ಕಾರ್ಪೋಟಿಕರಣಗೊಂಡ ದೇಶದ ವೈದ್ಯಕೀಯ ಕ್ಷೇತ್ರ ಹಾಗೂ ಬಹುಪಾಲು ವೈದ್ಯರ ನಡುವೆ, ನಮ್ಮ ಬೆಂಗಳೂರಿನಲ್ಲಿ ಓರ್ವ ಡಾಕ್ಟರ್ ʼಸೇವೆಯೇ ಜೀವನಧರ್ಮʼವೆಂಬ ತತ್ವ ಪಾಲಿಸುತ್ತಾ ಮನೆಯಿಂದ ಹೊರಬರಲಾಗದ ಕೋವಿಡ್ ರೋಗಿಗಳ ಪಾಲಿಗೆ ನಿಜಕ್ಕೂ ಆಪತ್ಬಾಂಧವರಾಗಿದ್ದಾರೆ. ವೈದ್ಯಕೀಯ ಸೇವೆಯ ತುರ್ತು ಅಗತ್ಯ ಇರುವ ರೋಗಿಗಳ ಕಡೆಗೆ ಸ್ವತಃ ಈ ವೈದ್ಯರೇ ಧಾವಿಸುತ್ತಿದ್ದು ʼಮೊಬೈಲ್ ಡಾಕ್ಟರ್ʼ ಎಂದೇ ಜನಪ್ರಿಯಗೊಂಡಿದ್ದಾರೆ.
ಸರ್ಜಾಪುರದಲ್ಲಿ ಕ್ಲಿನಿಕ್ ಇಟ್ಟುಕೊಂಡಿರುವ ಡಾ. ಸುನಿಲ್ ಕುಮಾರ್ ಹೆಬ್ಬಿ ಅವರೇ ಈ ಜನಪ್ರಿಯ ʼಮೊಬೈಲ್ ಡಾಕ್ಟರ್ʼ ಅಥವಾ ʼಕಾರ್ ಡಾಕ್ಟರ್ʼ. ತನ್ನ ರೋಗಿಗಳನ್ನು ಅವರದೇ ಸ್ಥಳಕ್ಕೆ ಹೋಗಿ ಶುಶ್ರೂಷಿಸುವ ಹೆಬ್ಬಿ, ಬೆಳಗ್ಗೆ 9 ರಿಂದ ತಮ್ಮ ಸೇವೆಯನ್ನು ಪ್ರಾರಂಭಿಸುತ್ತಾರೆ. ಸಾಧಾರಣವಾಗಿ ರಾತ್ರಿ 9 ಗಂಟೆವರೆಗೂ ಕೆಲಸದ ಅವಧಿಯಾದರೂ ಕೆಲವೊಮ್ಮೆ ಮಧ್ಯರಾತ್ರಿವರೆಗೂ ಅವಧಿ ವಿಸ್ತರಿಸಿರುವುದು ಇದೆ ಎಂದು ಅವರೇ ಹೇಳುತ್ತಾರೆ. ತೀರಾ ಭಾವುಕ ಜೀವಿಯಾದ ಅವರು, ಕೆಲವೊಮ್ಮೆ ಹೃದಯ ವಿದ್ರಾವಕ ಸನ್ನಿವೇಶಗಳಿಗೆ ಸಾಕ್ಷಿಯಾದಾಗ, ಭಾವನಾತ್ಮಕಾವಾಗಿ ದುರ್ಬಲಗೊಳ್ಳುವಂತಹ ಪರಿಸ್ಥಿತಿ ಎದುರಾದ ದಿನಗಳಲ್ಲಿ, ಹಾಗೂ ತುಂಬಾ ಆಯಾಸಗೊಂಡಾಗ ಕೆಲಸದ ಅವಧಿಯನ್ನು ಬೇಗನೇ ಮೊಟಕುಗೊಳಿಸಿ ಸಂಜೆ 6 ರ ವೇಳೆಗೆಲ್ಲಾ ಮರಳಿದ್ದೂ ಇದೆ.
ಪ್ರತಿಧ್ವನಿಯೊಂದಿಗೆ ಈ ಕುರಿತು ಮಾತನಾಡಿದ ಸುನಿಲ್ ಕುಮಾರ್, ಮೊದಲು ನಾವು ಮಾನಸಿಕವಾಗಿಯೂ, ದೈಹಿಕವಾಗಿಯೂ ಆರೋಗ್ಯವಾಗಿರಬೇಕು. ನಾವು ಆರೋಗ್ಯದಿಂದ ಇದ್ದರೆ ಇನ್ನಷ್ಟು ಮಂದಿಗೆ ಅಗತ್ಯ ಆರೋಗ್ಯ ಸೇವೆ ನೀಡಲು ಸಾಧ್ಯವಾಗುತ್ತದೆ. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದೂ ಕೂಡಾ ಸಾರ್ವಜನಿಕ ಆರೋಗ್ಯ ಕಾಪಾಡಿಕೊಳ್ಳುವುದರ ಭಾಗ ಎಂದು ಹೇಳಿದ್ದಾರೆ.
