ಇತ್ತೀಚಿಗೆ ಪಂಜಾಬ್ ನ ಲೂಧಿಯಾನದ ಕೋರ್ಟ್ ಆವರಣದಲ್ಲಿ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ವಿರುದ್ದ ದಾಖಲಾಗಿದ್ದ ಡ್ರಗ್ಸ್ ಪ್ರಕರಣದ ದಾಖಲೆಗಳನ್ನು ನಾಶಪಡಿಸುವ ಸಲುವಾಗಿ ಕೋರ್ಟ್ ಆವರಣದಲ್ಲಿ ಬಾಂಬ್ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಸ್ಪೋಟದಲ್ಲಿ ಮೃತಪಟ್ಟ ಆರೋಪಿ ಗಗನದೀಪ್ ಸಿಂಗ್ ಹೆಡ್ ಕಾನ್ಸ್ಟೇಬಲ್ ಆಗಿದ್ದರು. 2019ರಲ್ಲಿ ಮಾದಕ ವಸ್ತು ಕಳ್ಳಸಾಗಣೆಯ ಆರೋಪದ ಮೇಲೆ ಇವರನ್ನು ಸೇವೆಯಿಂದ ವಜಾಗೊಳಿಸಲಾಗುತ್ತು. ಎರಡು ವರ್ಷಗಳ ಸೆರೆವಾಸದ ನಂತರ ಸೆಪ್ಟೆಂಬರ್ ನಲ್ಲಿ ಗಗನದೀಪ್ ಬಿಡುಗಡೆಯಾಗಿದ್ದರು. ನಂತರದಲ್ಲಿ ತಮ್ಮ ವಿರುದ್ದ ದಾಖಲಾಗಿದ್ದ ಡ್ರಗ್ಸ್ ಪ್ರಕರಣದಲ್ಲಿ ಕೋರ್ಟ್ಗೆ ಹಾಜರಾಗಬೇಕಿತ್ತು. ಕೇಸ್ ಪೇಪರ್ ಗಳನ್ನು ಸಂಗ್ರಹಿಸಿಟ್ಟಿದ್ದ ಕೊಠಡಿ ನಾಶಪಡಿಸಲು ಯೋಜನೆ ರೂಪಿಸಿ ಕೊನೆಗೆ ತಾನೇ ಆ ಸ್ಪೋಟದಲ್ಲಿ ಮೃತಪಟ್ಟಿದ್ದಾನೆ ಎಂದು ಪಂಜಾಬ್ ಡಿಜಿಪಿ ಸಿದ್ದಾರ್ಥ ಚಟ್ಟೋಪಾಧ್ಯಾಯ ತಿಳಿಸಿದ್ದಾರೆ.
ಗಗನದೀಪ ನ್ಯಾಯಾಲಯದ ಶೌಚಾಲಯದಲ್ಲಿ ಬಾಂಬ್ಅನ್ನು ಜೋಡಣೆ ಮಾಡುವ ಸಮಯದಲ್ಲಿ ಸ್ಪೋಟಗೊಂಡಿತ್ತು. ಆದರೆ, ಸ್ಪೋಟಕ ತಯಾರಿಸಲು ಸಾಮಾಗ್ರಿಗಳು ಎಲ್ಲಿಂದ ದೊರೆಯಿತು ಎಂಬ ಅಂಶ ಇನ್ನು ತಿಳಿದುಬಂದಿಲ್ಲ ಎಂದು ಚಟ್ಟೋಪಾಧ್ಯಾಯ ಹೇಳಿದ್ದಾರೆ.
ಘಟನೆಗೆ ಸಂಬಂದಿಸಿದಂತೆ ಮುಖ್ಯ ಆರೋಪಿ ಗಗನದೀಪನ ಇಬ್ಬರು ಸ್ನೇಹಿತರು, ಸಹೋದರ ಸೇರಿದಂತೆ ಒಂದು ಲ್ಯಾಪ್ಟಾಪ್ಅನ್ನು ಹೆಚ್ಚಿನ ತನಿಖೆಗಾಗಿ ಪೊಲೀಸ್ ಅಧಿಕಾರಿಗಳು ವಶಕ್ಕೆ ಪಡೆಯುವ ಮೂಲಕ 24 ಘಂಟೆಗಳಲ್ಲಿ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸ್ ಇಲಾಖೆಯು ಯಶಸ್ವಿಯಾಗಿದೆ.
ಆರಂಭದಲ್ಲಿ ಸೇವೆಯಿಂದ ವಜಾಗೊಂಡಿರುವ ಪೊಲೀಸ್ ಅಧಿಕಾರಿಯೊಬ್ಬರ ಕೈವಾಡವಿದೆ ಎಂದು ತಿಳಿದು ಬಂದಿತ್ತು. ಆರೋಪಿಯು ಖಲಿಸ್ತಾನಿ ಮತ್ತು ಮಾಫಿಯಾದೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದ. ಆದರೆ, ಈ ಘಟನೆಯಲ್ಲಿ ಪಾಕಿಸ್ತಾನದ ಕೈವಾಡವಿದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದರೆ, ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಚಟ್ಟೋಪಾಧ್ಯಾಯ ವಿವರಿಸಿದ್ದಾರೆ.