ಕರೋನ ಎರಡನೇ ಅಲೆ ಇಡೀ ದೇಶವನ್ನೇ ಬಾಧಿಸುತ್ತಿದೆ. ಕರೋನವನ್ನು ಗಂಭೀರವಾಗಿ ಆಗಿ ತೆಗೆದುಕೊಂಡ ಇತರೆ ರಾಷ್ಟ್ರಗಳು ಈ ಸಾಂಕ್ರಾಮಿಕ ರೋಗವನ್ನು ನಿರರ್ಗಳವಾಗಿ ಎದುರಿಸುತ್ತಿರುವುದನ್ನು ನಾವು ಕಾಣಬಹುದು. ನಮ್ಮ ಭಾರತ ದೇಶ ಯಾಕೊ ಈ ಕುರಿತು ಇನ್ನೂ ಎಚ್ಚೆತ್ತುಕೊಂಡಿಲ್ಲ ಅನ್ನಿಸುತ್ತದೆ. ಕಳೆದ ವರ್ಷ ಅಂದರೆ 2020 ಏಪ್ರಿಲ್ ನಲ್ಲಿ ಯಾವ ತರಹದ ಸಮಸ್ಯೆಗಳಿದ್ದವೊ ಈಗಲೂ ಅದೇ ಸಮಸ್ಯೆಗಳಿಂದ ಬಾದಿಸುತ್ತಿದೆ ನಮ್ಮ ದೇಶ.
ಕರೋನಾ ದೇಶದ ಜನರನ್ನು ಮೊದಲ ಬಾರಿಗೆ ಅಂದರೆ 2020ರಲ್ಲಿ ಬಾಧಿಸುವಾಗ ನಮಗೆ ಯಾವೆಲ್ಲ ಮೂಲಭೂತ ಮೆಡಿಕಲ್ ಸೌಕರ್ಯಗಳು ಕೊರತೆ ಇದ್ದವು. ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ರೋಗಿಗಳಿಗೆ ಬೇಕಾಗುವಷ್ಟು ಹಾಸಿಗೆಗಳಿರಲಿಲ್ಲ, ಐಸಿಯುಗಳು ಸಾಕಾಗಲಿಲ್ಲ, ಆಕ್ಸಿಜನ್ ಸರಿಯಾಗಿ ಸರಬರಾಜಿಲ್ಲ, ವೆಂಟಿಲೇಟರ್ಸ್ ಗಳಿಲ್ಲ, ಕೊರೋನಾ ವಾರಿಯರ್ಸ್ ಗೆ ಪಿಪಿಇ ಕಿಟ್ ಇಲ್ಲ, ಮಾಸ್ಕ್, ಗ್ಲೌಸಿಲ್ಲ, ಆಂಬುಲೆನ್ಸ್ ಗಳು ಸಾಕಾಗುತ್ತಿಲ್ಲ, ಕೊರೋನಾ ಹೊರತು ಬೇರೆ ರೋಗಗಳಿಂದ ಬಾಧಿತರಾದವರಿಗೆ ಸರಿಯಾಗಿ ಚಿಕಿತ್ಸೆ ಕೊಡಲು ಸಾಧ್ಯವಾಗಲಿಲ್ಲ, ರೋಗಿಗಳು ಒಂದು ಆಸ್ಪತ್ರೆಯಿಂದ ಇನ್ನೊಂದು, ಅಲ್ಲಿಂದ ಮಗದೊಂದು ಆಸ್ಪತ್ರೆಯನ್ನು ತಡಕಾಡಿದರೂ ಪ್ರಯೋಜನವಾಗುತ್ತಿಲ್ಲ, ಒಂದು ಬೆಡ್ಡಿನ ಮೇಲೆ ಇಬ್ಬರು, ನೆಲದ ಮೇಲೆ, ಕಾರಿಡಾರ್ ಮೇಲೆ, ಕೆಲವೊಮ್ಮೆ ಆಸ್ಪತ್ರೆ ಕಾಂಪೌಂಡಿನಲ್ಲೂ ರೋಗಿಗಳಿದ್ದರು ಆದರು ಕೊರೋನಾ ರೋಗಿಗಳ ಸಾವಿನ ಪ್ರಮಾಣ ಹೆಚ್ಚಾಗೆ ಇತ್ತು.
