ಸಾಂಸ್ಕೃತಿಕ ಸಂಸ್ಥೆಯಾಗಿರುವ ರಂಗಾಯಣ ಇಂದು ಧರ್ಮಾಂಧರ ಕೈಯಲ್ಲಿ ಸಿಲುಕಿ ನಲಗುತ್ತಿದೆ. ಧಾರವಾಡದಲ್ಲಿ ರಂಗಾಯಣ ತಂಡ ರಾಣಿ ಕಿತ್ತೂರು ಚೆನ್ನಮ್ಮನ ನಾಟಕ ಏರ್ಪಡಿಸುತ್ತಿದೆ. ಭಾರತದ ಪ್ರಥಮ ಸ್ವಾತಂತ್ರ ಸಂಗ್ರಾಮದ ರೂವಾರಿಯಾಗಿರುವ ಶೂದ್ರ ಚೆನ್ನಮ್ಮಳ ಇತಿಹಾಸ ಸಾರುವ ನಾಟಕ ಪ್ರದರ್ಶಿಸುತ್ತಿರುವುದು ಸ್ವಾಗತಾರ್ಹ ನಡೆ. ಅದರೆ ನಾಟಕ ಪ್ರದರ್ಶನದ ಹಿಂದಿನ ಉದ್ದೇಶ ಮತ್ತು ಅದರಿಂದ ತಲೆದೋರಬಹುದಾದ ವಿವಾದದ ಕುರಿತು ಇತಿಹಾಸ ತಜ್ಞರು ಮತ್ತು ಜನಕರಲ್ಲಿ ಆತಂಕ ಮನೆಮಾಡಿದೆ. ಏಕೆಂದರೆˌ ನಾಟಕ ಪ್ರದರ್ಶನಕ್ಕೆ ಮೊದಲೆ ದೃಶ್ಯ ವಾಹಿನಿಗಳು ಕಿತ್ತೂರು ಸಂಸ್ಥಾನದ ನಾಶಕ್ಕೆ ಮುಸ್ಲಿಮ್ ದೊರೆ ಟಿಪ್ಪು ಸುಲ್ತಾನ ಕಾರಣವೆಂದು ಬಿಂಬಿಸುತ್ತಿರುವುದು ಮತ್ತು ರಂಗಾಯಣದ ನಿರ್ದೇಶಕರು ವಾಹಿನಿಗಳ ಚರ್ಚೆಯಲ್ಲಿ ಭಾಗವಹಿಸಿ ಈ ಕುರಿತು ಮಾತನಾಡುತ್ತಿರುವುದು ಅನುಮಾನಕ್ಕೆ ಎಡೆಮಾಡಿದೆ.
ನಾಟಕ ಪ್ರದರ್ಶನಕ್ಕೆ ಮುಂಚೆಯೆ ಟಿಪ್ಪು ಕುರಿತು ವಿವಾದ ಹುಟ್ಟುಹಾಕುತ್ತಿರುವುದರ ಹಿಂದಿನ ಉದ್ದೇಶಗಳ ಬಗ್ಗೆ ಅನುಮಾನದ ಹುತ್ತ ಬೆಳೆಯುತ್ತಿದೆ. ಇಲ್ಲಿ ಕಿತ್ತೂರು ಸಂಗ್ರಾಮದ ಮಹತ್ವ ಸಾರುವುದಕ್ಕಿಂತ ಕಿತ್ತೂರಿನ ನಾಶಕ್ಕೆ ಟಿಪ್ಪು ಕಾರಣ ಎನ್ನುವ ಸುಳ್ಳು ಪ್ರಚಾರದ ವಾಸನೆ ಬರುತ್ತಿದೆ. ಚುನಾವಣೆಯ ಈ ದಿನಗಳಲ್ಲಿ ಇದನ್ನು ಬೇಕಂತಲೆ ವಿವಾದ ಮಾಡಲಾಗುತ್ತಿದೆಯಾ ಎನ್ನುವ ಪ್ರಶ್ನೆ ಕಾಡುತ್ತಿದೆ. ಹಾಗಾದರೆˌ ಅಸಲಿಗೆ ಕಿತ್ತೂರು ಸಂಸ್ಥಾನ ಹಾಳುಮಾಡಿದವರು ಯಾರುˌ ಈ ಸಂಸ್ಥಾನದ ನಾಶಕ್ಕೆ ನಡೆದ ಘಟನಾವಳಿಗಳ ಅವಲೋಕನ ಮಾಡುವ ಅಗತ್ಯ ಇಂದು ಖಂಡಿತ ಇದೆ. ಕಿತ್ತೂರಿನ ನಾಶಕ್ಕೆ ಪ್ರಯತ್ನಿಸಿದವರ ಕುರಿತು ಸತ್ಯಾಂಶಗಳನ್ನು ಸಾರ್ವಜನಿಕರಿಗೆ ಮನದಟ್ಚು ಮಾಡುವ ಅಗತ್ಯ ಈಗ ಇದೆ.
