ಮೂಲ : Khula ties the Muslim clerics in knots –
ಜಿಯಾ ಉಸ್ ಸಲಾಂ
ದ ಹಿಂದೂ 29 ನವಂಬರ್ 2022
ಅನುವಾದ : ನಾ ದಿವಾಕರ
ಮುಸ್ಲಿಂ ಮಹಿಳೆಯರಿಗೆ ವಿವಾಹ ವಿಚ್ಚೇದನ ಪಡೆಯಲು ಪರಭಾರೆ ಮಾಡಲಾಗದಂತಹ ಹಕ್ಕು ನೀಡುವ ಖುಲಾ ಪದ್ಧತಿಯ ಬಗ್ಗೆ ಸಮತೂಕವಿಲ್ಲದ ತೀರ್ಪುಗಳನ್ನು ನೀಡುವ ಮೂಲಕ ಮುಸ್ಲಿಂ ಉಲೇಮಾಗಳು ಸಮುದಾಯವನ್ನು ಮತ್ತೊಮ್ಮೆ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ಪುರುಷ ಪ್ರಾಧಾನ್ಯತೆಯನ್ನು ಸಮರ್ಥಿಸುವಂತಹ ತಮ್ಮ ತೀರ್ಪುಗಳ ಮೂಲಕ ಉಲೇಮಾಗಳು, ಮುಸ್ಲಿಂ ಮಹಿಳೆಯು ಒಮ್ಮೆ ನಿಕಾಹ್ ಮೂಲಕ ವಿವಾಹ ಬಂಧನಕ್ಕೊಳಗಾದರೆ ಆಕೆಗೆ ವಿವಾಹದ ಒಪ್ಪಂದದಿಂದ ಹೊರಬರಬೇಕಾದಲ್ಲಿ, ಪತಿಯಿಂದ ವಿಚ್ಚೇದನ ಪಡೆಯಬೇಕು ಅಥವಾ ಆಕೆಯ ಖುಲಾ ಪ್ರಸ್ತಾವನೆಯನ್ನು ಪತಿ ಒಪ್ಪುವುದು ಕಡ್ಡಾಯವಾಗಿರುತ್ತದೆ ಎಂದು ಪ್ರತಿಪಾದಿಸುತ್ತಾರೆ. ಮೂರನೆಯ ಮಾರ್ಗ ಎಂದರೆ ನ್ಯಾಯಿಕ ವಿಚ್ಚೇದನ ಪಡೆಯುವುದಾಗಿದೆ. ಪುರುಷನು ಪತ್ನಿಯ ಮೇಲೆ ದೌರ್ಜನ್ಯ ನಡೆಸಿದರೂ, ವರದಕ್ಷಿಣೆಗಾಗಿ ಕಿರುಕುಳ ನೀಡಿದರೂ ಅಥವಾ ಆಕೆಯ ಪೋಷಕರನ್ನು ಸಂಪರ್ಕಿಸಲು ಅನುಮತಿ ನೀಡದಿದ್ದರೂ ಅಥವಾ ಆಕೆಯ ವೃತ್ತಿಪರ ಕನಸುಗಳನ್ನು ಪೂರೈಸುವ ಅವಕಾಶ ನೀಡದಿದ್ದರೂ, ಆಕೆ ತನ್ನ ಪತಿ ಖುಲಾ ಪ್ರಸ್ತಾವನೆಗೆ ಸಮ್ಮತಿಸದೆ ಇದ್ದರೆ ವಿವಾಹ ಬಂಧವನ್ನು ಅಂತ್ಯಗೊಳಿಸುವುದು ಸಾಧ್ಯವಿಲ್ಲ.