2020 ರ ಅಷ್ಟು ಸಮಸ್ಯೆಗಳು ಜನರನ್ನು ಈಗಲೂ ಬಾದಿಸುತ್ತಿವೆ. ಅದರೊಟ್ಟಿಗೆ ಈ ವರ್ಷ ಅಂದರೆ 2021ಕ್ಕೆ ಇನ್ನೊಂದಷ್ಟು ಸಮಸ್ಯೆಗಳು ಸೇರ್ಪಡೆಯಾಗಿವೆ. ಅವೇನೆಂದರೆ, ಸತ್ತವರನ್ನು ಸುಡಲು ಚಿತಾಗಾರಗಳು ಸಾಕಾಗುತ್ತಿಲ್ಲ. ಚಿತಾಗಾರಗಳೆದುರು ಶವಗಳನ್ನು ಹೊತ್ತ ಅಂಬುಲೆನ್ಸ್ ಗಳು ಗಂಟೆಗಳ ಕಾಲ ಕ್ಯೂನಲ್ಲಿವೆ.
ಇಷ್ಟೆಲ್ಲ ನೋಡಿದ ನಮಗೆ ಒಂದಷ್ಟು ಪ್ರಶ್ನೆಗಳು ಹುಟ್ಟದೆ ಇರದು. ಹಾಗಾದರೆ ಕಳೆದ ಒಂದು ವರುಷದಲ್ಲಿ ಕೇಂದ್ರ ಸರಕಾರ ಈ ಕುರಿತು ತೆಗೆದುಕೊಂಡ ಕ್ರಮವಾದರು ಏನು?
ಜನವರಿಯ ಕೊನೆಯ ವಾರ ಭಾರತದಲ್ಲಿ ಮೊದಲನೇ ಕರೋನಾ ಪ್ರಕರಣ ದಾಖಲಾಗುತ್ತದೆ. ಇದಾದ ನಂತರ, ಫೆಬ್ರವರಿ ಎರಡನೇ ವಾರ ಕರೋನ ದೇಶವನ್ನು ಪ್ರವೇಶಿಸುತ್ತಿರುವ ಬಗ್ಗೆ ರಾಹುಲ್ ಗಾಂಧಿ ಎಚ್ಚರಿಕೆ ನೀಡುತ್ತಾರೆ. ಇದ್ಯಾವುದನ್ನು ಪರಿಗಣಿಸದ ಕೇಂದ್ರದ ಸಚಿವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಕಾಲೆಳೆದು ಟೀಕಿಸುತ್ತಾರೆ. ಕರೋನ ಇಡೀ ಪ್ರಪಂಚಕ್ಕೆ ಹರಡುತ್ತಿದೆ ಎಂಬ ಸುದ್ದಿಯನ್ನೂ ಕೇಳಿಯೂ ಮತ್ತು ದೇಶದಲ್ಲಿ ಒಂದೆರಡು ಪ್ರಕರಣಗಳು ದಾಖಲಾದರು ಸಹ ಪ್ರಧಾನಿ ಮೋದಿಯವರು ಲಕ್ಷಾಂತರ ಜನಸಮೂಹ ಸೇರಿಸಿ ಗುಜರಾತ್ ನಲ್ಲಿ “ನಮಸ್ತೆ ಟ್ರಂಪ್” ಎಂಬ ಕಾರ್ಯಕ್ರಮ ಮಾಡಿದ್ದರು. ಕರೋನ ವ್ಯಾಪಕವಾಗಿ ಹರಡಲು ಇದು ಒಂದು ಕಾರಣ ಅಂತ ಕೆಲವರು ವಿಮರ್ಶೆ ಕೂಡ ಮಾಡಿದ್ದರು. ಮಾರ್ಚ್ ಅಷ್ಟೊತ್ತಿಗೆ ಸಾವಿರಾರು ಪ್ರಕರಣಗಳು ಗಣನೀಯವಾಗಿ ಹೆಚ್ಚಾಗುತ್ತಲೇ ಹೋದವು ಕಡೆಗೆ ಯಾವುದೇ ಪೂರ್ವ ಸಿದ್ದತೆ ಇಲ್ಲದೆ ಲಾಕ್ ಡೌನ್ ಮಾಡಲಾಯಿತು.