೧೫೮೫ ರಲ್ಲಿ ಹಿರೇಮಲ್ಲಶೆಟ್ಟಿ ಮತ್ತು ಚಿಕ್ಕಮಲ್ಲಶೆಟ್ಟಿ ಸಹೋದರರಿಂದ ಕಿತ್ತೂರು ಸಂಸ್ಥಾನವು ಹುಟ್ಟುಹಾಕಲಾಗಿದ್ದು ˌ ಸಂಸ್ಥಾನದ ಐದನೇ ದೊರೆಯಾಗಿ ಅಲ್ಲಪ್ಪ ಗೌಡ ದೇಸಾಯಿಯವರು ರಾಜಧಾನಿಯನ್ನು ಸಂಪಗಾವಿಯಿಂದ ಕಿತ್ತೂರಿಗೆ ಸ್ಥಳಾಂತರಿಸುತ್ತಾರೆ. ಕಿತ್ತೂರಿನ ದೊರೆಯಾದ ಮಲ್ಲಸರ್ಜ ದೇಸಾಯಿಯವರ ತಂದೆ ವೀರಪ್ಪ ದೇಸಾಯಿಯವರು ಕಪಟಿಗಳಾಗಿದ್ದ ಪುಣೆಯ ಪೇಶ್ವೆಗಳನ್ನು ಸೋಲಿಸಿದ ಶೂರ ದೊರೆ. ಆನಂತರದ ಗೋಕಾಕ ಕದನದಲ್ಲಿ ಕಪಟಿ ಪೇಶ್ವೆಗಳು ವೀರಪ್ಪ ದೇಸಾಯಿಯವರನ್ನು ಸೋಲಿಸಿ ಮೂರು ವರ್ಷ ಮಿರಜ್ ಬಂಧಿಖಾನೆಯಲ್ಲಿ ಅಕ್ರಮವಾಗಿ ಅಡಗಿಸಿಡುತ್ತಾರೆ (೧೭೭೯-೧೭೮೨). ತದನಂತರ ವೀರಪ್ಪ ದೇಸಾಯಿಯವರಿಗೆ ವಿಷ ಕುಡಿಸಿ ಕೊಲೆ ಮಾಡುತ್ತಾರೆ. ಅಂದರೆ ಸ್ಪಷ್ಟವಾಗಿ ಕಿತ್ತೂರು ರಾಜಸತ್ತೆಗೆ ಆರಂಭದಿಂದ ಕಾಡಿದವರು ಪುಣೆಯ ಪೇಶ್ವೆ ಚಿತ್ಪಾವನ ಬ್ರಾಹ್ಮಣರು.
