ಮೇಕೆದಾಟು ಪಾದಯಾತ್ರೆ ನಡೆಸಿ ಕರೋನಾ ಹಂಚುತ್ತಿದ್ದಾರೆ, ಅವರ ಮೇಲೆ ಪ್ರಕರಣ ದಾಖಲಿಸುವ ಇರಾದೆ ನಮಗೆ ಇರಲಿಲ್ಲ, ಹೊನ್ನಾಳಿ ಶಾಸಕ ರೇಣುಕಾಚಾರ್ಯ ಕ್ಷಮೆ ಕೇಳಿದರು, ಆದರೆ ಕಾಂಗ್ರೆಸ್ ಮುಖಂಡರಿಗೆ ಕ್ರಮೆಯಾಚನೆ ಸೌಜನ್ಯವೂ ಇಲ್ಲ ಎಂದು ಹೇಳಿರುವ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆಎಸ್ ಈಶ್ವರಪ್ಪ ಸ್ವತಃ ತಾವೇ ಫೇಸ್ ಮಾಸ್ಕ್ ಧರಿಸದೇ ಇಂದು ಹಲವು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಶಿವಮೊಗ್ಗ ಉಸ್ತುವಾರಿ ಸಚಿವ ಕೆಎಸ್ ಈಶ್ವರಪ್ಪ ಇಂದು ವಿವಿಧ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಇವರೊಂದಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಹೆಚ್ ನಾಗೇಶ್, ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಸೇರಿ ಹಲವರು ಇದ್ದರು. ಈ ಕಾರ್ಯಕ್ರಮಗಳಲ್ಲಿ ಸಾಮಾಜಿಕ ಅಂತರವಂತೂ ಇರಲಿಲ್ಲ ಆದರೆ ಈಶ್ವರಪ್ಪನವರು ಫೇಸ್ ಮಾಸ್ಕ್ ಕೂಡ ಧರಿಸಿರಲಿಲ್ಲ. ಇವರೊಂದಿಗೆ ಈಶ್ವರಪ್ಪ ಪುತ್ರ ಕೆಇ ಕಾಂತೇಶ್ ಕೂಡ ಮಾಸ್ಕ್ ಧರಿಸದೇ ಸಾರ್ವಜನಿಕ ಸ್ಥಳದಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಮಾಡಿದ್ದಾರೆ.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿ ಕಾಂಗ್ರೆಸ್ ನಾಯಕರ ಮೇಕೆದಾಟು ಪಾದಯಾತ್ರೆಯ ವಿರುದ್ಧ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಉಲ್ಲಂಘನೆ ಯಾರು ಮಾಡಿದ್ದರೂ ಸಹ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂಬುದು ನನ್ನ ಒತ್ತಾಯ. ಆದರೆ ಕಾಂಗ್ರೆಸ್ನವರದ್ದಂತೂ ಅದೇ ದಂಧೆ. ನಮ್ಮವರಾದ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಹೋರಿ ಹಬ್ಬಕ್ಕೆ ಭಾಗಿಯಾಗಿದ್ದಕ್ಕಾಗಿ ಕ್ಷಮೆಯನ್ನಾದರೂ ಕೋರಿದರು. ಯುವಕರು ಒತ್ತಾಯ ಮಾಡಿದ್ದಕ್ಕಾಗಿ ನಾನು ಭಾಗಿಯಾಗಿದ್ದೆ ದಯವಿಟ್ಟು ಕ್ಷಮಿಸಿ ಎಂದು ಕೇಳಿಕೊಂಡರು. ಆದರೆ ಕಾಂಗ್ರೆಸ್ ನಾಯಕರಿಗೆ ಆ ಸೌಜನ್ಯವಿಲ್ಲ. ಏನು ಮಾಡ್ತಿರೋ ಮಾಡಿಕೊಳ್ಳಿ ಎಂದು ಅಲ್ಲೂ ಗೂಂಡಾಗಿರಿ ತೋರಿದ್ದಾರೆ. ಕೋವಿಡ್ ದಿನೇ ದಿನೇ ಹೆಚ್ಚಾಗುತ್ತಿದೆ. ಆದರೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇದು ಸುಳ್ಳು ಅಂಕಿ ಅಂಶ ಎನ್ನುತ್ತಾರೆ. ಸಿಎಂ ಕನಸು ಹೊತ್ತಿರುವ ಡಿಕೆಶಿ ಈ ತರಹದ ಹೇಳಿಕೆಗಳನ್ನ ನೀಡುವುದು ಶೋಭೆ ತರಲ್ಲ. ಸರ್ಕಾರ ಜನರಿಂದ ಆಯ್ಕೆಯಾಗಿದ್ದು ಸುಳ್ಳು ಎಂದು ಹೇಳಲಾಗದು. ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನೀಡಿದ ಯಾವುದೇ ದತ್ತಾಂಶ ಸುಳ್ಳು ಎನ್ನಲಾಗುತ್ತಾ ಎಂದರು.
ಕೇವಲ ಮೂವತ್ತೇ ಪ್ರಕರಣಗಳನ್ನ ದಾಖಲಿಸಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ, ಮರ್ಯಾದಸ್ಥರು ಗೌರವಸ್ಥರಾದ ಕಾಂಗ್ರೆಸ್ಗೆ ಮೂವತ್ತು ಪ್ರಕರಣಗಳನ್ನ ದಾಖಲಿಸಿ ಸುಮ್ಮನಿರಲು ಹೇಳಲಾಗಿದೆ. ಆದರೆ ಅವರು ಕೇಳೋದಿಲ್ಲ. ನಮ್ಮ ಸರ್ಕಾರಕ್ಕೆ ಪ್ರಕರಣಗಳನ್ನ ದಾಖಲಿಸುವ ಇರಾದೆ ಇಲ್ಲ. ಅದರೆ ಕಾಂಗ್ರೆಸ್ ನಾಯಕರು ಒತ್ತಾಯಪೂರ್ವಕವಾಗಿ ಪ್ರಕರಣಗಳನ್ನ ಹಾಕಿಸಿಕೊಂಡಂತಾಗಿದೆ. ಅವರ ಬಂಢತನಕ್ಕೆ ಬೇರೆ ದಾರಿ ಇಲ್ಲ. ಜನರಿಗೆ ಇವರಿಂದ ಯಾವುದೇ ಸಂದೇಶ ಇಲ್ಲ. ಮಲ್ಲಿಕಾರ್ಜುನ ಖರ್ಗೆಯಿಂದ ಡಿಕೆ ಶಿವಕುಮಾರ್ವರೆಗೆ ಎಲ್ಲರೂ ಸರ್ಕಾರದ ಜೊತೆ ಅಸಹಕಾರ ನಡೆಸುತ್ತಿದ್ದಾರೆ. ಇಂತಹ ಪಾದಯಾತ್ರೆಯನ್ನ ಮುಂದೂಡಬಹುದು. ಡಿಕೆ ಶಿವಕುಮಾರ್ ಶಾಲೆ ಮಕ್ಕಳೊಂದಿಗೆ ಫೋಸ್ ಕೊಡ್ತಾರೆ. ಪಾದಯಾತ್ರೆಗೆ ಮೊದಲ ದಿನ ಬಂದವರು ಎರಡನೇ ದಿನ ಇರಲಿಲ್ಲ. ಅವರೆಲ್ಲಾ ಅವರ ಊರಿಗೆ ಹೋಗಿ ಕೋವಿಡ್ ಹಂಚುತ್ತಿದ್ದಾರೆ ಎಂದು ಈಶ್ವರಪ್ಪ ಹೇಳಿದರು.