ದಿಡೀರ್ ಲಾಕ್ ಡೌನ್ ನಿಂದ ಲಕ್ಷಾಂತರ ಜನರ ಜನಜೀವನ ಅಸ್ತವ್ಯಸ್ತ ಆಗಿದನ್ನು ಅನೇಕ ಪತ್ರಿಕೆಗಳು ವರದಿ ಮಾಡಿದವು. ಲಕ್ಷಾಂತರ ವಲಸೆ ಕಾರ್ಮಿಕರು ಬಸ್ ರೈಲು ಇಲ್ಲದೆ ತಮ್ಮ ಊರಿಗೆ ಕಾಲ್ನಡಿಗೆಯಿಂದಲೇ ಸಾಗಿದರು. ಅನೇಕರು ಅಸ್ವಸ್ಥರಾಗಿ ದಾರಿ ಮದ್ಯದಲ್ಲೆ ಸತ್ತರೆ, ಇನ್ನೊಂದಷ್ಟು ಜನ ಊಟವಿಲ್ಲ ಸತ್ತರು, ಇನ್ನೂ ಕೆಲವರು ಗೂಡ್ಸ್ ರೈಲಿಗೆ ಸಿಕ್ಕಿ ಮೃತಪಟ್ಟರು. ಈತರದ ಸಾವು ನೋವುಗಳು ಒಂದೇ ಎರಡೇ.
ಕರೋನ ಹರಡುವುದನ್ನು ತಡೆಯಲು ಕಟ್ಟುನಿಟ್ಟಿನ ನಿಮಯ ತಂದರಷ್ಟೇ ಸಾಲದು ಅದನ್ನು ಜವಾಬ್ದಾರಿಯುತವಾಗಿ ಪಾಲಿಸಿ ಅಂತಲು ಜನಸಾಮಾನ್ಯರಿಗೆ ಮನವರಿಕೆ ಮಾಡಬೇಕು ಆದರೆ ಕೇಂದ್ರ ಸರ್ಕಾರದ ಇದನ್ನು ಮಾಡಲು ವಿಫಲವಾಯಿತು. ಹೇಗೆ ಅಂತಿರಾ, ಕರೋನ ವಾರಿಯರ್ಸ್ ತುಂಬಾ ಚನ್ನಾಗೆ ಕೆಲಸ ಮಾಡುತ್ತಿದ್ದಾರೆ ಚಪ್ಪಾಳೆ ತಟ್ಟಿ ಅಂತ ನರೇಂದ್ರ ಮೋದಿ ಕರೆ ಕೊಟ್ಟರೆ ಅವರ ಬೆಂಬಲಿಗರು ತಟ್ಟೆ, ಜಾಗಟೆ ಸಿಕ್ಕ ಸಿಕ್ಕಿದೆಲ್ಲವನ್ನು ಹೊಡೆದಾಕಿದ್ದನ್ನು ನಾವೆಲ್ಲರೂ ನೋಡಿದ್ದೇವೆ. ದೀಪ ಹಚ್ಚಿ ಅಂದಿದಕ್ಕೆ ಮನೆಯನ್ನೆ ಹಚ್ಚಿದ ಮಹಾನುಭಾವರನ್ನು ಸಹ ಆ ಸಮಯದಲ್ಲಿ ಕಂಡೆವು.. ದೀಪ ಹಚ್ಚಿದ್ದು, ತಟ್ಟೆ ಬಡಿದದ್ದು ಎಲ್ಲವೂ ಸರಿ ಆದರೆ ಇಲ್ಲಿ ಯಾವುದೇ ಸಮಾಜಿಕ ಅಂತರ ಹಾಗೆ ಮಾಸ್ಕ್ ದರಿಸದೆ ಇರುವುದನ್ನು ನಾವು ಅನೇಕ ವಿಡಿಯೋದಲ್ಲಿ ಕಾಣಬಹುದು. ಕರೋನ ಇನ್ನೊಂದಷ್ಟು ವ್ಯಾಪಕವಾಗಿ ಹರಡುವುದಕ್ಕೆ ಇದು ಕೂಡ ಕಾರಣ ಎಂದು ಅನೇಕರು ಸಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಸರ್ಕಾರದ ಮೊದಲನೇ ವರ್ಷದ ಸಾಧನೆ ಅಂದರೆ ಇದೆ.