ಪೇಶ್ವೆಗಳು ವೀರಪ್ಪ ದೇಸಾಯಿಯವರನ್ನು ಕೊಂದ ಮೇಲೆ ಅವರ ಮಗ ಮಲ್ಲಸರ್ಜ ದೇಸಾಯಿ ಪಟ್ಟಕ್ಕೇರುತ್ತಾರೆ (೧೭೮೨ ರಿಂದ ೧೮೧೬). ೧೭೮೫ ರಿಂದ ೧೭೮೮ ರ ಕಾಲಾವಧಿಯಲ್ಲಿ ಮಲ್ಲಸರ್ಜ ದೇಸಾಯಿಯವರನ್ನು ಟಿಟ್ಟು ಸುಲ್ತಾನನು ಶ್ರೀರಂಗಪಟ್ಟಣದ ಕಬ್ಬಾಳದುರ್ಗದಲ್ಲಿ ಬಂಧಿಸಿಡುತ್ತಾನೆ. ದೇಸಾಯಿಯನ್ನು ಬಂಧಿಸಲು ನೆರವಾಗಿದ್ದು ಅಂದು ಟಿಪ್ಪುವಿನ ಸೇನಾಧಿಪತಿಯಾಗಿದ್ದ ವೆಂಕಟರಂಗಯ್ಯ ಎಂಬ ಬ್ರಾಹ್ಮಣ. ಹಾಗಾಗಿ ಕಿತ್ತೂರಿನ ಅಸಲಿ ವೈರಿಗಳನ್ನು ಮರೆಮಾಚಿ ಟಿಪ್ಪುವನ್ನು ಕಿತ್ತೂರಿನ ವೈರಿಯಂತೆ ಬಿಂಬಿಸುವ ಹುನ್ನಾರ ಈ ನಾಟಕ ಪ್ರದರ್ಶನದ ಹಿಂದಿದೆಯೆ ಎನ್ನುವ ಸಂಶಯ ಬರುವದು ಸಹಜ. ರಂಗಾಯಣದ ನಿರ್ದೇಶಕರು ವೆಂಕಟರಂಗಯ್ಯನ ಪಾತ್ರದ ಬಗ್ಗೆಯೂ ಚಿಂತಿಸಬೇಕಿದೆ.
೧೮೧೨ ರಲ್ಲಿ ಪುಣೆಯ ಪೇಶ್ವೆ ಎರಡನೇ ಬಾಜಿರಾಯ ತನ್ನಲ್ಲಿಗೆ ಬಂದಿದ್ದ ದೊರೆ ಮಲ್ಲಸರ್ಜ ದೇಸಾಯಿಯನ್ನು ಅಕ್ರಮವಾಗಿ ಬಂಧಿಸಿ ಆತನಿಗೆ ಅಗತ್ಯ ಅನ್ನ-ನೀರು ಕೊಡದೆ ಸತಾಯಿಸುತ್ತಾನೆ. ನಿರಂತರ ಮೂರು ವರ್ಷಗಳ ಕಾಲ ಮಲ್ಲಸರ್ಜನನ್ನು ಕತ್ತಲೆಯ ಕೋಣೆಯಲ್ಲಿಡಲಾಗುತ್ತದೆ. ಅದರಿಂದ ಆರೋಗ್ಯ ಕ್ಷೀಣಿಸಿ ದೊರೆ ಸಾಯುವಂತಾಗುತ್ತದೆ. ರಂಗಾಯಣದ ನಾಟಕದಲ್ಲಿ ಈ ಸಂಗತಿ ಪ್ರದರ್ಶನಗೊಳ್ಳಲಿದೆಯೆ ಎನ್ನುವ ಬಗ್ಗೆ ನಿರ್ದೇಶಕರು ಸ್ಪಷ್ಟಪಡಿಸಬೇಕು. ಏಕೆಂದರೆ ಕಿತ್ತೂರು ಸಂಸ್ಥಾನವನ್ನು ಆರಃಭದಿಂದ ಕಾಡಿದವರು ಪೇಶ್ವೆಗಳು ಹಾಗು ಪಟವರ್ಧನ ಬ್ರಾಹ್ಮಣ ಸಂಸ್ಥಾನಗಳು. ಈ ಬಾಜಿರಾಯನ ಆಡಳಿತದಲ್ಲಿ ಭೀಮಾ ಕೋರೆಗಾಂವ ಹತ್ಯಾಕಾಂಡ ಕೂಡ ನಡೆದಿತ್ತು.