2007 ರಲ್ಲಿ ಬಿಜಾಪುರ ಮೆಡಿಕಲ್ ಕಾಲೇಜಿನಿಂದ ಡಾಕ್ಟರ್ ಪದವಿ ಪಡೆದ ಸುನಿಲ್ ಕುಮಾರ್ ʼಕಾರ್ ಡಾಕ್ಟರ್ʼ ಆಗಿರುವುದರ ಹಿಂದೆ ಒಂದು ಕತೆ ಇದೆ. ಅವರೇ ಹೇಳುವಂತೆ, ʼಒಂದು ದಿನ ಅವರು ಹೊಸೂರು ರಸ್ತೆಯಲ್ಲಿ ತಮ್ಮ ಕಾರಿನಲ್ಲಿ ಹೋಗುತ್ತಿದ್ದ ವೇಳೆ, ಅಪಘಾತಕ್ಕೆ ಒಳಗಾಗಿ ಬಿದ್ದಿದ್ದ ಓರ್ವ ವ್ಯಕ್ತಿಯನ್ನು ತಮ್ಮ ಕಾರಿನಲ್ಲಿದ್ದ ಫಸ್ಟ್ ಏಡ್ ಬಾಕ್ಸ್ ಸಹಾಯದಿಂದ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸೇರಿಸುತ್ತಾರೆ. ಜೀವ ಉಳಿಸಿದಕ್ಕಾಗಿ ಆ ವ್ಯಕ್ತಿಯ ಕುಟುಂಬಸ್ಥರು ತೋರಿದ ಕೃತಜ್ಞತಾ ಭಾವ ಇವರನ್ನು ಗಾಢವಾಗಿ ಕಾಡುತ್ತದೆ. ಕೇವಲ ಕಾರಿನಲ್ಲಿರುವ ಒಂದು ಪ್ರಥಮ ಚಿಕಿತ್ಸಕ ಪೆಟ್ಟಿಗೆಯಿಂದ ಒಬ್ಬರ ಜೀವ ಉಳಿಸಲು ಸಾಧ್ಯವಾಗುವುದಾದರೆ, ಕಾರಿನಲ್ಲಿ ಇನ್ನಷ್ಟು ಸೌಲಭ್ಯಗಳನ್ನು ಅಳವಡಿಸಿದರೆ ಎಷ್ಟು ಜನರಿಗೆ ಸಹಾಯ ಮಾಡಬಹುದೆಂದು ಯೋಚಿಸಿ, ಯೋಜನೆ ಹಾಕಿಕೊಳ್ಳುತ್ತಾರೆ. ತಮ್ಮ ಕಾರಿನಲ್ಲಿರುವ ಸ್ಥಳಾವಕಾಶವನ್ನು ಗಣನೆಗೆ ತೆಗೆದುಕೊಂಡು ಅದರಲ್ಲಿ ಹೊಂದುವ ಸಾಕಷ್ಟು ವೈದ್ಯಕೀಯ ಉಪರಣಗಳನ್ನು ಕಾರಿನೊಂದಿಗೆ ಜೋಡಿಸುತ್ತಾರೆ. ಹಾಗೆ ಕಾರಿನಲ್ಲೇ ಆಕ್ಸಿಜನ್ ಸಿಲಿಂಡರ್, ಥರ್ಮಾಮೀಟರ್, ಗ್ಲೂಕೋಮೀಟರ್, ಈಸಿಜಿ ಮೆಷಿನ್, ಫೋಲ್ಡಿಂಗ್ ಟೇಬಲ್ ಮೊದಲಾದವುಗಳನ್ನು ಇಟ್ಟುಕೊಂಡಿದ್ದಾರೆ.