ಕಳೆದ ಒಂದುವರ್ಷ ದೇಶದಲ್ಲಿ ಆರೋಗ್ಯ ಕ್ಷೇತ್ರದಲ್ಲಾದ ಬದಲಾವಣೆಗಳೇನು?
ಆಗಲೂ ಪಿಪಿಇ ಕಿಟ್, ಆಕ್ಸಿಜನ್, ಆಂಬುಲೆನ್ಸ್, ಲೆಂಟಿಲೇಟರ್, ಬೆಡ್, ಐಸಿಯು ಬೆಡ್ ಕೊರತೆ ಇತ್ತು, ಈಗಲೂ ಅದೆ ಪರಿಸ್ಥಿತಿ ಇದೆ ಎಂದರೆ ಆರೋಗ್ಯ ಕ್ಷೇತ್ರ ಎಷ್ಟರಮಟ್ಟಿಗೆ ಬದಲಾಗುದೆ ಎಂಬುದನ್ನು ಹೆಚ್ಚು ಹೇಳಬೇಕಿಲ್ಲ.
ದೇಶದಲ್ಲಿ ಎಷ್ಟು ಹೊಸ ಆಸ್ಪತ್ರೆಗಳು, ಹೆಚ್ಚುವರಿ ಹಾಸಿಗೆ/ಐಸಿಯು/ಅಂಬುಲೆನ್ಸ್/ವೆಂಟಿಲೇಟರ್ಸ್ ಸೃಷ್ಟಿಯಾಗಿವೆ?
ದೇಶದಲ್ಲಿ ಹೊಸ ಆಸ್ಪತ್ರೆ ಆಗಿದೆ ಎಂದು ಇದುವರೆಗೂ ಯಾವುದೆ ವರದಿ ಆಗಿರುವುದನ್ನು ಕಂಡಿಲ್ಲ ಬದಲಿಗೆ ರೈಲಿನ ಬೋಗಿಯನ್ನು ತಾತ್ಕಾಲಿಕವಾಗಿ ಐಸಿಯು ಬೆಡ್ಗಳನ್ನಾಗಿ ಅನೇಕ ಕಡೆ ಬದಲಾಯಿಸಿರುವುದು ವರದಿಯಾಗಿವೆ. ಹೆಚ್ಚುವರಿ ಹಾಸಿಗೆ ಹಾಕಿದ್ದರೆ ಈಗ ಕೊರತೆ ಬರಲು ಸಾಧ್ಯವೇ ಇಲ್ಲ. ಅನೇಕ ಟಿಟಿ ವಾಹನಗಳನ್ನು ಆಂಬುಲೆನ್ಸ್ ಆಗಿ ಪರಿವರ್ತಿಸಿದ ಕರ್ನಾಟಕ ಸರ್ಕಾರ ವಾಹನಗಳ ಮಾಲಿಕರಿಗೆ ಇನ್ನೂ ಬಾಡಿಗೆ ಪಾವತಿ ಮಾಡಿಲ್ಲವೆಂಬ ಅನೇಕ ಮಾಧ್ಯಮಗಳು ವರದಿ ಮಾಡಿದ್ದವು.