ಮತ್ತೊಂದು ವಿಶೇಷ ಸುದ್ದಿ ಎಂದರೆˌ ಧಾರವಾಡ ರಂಗಾಯಣದ ನಿರ್ದೇಶಕರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಿತ್ತೂರು ಮತಕ್ಷೇತ್ರದಿಂದ ಸ್ಪರ್ಧಿಸುವುದಾಗಿ ತಮ್ಮ ಆಪ್ತ ವಲಯದಲ್ಲಿ ಹೇಳಿಕೊಂಡಿದ್ದಾರಂತೆ. ಆದ್ದರಿಂದ ಚೆನ್ನಮ್ಮನ ನಾಟಕ ವಿವಾದಕ್ಕೆ ಗುರಿಯಾಗಬಾರದು ಮತ್ತು ಟಿಪ್ಪು ಹಾಗು ಚೆನ್ನಮ್ಮನವರ ಅನುಯಾಯಿಗಳಲ್ಲಿ ಮತ್ಸರ ಹುಟ್ಟಿಸಬಾರದು ಎನ್ನುವುದು ಜನರ ಅಪೇಕ್ಷೆಯಾಗಿದೆ. ಒಟ್ಟಾರೆಯಾಗಿˌ ವೀರಪ್ಪ ದೇಸಾಯಿಯನ್ನು ಕೊಂದು ಮಲ್ಲಸರ್ಜ ದೇಸಾಯಿಯವರ ಸಾವಿಗೆ ಕಾರಣರಾದವರು ಪುಣೆಯ ಪೇಶ್ವೆಗಳೆ ಹೊರತು ಟಿಪ್ಪು ಅಲ್ಲ ಎನ್ನುವ ಸಂಗತಿ ನಾವು ಅರ್ಥಮಾಡಿಕೊಳ್ಳಬೇಕು. ರಂಗಾಯಣದ ನಾಟಕದಲ್ಲಿ ಕಪಟಿ ಪೇಶ್ವೆಗಳು ಮಾತ್ರ ಖಳನಾಯಕರಾಗಿ ಚಿತ್ರಿಸಬೇಕಿದೆ.
ಮಲ್ಲಸರ್ಜ ದೇಸಾಯಿ ಸಾವಿನ ನಂತರ ರಾಣಿ ಚೆನ್ನಮ್ಮನವರ ಪುತ್ರ ಶಿವಲಿಂಗರುದ್ರಸರ್ಜರು ೧೮೨೪ˌ ಸಪ್ಟೆಂಬರ್ ೧೧ ರಂದು ಲಿಂಗೈಕ್ಯರಾಗುತ್ತಾರೆ. ಅದಕ್ಕೆ ಮೊದಲೇ ಮಾಸ್ತಮರಡಿಯ ಬಾಳನಗೌಡರ ಮಗ ಸವಾಯಿ ಮಲ್ಲಸರ್ಜರನ್ನು ರಾಣಿ ಚೆನ್ನಮ್ಮ ದತ್ತು ತೆಗೆದುಕೊಂಡಿರುತ್ತಾರೆ. ದತ್ತು ಮಕ್ಕಳಿಗೆ ಆಳುವ ಹಕ್ಕಿಲ್ಲ ಎನ್ನುವ ಬ್ರಿಟೀಷರ ಕಾನೂನು ದತ್ತುಪುತ್ರನನ್ನು ಸಂಸ್ಥಾನದಿಂದ ಓಡಿಸುತ್ತದೆ. ಆ ದಿನಗಳಲ್ಲಿ ಧಾರವಾಡದ ಜಿಲ್ಲಾಧಿಕಾರಿಯಾಗಿದ್ದ ಥಾಕರೆ ಕಿತ್ತೂರು ಸಂಸ್ಥಾನದ ಖಜಾನೆ ಉಸ್ತುವಾರಿಯಾಗಿ ಹಾವೇರಿಯ ವೆಂಕಟರಾವ್ ಮತ್ತು ಕೊಣ್ಣೂರು ಮಲ್ಲಪ್ಪನನ್ನು ನೇಮಕ ಮಾಡುತ್ತಾನೆ. ವೆಂಕಟರಾವ್ ಹಾವೇರಿ ಕುನ್ನೂರು ಮಲ್ಲಪ್ಪನ ಬಗ್ಗೆ ಥಾಕರೆ ಬಳಿ ಇಲ್ಲಸಲ್ಲದ ಚಾಡಿ ಹೇಳಿ ಆತನನ್ನು ಸಂಸ್ಥಾನದ ಉಸ್ತುವಾರಿಯಿಂದ ತೆಗೆದುಹಾಕಿಸಿ ಕಿತ್ತೂರಿನ ಸಪೂರ್ಣ ಉಸ್ತುವಾರಿಕೆ ತನಗೊಬ್ಬನಿಗೆ ಆಗುವಂತೆ ಮಾಡುತ್ತಾನೆ. ಸಂಸ್ಥಾನದ ಎಲ್ಲಾ ಗುಟ್ಟುಗಳು ಬ್ರಿಟೀಷರಿಗೆ ತಿಳಿಸಿದ ವೆಂಕಟರಾವ್ ಹಾವೇರಿಯ ಪಾತ್ರದ ಬಗ್ಗೆ ರಂಗಾಯಣದ ನಿರ್ದೇಶಕರು ತಮ್ಮ ನಾಟಕದಲ್ಲಿ ಒಂದು ದೃಶ್ಯ ಇಡಬೇಕಾದ ಅಗತ್ಯವಿದೆ.
