ಬೆಳಗಾವಿ ಹೇಳಿಕೇಳಿ ಮರಾಠಿ ವರ್ಸಸ್ ಕನ್ನಡಿಗರು ಅನ್ನೋ ಜಿಲ್ಲೆ. ಸದಾ ಒಂದಿಲ್ಲೊಂದು ಕ್ಯಾತೆ ತೆಗೆಯುವ ಮರಾಠಿ ಜನರಿಗೆ ಬೆಳಗಾವಿಯ ಮೊದಲ ವ್ಯಕ್ತಿ ಸ್ಥಾನಮಾನ ಸಿಕ್ಕಿದೆ. ಪಾಲಿಕೆ ಚುನಾವಣೆಯಲ್ಲಿ ಬಹುಮತ ಗಳಿಸಿದ್ದ ಭಾರತೀಯ ಜನತಾ ಪಾರ್ಟಿ, ನಿನ್ನೆ ನಡೆದ ಮೇಯರ್ ಹಾಗು ಉಪಮೇಯರ್ ಚುನಾವಣೆಯಲ್ಲಿ ಮರಾಠಿ ಭಾಷಿಕರಿಗೆ ಮಣೆ ಹಾಕಿದೆ. 1984ರಿಂದಲೂ ಭಾಷಾ ಆಧಾರದಲ್ಲೇ ಚುನಾವಣೆ ನಡೆಯುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಪಕ್ಷಗಳ ಆಧಾರದಲ್ಲಿ ಚುನಾವಣೆ ನಡೆದಿತ್ತು. ಹೀಗಾಗಿ ಕನ್ನಡಿಗರು ಮೇಯರ್ ಆಗಲಿದ್ದಾರೆ ಎನ್ನುವ ಕನ್ನಡಿಗರ ನಿರೀಕ್ಷೆ ಹುಸಿಯಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಮತ ಸೆಳೆಯುವ ಉದ್ದೇಶದಿಂದ ಬಿಜೆಪಿ ಮತ್ತೆ ಮರಾಠಿ ಭಾಷಿಕರನ್ನೇ ಬೆಳಗಾವಿಯ ಮೇಯರ್ ಸ್ಥಾನಕ್ಕೆ ಕೂರಿಸಿರುವುದು ಕನ್ನಡಿಗರ ಕಣ್ಣು ಕೆಂಪಾಗುವಂತೆ ಮಾಡಿದೆ. ಕೇಸರಿ ನಾಯಕರು ಮತಕ್ಕಾಗಿ ಕನ್ನಡಿಗರಿಗೆ ಅನ್ಯಾಯ ಮಾಡಿದ್ದಾರೆ ಎನ್ನುವ ಆಕ್ರೋಶ ಭುಗಿಲೆದ್ದಿದೆ.
ಬಿಜೆಪಿಗೆ ಬಹುಮತ, 3 ಕ್ಷೇತ್ರಗಳ ಮತಗಳ ಮೇಲೆ ಕಣ್ಣು..!