ಪಿಎಮ್ ಕೇರ್ಸ್ ನಿಧಿಯನ್ನು ಉಪಯೋಗಿಸಿ ಅದೆಷ್ಟೋ ಲಕ್ಷ ವೆಂಟಿಲೇಟರ್ಸ್ ತಯಾರಾಗಿವೆ ಎಂದಿದ್ರಲ್ಲಾ ಅವೆಲ್ಲಾ ಎಲ್ಲಿವೆ ಮತ್ತು ಪಿಎಮ್ ಕೇರ್ಸ್ ನಿಂದ ಯಾವುದಕ್ಕೆಲ್ಲ ಖರ್ಚು ಮಾಡ್ತಿದ್ದೀರಿ ಈಗ?
ಈ ಪ್ರಶ್ನೆಗೆ ಮುಖ್ಯವಾಗಿ ಪಿಎಮ್ ಕೇರ್ಸ್ ಅಧ್ಯಕ್ಷರನ್ನೇ ಕೇಳುವುದು ಉತ್ತಮ ಎನ್ನಿಸುತ್ತದೆ.
2021 ರ ಜನವರಿಯಲ್ಲಿ ವಾಕ್ಸಿನ್ ಕಂಡಿಡಿದಿದ್ದರು ಭಾರತದಲ್ಲಿ ಕರೋನ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿರುವುದು ಏಕೆ?
ಸುಲಭವಾಗಿ ಹೇಳಬೇಕೆಂದರೆ, ಕರೋನ ಎರಡನೇ ಅಲೆಯ ಹೆಚ್ಚುತ್ತಿದೆ ಲಸಿಕೆ ಬಗ್ಗೆ ಗಮನ ಕೊಡಿ ಎಂದು ರಾಹುಲ್ ಗಾಂಧಿಯೇ ಎಚ್ಚರಿಸಿದ್ದರು. ಆಗ ಸಚಿವೆ ಸ್ಮೃತಿ ಇರಾನಿ ಸೇರಿದಂತೆ ಕೇಂದ್ರ ಬಿಜೆಪಿ ನಾಯಕರು ರಾಹುಲ್ ಗಾಂಧಿಯನ್ನು ಟೀಕಿಸಿದ್ದರು. ಈಗ ಇಡೀ ದೇಶದಲ್ಲಿ ಲಸಿಕೆ ಕರೊತೆ ಉಂಟಾಗಿದೆ ಈ ಕುರಿತು ಅನೇಕ ರಾಜ್ಯದ ಸಿಎಂಗಳೆ ಮಾತಾಡಿದ್ದಾರೆ. ಆದರೆ ಇದನ್ನೆಲ್ಲ ಸತ್ಯಕ್ಕೆ ದೂರದ ಸುದ್ದಿ ಲಸಿಕೆ ಕೊರತೆ ಆಗಿಲ್ಲ ಎಂಬ ವಾದವನ್ನು ದೇಶದ ಗೃಹ ಮಂತ್ರಿ ಮತ್ತು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ವಾದಿಸುತ್ತಾರೆ. ಇರಲಿ, ಆಗ ರಾಹುಲ್ ಗಾಂಧಿ ಲಸಿಕೆ ಹೆಚ್ಚಳ ಮತ್ತು ಅಮದು ಮಾಡಿಕೊಳ್ಳುವ ಬಗ್ಗೆ ಸಲಹೆಯನ್ನು ಟೀಕಿಸಿ ಆ ಸಲಹೆಯನ್ನೆ ಈಗ ಮೋದಿ ಸರ್ಕಾರ ಅನುಮೋದಿಸಿದೆ.