ಬ್ರಿಟೀಷರ ಜೊತೆಗೆ ಕೈಜೋಡಿಸಿ ಕಿತ್ತೂರು ಸಂಸ್ಥಾನದ ನಾಶಕ್ಕೆ ಕಾರಣನಾದವ ಈ ಹಾವೇರಿ ವೆಂಕಟರಾಯನ ಎನ್ನುವ ಸಂಗತಿ ಜನರಿಗೆ ತಿಳಿಸಬೇಕಿದೆ. ಕಿತ್ತೂರು ಸಂಸ್ಥಾನದ ದತ್ತು ಪಡೆಯುವಾಕೆಯ ವಿಷಯದ ಕುರಿತು ವೆಂಕಟರಾಯ ಥಾಕರೆಗೆ ತಪ್ಪು ಮಾಹಾತಿ ನೀಡುತ್ತಾನೆ. ಇದು ಕಿತ್ತೂರು ಸಂಸ್ಥಾನದ ನೌಕರರ ನಡುವಿನ ಕಟ್ಟುಕಥೆˌ ಸಂಸ್ಥಾನದ ಆಸ್ತಿ ಲಪಟಾಯಿಸಲು ಕಿತ್ತೂರಿನ ಸರದಾರರು ಮಾಡಿರುವ ಕುತಂತ್ರ ಎಂದು ಸುಳ್ಳು ವರದಿ ಕೊಟ್ಟವನೆ ಈ ಹಾವೇರಿ ವೆಂಕಟರಾಯ. ದತ್ತುಪುತ್ರ ಕಿತ್ತೂರಿನ ರಾಜರ ಹತ್ತಿರದ ಸಂಬಂಧಿಯಲ್ಲ ಎನ್ನುವ ಸುಳ್ಳು ಸುದ್ದಿ ಕೂಡ ಹಾವೇರಿ ವೆಂಕಟರಾವ್ ಥಾಕರೆಗೆ ನೀಡುತ್ತಾನೆ. ಥಾಕರೆˌ ಈ ಕುರಿತು ಮುಂಬೈ ಪ್ರೆಸಿಡೆನ್ಸಿಯ ಪ್ರಧಾನ ಕಾರ್ಯದರ್ಶಿಗೆ ವರದಿ ಕಳಿಸಿ ದತ್ತು ಪ್ರಕ್ರಿಯೆ ಕಾರ್ಯರೂಪಕ್ಕೆ ಬರದಂತೆ ಮಾಡಿದವನೆ ಈ ಹಾವೇರಿ ವೆಂಕಟರಾವ್. ಆದ್ದರಿಂದ ರಂಗಾಯಣದ ನಾಟಕದಲ್ಲಿ ಹಾವೇರಿಯ ವೆಂಕಟರಾಯನನ್ನು ಒಬ್ಬ ಕುತಂತ್ರಿಯಾಗಿ ತೋರಿಸೀವ ಅಗತ್ಯವಿದೆ.
