ನರೇಂದ್ರ ಮೋದಿ ನೇತೃತ್ವದ ಭಾಜಪಾ ತನ್ನ ಅಭೂತಪೂರ್ವ ಬಹುಮತದಿಂದ ಎರಡನೇ ಬಾರಿ ಕೇಂದ್ರದಲ್ಲಿ ಅಧಿಕಾರ ರಚಿಸಿದ ಬಳಿಕ ರಾಷ್ಟ್ರ ರಾಜಕಾರಣದಲ್ಲಿ ಕಾಂಗ್ರೆಸ್ ಅಪ್ರಸ್ತುತಗೊಳ್ಳುತ್ತಾ ಬಂದಿದೆ. ನಂತರದ ಹಲವು ಚುನಾವಣೆಗಳಲ್ಲೂ ಕಾಂಗ್ರೆಸ್ ತನ್ನ ಹೀನಾಯ ಪ್ರದರ್ಶನ ನೀಡಿ, ಬಿಜೆಪಿಗೆ ಪರ್ಯಾಯವಾಗುವ ಭರವಸೆಯನ್ನು ಕಳೆದುಕೊಂಡಿದೆ. ಇನ್ನೇನಿದ್ದರೂ ಪ್ರಾದೇಶಿಕ ಶಕ್ತಿಗಳ ಸಮಾಗಮವೇ ಕೇಂದ್ರದಲ್ಲಿ ಅಧಿಕಾರದ ಸ್ಥಾನಪಲ್ಲಟವನ್ನು ಮಾಡಬಲ್ಲದು ಎಂದು ಬಹುತೇ ರಾಜಕೀಯ ವಿಶ್ಲೇಷಕರು ನಂಬಿದ್ದಾರೆ.
ತಮಿಳುನಾಡಿನ ಸ್ಟಾಲಿನ್, ಆಂಧ್ರದ ಜಗನ್ಮೋಹನ್ ರೆಡ್ಡಿ, ಮಹಾರಾಷ್ಟ್ರದ ಉದ್ಧವ್ ಠಾಕ್ರೆ, ತೆಲಂಗಾಣದ ಕೆಸಿಆರ್ ಮುಖ್ಯವಾಗಿ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಹಾಗೂ ಇತ್ತೀಚಿಗಿನ ಪಂಜಾಬ್ ವಿಧಾನ ಸಭೆ ಚುನಾವಣೆ ಬಳಿಕ ಅರವಿಂದ್ ಕೇಜ್ರೀವಾಲ್ ಕಡೆಗೂ ಈ ನಿಟ್ಟಿನಲ್ಲಿ ಗಮನ ಹರಿಸಲಾಗುತ್ತಿದೆ. ಅದರಲ್ಲೂ, ಮಮತಾ ಬ್ಯಾನರ್ಜಿ ಈಗಾಗಲೇ ತೃತೀಯ ರಂಗದ ರಚನೆಗೆ ಮುಂದಾಗಿದ್ದರು. ಆದರೆ, ಪಶ್ಚಿಮ ಬಂಗಾಳದ ಟಿಎಂಸಿಯ ಆಂತರಿಕ ಕಲಹದಿಂದಾಗಿ ಬ್ಯಾನರ್ಜಿ ಮಹಾತ್ವಾಕಾಂಕ್ಷೆಗೆ ಹಿನ್ನೆಡೆಯಾಗುತ್ತದೆ. ರಾಷ್ಟ್ರೀಯ ಗುರಿಯಿಂದ ತನ್ನ ರಾಜ್ಯ ಘಟಕವನ್ನೇ ಬಲಗೊಳಿಸಲು ಮಮತಾ ಹಿಂತಿರುಗುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಶುಕ್ರವಾರ ದೆಹಲಿ ಸಿಎಂ ಕೇಜ್ರೀವಾಲ್ ಜೊತೆಗೆ ನಡೆಸಿದ ಭೇಟಿಯ ಬಳಿಕ ರಾಷ್ಟ್ರ ರಾಜಕಾರಣದ ಆಸಕ್ತರು ಈ ಜೋಡಿಯ ಕಡೆಗೆ ಗಂಭೀರ ಗಮನ ಹರಿಸುವಂತಾಗಿದೆ.