ಬೆಳಗಾವಿ ಪಾಲಿಕೆಯ 58 ವಾರ್ಡ್’ಗಳ ಪೈಕಿ ಬಿಜೆಪಿ 35 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದ್ರೆ, ಕಾಂಗ್ರೆಸ್ 10 ಹಾಗೂ 13 ಜನ ಪಕ್ಷೇತರರು ಆಯ್ಕೆ ಆಗಿದ್ದರು. 2021ರ ಸೆಪ್ಟೆಂಬರ್’ನಲ್ಲಿ ಚುನಾವಣೆ ನಡೆದರೂ 17 ತಿಂಗಳು ಕಾಲ ಮೇಯರ್, ಉಪಮೇಯರ್ ಚುನಾವಣೆ ನಡೆದಿರಲಿಲ್ಲ. ಮೇಯರ್ ಸ್ಥಾನಕ್ಕೆ ಮರಾಠಿ ಹಾಗೂ ಲಿಂಗಾಯತ ಸಮುದಾಯದ ಮಧ್ಯೆ ಪೈಪೋಟಿ ಏರ್ಪಟ್ಟಿತ್ತು. ಆ ಬಳಿಕ ರಾಜ್ಯ ಬಿಜೆಪಿ ಉಪಾಧ್ಯಕ್ಷ, ಬೆಳಗಾವಿ ವಿಭಾಗದ ಬಿಜೆಪಿ ಉಸ್ತುವಾರಿ ನಿರ್ಮಲ ಕುಮಾರ್ ಸುರಾನಾ ನೇತೃತ್ವದಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಮೇಯರ್ ಆಕಾಂಕ್ಷಿಗಳ ಸಂದರ್ಶನ ಮಾಡಲಾಗಿತ್ತು. ಆ ಬಳಿಕ ಆಡಳಿತ ಪಕ್ಷದ ನಾಯಕನಾಗಿ ಲಿಂಗಾಯತ ಪಂಚಮಸಾಲಿ ಸಮುದಾಯದ ಹಾಗೂ ಕನ್ನಡ ಭಾಷಿಕ ರಾಜಶೇಖರ್ ಡೋಣಿ ಅವರನ್ನು ಆಯ್ಕೆ ಮಾಡಿ, ಮೇಯರ್ ಹಾಗೂ ಉಪಮೇಯರ್ ಪಟ್ಟವನ್ನು ಮರಾಠಾ ಸಮುದಾಯಕ್ಕೆ ನೀಡುವ ನಿರ್ಧಾರ ಕೈಗೊಳ್ಳಲಾಯ್ತು. ಶೋಭಾ ಸೋಮನಾಚೆ ಮೇಯರ್ ಆಗಿ ಆಯ್ಕೆ ಆದ್ರೆ ರೇಷ್ಮಾ ಪಾಟೀಲ್ ಉಪಮೇಯರ್ ಆಗಿ ಆಯ್ಕೆ ಆಗಿದ್ದಾರೆ.
ಬಿಜೆಪಿ ಕ್ರಮಕ್ಕೆ ಕನ್ನಡಿಗ ಹೋರಾಟಗಾರರ ತೀವ್ರ ಆಕ್ರೋಶ..!
ಬಿಜೆಪಿ ನಾಯಕತ್ವ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮರಾಠಿ ಮತಗಳನ್ನು ಪಡೆದುಕೊಳ್ಳುವ ಸಲುವಾಗಿ ಮರಾಠಿ ಸಮುದಾಯಕ್ಕೆ ಮೇಯರ್, ಉಪಮೇಯರ್ ಪಟ್ಟವನ್ನು ನೀಡಿರುವುದಕ್ಕೆ ಕನ್ನಡ ಸಂಘಟನೆ ನಾಯಕರು ಆಕ್ರೋಶ ಹೊರ ಹಾಕಿದ್ದಾರೆ. ಸಾಕಷ್ಟು ವರ್ಷಗಳ ಬಳಿಕ ಬೆಳಗಾವಿ ಪಾಲಿಕೆಯಲ್ಲಿ ಕನ್ನಡ ಬಾವುಟ ಹಾರಾಡುವ ವಿಶ್ವಾಸವಿತ್ತು. ಆದರೆ ಈ ಬಾರಿ ಕೂಡ ಬೆಳಗಾವಿ ಪಾಲಿಕೆ ಮೇಲೆ ಕನ್ನಡ ಬಾವುಟ ಹಾರದಂತಹ ಕ್ರಮವನ್ನು ಬಿಜೆಪಿ ನಾಯಕರು ಕೈಗೊಂಡಿರುವುದು ಕನ್ನಡಿಗರಿಗೆ ಸಹಿಸಲಾರದ ಸಂಕಟವನ್ನುಂಟು ಮಾಡಿದೆ. 2020ರಲ್ಲಿ ಬೆಳಗಾವಿಯ ಮಹಾನಗರ ಪಾಲಿಕೆಯ ಮುಂಭಾಗ ಕನ್ನಡಾಭಿಮಾನಿ ಶ್ರೀನಿವಾಸ ತಾಳೂರಕರ್ ಮತ್ತು ತಂಡ ಕನ್ನಡ ಬಾವುಟ ಹಾರಿಸಿತ್ತು. ಆ ಬಳಿಕ ಕನ್ನಡ ಬಾವುಟವನ್ನು ತೆರವು ಮಾಡಲಾಗಿತ್ತು. ಪಾಲಿಕೆ ಕಟ್ಟಡದ ಮುಂಭಾಗ ಕೇವಲ ರಾಷ್ಟ್ರಧ್ವಜ ಮಾತ್ರ ಹಾರುತ್ತಿದ್ದು, ಶೀಘ್ರದಲ್ಲೇ ಕನ್ನಡ ಬಾವುಟ ಹಾರುವ ವಿಶ್ವಾಸದಲ್ಲಿದ್ದ ಕನ್ನಡಿಗರಿಗೆ ಬಿಜೆಪಿ ವಿಶ್ವಾಸ ದ್ರೋಹ ಮಾಡಿದೆ ಎನ್ನುವುದು ಕನ್ನಡಿಗರ ಆಕ್ರೋಶದ ಆರೋಪ ಆಗಿದೆ.