ಬ್ರಿಟೀಷ್ ಮತ್ತು ಕಿತ್ತೂರಿನ ನಡುವೆ ನಡೆದ ಯುದ್ಧದಲ್ಲಿ ಅನೇಕ ಜನರು ಪಿತೂರಿ ಮಾಡಿದ ಘಟನೆಗಳಿವೆ. ಮದ್ದಿನಲ್ಲಿ ಮತ್ತು ತೋಪುಖಾನೆಯಲ್ಲಿ ಲದ್ದಿ ಮತ್ತು ರಾಗಿ ಹಿಟ್ಟನ್ನು ಕಲಸಿದ ಗೆಜ್ಜೆ ಮಾಂತಮ್ಮ ˌ ಗೋವಿಂದ ಭಟ್ಟˌ ಶ್ರೀನಿವಾಸˌ ಮುಂತಾದವರ ಪ್ರಸಂಗಗಳು ರಂಗಾಯಣದ ನಾಟಕದಲ್ಲಿ ಇರಬೇಕಿದೆ. ಇದಲ್ಲದೆ ಕಿತ್ತೂರಿನ ಎರಡನೇ ಯುದ್ದದ ಸಂದರ್ಭದಲ್ಲಿ ಬ್ರಿಟಿಷರಿಗೆ ಬೆಂಬಲಿಸಿ ಕಿತ್ತೂರಿನ ಸಂಪತ್ತನ್ನು ಹಂಚಿಕೊಂಡ ಜಮಖಂಡಿಯ ಒಂಬತ್ತನೇಯ ಗೋಪಾಲರಾವ್ ಪಟವರ್ಧನ್ , ಮತ್ತು ತಾಸಗಾಂವ್ನದ ಪಟವರ್ಧನರ ಪಾತ್ರವನ್ನು ಕೂಡ ನಾಟಕದಲ್ಲಿ ಅಳವಡಿಸಿದರೆ ಕಿತ್ತೂರು ಸಂಸ್ಥಾನದ ನಾಶದಲ್ಲಿ ಬ್ರಾಹ್ಮಣರ ಪಾತ್ರದ ಬಗ್ಗೆ ಜನರಿಗೆ ತಿಳಿಯಲಿದೆ.
ಇತ್ತೀಚೆಗೆ ಲಿಂಗಾಯತ ಪಂಚಮಸಾಲಿಗರು ಚೆನ್ನಮ್ಮನನ್ನು ಐಕಾನ್ ಎಂದುಕೊಂಡು ೨ಎ ಮೀಸಲಾತಿಗೆ ಬೇಡಿಕೆ ಇಟ್ಟಿದ್ದಾರೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಈ ನಾಟಕ ಪ್ರದಶನದ ಅಗತ್ಯವಿರಲಿಲ್ಲ. ಮತ್ತು ಧಾರವಾಡ ಜಿಲ್ಲೆಯಲ್ಲಿ ಈಗಾಗಲೆ ಪಂಚಮಸಾಲಿ ಲಿಂಗಾಯತರು ಬಿಜೆಪಿಯಿಂದ ದೂರ ಸರಿದಿದ್ದಾರೆ. ಟಿಪ್ಪು ವಿಷಯವಿಟ್ಟುಕೊಂಡು ಮುಸ್ಲಿಮರ ವಿರುದ್ಧ ಲಿಂಗಾಯತರನ್ನು ಎತ್ತಿ ಕಟ್ಟಿ ಬಿಜೆಪಿ ರಾಜಕೀಯ ಲಾಭ ಗಿಟ್ಟಿಸಿಕೊಳ್ಳಲು ಹವಣಿಸುತ್ತಿದೆ ಎನ್ನುವ ಗುಸುಗುಸು ಎಲ್ಲೆಡೆ ಕೇಳಿಬರುತ್ತಿವೆ. ೨೦೨೪ ಸಂಸತ್ ಚುನಾವಣೆಯಲ್ಲೂ ಸಹ ಈ ಬಾರಿ ಪ್ರಲ್ಹಾದ ಜೋಶಿಯ ಗೆಲುವು ಕಷ್ಟದಾಯಕವಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ ಟಿಪ್ಪು ವಿಷಯ ಇಟ್ಟುಕೊಂಡು ಮತ ದೃವೀಕರಣಕ್ಕೆ ಬಿಜೆಪಿ ಕೈ ಹಾಕಿತೆ ಎನ್ನುವ ಅನುಮಾನ ಹರಿದಾಡುತ್ತಿದೆ. ಒಟ್ಟಾರೆ ಈ ನಾಟಕದ ವಿವಾದ ಯಾವ ತಿರುವು ಪಡೆಯುತ್ತದೆ ಕಾದು ನೋಡಬೇಕಿದೆ.