ಕಾಂಗ್ರೆಸ್ ನವರು ಭಾರತ ಜೋಡಿಸುವುದನ್ನು ಬಿಜೆಪಿಯರನ್ನು ನೋಡಿ ಕಲಿಯಲಿ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ತಮ್ಮ ಪಕ್ಷದ ನಾಯಕರಿಗೆ ಸಲಹೆ ನೀಡಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಕಾಲದಲ್ಲಿ ಸುವರ್ಣ ಚತುಷ್ಪಥ ಹೆದ್ದಾರಿ ನಿರ್ಮಾಣವಾಯ್ತು. ನರೇಂದ್ರಮೋದಿ ಕಾಲದಲ್ಲಿ ದೇಶದ ತುಂಬೆಲ್ಲ ರಸ್ತೆ, ವಿಮಾನ, ರೈಲು ಸಂಪರ್ಕ ಆಗುತ್ತಿದೆ. ಭಾರತ ಜೋಡಿಸುವುದಕ್ಕೆ ನಡಿಗೆ ಪ್ರಾರಂಭಿಸಿರುವವರು ಭಾರತ ತೋಡೋ ತಂಡದ ಸಹವಾಸ ಬಿಡಲಿ ಎಂದು ಕಾಂಗ್ರೆಸ್ ನಾಯಕರನ್ನು ಟೀಕಿಸಿದ್ದಾರೆ.
ದಸರಾ ಹೊಸ್ತಿಲಲ್ಲಿ ಮೈಸೂರಿಗೆ ಬರ್ತಿದ್ದೀರಿ. ನೀವು ಬರುವ ನಂಜನಗೂಡು ಹೆದ್ದಾರಿ ಮೋದಿ ಕಾಲದಲ್ಲಿ ನಿರ್ಮಾಣವಾಗಿದ್ದು ಹಾಗಯೇ ಬರುವಾಗ ಮೈಸೂರು ಏರ್ ಪೋರ್ಟ್ ನೋಡಿಕೊಂಡು ಬನ್ನಿ. ಮೈಸೂರಿನ ಚಾಮುಂಡಿಬೆಟ್ಟಕ್ಕೆ ಬಂದು ತಾಯಿಯ ದರ್ಶನ ಪಡೆದು ಹೋಗಿ. ಮೈಸೂರು-ಬೆಂಗಳೂರು ಹೆದ್ದಾರಿ ಅಭಿವೃದ್ದಿಯಾಗಿದೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಮುಂದೆ ಹೊಸಪೇಟೆ ಬಳ್ಳಾರಿ ಭಾಗಕ್ಕೆ ಹೋಗ್ತೀರಿ. ಮೋದಿ ಸರ್ಕಾರ ಭಾರತವನ್ನು ಹೇಗೆ ಜೋಡಿಸಿದೆ ಅನ್ನೋದನ್ನು ನೋಡ್ಕೊಂಡು ಹೋಗಿ. ಇನ್ನು ಐದು ವರ್ಷ ಮತ್ತೊಂದು ಯಾತ್ರೆ ಕೈಗೊಳ್ಳಿ ಆಗ ಡೈರೆಕ್ಟ್ ಆಗಿ ಡೆಲ್ಲಿ ಅಥವಾ ಇಟಲಿಯಿಂದ ನೇರವಾಗಿ ಮೈಸೂರಿಗೆ ಬಂದು ಲ್ಯಾಂಡ್ ಆಗಬಹುದು ಎಂದು ಕುಟುಕಿದ್ದಾರೆ.
ಸೂಪರ್ ಬೈಕ್ ನಲ್ಲೋ, ಸೂಪರ್ ಕಾರ್ ನಲ್ಲೊ ಯಾತ್ರೆ ಮಾಡಬಹುದು. ಕಾಂಗ್ರೆಸ್ ಗೆ ಇನ್ನು 25 ವರ್ಷ ಭವಿಷ್ಯವಿಲ್ಲ. ಅಲ್ಲಿಯವರೆಗೆ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿರುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
ಇನ್ನು RSS ಬಿಜೆಪಿಯ ಪಾಪದ ಕೂಸು ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ ಸಿದ್ದರಾಮಯ್ಯ ಅಂದ್ರೆ ಯಾರನ್ನೋ ಬೈಯ್ಯೋದು. ಹೀಗಳೆಯೋದು ಎನ್ನುವಂತಾಗಿದೆ ಎಂದು ಲೇವಡಿಯಾಡಿದ್ದಾರೆ.
ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನದ 40 ವರ್ಷ ಕಾಲ ನೆಹರುರನ್ನು ದೇಶ ವಿಭಜಕ ಅಂತಿದ್ರು. ಇಂದಿರಗಾಂಧಿಯರವನ್ನು ಪ್ರಜಾಪ್ರಭುತ್ವದ ಕೊಲೆಗಾರ್ತಿ ಅಂತಿದ್ರು.
ಈಗ 15 ವರ್ಷದಿಂದ ಅವರ ಸೊಸೆ ಸೋನಿಯಾಗಾಂಧಿಯನ್ನು ಅಧಿನಾಯಕಿ ಅಂತಿದ್ದಾರೆ. ಮೊಮ್ಮಗನನ್ನು ರಾಜಕುಮಾರ ಅಂತಾವ್ರೆ. ಯಾವ ಕುಟುಂಬದ ಬಗ್ಗೆಯೂ ಸಿದ್ದರಾಮಯ್ಯಗೆ ವಿಚಾರ ಸ್ಪಷ್ಟತೆ ಇಲ್ಲ. ಸಿದ್ದರಾಮಯ್ಯರಿಂದ ಕಲಿಯಬೇಕಾದದ್ದು ಏನು ಇಲ್ಲ ಎಂದಿದ್ದಾರೆ.
ಆಧಾರ್, ಪಾನ್ ಲಿಂಕ್ ಮಾಡಿಸಿಲ್ಲ. ಸ್ಮಾರ್ಟ್ ಪೋನ್ ಬಳಸೋದು ಗೊತ್ತಿಲ್ಲ ಅನ್ನೋ ಸಿದ್ದರಾಮಯ್ಯ ಯಾವ ಸೀಮೆಯ ಅರ್ಥಶಾಸ್ತ್ರಜ್ಞ ಎಂದು ಟೀಕಿಸಿದ್ದಾರೆ.