ವಿಜಯಪುರ ಜಿಲ್ಲೆಯ ನಾಮದಪುರ ಎಂಬ ಸಣ್ಣ ಹಳ್ಳಿಯಿಂದ ಬಂದಿರುವ ಸುನಿಲ್ ಕುಮಾರ್, ನಮ್ಮ ಹಳ್ಳಿಯಲ್ಲಿನ ಜನರು ಪ್ರಾಥಮಿಕ ಆರೋಗ್ಯ ಸೇವೆಗಳಿಗಾಗಿಯೇ ಕನಿಷ್ಟ 50 ಕಿಮೀ ಸಂಚರಿಸುವ ಅನಿವಾರ್ಯತೆ ಇತ್ತು. ಇದನ್ನು ಕಂಡೇ ನಾನು ಬೆಳೆದಿರೋದು, ಇದು ಕೂಡಾ ಬೆಂಗಳೂರಿನಲ್ಲಿ ಮೊಬೈಲ್ ಕ್ಲಿನಿಕ್ ಮಾಡುವ ನನ್ನ ಯೋಚನೆಗೆ ಸ್ಪೂರ್ತಿಯಾಗಿದೆ, ಇದುವರೆಗೂ 700 ರಿಂದ 800 ಕ್ಕೂ ಅಧಿಕ ಮೆಡಿಕಲ್ ಕ್ಯಾಂಪ್ ನಾವು ಮಾಡಿದ್ದೇವೆ ಎಂದು ಅವರು ಹೇಳುತ್ತಾರೆ.
ಆರೋಗ್ಯ ಸೇವೆ ಮನುಷ್ಯನ ಮೂಲಭೂತ ಹಕ್ಕು. ಬಹುತೇಕ ದೇಶಗಳು ಈ ಹಕ್ಕನ್ನು ಗಂಭೀರವಾಗಿ ಪರಿಗಣಿಸತ್ತಿದೆ. ನಮ್ಮ ದೇಶದಲ್ಲಿ ಆರೋಗ್ಯ ಕ್ಷೇತ್ರದ ಮೂಲಸೌಕರ್ಯಗಳ ಕೊರತೆಯಿದೆ. ಬಾಂಗ್ಲಾದೇಶ ಪಾಕಿಸ್ತಾನದಂತಹ ದೇಶಗಳೇ ನಮ್ಮ ಜಿಡಿಪಿಯಲ್ಲಿ ನಾವು ಆರೋಗ್ಯ ಕ್ಷೇತ್ರಕ್ಕೆ ವಿನಿಯೋಗಿಸುವದಕ್ಕಿಂತ ಅವರ ಜಿಡಿಪಿಯಲ್ಲಿ ಅವರು ವಿನಿಯೋಗಿಸುತ್ತಿರುವ ಪ್ರಮಾಣ ಹೆಚ್ಚಿದೆ. ಗುಣಮುಖವಾಗುವಂತಹ ಖಾಯಿಲೆಗಳಿಂದಾಗಿ ಭಾರತದಲ್ಲಿ ವಾರ್ಷಿಕ 24 ಲಕ್ಷಕ್ಕೂ ಅಧಿಕ ಮಂದಿ ಸಾವನ್ನುಪ್ಪುತ್ತಿದ್ದಾರೆ. ಇದು ಭಾರತ ಸರ್ಕಾರವೇ ನೀಡಿರುವ ಅಂಕಿ ಅಂಶ. ಅವರಿಗೆಲ್ಲಾ, ಅಗತ್ಯ ವೈದ್ಯಕೀಯ ಸೇವೆಗಳು ಲಭ್ಯವಾದರೆ ಅವರನ್ನು ಉಳಿಸಬಹುದು. ನಮ್ಮ ದೇಶದಲ್ಲಿ ಆರೋಗ್ಯ ಮೂಲಭೂತ ಹಕ್ಕು ಎಂದು ಪರಿಗಣಿಸಿಲ್ಲ. ಈಗ, ದೇಶದಲ್ಲಿ ಮೆಡಿಕಲ್ ಎಮರ್ಜೆನ್ಸಿ ಇದೆ. ಆದರೂ ನಾವು ಇದರ ಬಗ್ಗೆ ಧ್ವನಿಯೆತ್ತದಿರುವುದು ವಿಷಾಧನೀಯ. ಹಾಗಾಗಿ, ನಾವೇ ನೇರವಾಗಿ ನಮ್ಮ ಕೈಲಾಗುವಂತಹ ಸೇವೆಯನ್ನು ಮಾಡುತ್ತಿದ್ದೇವೆ. ನಮಗೆ ಯಾರಾದರೂ ವೈದ್ಯರು ಸ್ವಯಂ ಪ್ರೇರಿತವಾಗಿ ಕೈಜೋಡಿಸಿದರೆ ತುಂಬಾ ಪ್ರಯೋಜನವಾಗುತ್ತದೆ. ಅವರಿಗೆ ಬೇಕಾದ ಸಂಭಾವನೆಯನ್ನೂ ಕೊಡಲು ನಾವು ತಯಾರಿದ್ದೇವೆ ಎಂದು ಸುನಿಲ್ ಹೇಳಿದ್ದಾರೆ.
