ಮಗು ಕತ್ತು ಹಿಸುಕಿ ಕೊಂದ ನಂತರ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಉಡುಪಿಯ ಬ್ರಹ್ಮಾವರ ನಿವಾಸಿ ಆದರ್ಶ್ ಅವರ ಪತ್ನಿ ದೀಪಾ (೩೧) ಹಾಗೂ ಮೂರುವರೆ ವರ್ಷದ ಹೆಣ್ಣು ಮಗು ರಿಯಾ ಮೃತಪಟ್ಟಿದ್ದಾರೆ. ರಾಜರಾಜೇಶ್ವರಿ ನಗರ ಚನ್ನಸಂದ್ರದ ಅಪಾರ್ಟ್ ಮೆಂಟ್ ನಲ್ಲಿ ದಂಪತಿ ಮದುವೆ ಆದಾಗಿನಿಂದ ವಾಸವಿದ್ದರು.
ಒಂದು ವಾರದಿಂದ ಹೊಟ್ಟೆ ನೋವು ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ ದೀಪಾ ನಮ್ಮ ಸಾವಿಗೆ ಯಾರೂ ಕಾರಣರಲ್ಲ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
೨೦೧೭ರಲ್ಲಿ ಆದರ್ಶ್ ಅವರನ್ನು ವಿವಾಹವಾಗಿದ್ದ ದೀಪಾ ಅನಾರೋಗ್ಯದಿಂದ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿದ್ದಾರೆ. ಪತಿ ಆದರ್ಶ್ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು, ಅವರ ಮೇಲೆ ಯಾವುದೇ ದೂರು ಇಲ್ಲ ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾರೆ.