ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ನೀಡಿರುವ ಪೊಲೀಸರ ಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಲಂಚದ ಕೇಸೂ ಮುಚ್ಚಿದ್ರು, ಮಂಚದ ಕೇಸ್ ಕೂಡ ಮುಚ್ಚಿದ್ರು ಎಂದು ಟೀಕಿಸಿದ್ದಾರೆ.
KPCC ಕಚೇರಿಯಲ್ಲಿ ಬುಧವಾರ ಮಾತನಾಡಿದ ಅವರು, ತನಿಖೆ ಸಂದರ್ಭದಲ್ಲೇ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ವೈ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಈಶ್ವರಪ್ಪನವರು ಈ ಪ್ರಕರಣದಿಂದ ಹೊರಗಡೆ ಬರ್ತಾರೆಂದು ಸರ್ಟಿಫಿಕೇಟ್ ಕೊಟ್ಟಿದ್ದರು. ಇದೀಗ ಸರ್ಕಾರ ಗೌರವ ಕಳೆದುಕೊಳ್ಳಬಾರದು ಎಂದು ಬಿ. ರಿಪೋರ್ಟ್ ಕೊಟ್ಟಿದ್ದಾರೆ ಅಷ್ಟೇ ಎಂದು ಟೀಕಿಸಿದ್ದಾರೆ.
ಸಂತೋಷ್ ಪಾಟೀಲ್ ಆತ್ಮಹತ್ಯೆಗೂ ಮುನ್ನ ರಾಜ್ಯಪಾಲರು, ಪ್ರಧಾನಿಗೆ ಪತ್ರ ಬರೆದಿದ್ದರು. ಅವರ ಪತ್ನಿ ಕೂಡ ರಾಜ್ಯಪಾಲರಿಗೆ ಪತ್ರವನ್ನು ಬರೆದಿದ್ದಾರೆ. ನಾವು ಇದರ ಬಗ್ಗೆ ಹೋರಾಟ ಮಾಡಿದ್ದೆವು. ಆಗ ಅವರ ರಾಜೀನಾಮೆ ಪಡೆದಿದ್ವು. ಈಗ ಬಿ ರಿಪೋರ್ಟ್ ಕೊಟ್ಟಿದ್ದಾರೆ ಎಂದರು.

ಸಂತೋಷ್ ಪಾಟೀಲ್ ಬಿಜೆಪಿ ಕಾರ್ಯಕರ್ತ, ನೇರವಾಗಿಯೇ ತನ್ನ ನೋವನ್ನ ಹೊರಹಾಕಿದ್ದರು. ಅವರು ಏನೇ ಮುಚ್ಚಿದ್ರು ಜನರಿಗೆ ಎಲ್ಲ ಗೊತ್ತಿದೆ. ಕೆಂಪಣ್ಣ ಏನು ದೂರು ಕೊಟ್ಟಿದ್ರು ಅದು ಗೊತ್ತಿದೆ. ಗುತ್ತಿಗೆದಾರರನ್ನ ಹೆದರಿಸಿ ಬೆದರಿಸಿದ್ರು, ಈ ಪ್ರಕಣವನ್ನು ಮುಚ್ಚಿಹಾಕಿದ್ರು. ಈ ಮೂಲಕ ಅವರ ನಾಯಕರನ್ನ ರಕ್ಷಿಸುವ ಕೆಲಸ ಆಗಿದೆ ಎಂದು ಆರೋಪಿಸಿದರು.