ಇಸ್ಲಾಂ ಮೇಲೆ ಪುರುಷರ ಏಕಸ್ವಾಮ್ಯ
ಮಹಿಳೆಯ ಹಕ್ಕುಗಳ ಬಗ್ಗೆ ಉಲೇಮಾಗಳ ವ್ಯಾಖ್ಯಾನವೇ ಪ್ರಶ್ನಾರ್ಹವಾಗಿದೆ. ಪ್ರಚೋದನಕಾರಿಯೂ ಆಗಿದೆ. ಸುಪ್ರೀಂಕೋರ್ಟ್ ಮಧ್ಯೆ ಪ್ರವೇಶಿಸಿ ಕಲೀಫ್ ಉಮರ್ ಅವರ ನಿರ್ಧಾರಗಳಿಗಿಂತಲೂ ಕುರಾನ್ನ ವ್ಯಾಖ್ಯಾನಗಳೇ ಪ್ರಧಾನವಾದು ಎಂದು ತೀರ್ಪು ನೀಡುವ ಮುನ್ನ, ತ್ರಿವಳಿ ತಲಾಕ್ ಬಗ್ಗೆಯೂ ಉಲೇಮಾಗಳ ಅಭಿಪ್ರಾಯ ಇದೇ ರೀತಿಯದ್ದಾಗಿರುತ್ತಿತ್ತು. ತಲಾಕ್ ಪ್ರಕರಣಗಳಲ್ಲೂ ಸಹ, ಪುರುಷರು ಒಮ್ಮೆಲೆ ಮೂರು ಬಾರಿ ತಲಾಕ್ ಎಂದು ಉಚ್ಚರಿಸುವ ಮೂಲಕ ವಿವಾಹ ಬಂಧವನ್ನು ಅಂತ್ಯಗೊಳಿಸುವ ಹಕ್ಕು ಇರುವುದನ್ನು ಮೌಲಾನಾಗಳು ಬಲವಾಗಿ ಸಮರ್ಥಿಸಿದ್ದರು. ಹತ್ತಾರು ಇಸ್ಲಾಮಿಕ್ ರಾಷ್ಟ್ರಗಳು ವಿಚ್ಚೇದನದ ಈ ಮಾದರಿಯನ್ನು ಅಂಗೀಕರಿಸುವುದಿಲ್ಲ ಎಂಬ ವಾಸ್ತವವೂ ಸಹ ಭಾರತದ ಉಲೇಮಾಗಳಿಗೆ ಅನಪೇಕ್ಷಿತವಾಗಿತ್ತು. ವಿವಾಹ ವಿಚ್ಚೇದನದ ಆಯ್ಕೆಗಳನ್ನು ಕುರಿತಂತೆ ಕುರಾನ್ನಲ್ಲಿ ಕೆಲವು ಶ್ಲೋಕಗಳು ಉಲ್ಲೇಖವಾಗಿದ್ದು, ಸುರಾಹ್-ಅಲ್-ಬಕಾರಾಹ್ ಎಂದೂ, ಸುರಾಹ್-ಅಟ್-ತಲಾಕ್ ಎಂಬ ಈ ಶ್ಲೋಕಗಳಲ್ಲೂ ಸಹ ಒಮ್ಮೆಲೆ ಮೂರು ಬಾರಿ ತಲಾಕ್ ಹೇಳುವ ಪದ್ಧತಿಗೆ ಮಾನ್ಯತೆ ನೀಡಲಾಗಿಲ್ಲ. ಆದರೆ ಈ ವಿಚಾರದಲ್ಲೂ ಸಹ ಭಾರತದ ಉಲೇಮಾಗಳು, ಅದನ್ನು ಕೇವಲ ವ್ಯಾಖ್ಯಾನಗಳಿಗೆ ಸೀಮಿತವಾಗಿಸಿದ್ದರು. ಅಂತಿಮವಾಗಿ ನ್ಯಾಯಾಲಯವೇ 2017ರಲ್ಲಿ ತ್ರಿವಳಿ ತಲಾಕ್ ಪದ್ಧತಿಗೆ ಅಂತ್ಯ ಹಾಡಬೇಕಾಯಿತು. ಈ ತೀರ್ಪು ಉಲೇಮಾಗಳಲ್ಲಿ ಸಾಕಷ್ಟು ಕ್ಲೇಶ ಉಂಟುಮಾಡಿದರೂ ಕೊನೆಗೆ ಸಮ್ಮತಿಸಬೇಕಾಯಿತು.