ನಮ್ಮ ಬಳಿ ಈಗ ಒಂದು ಕಾರ್ ಇದೆ. ಇದರಿಂದ ದಿನವೊಂದಕ್ಕೆ 15 ರಿಂದ 20 ಮಂದಿ ರೋಗಿಗಳಿಗಷ್ಟೇ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ಹಾಗಾಗಿ ಒಂದು ಟ್ರಾವೆಲರ್ ಖರೀದಿ ಮಾಡಬೇಕೆಂದು ನಾವು ಯೋಜನೆ ಹಾಕಿಕೊಂಡಿದ್ದೀವೆ. ಅದಕ್ಕಾಗಿ ಸುಮಾರು 2 ಲಕ್ಷದಷ್ಟು ಮೊತ್ತ ಸಂಗ್ರಹವಾಗಿದೆ. ಇನ್ನೂ 7 ಲಕ್ಷಗಳಷ್ಟು ದುಡ್ಡಿನ ಅವಶ್ಯಕತೆ ಇದೆ. ನಾವು ದಾನಿಗಳ ನಿರೀಕ್ಷೆಯಲ್ಲಿದ್ದೇವೆ. ಕ್ರೌಡ್ ಫಂಡಿಂಗ್ ಮೂಲಕ ಇನ್ನಷ್ಟು ಮಂದಿಗೆ ವೈದ್ಯಕೀಯ ಸೇವೆ ಲಭ್ಯುವಾಗಬಹುದೆಂಬ ನಂಬಿಕೆ ಇದೆ ಎಂದು ಅವರು ಹೇಳಿದ್ದಾರೆ.
ವೈದ್ಯಕೀಯ ಕ್ಷೇತ್ರವೆಂದರೆ ತುಂಬಾ ಚೆನ್ನಾಗಿ ಹಣಗಳಿಸುವ ಕ್ಷೇತ್ರ, ಇಂತಹಾ ಕ್ಷೇತ್ರದಲ್ಲಿರುವ ನೀವು ಯಾಕೆ ನಿಮ್ಮ ಅವಕಾಶಗಳನ್ನು ಕೈ ಚೆಲ್ಲುತ್ತಿದ್ದೀರಿ ಎಂದು ಅವರನ್ನು ಪ್ರಶ್ನಿಸಿದಾಗ, ʼನನಗೆ ಐಷರಾಮಿ ಬದುಕಿನಲ್ಲಿ ಆಸೆಗಳಿಲ್ಲ. ಬದುಕಲು ಬೇಖಾದ ಕನಿಷ್ಟ ಸವಲತ್ತು, ಕಾರ್ ಖರ್ಚು, ಇಂಧನ, ಔಷಧಿಗಳಿಗೆ ಅಗತ್ಯ ಇರುವಷ್ಟು ಹಣವಿದ್ದರೆ ಸಾಕು. ದೊಡ್ಡ ಕಾರು, ಬಂಗಲೆಯಂತಹ ಮನೆಯ ಅವಶ್ಯಕತೆ ಇದೆ ಎಂದು ನನಗನ್ನಿಸಿಲ್ಲ. ಹಾಗಾಗಿಯೇ, 7 ಲಕ್ಷಕ್ಕೆ ದಾನಿಗಳ ನಿರೀಕ್ಷೆಯಲ್ಲಿದ್ದೇವೆ. ನಮ್ಮ ಪೋಷಕರು ನನಗೆ ತುಂಬಾ ಪ್ರೋತ್ಸಾಹ ನೀಡುತ್ತಿದ್ದಾರೆ. ನನ್ನ ಗಳಿಕೆಯಿಂದಲೇ ಕುಟುಂಬದ ಖರ್ಚು ಹೋಗಬೇಕಾದ ಅವಶ್ಯಕತೆ ಇಲ್ಲ. ಹಾಗಾಗಿ ನನ್ನ ವೈಯಕ್ತಿಕ ಖರ್ಚುಗಳನ್ನು ನೋಡಿಕೊಂಡರೆ ಸಾಕಾಗುತ್ತದೆ ನನಗೆ ಎಂದು ಅವರು ಹೇಳಿದ್ದಾರೆ.
ಡಾ. ಸುನಿಲ್ ಕುಮಾರ್ ಹೆಬ್ಬಿ ಅವರನ್ನು ಸಂಪರ್ಕಿಸಲು 6363832491 ಅಥವಾ 9741958428 ಸಂಖ್ಯೆಗೆ ವಾಟ್ಸಪ್ ಮಾಡಬಹುದು. ನ