ ಮರಣ ಹೊಂದಿದೆ.
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹನಗೋಡು ಹೋಬಳಿ ಬಳಿ ಕಾಡಾನೆ ದಾಳಿಯಿಂದ ತೀವ್ರ ಗಾಯಗೊಂಡು ಗೋಪಾಲಸ್ವಾಮಿ ಆನೆ ಮೃತಪಟ್ಟಿದೆ ಎಂದು ತಿಳಿದು ಬಂದಿದೆ.
ಬುಧವಾರ ಕಾಡಾನೆಯೊಂದಿಗೆ ನಡೆದ ಸಂಘರ್ಷದಲ್ಲಿ ಗಂಭೀರ ಗಾಯಗೊಂಡಿದ್ದ ಗೋಪಾಲಸ್ವಾಮಿ ಸ್ಥಳದಲ್ಲಿ ಮೃತಪಟ್ಟಿದೆ. ಈ ವರ್ಷದ ದಸರಾ ಮಹೋತ್ಸವದಲ್ಲೂ ಗೋಪಾಲಸ್ವಾಮಿ ಭಾಗಿಯಾಗಿದ್ದ. ವಿಜಯದಶಮಿ ಜಂಬೂಸವಾರಿ ಮೆರವಣಿಗೆಯಲ್ಲಿ ನೌಪತ್ ಆನೆಯಾಗಿ ಹೆಜ್ಜೆ ಹಾಕಿದ್ದ ಗೋಪಾಲಸ್ವಾಮಿ ಎಲ್ಲರಿಂದ ಪ್ರಶಂಸೆ ಗಿಟ್ಟಿಸಿದ್ದ.
ಮಂಗಳವಾರದಂದು ಗೋಪಾಲಸ್ವಾಮಿ ಆನೆಯನ್ನು ಮೇಯಲು ಬಿಟ್ಟಿದ್ದ ವೇಳೆ ಕೊಡಗಿನ ಭಾಗದಲ್ಲಿ ಪುಂಡಾಟ ನಡೆಸುತ್ತಿದ್ದ ಕಾಡಾನೆ(ಅಯ್ಯಪ್ಪ)ಗೆ ಕಾಲರ್ ಐಡಿ ಅಳವಡಿಸಲಾಗಿತ್ತು. ಮಸ್ತಿಗೆ ಬಂದಿದ್ದ ಗೋಪಾಲಸ್ವಾಮಿ ಹಾಗೂ ಧೃಡಕಾಯದ ಅಯ್ಯಪ್ಪ ಕಾಡಾನೆ ನಡುವೆ ಕಾಡಿನಲ್ಲಿ ಕಾದಾಟ ನಡೆದಿದೆ. ಅಯ್ಯಪ್ಪನ ದಾಳಿಗೆ ಸಿಲುಕಿದ ಗೋಪಾಲಸ್ವಾಮಿಗೆ ಕಾಲು ಮುರಿದಿದೆ, ಅಲ್ಲದೆ ದಂತದಿಂದ ಎಲ್ಲೆಡೆ ತಿವಿದಿರುವುದರಿಂದ ತೀವ್ರ ಗಾಯಗೊಂಡು ರಕ್ತಸ್ರಾವವಾಗಿ ಅಸ್ವಸ್ಥಗೊಂಡಿತ್ತು.
ಎಂದಿನಂತೆ ಗೋಪಾಲಸ್ವಾಮಿ ಆನೆಯ ಮಾವುತ ಮಂಜು ಹಾಗೂ ಕಾವಾಡಿ ಆನೆಯನ್ನು ಕರೆತರಲು ಕಾಡಿಗೆ ಹೋದ ವೇಳೆ ಕಾದಾಟವನ್ನು ಕಣ್ಣಾರೆ ಕಂಡು ಆನೆಯನ್ನು ಬೆದರಿಸಲು ಹೋಗುತ್ತಿದ್ದಂತೆ ಅವರ ಮೇಲೆಯೇ ಕಾಡಾನೆ ದಾಳಿ ಮಾಡಲು ಮುಂದಾಗಿದ್ದರಿಂದ ತಪ್ಪಿಸಿಕೊಂಡು ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ, ಎಸಿಎಫ್ ದಯಾನಂದ್, ಆರ್ಎಫ್ಓ ಗಣರಾಜ್ ಪಟಗಾರ್ ಭೇಟಿ ಇತ್ತು, ವೈದ್ಯಾಧಿಕಾರಿಗಳ ತಂಡವನ್ನು ಕರೆಸಿ ಸೂಕ್ತ ಚಿಕಿತ್ಸೆ ನೀಡಿದ್ದಾರೆ.
ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅತ್ಯಂತ ಆಕರ್ಷಕ ಮೈಕಟ್ಟನ್ನು ಹೊಂದಿದ್ದ ಗೋಪಾಲಸ್ವಾಮಿ ಮುಂಬರುವ ವರ್ಷಗಳಲ್ಲಿ ಚಿನ್ನದ ಅಂಬಾರಿ ಹೊತ್ತು ಸಾಗಲು ಅಣಿಯಾಗುತ್ತಿದ್ದ.ಈ ಬಾರಿಯ ದಸರಾ ಮಹೋತ್ಸವದಲ್ಲೂ ಮರದ ಅಂಬಾರಿಯನ್ನು ಹೊರುವ ತಾಲೀಮಿನಲ್ಲೂ ಭಾಗಿಯಾಗಿ ಸೈ ಎನಿಸಿಕೊಂಡಿದ್ದ ಗೋಪಾಲಸ್ವಾಮಿ ಹಲವರ ಫೇವರೇಟ್ ಆನೆಯಾಗಿತ್ತುಗೋಪಾಲಸ್ವಾಮಿಯ ಹಠಾತ್ ನಿಧನದಿಂದ ಅರಣ್ಯ ಇಲಾಖೆಗೆ ತುಂಬಲಾರದ ನಷ್ಟವಾಗಿದೆ.ಅನುಭವಿ ಆನೆಗಳ ಕೊರತೆ ಎದುರಿಸುತ್ತಿರುವ ಅರಣ್ಯ ಇಲಾಖೆಗೆ ಭಾರೀ ಹೊಡೆತ ಬಿದ್ದಿದೆ.