ಮುಸ್ಲಿಂ ವಿದ್ವಾಂಸರು ಧಾರ್ಮಿಕವಾಗಿ ತಮ್ಮ ಹಿಡಿತವನ್ನು ಸಾಧಿಸಲು ಖುಲಾ ಪದ್ಧತಿಯ ಬಗ್ಗೆ ತಮ್ಮದೇ ಆದ ನಿಲುವುಗಳನ್ನು ವ್ಯಕ್ತಪಡಿಸುವುದರಿಂದ, ನ್ಯಾಯಾಂಗವೇ ಮತ್ತೊಮ್ಮೆ ಕುರಾನ್ ಮತ್ತು ಹಡಿತ್ಗಳ ಕಡೆಗೆ ಉಲೇಮಾಗಳ ಗಮನವನ್ನು ಸೆಳೆಯಬೇಕಿದೆ. ಇಸ್ಲಾಂ ಧರ್ಮದ ಮೇಲೆ ಪುರುಷರ ಏಕಸ್ವಾಮ್ಯತೆಯನ್ನು ಹೇರುವ ದೃಷ್ಟಿಯಿಂದ ಮುಸ್ಲಿಂ ಮಹಿಳೆಯ ಎಲ್ಲ ಹಕ್ಕುಗಳನ್ನು, ಸವಲತ್ತುಗಳನ್ನು ಉಲೇಮಾಗಳೇ ಪರಾಮರ್ಶಿಸುತ್ತಾರೆ. ಇತ್ತೀಚೆಗೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಲಿಯು (ಎಐಎಮ್ಪಿಎಲ್ಬಿ) ಖುಲಾ ಬಗ್ಗೆ ಕೇರಳದ ಹೈಕೋರ್ಟ್ ತೀರ್ಪನ್ನು ವಿರೋಧಿಸಿದೆ. ಮರುಪರಿಷ್ಕರಣೆಯ ಅರ್ಜಿಗೆ ಪ್ರತಿಕ್ರಯಿಸಿರುವ ಕೇರಳ ಹೈಕೋರ್ಟ್ “ ಯಾವುದೇ ಕಾರ್ಯ ವಿಧಾನಗಳು ಇಲ್ಲದಿದ್ದ ಪಕ್ಷದಲ್ಲಿ,,, ಪತ್ನಿಯ ವಿವಾಹ ವಿಚ್ಚೇದನದ ಇಚ್ಚೆಯನ್ನು ಪತಿಯು ಸಮ್ಮತಿಸದೆ ಹೋದರೆ, ಖುಲಾ ಪದ್ಧತಿಯನ್ನು ಪತಿಯ ಸಂಯೋಗ ಇಲ್ಲದೆಯೇ ಅನ್ವಯಿಸಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಡುತ್ತದೆ,,,,, ಮುಸ್ಲಿಂ ಮಹಿಳೆಯರು ತಮ್ಮ ಪುರುಷ ಸಂಗಾತಿಗಳ ಇಚ್ಚೆಗಳಿಗೆ ಅಡಿಯಾಳಾಗಿರಬೇಕು ಎಂದು ಪ್ರತಿಪಾದಿಸುವ ವಿಶಿಷ್ಟ ಪರಿಷ್ಕರಣೆಯ ಅರ್ಜಿ ಇದಾಗಿದೆ,,,,,,ಮುಸ್ಲಿಂ ಮಹಿಳೆಯರು ಏಕಪಕ್ಷೀಯವಾಗಿ ಖುಲಾ ಪದ್ಧತಿಯನ್ನು ಬಳಸುವ ಹಕ್ಕು ಹೊಂದಿರುತ್ತಾರೆ ಎನ್ನುವ ನಿಯಮವನ್ನು ಮುಸ್ಲಿಂ ಧರ್ಮಾಧಿಕಾರಿಗಳು ಮತ್ತು ಮುಸ್ಲಿಂ ಸಮುದಾಯದ ಪುರುಷಾಧಿಪತ್ಯದ ಪ್ರತಿಪಾದಕರು ಅರಗಿಸಿಕೊಳ್ಳಲಾಗುತ್ತಿಲ್ಲ ” ಎಂದು ಹೇಳಿದೆ.
ಹೈಕೋರ್ಟ್ನ ಈ ತೀರ್ಪು ಸಿಲ್ವಿಯಾ ವಾಟುಕ್ ಅವರ “ Extra judicial Khul Divorce in Indiás Muslim personal law ” ಎಂಬ ಲೇಖನವನ್ನೇ ಪ್ರತಿಬಿಂಬಿಸುತ್ತದೆ. ಈ ಲೇಖನದಲ್ಲಿ ಸಿಲ್ವಿಯಾ ವಾಟುಕ್ ಅವರು ಹೀಗೆ ಹೇಳುತ್ತಾರೆ : “ ಕೌಟುಂಬಿಕ ಹಕ್ಕುಗಳನ್ನು ಕುರಿತ 1917ರ ಆಟಮನ್ (Ottoman) ಕಾನೂನು ಮೊಟ್ಟಮೊದಲ ಬಾರಿಗೆ ಮಹಿಳೆಗೆ ಕೆಲವು ವಿಶಿಷ್ಟ ಸನ್ನಿವೇಶಗಳಲ್ಲಿ ನ್ಯಾಯಾಲಯದ ಮೂಲಕ ವಿಚ್ಚೇದನ ಪಡೆಯಲು ಅವಕಾಶ ನೀಡಿತ್ತು. ಆಗಿನಿಂದಲೂ ಹನಾಫಿ ಕಾನೂನಿನ ನಿಯಮಗಳನ್ನು ಅನ್ವಯಿಸುವ ಬಹುತೇಕ ದೇಶಗಳು,,,, ಈ ಕಾನೂನನ್ನು ಸಡಿಲಗೊಳಿಸಿ, ಮಾರ್ಪಡಿಸುವ ಮೂಲಕ ವಿಚ್ಚೇದನ ಪಡೆಯಲಿಚ್ಚಿಸುವ ಪತ್ನಿಯು ಆಕೆಯ ಪತಿಯ ಅನುಮತಿ ಪಡೆಯಬೇಕೆಂಬ ನಿಯಮವನ್ನು ನಿರಾಕರಿಸುತ್ತಲೇ ಬಂದಿವೆ. ಭಾರತವೂ ಸಹ ಇದನ್ನು 1939ರ ಮುಸ್ಲಿಂ ವಿವಾಹ ರದ್ದತಿಯ ಕಾಯ್ದೆಯ ಮೂಲಕ ಜಾರಿಗೊಳಿಸಿತ್ತು. ಈ ಕಾಯ್ದೆಯ ಅನ್ವಯ ಮುಸ್ಲಿಂ ಮಹಿಳೆಯು ನ್ಯಾಯಾಲಯದ ಮೂಲಕ ಸಮ್ಮತಿ ಸೂಚಿಸದ ಅಥವಾ ಲಭ್ಯವಿಲ್ಲದ ಪತಿಯಿಂದ ವಿಚ್ಚೇದನ ಪಡೆಯಬಹುದಾಗಿದೆ ”.
