ಉದಯಪುರದಲ್ಲಿ ಟೈಲರ್ ಆಗಿದ್ದ ಕನ್ಹಯ್ಯಾ ಲಾಲ್ ಅವರನ್ನು ಇಬ್ಬರು ವ್ಯಕ್ತಿಗಳು ಆತನ ತಲೆಯನ್ನು ಕಡಿದು ಕೊಲೆ ಮಾಡಿದ ಪ್ರಕರಣ ಸಂಬಂದಿಸಿದಂತೆ ಕನ್ಹಯ್ಯಾ ಲಾಲ್ ಅವರ ಇಬ್ಬರು ಪುತ್ರರು ಪ್ರತಿಕ್ರಯಿಸಿದ್ದು, ತಮ್ಮ ತಂದೆಗೆ ಪ್ರತಿದಿನ ಬೆದರಿಕೆ ಕರೆಗಳು ಬರುತ್ತಿವೆ ಎಂದು ಪೊಲೀಸರಿಗೆ ದೂರು ನೀಡಿದ್ದರು ದೂರಿನ ಬಗ್ಗೆ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಇಂಡಿಯಾ ಟುಡೇ ಜೊತೆ ಮಾತನಾಡಿದ ಸಂತ್ರಸ್ತ ಕನ್ಹಯ್ಯಾ ಲಾಲ್ ಅವರ ಮಕ್ಕಳಾದ ಯಶ್ ಮತ್ತು ತರುಣ್, ಪೊಲೀಸರು ಸಕಾಲದಲ್ಲಿ ಕ್ರಮ ಕೈಗೊಂಡಿದ್ದರೆ ತಮ್ಮ ತಂದೆ ಬದುಕಿರುತ್ತಿದ್ದರು ಎಂದು ಹೇಳಿದ್ದಾರೆ.
“ನನ್ನ ತಂದೆ ತಪ್ಪಾಗಿ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಕಾಮೆಂಟ್ ಹಾಕಿದ್ದರು, ಅವರನ್ನು ಬಂಧಿಸಲಾಯಿತು. ನಂತರ ಜಾಮೀನು ಪಡೆದರು ರಾಜಿ ಸಭೆಯ ಸಂದರ್ಭದಲ್ಲಿ ಅವರು ಪೊಲೀಸ್ ಠಾಣೆಯಲ್ಲಿ ಕ್ಷಮೆಯಾಚಿಸಿದರು. ಆದರೆ ಅವರಿಗೆ ನಿಯಮಿತವಾಗಿ ಬೆದರಿಕೆ ಕರೆಗಳು ಬರುತ್ತಿದ್ದು, ಇದಕ್ಕಾಗಿ ಅವರು ಹಲವಾರು ಬಾರಿ ಪೊಲೀಸರನ್ನು ಸಂಪರ್ಕಿಸಿದ್ದರು. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ, ಸಮಯೋಚಿತ ಕ್ರಮ ಕೈಗೊಂಡಿದ್ದರೆ, ನಮ್ಮ ತಂದೆ ಇಂದು ಬದುಕುತ್ತಿದ್ದರು, ”ಎಂದು ಅವರು ಹೇಳಿದ್ದಾರೆ.
ನನ್ನ ಪತಿಯನ್ನು ಕೊಂದವರನ್ನು ಗಲ್ಲಿಗೇರಿಸಿ ಎಂದು ದುಷ್ಕರ್ಮಿಗಳಿಂದ ಹತ್ಯೆಯಾದ ಉದಯಪುರ ಟೈಲರ್ ಕನ್ಹಯ್ಯಲಾಲ್ ಪತ್ನಿ ಜಶೋದಾ ಒತ್ತಾಯಿಸಿದ್ದಾರೆ.
ಕನ್ಹಯ್ಯಲಾಲ್ ಪಾರ್ಥಿವ ಶರೀರವನ್ನು ಮೆರವಣಿಗೆ ಮಾಡಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ವೇಳೆ ಮಾತನಾಡಿದ ಟೈಲರ್ ಪತ್ನಿ, ಹಂತಕರಿಗೆ ಮರಣದಂಡನೆ ವಿಧಿಸಿ, ನಮಗೆ ನ್ಯಾಯ ಒದಗಿಸಿ ಎಂದು ಮನವಿ ಮಾಡಿ ಕಣ್ಣೀರು ಹಾಕಿದ್ದಾರೆ.
ಉದಯಪುರದಲ್ಲಿ ಟೈಲರ್ ಆಗಿದ್ದ ಕನ್ಹಯ್ಯಾ ಲಾಲ್ ಅವರನ್ನು ಇಬ್ಬರು ವ್ಯಕ್ತಿಗಳು ಆತನ ತಲೆಯನ್ನು ಕಡಿದು ಕೊಲೆ ಮಾಡಿದ್ದಾರೆ. ನಂತರ ಬಿಜೆಪಿಯ ಮಾಜಿ ವಕ್ತಾರ ನೂಪುರ್ ಶರ್ಮಾ ಅವರನ್ನು ಬೆಂಬಲಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿನ ವ್ಯಕ್ತಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡು ವೀಡಿಯೊವನ್ನು ರೆಕಾರ್ಡ್ ಮಾಡಿದ್ದಾರೆ. ಈ ಕೊಲೆಯನ್ನು ತಾವೇ ಮಾಡಿದ್ದಾಗಿ ಹೇಳಿರುವ ವಿಡಿಯೊಯೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾರೆ. ಇಬ್ಬರನ್ನೂ ಬಂಧಿಸಲಾಗಿದೆ. ಈ ಭೀಕರ ಘಟನೆಯ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಉದಯಪುರದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ.