ನಮ್ಮ ದೇಶದಲ್ಲಿ ದಲಿತ ಸಮುದಾಯದ ಸ್ಥಿತಿಗತಿ ಸುಧಾರಣೆಗೆ ನಮ್ಮನ್ನಾಳುವ ಸರಕಾರಗಳು ಅದೆಷ್ಟೋ ಯೋಜನೆಗಳನ್ನು ಹಾಕಿಕೊಂಡಿದ್ದರೂ, ಸೌಲಭ್ಯಗಳನ್ನು ನೀಡುತ್ತಿದ್ದರೂ ಆ ಕಾಲದಲ್ಲಿ ಶೋಷಣೆಗೆ ಒಳಗಾಗಿದ್ದ ದಲಿತ ಸಮುದಾಯ ಇವತ್ತಿನ ದಿನಗಳಲ್ಲೂ ದೇಶದ ಹಲವಾರು ಕಡೆಗಳಲ್ಲಿ ಸೌಲಭ್ಯ ವಂಚಿತರಾಗಿ, ತುಳಿತಕ್ಕೊಳಗಾಗಿ ಬದುಕುತ್ತಿರುವ ಮತ್ತು ಪ್ರತೀನಿತ್ಯ ದೇಶದ ಒಂದಲ್ಲಾ ಒಂದು ಕಡೆ ದಲಿತ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಿರುವುದನ್ನು ನಾವೆಲ್ಲಾ ಕೇಳುತ್ತಲೇ ಇದ್ದೇವೆ.
ಇದೀಗ ಇನ್ನೊಂದು ಆಘಾತಕಾರಿ ಸುದ್ದಿಯೇನೆಂದರೆ ನಮ್ಮ ನೆರೆಯ ರಾಜ್ಯವಾಗಿರುವ ತಮಿಳುನಾಡಿನಲ್ಲಿ ಪ್ರಜಾಪ್ರಭುತ್ವದ ತಳಪಾಯವೆಂದೇ ಕರೆಯಲ್ಪಡುವ ಗ್ರಾಮ ಪಂಚಾಯತ್ ಗಳಲ್ಲಿ ದಲಿತ ಸಮುದಾಯಕ್ಕೆ ಸೇರಿದ ಅಧ್ಯಕ್ಷರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿರುವ ವಿಚಾರವೊಂದು ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ.
ಇದು ಎಲ್ಲಿಯವರೆಗೆ ಅಂದರೆ ದಲಿತ ಅಧ್ಯಕ್ಷರಿಗೆ ಪಂಚಾಯತ್ ಕಚೇರಿಯಲ್ಲಿ ಆಸನವನ್ನೇ ಒದಗಿಸಿಕೊಡದಿರುವ ಮಟ್ಟಕ್ಕೆ ತಮಿಳುನಾಡಿನ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ದಲಿತ ದೌರ್ಜನ್ಯ ನಡೆಯುತ್ತಿದೆ ಎಂದರೆ ನೀವು ನಂಬಲೇಬೇಕು!
‘ತಮಿಳುನಾಡು ಅಸ್ಪೃಶ್ಯತಾ ನಿವಾರಣಾ ಒಕ್ಕೂಟ’ ಎಂಬ ಸಂಘಟನೆಯೊಂದು ನಡೆಸಿರುವ ಸಮೀಕ್ಷೆಯಲ್ಲಿ ಈ ಆಘಾತಕಾರಿ ವಿಚಾರಗಳು ಬಯಲಾಗಿವೆ. ಸಮಿಕ್ಷೆಗೊಳಪಟ್ಟಿರುವ ಒಟ್ಟು 386 ಪಂಚಾಯತ್ ಗಳ ಪೈಕಿ 22 ಪಂಚಾಯತ್ ಗಳಲ್ಲಿ ದಲಿತ ಸಮುದಾಯಕ್ಕ ಸೇರಿರುವ ಪಂಚಾಯತ್ ಅಧ್ಯಕ್ಷರಿಗೆ ಕುರ್ಚಿಯನ್ನೇ ಒದಗಿಸಿಲ್ಲ. ರಾಜ್ಯದ 24 ಜಿಲ್ಲೆಗಳಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗಿದ್ದು, ದಲಿತ ಸಮುದಾಯದವರು ಅಧ್ಯಕ್ಷರಾಗಿರುವ ಹೆಚ್ಚಿನ ಪಂಚಾಯತ್ ಗಳಲ್ಲಿ ಅವರಿಗೆ ರಾಷ್ಟ್ರಧ್ವಜವನ್ನು ಹಾರಿಸಲೂ ಅವಕಾಶ ನಿರಾಕರಿಸಿರುವ ಆಘಾತಕಾರಿ ಮಾಹಿತಿ ಈ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ. ಇಷ್ಟು ಮಾತ್ರವಲ್ಲದೇ ಕೆಲವು ಕಡೆಗಳಲ್ಲಿ ದಲಿತ ಸಮುದಾಯದ ಅಧ್ಯಕ್ಷರಿಗೆ ಇಲ್ಲಿನ ಸ್ಥಳೀಯಾಡಳಿತ ಕಚೇರಿಗಳಲ್ಲಿ ಪ್ರವೇಶ ನಿರಾಕರಿಸಲಾಗಿದೆ ಮತ್ತು ಇನ್ನು ಕೆಲವು ಕಡೆಗಳಲ್ಲಿ ಕಡತಗಳ ಪರಿಶೀಲನೆಗೂ ಅವರಿಗೆ ಅವಕಾಶವನ್ನು ನಿರಾಕರಿಸಲಾಗಿತ್ತಿದೆ ಎಂಬ ವಿಚಾರ ಹೊರಬಿದ್ದಿದೆ.
ಈ ಆಘಾತಕಾರಿ ಸಮೀಕ್ಷಾ ವರದಿಯನ್ನು ಬಹಿರಂಗಗೊಳಿಸಿದ ಬಳಿಕ ಟಿ.ಎನ್.ಯು.ಇ.ಎಫ್. ಸಂಘಟನೆಯ ಕೆ, ಸ್ಯಾಮ್ಯುವೆಲ್ ರಾಜ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ‘ಈ ಸಮೀಕ್ಷೆಯ ಫಲಿತಾಂಶ ಆಘಾತಕಾರಿ ಮತ್ತು ದುಃಖಕರವಾದದ್ದು. ದೇಶ 75ನೇ ವರ್ಷದ ಸ್ವಾತಂತ್ರ್ಯ ಸಂಭ್ರಮದಲ್ಲಿರುವ ಈ ಸಂದರ್ಭದಲ್ಲಿ ಇಲ್ಲಿನ ಬಹುತೇಕ ಪಂಚಾಯತ್ ಗಳಲ್ಲಿ ದಲಿತ ಸಮುದಾಯಗಳಿಗೆ ಸೇರಿದ ಅಧ್ಯಕ್ಷರುಗಳಿಗೆ ಕುರ್ಚಿಯನ್ನು ಸಹ ಒದಗಿಸಲಾಗಿಲ್ಲ ಮತ್ತು ಅವರಿಗೆ ರಾಷ್ಟ್ರಧ್ವಜವನ್ನು ಹಾರಿಸುವ ಅವಕಾಶವನ್ನೂ ನಿರಾಕರಿಸಲಾಗಿದೆ ಮತ್ತು ಈ ಸಮಸ್ಯೆ 20 ಪಂಚಾಯತ್ ಗಳಲ್ಲಿ ಇದೆ’ ಎಂದು ಅವರು ಹೇಳಿದ್ದಾರೆ.
