ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್ ಅವರು ʼವಿಶ್ವಭಾರತಿಗೆ ಕನ್ನಡದಾರತಿʼ ಶೀರ್ಷಿಕೆಯಡಿಯಲ್ಲಿ ʼವಂದೇ ಮಾತರಂʼ ವಿಡಿಯೋ ಸಾಂಗ್ ನಿರ್ಮಿಸಿದ್ದಾರೆ. ಸಂತೋಷ್ ಆನಂದ್ ರಾಮ್ ನಿರ್ದೇಶನದ ಈ ಹಾಡಿಗೆ ಪ್ರವೀಣ್ ಡಿ.ರಾವ್ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಜಯ್ ಪ್ರಕಾಶ್ ದನಿಯಾಗಿದ್ದಾರೆ. ಅನಂತನಾಗ್, ಶಿವರಾಜಕುಮಾರ್, ಸುದೀಪ್, ರವಿಚಂದ್ರನ್, ಜಗ್ಗೇಶ್, ರಮೇಶ್ ಅರವಿಂದ್, ಅರ್ಜುನ್ ಸರ್ಜಾ, ಗಣೇಶ್, ಶ್ರೀಮುರಳಿ, ಧನಂಜಯ, ರಿಷಬ್ ಶೆಟ್ಟಿ, ಧ್ರುವ ಸರ್ಜಾ, ಸಾಹಿತಿ ಎಸ್ ಎಲ್ ಭೈರಪ್ಪ, ಸಾಲುಮರದ ತಿಮ್ಮಕ್ಕ, ಜೋಗತಿ ಮಂಜಮ್ಮ, ಕ್ರಿಕೆಟರ್ ವೆಂಕಟೇಶ್ ಪ್ರಸಾದ್ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ.
ಸದ್ಯ ಈ ವಿಡಿಯೋ ಹಲವು ಕಾರಣಗಳಿಗೆ ಚರ್ಚೆಯನ್ನು ಸೃಷ್ಟಿಸಿದೆ. ಅದರಲ್ಲಿ ಮುಖ್ಯವಾದುದು ವಿಡಿಯೋದಲ್ಲಿ ಕಂಡು ಬರುವ ʼಹಿಂದುತ್ವʼದ ಹೇರಳ ಕುರುಹು. ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಭಗವದ್ಗೀತೆ ಓದುತ್ತಿರುವುದು, ಸ್ವಾತಂತ್ರ್ಯ ಹೋರಾಟಗಾರರ ಸಾಲಿನಲ್ಲಿ ಶಿವಾಜಿ, ಸಾವರ್ಕರ್ ರನ್ನು ಇರಿಸಿರುವುದು ಸೇರಿದಂತೆ ಹಿಂದುತ್ವವಾದದ ಪ್ರೀತಿಯ ಹಲವು ಸರಕುಗಳು ವಿಡಿಯೋ ಸಾಂಗ್ ನಲ್ಲಿ ಯಥೇಚ್ಛವಾಗಿದೆ. ಇದೇ ವಿಚಾರಕ್ಕೆ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗುತ್ತಿದೆ.