ಲಕ್ಷ ಲಕ್ಷಗಟ್ಟಲೇ ವ್ಯಾಕ್ಸಿನೇಷನ್ ಅನ್ನು ಬೇರೆ ದೇಶಕ್ಕೆ ರವಾನಿಸಿದ ಭಾರತ ಈಗ ಲಸಿಕೆಗಾಗಿ ಕೈಚಾಚಿ ಕೂತಿರುವುದು ನಿಜಕ್ಕೂ ವಿಪರ್ಯಾಸ. ಆದರೆ ಅಮೇರಿಕದಂತಹ ಮುಂದುವರೆದ ದೇಶವೇ ವ್ಯಾಕ್ಸಿನೇಷನ್ ರಪ್ತು ಮಾಡುವುದನ್ನು ಸಂಪೂರ್ಣ ನಿಷೇಧಿಸಿ ತಮಗೆ ಅವಶ್ಯಕತೆ ಇರುವಷ್ಟು ಲಸಿಕೆಯನ್ನು ಶೇಕರಿಸಿಕೊಳ್ಳುತ್ತಿದೆ. ಭಾರತದಲ್ಲಿ ಲಸಿಕಾ ತಯಾರಿಕೆಯನ್ನು ಹೆಚ್ಚಿಸಲು ಒಂದಷ್ಟು ರಾ ಮೆಟೀರಿಯಲ್ಸ್ ಅಮೇರಿಕಾದಿಂದಲೇ ತರಿಸಿಕೊಳ್ಳಬೇಕಂತೆ ಈಗ ಅದಕ್ಕೂ ಸಹ ಅಮೇರಿಕಾ ನಿರ್ಬಂಧ ಹೇರಿದೆ ಎಂಬ ಮಾಹಿತಿಯನ್ನು ಖಾಸಗಿ ಸುದ್ದಿವಾಹಿನಿ ಸೋಮವಾರ ರಾತ್ರೆ ಪ್ರಸಾರ ಮಾಡಿತ್ತು.
ಕುಂಭಮೇಳಕ್ಕೆ ಲಕ್ಷಾಂತರ ಜನಸಮೂಹ ಸೇರುತ್ತಾರೆ ಇದರಿಂದ ಕರೋನ ವ್ಯಾಪಕವಾಗಿ ಹರಡುತ್ತದೆ ಎಂಬ ಸಣ್ಣ ಪರಿಜ್ಞಾನ ಇಲ್ಲ. ನಾಯಕರು ಕುಂಭ ಸ್ನಾನ ಮಾಡಲು ಅನುಮತಿ ನೀಡಿದ್ದು ನೋಡಿದರೆ ದೇಶ ಎತ್ತ ಸಾಗುತ್ತಿದೆ ಅನ್ನೊ ಪ್ರಶ್ನೆ ಹುಟ್ಟುತ್ತದೆ. ಹರಿದ್ವಾರ ಮತ್ತು ಉತ್ತರಖಂಡ್ ನಿಂದ ಬರುತ್ತಿರುವ ಕರೋನ ಪ್ರಕರಣಗಳ ಅಂಕಿಅಂಶ ನೋಡಿದೆ ಆತಂಕವನ್ನುಂಟು ಮಾಡುತ್ತದೆ.
ಈ ಮದ್ಯೆ ಮಾಸ್ಕ್ ಹಾಕುವ ಅವಶ್ಯಕತೆ ಇಲ್ಲ ಎಂದು ಅಸ್ಸಾಂನ ಬಿಜೆಪಿ ನಾಯಕ ಹಿಮಂತ ಶರ್ಮ ಹೇಳಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜನರನ್ನು ಎಚ್ಚರಿಸುವುದನ್ನು ಬಿಟ್ಟು ದಾರಿತಪ್ಪಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.