1984 ರಿಂದ ಐವರು ಕನ್ನಡಿಗರಿಗೆ ಮಾತ್ರ ಮೇಯರ್ ಪಟ್ಟ..!
ಬೆಳಗಾವಿಯಲ್ಲಿ 1984ರಲ್ಲಿ ಪಾಲಿಕೆ ಸ್ಥಾನಮಾನ ಪಡೆದುಕೊಂಡಿತ್ತು. ಆ ಬಳಿಕ ಮರಾಠಿ ಸಮುದಾಯವೇ ಪ್ರಾಬಲ್ಯ ಸಾಧಿಸಿದ್ದು, ಹಾಗೊಮ್ಮೆ ಹೀಗೊಮ್ಮೆ ಕೇವಲ 5 ಮಂದಿ ಮಾತ್ರ ಕನ್ನಡಿಗರಿಗೆ ಮೇಯರ್ ಪಟ್ಟ ಒಲಿದು ಬಂದಿದೆ. ಆದರೆ ಈ ಬಾರಿ ಮೇಯರ್ ಕನ್ನಡಿಗರು ಆಗ್ತಾರೆ ಎನ್ನುವ ನಿರೀಕ್ಷೆಯನ್ನು ಬಿಜೆಪಿ ಉದ್ದೇಶ ಪೂರ್ವಕವಾಗಿಯೇ ಮರಾಠಿಗರಿಗೆ ನೀಡಿದೆ. ಬೆಳಗಾವಿ, ನಿಪ್ಪಾಣಿ ಸೇರಿದಂತೆ ಬೆಳಗಾವಿಯ ಜಿಲ್ಲೆಯ ಬಹುತೇಕ ಕ್ಷೇತ್ರಗಳಲ್ಲಿ ಮರಾಠಿ ಸಮುದಾಯ ಪ್ರಾಬಲ್ಯ ಹೊಂದಿದೆ. ಬೆಳಗಾವಿಯ ಹೆಚ್ಚು ಕ್ಷೇತ್ರಗಲ್ಲಿ ಗೆಲುವು ಸಾಧಿಸುವ ಉದ್ದೇಶದಿಂದ ಮರಾಠಿ ಭಾಷಿಕರಿಗೆ ಮಣೆ ಹಾಕಲಾಗಿದೆ. ಇನ್ನು ಕಾಂಗ್ರೆಸ್ ಕೂಡ ಇದರ ಬಗ್ಗೆ ಬಾಯಿ ಬಿಡುತ್ತಿಲ್ಲ. ಕಾರಣ ಕಾಂಗ್ರೆಸ್ ಕೂಡ ಮರಾಠಿ ಭಾಷಿಕರನ್ನೇ ಓಲೈಕೆ ಮಾಡುವ ಅನಿವಾರ್ತೆಯಲ್ಲಿದೆ. ಕನ್ನಡಿಗರು ಮಾತ್ರ ನಮ್ಮ ಮತ ಯಾರಿಗೂ ಬೇಡವೇ..? ಎಂದು ಪ್ರಶ್ನೆ ಮಾಡುವಂತಾಗಿದೆ.