ಗೋವಾ ವಿಧಾನಸಭಾ ಚುನಾವಣೆಯ ಬಳಿಕ ನಡೆದ ಮೊದಲ ಭೇಟಿಯಾಗಿದೆ. ಗೋವಾದಲ್ಲಿ ಟಿಎಂಸಿ ಕಣಕ್ಕಿಳಿದಿದ್ದು ಎಎಪಿಗೆ ಹಿನ್ನೆಡೆಯಾಗಿತ್ತು. ಈ ಪಕ್ಷಗಳ ನಡುವಿನ ಸಂಬಂಧಕ್ಕೂ ಅದು ಒಳ್ಳೆಯ ಬೆಳವಣಿಗೆಯಾಗಿರಲಿಲ್ಲ. ದೆಹಲಿಯಲ್ಲಿರುವ ಮಮತಾ ಬ್ಯಾನರ್ಜಿ ಅಳಿಯ ಅಭಿಷೇಕ್ ಬ್ಯಾನರ್ಜಿಯ ಮನೆಯಲ್ಲಿ ಎರಡು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆದಿದೆ. ರಾಷ್ಟ್ರ ರಾಜಕಾರಣದಲ್ಲಿ ಈ ಸಭೆ ಸಾಕಷ್ಟು ಮಹತ್ವವನ್ನೂ ಪಡೆದಿದೆ.
ಅರ್ಧ ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಉಭಯ ಪಕ್ಷಗಳ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸುವ ಬಗ್ಗೆ ಚರ್ಚೆಗಳಾಗಿದೆ ಎನ್ನಲಾಗಿದೆ. ಅದಾಗ್ಯೂ, ಉಭಯ ಪಕ್ಷಗಳು ತಮ್ಮ ನಾಯಕರ ಭೇಟಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ, ಪಕ್ಷಗಳ ಆಂತರಿಕ ಮೂಲಗಳ ಪ್ರಕಾರ, 2024 ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟು ಈ ಚರ್ಚೆ ನಡೆದಿದ್ದು, ಪ್ರತಿಪಕ್ಷಗಳು ಒಗ್ಗಟ್ಟಾಗಿರಬೇಕೆಂದು ಯೋಜನೆ ಹಾಕಿಕೊಳ್ಳಲಾಗುತ್ತಿದೆ.
ಆದರೂ, ಇದೊಂದು ಕೇವಲ ಸೌಜನ್ಯದ ಭೇಟಿಯಾಗಿತ್ತು, ಪಂಜಾಬ್ನಲ್ಲಿ ಆಪ್ ಗೆಲುವಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅರವಿಂದ್ ಕೇಜ್ರಿವಾಲ್ರನ್ನು ಅಭಿನಂದಿಸಿದ್ದಾರೆ ಎಂದು ಎಎಪಿ ನಾಯಕರೊಬ್ಬರು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಈ ಇಬ್ಬರೂ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರ, ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪದೇ ಪದೇ ಎದುರು ಹಾಕಿಕೊಂಡಿದ್ದರಿಂದ ಇವರಿಬ್ಬರ ಭೇಟಿಯು ಬಿಜೆಪಿಗೆ ಆತಂಕವನ್ನು ಸೃಷ್ಟಿಸಿದೆ ಎಂದು ಹೇಳಲಾಗಿದೆ. 2024 ರ ಲೋಕಸಭಾ ಚುನಾವಣೆಯಲ್ಲಿ ಈ ಇಬ್ಬರು ನಾಯಕರು ಪ್ರಮುಖ ಪಾತ್ರವಹಿಸಲಿದ್ದಾರೆ ಎಂದು ಊಹಿಸಲಾಗಿದೆ.