ಬೆಂಗಳೂರಿನ ಯಲಹಂಕ ಹೋಬಳಿಯ ಸಿಂಗನಾಯಕಹಳ್ಳಿ ಕೆರೆ ಅಭಿವೃದ್ಧಿ ಯೋಜನೆ ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕೆರೆ ಅಭಿವೃದ್ಧಿ ಪಡಿಸಲು ಈಗ ಸರ್ಕಾರ ಮುಂದಾಗಿದ್ದು, ಈಗಾಗಲೇ ಬತ್ತಿ ಹೋಗಿದ್ದ ಕೆರೆಯಲ್ಲಿ ಬೆಳೆದ ಮರಗಳನ್ನು ಕಟಾವು ಮಾಡಲೇಬೇಕಾದ ಅನಿವಾರ್ಯತೆಯಲ್ಲಿ ಸರ್ಕಾರವಿದೆ.

ಸಣ್ಣ ನೀರಾವರಿ & ಅಂತರ್ಜಲ ಅಭಿವೃದ್ಧಿ ಇಲಾಖೆಯ ಮನವಿಯ ಮೇರೆಗೆ ಇಲ್ಲಿನ ಮರಗಣತಿಯನ್ನು ರಾಜ್ಯ ಅರಣ್ಯ ಇಲಾಖೆ ಈಗಾಗಲೇ ನಡೆಸಿದೆ. ಹೆಬ್ಬಾಳ – ನಾಗವಾರ ವ್ಯಾಲಿ ಯೋಜನೆ ಅಡಿಯಲ್ಲಿ ಸಿಂಗನಾಯಕನಹಳ್ಳಿ ಕೆರೆ ಅಭಿವೃದ್ಧಿ ಪಡಿಸಲು ಮರಗಳ ಕಟಾವು ಮಾಡಿಕೊಡಿ ಎಂದು ಕೇಳಿಕೊಂಡಿದೆ.
ಸಾರ್ವಜನಿಕ ಆಕ್ಷೇಪಣೆಗೆ ಜೂನ್ 14 ರಿಂದ 24ರವರೆಗೆ ಸಮಯವನ್ನು ಅರಣ್ಯ ಇಲಾಖೆ ಕೊಟ್ಟಿತ್ತು. ಈಗಾಗಲೇ ಆ ಸಮಯ ಮುಕ್ತಾಯಗೊಂಡಿದೆ. ಸದ್ಯ ಪರಿಸರವಾದಿಗಳು ಸಿಂಗನಾಯಕನಹಳ್ಳಿ ಕೆರೆಯಲ್ಲಿ ಬೆಳೆದು ನಿಂತಿರುವ ಕಿರು ಅರಣ್ಯವನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದಾರೆ. ಆದರೆ, ಸಿಂಗನಾಯಕನಹಳ್ಳಿಯ ಬಹುತೇಕ ಮಂದಿ ಕೆರೆ ಹೂಳೆತ್ತಿ ಅಭಿವೃದ್ಧಿ ಪಡಿಸಿ ಎಂದು ಕೇಳಿಕೊಳ್ಳುತ್ತಿದ್ದಾರೆ.
ಆಕ್ಷೇಪಣೆ ಸಲ್ಲಿಕೆ ಕಾಲಾವಕಾಶ ಹೆಚ್ಚಿಸುವಂತೆ ಆಗ್ರಹ
ಕೆರೆಯ ಅಭಿವೃದ್ಧಿಗಾಗಿ ಮರಗಳನ್ನು ಕಡಿಯುವ ಕುರಿತು ಆಕ್ಷೇಪಣೆ ಸಲ್ಲಿಸಲು ಜೂನ್ 14ರಿಂದ 24ರವರೆಗೆ ಮಾತ್ರ ಅರಣ್ಯ ಇಲಾಖೆ ಕಾಲಾವಕಾಶ ನೀಡಿದೆ. ಲಾಕ್ಡೌನ್ ಜಾರಿಯಲ್ಲಿದ್ದ ಕಾರಣ ಈ ಕಾಲಾವಕಾಶವನ್ನು ಹೆಚ್ಚಿಸಬೇಕು’ ಎಂದು ನಮ್ಮ ಬೆಂಗಳೂರು ಫೌಂಡೇಷನ್ ಪ್ರಧಾನ ಕಾರ್ಯದರ್ಶಿ ವಿನೋದ್ ಜೇಕಬ್ ಒತ್ತಾಯಿಸಿದ್ದಾರೆ.
ಆಕ್ಷೇಪಣೆ ಸಲ್ಲಿಕೆ ಕಾಲಾವಕಾಶ ಮುಗಿಯುತ್ತಿದ್ದಂತೆ ಪ್ರದೇಶವನ್ನು ಪರಿಶೀಲಿಸಲು ಪರಿಸರವಾದಿಗಳ ತಂಡ ಹೋಗಿದ್ದು, ಕಟಾವಿಗೆ ಗುರುತು ಮಾಡಿರುವ ಮರಗಳು 20 ರಿಂದ 25 ವರ್ಷದೊಳಗಿನವುಗಳಲ್ಲ, 40 ವರ್ಷಕ್ಕೂ ಹೆಚ್ಚಿನ ಮರಗಳಿವೆಯೆಂದು ತಿಳಿಸಿದೆ.
ಸಿಂಗನಾಯಕನಹಳ್ಳಿಯ ಕೆರೆ ಅಭಿವೃದ್ಧಿ ಹೆಸರಿನಲ್ಲಿ ಯಾವುದೇ ಕಾರಣಕ್ಕೂ ಮರಗಳನ್ನು ಕಡಿಯಬಾರದೆಂದು ಒತ್ತಾಯಿಸಿ ಆನ್ಲೈನ್ನಲ್ಲೂ ಅಭಿಯಾನ ಶುರುವಾಗಿದ್ದು, #SayNoToAxingOfTrees #save6316trees ಎಂಬ ಹ್ಯಾಷ್ಟ್ಯಾಗ್ನಡಿಯಲ್ಲಿ ಮರ ಕಡಿಯದಂತೆ ಒತ್ತಾಯಿಸಲಾಗುತ್ತಿದೆ.
ಸಿಂಗನಾಯಕನಹಳ್ಳಿ ಕೆರೆಯ ಅಭಿವೃದ್ದಿಗೆಂದು ಈಗಾಗಲೇ ಕಟಾವಿಗೆ ಮರಗಳನ್ನು ಗುರುತಿಸಿದ್ದು, ಅವುಗಳ ವಿವರ ಇಂತಿದೆ.
ಅಕೇಶಿಯ : 940
ಹೊಂಗೆ ಮರ: 560
ಸಿಸು: 550
ಜಮೂನ್: 168
ಜಾಲಿ ಮರ : 4024
ಇತರೆ ಮರಗಳು : 72
ಒಟ್ಟು : 6,316