ಜಾತಿ ಪದ್ಧತಿಯ ಕೆಡುಕುಗಳ ವಿರುದ್ಧ ದೊಡ್ಡ ಹೋರಾಟವನ್ನೇ ಮಾಡಿದ್ದ ಪೆರಿಯಾರ್ ಅವರ ತತ್ವಾದರ್ಶಗಳನ್ನು ಪಾಲಿಸುವ ತಮಿಳುನಾಡಿನಂತಹ ರಾಜ್ಯದಲ್ಲೇ ಈ ರೀತಿಯ ಜಾತಿ ತಾರತಮ್ಯ ಈ ಕಾಲದಲ್ಲೂ ಇರುವುದು ಆಘಾತಕಾರಿ ಎಂದು ಸ್ಯಾಮ್ಯುವೆಲ್ ಖೇದ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇದನ್ನು ಸೂಕ್ತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಒಂದು ಪ್ರತ್ಯೇಕ ಕಾರ್ಯತಂತ್ರವನ್ನು ರೂಪಿಸುವಂತೆ ಅವರು ರಾಜ್ಯ ಸರಕಾರವನ್ನು ಇದೇ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ. ಮತ್ತು ಈ ಸಮೀಕ್ಷಾ ವರದಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸುವುದು ಮಾತ್ರವಲ್ಲದೇ, ಪಂಚಾಯತ್ ಅಧ್ಯಕ್ಷರಿಗೆ ಆಗಸ್ಟ್ 15ರಂದು ಧ್ವಜಾರೋಹಣಕ್ಕೆ ಅವಕಾಶ ನೀಡುವ ನಿಟ್ಟಿನಲ್ಲಿ ವಿಶೇಷ ಅಧಿಕಾರಿಗಳನ್ನು ನೇಮಿಸುವಂತೆಯೂ ಸ್ಯಾಮ್ಯುವೆಲ್ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಇಷ್ಟು ಮಾತ್ರವಲ್ಲದೇ ಮುಂಬರುವ ಆಗಸ್ಟ್ 15ರಂದು ಕಲ್ಲಕುರುಚಿ ಜಿಲ್ಲೆಯಲ್ಲಿನ ಇಡುತ್ತವೈನಿತಮ್ ಪಂಚಾಯತ್ ನ ದಲಿತ ಮಹಿಳಾ ಅಧ್ಯಕ್ಷೆ ವಿ ಸುಧಾ ಅವರ ಅಲ್ಲಿನ ಶಾಲಾ ಮುಖ್ಯೋಪಾಧ್ಯಯರು ಧ್ವಜಾರೋಹಣ ನಡೆಸುವಂತೆ ಸಂಧಾನ ಸಭೆ ನಡೆಸಿದ ತಹಶೀಲ್ದಾರ್ ಚಿನ್ನ ಸೇಲಂ ಅವರ ಮೇಲೆ ದಲಿತ ದೌರ್ಜನ್ಯ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಸ್ಯಾಮ್ಯುವೆಲ್ ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರವನ್ನು ಅಗ್ರಹಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಸುಧಾ ಅವರು ಕಲ್ಲಕುರುಚಿ ಎಸ್.ಪಿ. ಅವರಿಗೆ ದೂರೊಂದನ್ನು ಸಲ್ಲಿಸಿದ್ದು, ಸ್ವಾಂತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ತಾನು ಧ್ವಜಾರೋಹಣ ನಡೆಸಲು ಅನುಕೂಲವಾಗುವಂತೆ ಪೊಲೀಸ್ ಭದ್ರತೆಯನ್ನು ಒದಗಿಸಬೇಕೆಂದು ಕೆಲ ದಿನಗಳ ಹಿಂದೆಯೇ ಮನವಿ ಮಾಡಿಕೊಂಡಿದ್ದರು ಎಂಬುದನ್ನೂ ಸಹ ಸ್ಯಾಮ್ಯುವೆಲ್ ಇದೇ ಸಂದರ್ಭದಲ್ಲಿ ಬಹಿರಂಗಗೊಳಿಸಿದ್ದಾರೆ. ತಮಿಳುನಾಡಿನ ಆದಿ ದ್ರಾವಿಡ ಮತ್ತು ಎಸ್.ಟಿ. ಕಮಿಷನ್ ನಿಷ್ಕ್ರಿಯವಾಗಿದೆ ಎಂದೂ ಸಹ ಸ್ಯಾಮ್ಯುವೆಲ್ ಇದೇ ಸಂದರ್ಭದಲ್ಲಿ ಗಂಭೀರ ಆರೋಪವನ್ನು ಮಾಡಿದ್ದಾರೆ.