ಬಹುತ್ವದ ಭಾರತವಲ್ಲ; ಹಿಂದುತ್ವದ ಹಿಂದೂರಾಷ್ಟ್ರ
ಇನ್ನು ವಿಡಿಯೋಗೆ ಬಂದರೆ, ಸಾವರ್ಕರ್, ಶಿವಾಜಿ ಮೊದಲಾದ ಬಲಪಂಥೀಯ ಹಿಂದುತ್ವ ಐಕಾನ್ ಗಳ ಫೋಟೋಗಳಿಗೆ ಕ್ಯಾಂಡಲ್ ಹಚ್ಚುವ ಸುದೀಪ್ ರೊಂದಿಗೆ ವಿಡಿಯೋ ಆರಂಭವಾಗೊಳ್ಳುತ್ತದೆ. ಹಸುವಿಗೆ ಅಂದರೆ ಗೋಮಾತೆಗೆ ಹುಲ್ಲು ತಿನ್ನಿಸುತ್ತಾ ಶಿವರಾಜ್ ಕುಮಾರ್ ಕಾಣಿಸಿಕೊಂಡರೆ, ಭಗವದ್ಗೀತೆಯನ್ನು ಓದುವ ಬಲಪಂಥೀಯ ಚಿಂತಕ ಎಸ್ ಎಲ್ ಭೈರಪ್ಪ ನಂತರ ಕಾಣಿಸಿಕೊಳ್ಳುತ್ತಾರೆ. ಜಗ್ಗೇಶ್, ರವಿಚಂದ್ರನ್, ರಮೇಶ್ ಅರವಿಂದ್ ಪುಷ್ಪ ನಮನ ಸಲ್ಲಿಸುವ ಭಾರತೆ ಮಾತೆಯ ಕೈಯಲ್ಲಿ ತಿರಂಗವೇ ಇಲ್ಲ ಬದಲಾಗಿ ಕೇಸರಿ ಧ್ವಜವಿದೆ. ರಾಮನ ನೆರಳಿನೊಂದಿಗೆ ಕಾಣಿಸಿಕೊಳ್ಳುವ ಅರ್ಜುನ್ ಸರ್ಜಾ, ದೇವಸ್ಥಾನದ ಆವರಣದಲ್ಲಿ ಹುಲಿವೇಶದೊಂದಿಗೆ ಕುಣಿಯುವ ರಿಷಬ್ ಶೆಟ್ಟಿ, ಪೌರ ಕಾರ್ಮಿಕನಿಗೆ ಕೇಸರಿ ಬಣ್ಣ ಬಳಿಯುವ ಗಣೇಶ್, ಹನುಮನ ಮುಂದೆ ವ್ಯಾಯಾಮ ಮಾಡುವ ಧ್ರುವ ಸರ್ಜಾ ಹೀಗೆ ಭಾರತ ಮಾತೆಗೆ ಗೌರವ ಸಲ್ಲಿಸುವ ವಿಡಿಯೋ ಎಂದು ನಿರ್ದೇಶಕರು ಚಾಕಚಕ್ಯತೆಯಿಂದ ಹಿಂದುತ್ವವಾದಿಗಳು ಬಯಸುವ ಹಿಂದೂರಾಷ್ಟ್ರದಲ್ಲಿ ಬರುವಂತಹ ಪರಿಕಲ್ಪನೆಯನ್ನಷ್ಟೇ ವಿಡಿಯೋದಲ್ಲಿ ತಂದಿದ್ದಾರೆ.
ಭಾರತದ ಭವ್ಯ ಪರಂಪರೆಯನ್ನು ತೋರಿಸುತ್ತೇವೆ ಎಂದ ನಿರ್ದೇಶಕರು ಅಪ್ಪಿ ತಪ್ಪಿಯೂ ʼಬಹುತ್ವದ ಭಾರತದʼ ಸಣ್ಣ ಸುಳಿವನ್ನೂ ವಿಡಿಯೋದಲ್ಲಿ ತೋರಿಸದಂತೆ ಎಚ್ಚರಿಕೆ ವಹಿಸಿದಂತೆ ಕಾಣುತ್ತದೆ. ಕರ್ನಾಟಕದ ಬಹುತ್ವ ಪರಂಪರೆಯನ್ನೂ ಒಳಗೊಳ್ಳದ ವಿಡಿಯೋ, ಹಿಂದುತ್ವವಾದಿಗಳು ಒಪ್ಪದ ನಾಯಕರಾದ ಜವಾಹರ್ ಲಾಲ್ ನೆಹರೂ, ಡಾ. ಬಿಆರ್ ಅಂಬೇಡ್ಕರ್ ಮೊದಲಾದವರನ್ನು ಕಡೆಗಣಿಸಿದೆ. ಹೀಗೆ ಸಾಲು ಸಾಲು ಸಮಸ್ಯೆಗಳು ಈ ವಿಡಿಯೋದಲ್ಲಿದೆ. ಜಗ್ಗೇಶ್ ಅವರು ಹಿಂದುತ್ವವಾದಿ ಬಿಜೆಪಿಯವರು ಹಾಗಾಗಿ ಅವರು ನಿರ್ಮಿಸಿದ ವಿಡಿಯೋದಲ್ಲಿ ಇದು ಸಹಜವೆಂದೇನೋ ಒಪ್ಪಿಕೊಳ್ಳಬಹುದು, ಆದರೆ, ಉಳಿದ ನಟರಿಗೇನಾಗಿದೆ? ಅವರು ಏಕೆ ಒಂದು ಅಜೆಂಡಾದ ಪರವಾಗಿರುವ ವಿಡಿಯೋದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ ಎಂಬ ಪ್ರಶ್ನೆಗಳನ್ನು ಸ್ವತಃ ಅವರ ಅಭಿಮಾನಿಗಳೇ ಎತ್ತುತ್ತಿದ್ದಾರೆ.
