ಬೃಹತ್ ಮೊತ್ತ ದಾಖಲಿಸಿಯೂ ಸೋಲುಂಡು ತೀವ್ರ ಟೀಕೆಗೆ ಗುರಿಯಾಗಿರುವ ಭಾರತ ತಂಡ ಹೈದರಾಬಾದ್ ನಲ್ಲಿ ನಡೆಯಲಿರುವ ೨ನೇ ಟಿ-೨೦ ಪಂದ್ಯದಲ್ಲಿ ಬೌಲಿಂಗ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಚಿಂತೆಯಲ್ಲಿದ್ದರೆ, ಭರ್ಜರಿ ಗೆಲುವಿನಿಂದ ಬೀಗುತ್ತಿರುವ ಆಸ್ಟ್ರೇಲಿಯಾ ತಂಡ ವಿಶ್ವಾಸದಲ್ಲಿದೆ.
ಮೂರು ಪಂದ್ಯಗಳ ಸರಣಿಯಲ್ಲಿ ಭಾರತ ೦-೧ರಿಂದ ಹಿನ್ನಡೆ ಅನುಭವಿಸಿದ್ದು, ಇದೀಗ ಸರಣಿ ಜೀವಂತವಾಗಿ ಇರಿಸಿಕೊಳ್ಳಬೇಕಾದರೆ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಮತ್ತೊಂದೆಡೆ ಬೃಹತ್ ಮೊತ್ತವನ್ನು ಚೇಸ್ ಮಾಡಿ ದಾಖಲೆ ಗೆಲುವು ಕಂಡಿರುವ ಆಸ್ಟ್ರೇಲಿಯಾ ಈ ಪಂದ್ಯವನ್ನೂ ಗೆದ್ದು ಸರಣಿ ಗೆಲುವಿನ ವಿಶ್ವಾಸದಲ್ಲಿದೆ.
ನಾಗ್ಪುರದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಪಿಚ್ ಹೇಗೆ ವರ್ತಿಸುತ್ತದೆ ಎಂಬುದು ಕೂಡ ಕುತೂಹಲಕ್ಕೆ ಕಾರಣವಾಗಿದೆ.
ಭಾರತ ತಂಡ ಬೌಲಿಂಗ್ ಸಮಸ್ಯೆ ಎದುರಿಸುತ್ತಿದ್ದು, ಅದರಲ್ಲೂ ಸ್ಲಾಗ್ ಓವರ್ ಗಳಲ್ಲಿ ಕೈ ಚೆಲ್ಲುತ್ತಿರುವುದು ದೊಡ್ಡ ಚಿಂತೆಯ ವಿಷಯವಾಗಿದೆ. ಉಮೇಶ್ ಯಾದವ್ ಮತ್ತು ಭುವನೇಶ್ವರ್ ಕುಮಾರ್ ವೈಫಲ್ಯ ತಂಡವನ್ನು ಚಿಂತೆಗೀಡು ಮಾಡಿದೆ.
ಜಸ್ ಪ್ರೀತ್ ಬುಮ್ರಾ ಗಾಯದಿಂದ ಚೇತರಿಸಿಕೊಂಡಿದ್ದರೂ ಫಿಟ್ ಇರುವುದು ಅನುಮಾನ. ಒಂದು ವೇಳೆ ಬುಮ್ರಾ ಚೇತರಿಸಿಕೊಂಡರೆ ಉಮೇಶ್ ಅವರನ್ನು ಹೊರಗಿಟ್ಟು ಕಣಕ್ಕಿಳಿಯುವ ಸಾಧ್ಯತೆ ಇದೆ. ಬುಮ್ರಾ ಈ ವರ್ಷ ಕೇವಲ ೩ ಪಂದ್ಯಗಳಲ್ಲಿ ಮಾತ್ರ ಆಡಿದ್ದು, ಭುವನೇಶ್ವರ್ ಕುಮಾರ್ ಈ ಜವಾಬ್ದಾರಿ ವಹಿಸಿದ್ದರು. ಆದರೆ ಕೆಲವು ಪಂದ್ಯಗಳಲ್ಲಿನ ಅವರ ಪ್ರದರ್ಶನ ಟೀಕೆಗೆ ಗುರಿಯಾಗಿದೆ.
ಬೌಲಿಂಗ್ ಹೊರತುಪಡಿಸಿದರೆ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಆಗುವುದು ಅನುಮಾನ. ಆದರೆ ಆಸ್ಟ್ರೇಲಿಯಾ ತಂಡ ಮೊದಲ ಪಂದ್ಯದಲ್ಲಿ ಆಡಿದ ಆಟಗಾರರನ್ನೇ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.