ಉಪರಾಷ್ಟ್ರಪತಿ ಸ್ಥಾನಕ್ಕೆ ವಿಪಕ್ಷಗಳ ಅಭ್ಯರ್ಥಿಯಾಗಿರುವ ಮಾರ್ಗರೇಟ್ ಆಳ್ವ ಅವರ ಟೆಲಿಫೋನ್ ಕದ್ದಾಲಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್ ಮಿಶ್ರ ತೇನಿ ಅವರು ಪ್ರತಿಕ್ರಿಯೆ ನೀಡಿದ್ದು, ‘ಇದೊಂದು ಹತಾಶ ವ್ಯಕ್ತಿಯ ಹೇಳಿಕೆ’ ಎಂದು ಪ್ರತಿಕ್ರಿಯಿಸಿದ್ದಾರೆ.
ತನ್ನ ಫೋನನ್ನು ಕದ್ದಾಲಿಸಲಾಗುತ್ತದೆ ಎಂದು ಮಾರ್ಗರೇಟ್ ಆಳ್ವ ಅವರು ಆರೋಪಿಸಿದ್ದು ಇದು ರಾಜಕೀಯ ಪಡಸಾಲೆಯಲ್ಲಿ ಸಂಚಲನಕ್ಕೆ ಕಾರಣವಾಗಿತ್ತು.
ಮಾರ್ಗರೇಟ್ ಅವರಿಗೆ ತಮ್ಮ ಮೊಬೈಲಿನಲ್ಲಿ ಕರೆಗಳನ್ನು ಸ್ವೀಕರಿಸಲು ಮತ್ತು ಮಾಡಲು ಸಾಧ್ಯವಾಗದೇ ಇರುವ ವಿಚಾರದ ಕುರಿತಾಗಿ ಗೃಹ ಇಲಾಖೆಯ ರಾಜ್ಯ ಸಚಿವರಾಗಿರುವ ತೇನಿ ಅವರು ಎ.ಎನ್.ಐ. ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿ, ‘ಇವರ ಕರೆಗಳನ್ನು ಕದ್ದಾಲಿಸಿ ಏನು ಪ್ರಯೋಜನ?’ ಎಂದು ಪ್ರತಿಕ್ರಿಯಿಸಿದ್ದಾರಲ್ಲದೆ, ‘ತಮ್ಮ ಸ್ಪರ್ಧೆಯಲ್ಲಿ ಗೆಲುವಿನ ವಿಶ್ವಾಸವಿಲ್ಲದವರು ಇಂತಹ ವ್ಯರ್ಥ ಆರೋಪಗಳನ್ನು ಮಾಡುತ್ತಿರುತ್ತಾರೆ’ ಎಂದು ವ್ಯಂಗ್ಯವಾಡಿದ್ದಾರೆ.
ಬಿಜೆಪಿ, ಟಿಎಂಸಿ ಅಥವಾ ಬಿಜೆಡಿ ಸಂಸದರಿಗೆ ಯಾವುದೇ ಕರೆಗಳನ್ನು ಮಾಡದಿರುವ ಭರವಸೆಯ ಬಳಿಕ ಆಳ್ವ ಅವರು ಸರಕಾರಿ ಸ್ವಾಮ್ಯದ ದೂರವಾಣಿ ಸೇವಾದಾರ ಸಂಸ್ಥೆ ಎಂ.ಟಿ.ಎನ್.ಎಲ್.ಗೆ ತನ್ನ ಸಂಖ್ಯೆಯನ್ನು ಪುನರ್ ಚಾಲನಗೊಳಿಸುವಂತೆ ಒತ್ತಾಯಿಸಿದ್ದರು. ಆಳ್ವ ಅವರ ಎಂ.ಟಿ.ಎನ್.ಎಲ್. ಕೆವೈಸಿ ತಿರಸ್ಕೃತಗೊಂಡಿತ್ತು ಮತ್ತು ಅವರ ಸಿಮ್ ಕಾರ್ಡ್ 24 ಗಂಟೆಗಳೊಳಗಾಗಿ ಬ್ಲಾಕ್ ಆಗಿತ್ತು. ಈ ವಿಚಾರವನ್ನು ಆಳ್ವ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು.
‘ಡಿಯರ್ ಬಿ.ಎಸ್.ಎನ್.ಎಲ್./ಎಂ.ಟಿ.ಎನ್.ಎಲ್. ಬಿಜೆಪಿ ಪಕ್ಷದಲ್ಲಿರುವ ನನ್ನ ಕೆಲ ಗೆಳೆಯರ ಜೊತೆ ಮಾತನಾಡಿದ ಬಳಿಕ ನನ್ನ ಮೊಬೈಲಿನಿಂದ ಎಲ್ಲಾ ಕರೆಗಳನ್ನು ಡೈವರ್ಟ್ ಮಾಡಲಾಗಿದೆ ಮಾತ್ರವಲ್ಲದೇ ನನಗೆ ಯಾವುದೇ ಕರೆಗಳನ್ನು ಮಾಡಲು ಅಥವಾ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ನನ್ನ ಸಂಪರ್ಕ ಪುನರ್ ಸ್ಥಾಪಿಸಲ್ಪಟ್ಟಲ್ಲಿ, ಇನ್ಮುಂದೆ ಬಿಜೆಪಿ, ಟಿಎಂಸಿ ಅಥವಾ ಬಿಜೆಡಿಯ ಯಾವುದೇ ಸಂಸದರಿಗೆ ಕರೆ ಮಾಡುವುದಿಲ್ಲ ಎಂದು ಭರವಸೆ ನೀಡುತ್ತೇನೆ’ ಎಂದು ಮಾರ್ಗರೇಟ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದರು.
ವಿಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿರುವ ಮಾರ್ಗರೇಟ್ ಆಳ್ವ ಅವರು ಇದೀಗ ತಮ್ಮನ್ನು ಪ್ರಚಾರ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದು, ಈಗಾಗಲೇ ದೆಹಲಿ, ಕರ್ನಾಟಕ ಮತ್ತು ಅಸ್ಸಾಂ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಪಶ್ಚಿಮ ಬಂಗಾಲದ ರಾಜ್ಯಪಾಲರಾಗಿರುವ ಜಗದೀಪ್ ಧನ್ಕರ್ ಅವರು ಎನ್.ಡಿ.ಎ. ಮೈತ್ರಿಕೂಟದ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿದ್ದು ಇವರ ವಿರುದ್ಧ ಮಾರ್ಗರೇಟ್ ಆಳ್ವ ಸ್ಪರ್ಧಿಸುತ್ತಿದ್ದಾರೆ.
ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಉಪರಾಷ್ಟ್ರಪತಿ ಚುನಾವಣೆಯಿಂದ ದೂರವುಳಿಯುವುದಾಗಿ ಈಗಾಗಲೇ ಘೋಷಿಸಿದೆ.