ಬಿಜೆಪಿ ಶಾಸಕನ ವರದಿ ಮಾಡಲು ಹೋದ ಪತ್ರಕರ್ತರನ್ನು ಪೊಲೀಸರು ಅರೆಬೆತ್ತಲೆಗೊಳಿಸಿ ಪೊಲೀಸ್ ಠಾಣೆಯಲ್ಲಿ ನಿಲ್ಲಿಸಿದ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು, ಪೊಲೀಸರು ನೀಡಿದ ಸ್ಪಷ್ಟನೆ ಇದೀಗ ವೈರಲ್ ಆಗಿದೆ.
ಪೊಲೀಸರು ಫೋಟೋಗ್ರಾಫರ್ ಸೇರಿದಂತೆ ೭ ಮಂದಿ ಪತ್ರಕರ್ತರನ್ನು ಬಂಧಿಸಿದ್ದೂ ಅಲ್ಲದೇ ಚೆಡ್ಡಿಯಲ್ಲಿ ನಿಲ್ಲಿಸಿದ ವೀಡಿಯೋ ವೈರಲ್ ಆಗಿತ್ತು. ಆದರೆ ಇದೀಗ ಪ್ರಕರಣಕ್ಕೆ ಸ್ಪಷ್ಟನೆ ನೀಡುವ ಭರದಲ್ಲಿ ಪೊಲೀಸ್ ಅಧಿಕಾರಿ ನೀಡಿದ ಸ್ಪಷ್ಟನೆ ಮತ್ತಷ್ಟು ವೈರಲ್ ಆಗಿದೆ.
ಸಾಮಾನ್ಯವಾಗಿ ಯಾವುದೇ ಆರೋಪಿಯನ್ನು ಬಂಧಿಸಿ ಲಾಕಪ್ ನಲ್ಲಿ ಇರಿಸಿದಾಗ ಅವರು ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂಬ ಕಾರಣಕ್ಕೆ ಅರೆಬೆತ್ತಲೆಗೊಳಿಸಿ ನಿಲ್ಲಿಸಲಾಗುತ್ತದೆ. ಅದೇ ರೀತಿ ಇವರನ್ನು ಮುಂಜಾಗೃತಾ ಕ್ರಮವಾಗಿ ನಿಲ್ಲಿಸಲಾಗಿತ್ತು ಎಂದು ಪೊಲೀಸ್ ಇನ್ ಸ್ಪೆಕ್ಟರ್ ಮನೋಜ್ ಸೋನಿ ಹೇಳಿದ್ದಾರೆ.
ಪತ್ರಕರ್ತರನ್ನು ಅರೆಬೆತ್ತಲೆ ನಿಲ್ಲಿಸಿ ಅಪಮಾನಗೊಳಿಸಿದ್ದಕ್ಕಾಗಿ ಕೋಟ್ವಾಲಿ ಸೋಧಿ ಪೊಲೀಸ್ ಠಾಣೆಯ ಸಬ್ ಇನ್ ಸ್ಪೆಕ್ಟರ್ ಸೇರಿದಂತೆ ಹಲವರನ್ನು ಈಗಾಗಲೇ ಅಮಾನತು ಮಾಡಲಾಗಿದೆ.