ಮದ್ಯಪ್ರದೇಶದ ಬಿಜೆಪಿ ಸಚಿವ ಪ್ರೇಮ್ ಸಿಂಗ್ ಪಾಟೇಲ್, ಕರೋನ ಬಂದಮೇಲೆ ವಯಸ್ಸಾದವರೆಲ್ಲ ಸಾಯಲೇ ಬೇಕಾಗುತ್ತದೆ ಎಂಬ ಬೇಜವಾಬ್ದಾರಿತನದ ಹೇಳಿಕೆಯನ್ನು ನೀಡುತ್ತಾ ಜನರನ್ನು ಭಯಪೀಡಿತರನ್ನಾಗಿಸುತ್ತಿದ್ದಾರೆ.
ಕರೋನಾ ಸೋಂಕಿನ ಪ್ರಮಾಣ ದೇಶದಲ್ಲಿ ತುಸು ಇಳಿಮುಖವಾಗುತ್ತಲೇ ಕಳೆದ ವರ್ಷ, ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಗಳು ದೀಢೀರನೇ ಕೋವಿಡ್ ಮಾರ್ಗಸೂಚಿಗಳನ್ನು ಗಾಳಿಗೆ ತೂರಿದವು. ಅದರಲ್ಲೂ ಜನರಿಗೊಂದು ನೀತಿ, ಆಳುವವರಿಗೆ ಒಂದು ನೀತಿ, ಜನರ ಮೇಲೆ ದಂಡ (ನಿಯಮ ಉಲ್ಲಂಘನೆ ದಂಡ) ಮತ್ತು ಲಾಠಿ ಪ್ರಹಾರ ನಡೆಸಲು ಒಂದು ಕಾನೂನು, ಸ್ವತಃ ಸಾವಿರಾರು ಮಂದಿಯ ಸಭೆ, ಸಮಾವೇಶ, ರ್ಯಾಲಿ ನಡೆಸುವ ತಮಗೆ ಒಂದು ಕಾನೂನು ಎಂಬ ಆಳುವ ಮಂದಿ ಸಹಜವಾಗೇ ಕರೋನಾ ಸೋಂಕಿನ ಅಸಲೀತನದ ಬಗ್ಗೆಯೇ ಜನರಲ್ಲಿ ಅನುಮಾನಗಳನ್ನು ಬಿತ್ತಿತ್ತು ಈ ಪರಿಣಾಮ ಇವತ್ತು ಲಕ್ಷಾಂತರ ಕರೋನ ಪ್ರಕರಣ ದಾಖಲಾಗಲು ದೊಡ್ಡ ಕಾರಣವಾಗಿದೆ.
ಕೇಂದ್ರ ಸರ್ಕಾರ ಸ್ವತಃ ಇಷ್ಟೆಲ್ಲ ಹುಳುಕುಗಳನ್ನು ಇಟ್ಟುಕೊಂಡು, ಪ್ರತಿಪಕ್ಷಗಳನ್ನು ಒಮ್ಮತಕ್ಕೆ ತೆಗೆದುಕೊಂಡು ಕೆಲಸ ಮಾಡಿದೆ, ಕಡೆಯ ಪಕ್ಷ ಸಲಹೆಗಳನ್ನು ಸ್ವೀಕರಿಸಿದೆ ಅವರನ್ನು ಸದಾ ಟೀಕೆ ಮಾಡಿಕೊಂಡು ಈಗ ಅವರನ್ನೇ ದೂರುತ್ತಿರುವುದು ಎಷ್ಟು ಸರಿ. ಗೆಲುವಿಗೆಲ್ಲ ಮೋದಿ ಕಾರಣ ಸೋತಾಗೆಲ್ಲ ಪ್ರತಿಪಕ್ಷದ ನಾಯಕರು ಕಾರಣ ಅನ್ನೊ ಕೇಂದ್ರ ಸರ್ಕಾರದ ಸಚಿವರು ಮತ್ತವರ ಬೆಂಬಲಿಗರು ದೇಶವನ್ನು ಎಲ್ಲಿಗೆ ತೆಗೆದುಕೊಂಡು ಹೋಗಿ ನಿಲ್ಲಿಸುತ್ತಾರೊ ಎಂಬುದೇ ದೊಡ್ಡ ಪ್ರಶ್ನೆ.