ಪುನೀತ್ ಇರಬೇಕಿತ್ತು ಎಂಬ ಅಪ್ಪು ಅಭಿಮಾನಿಗಳು
ಈ ನಡುವೆ ಬಹುತೇಕ ಎಲ್ಲಾ ಕನ್ನಡ ನಟರನ್ನು ಒಳಗೊಂಡಿರುವ ಈ ವಿಡಿಯೋದಲ್ಲಿ ಪುನೀತ್ ಅವರನ್ನು ಕಾಣದೆ ಅಪ್ಪು ಅಭಿಮಾನಿಗಳು ಮಿಸ್ ಮಾಡಿಕೊಂಡಿದ್ದಾರೆ. ಇಷ್ಟೆಲ್ಲಾ ನಟರು ಇರುವ ಈ ವಿಡಿಯೋದಲ್ಲಿ ಪುನಿತ್ ಅವರನ್ನು ನೆನಪಿಸುವಂತಹ ಏನಾದರೂ ಇರಬೇಕಿತ್ತು ಎಂದು ಅಪ್ಪು ಅಭಿಮಾನಿಗಳು ನೋವು ಹಂಚಿಕೊಂಡಿದ್ದಾರೆ.
ಯಶ್, ದರ್ಶನ್ ಏಕಿಲ್ಲ?
ಇನ್ನು ಕನ್ನಡದ ಪ್ರಮುಖ ನಟರಾದ ಯಶ್ ಹಾಗೂ ದರ್ಶನ್ ಕೂಡಾ ಇಲ್ಲದಿರುವುದನ್ನು ನೆಟ್ಟಿಗರು ಪ್ರಶ್ನಿಸಿದ್ದಾರೆ. ಕನ್ನಡದ ನಟರ ವಿಡಿಯೋ ಎಂದಾಗ ಅವರನ್ನೂ ಒಳಗೊಳ್ಳಬೇಕಿತ್ತು. ಅವರಿಲ್ಲದ ಚಿತ್ರರಂಗವನ್ನು ಸಂಪೂರ್ಣ ಪ್ರತಿನಿಧಿಸಿದಂತೆ ಆಗುವುದಿಲ್ಲ ಎಂದು ಹಲವರು ಟೀಕಿಸಿದ್ದಾರೆ.
ನಟಿಯರಿಗೆ ಅವಕಾಶವೇಕಿಲ್ಲ??
ಈ ವಿಡಿಯೋದಲ್ಲಿ ನಟರಿಗೆ ಮನ್ನಣೆ ನೀಡಲಾಗಿದೆಯೇ ಹೊರತು ಕನ್ನಡದ ಯಾವ ನಟಿಯರಿಗೂ ಅವಕಾಶ ನೀಡಲಾಗಿಲ್ಲ. ಅವರು ಯಾಕೆ ಕನ್ನಡ ಚಿತ್ರರಂಗವನ್ನು ಪ್ರತಿನಿಧಿಸುವುದಿಲ್ಲವೇ ಎಂಬ ಪ್ರಶ್ನೆಯೂ ನೆಟ್ಟಿಗರು ಕೇಳಿದ್ದಾರೆ.
ಒಟ್ಟಾರೆ, ಕನ್ನಡ ನಟರ ವಂದೇ ಮಾತರಂ ಗೀತೆಯು ನಿಜವಾದ ಭಾರತವನ್ನೂ ಪ್ರತಿನಿಧಿಸಿಲ್ಲ, ಇನ್ನೊಂದೆಡೆ ಕನ್ನಡ ಚಿತ್ರರಂಗವನ್ನೂ ಪ್ರತಿನಿಧಿಸಿಲ್ಲ. ಹೀಗಾಗಿ ಸಾಲು ಸಾಲು ಅಪಸ್ವರಗಳು ವಿಡಿಯೋ ಬಗ್ಗೆ ಎದ್ದಿವೆ.