ನ್ಯಾಯಾಂಗವು 1937ರ ಮುಸ್ಲಿಂ ವೈಯಕ್ತಿಕ ಕಾನೂನಿನ (ಶರಿಯತ್) ಅನ್ವಯಿಸುವಿಕೆಯ ಕಾಯ್ದೆಯನ್ನು ವ್ಯಾಖ್ಯಾನಿಸುವ ತನ್ನ ವ್ಯಾಪ್ತಿಯನ್ನು ಮೀರಿ ಕೇರಳ ಹೈಕೋರ್ಟ್ ತೀರ್ಪು ನೀಡಿದೆ ಎಂದು ಎಐಎಂಪಿಎಲ್ಬಿ ಪ್ರತಿಪಾದಿಸುತ್ತದೆ. ಮಂಡಲಿಯ ಅನುಸಾರ ಪುರುಷನಿಗೆ ತನ್ನ ಪತ್ನಿಯ ಖುಲಾ ಪ್ರಸ್ತಾವನೆಯನ್ನು ಒಪ್ಪುವ ಅಥವಾ ನಿರಾಕರಿಸುವ ಹಕ್ಕು ಇರುತ್ತದೆ. ಅಂದರೆ ಮಹಿಳೆಯು ದೌರ್ಜನ್ಯದಿಂದ ಕೂಡಿದ ಅಥವಾ ಅಸಮಾಧಾನದಿಂದ ಕೂಡಿದ ವೈವಾಹಿಕ ಸಂಬಂಧವನ್ನು, ಆಕೆಯ ಪತಿಯ ಒಪ್ಪಿಗೆ ಇಲ್ಲದೆ, ತೊರೆಯುವಂತಿಲ್ಲ ಎಂದೇ ಪ್ರತಿಪಾದಿಸುತ್ತದೆ. ಈ ತರ್ಕವು ಭಾರತದ ವಾಸ್ತವತೆಗಳಿಗೆ ವ್ಯತಿರಿಕ್ತವಾಗಿದೆ. ಇಲ್ಲಿ ಬಹುಪಾಲು ಖುಲಾ ಪ್ರಕರಣಗಳು ಮುಂಚೂಣಿಗೆ ಬರುವುದು, ಮಹಿಳೆಗೆ ತನ್ನ ವೈವಾಹಿಕ ಕುಟುಂಬವನ್ನು ತೊರೆಯಲು ಒತ್ತಾಯಿಸಿದಾಗ ಅಥವಾ ಮಹಿಳೆಯು ಅಗಲಿರುವ ಪತಿಯ ಕಿರುಕುಳದಿಂದ ತಪ್ಪಿಸಿಕೊಳ್ಳುವ ಸಲುವಾಗಿ ತನ್ನ ತವರು ಮನೆಯವರೊಂದಿಗೆ ಇರಲು ಇಚ್ಚಿಸಿದಾಗ. ಈ ಎರಡೂ ಪ್ರಸಂಗಗಳಲ್ಲಿ ಮಹಿಳೆಯ ಖುಲಾ ಪ್ರಸ್ತಾವನೆಗೆ ಸಮ್ಮತಿ ಸೂಚಿಸುವುದರಿಂದ ಪತಿಗೆ ಯಾವುದೇ, ಮತ್ತೊಂದು ವಿವಾಹವಾಗುವ ಅವಕಾಶ ಬಿಟ್ಟರೆ, ಮತ್ತಾವ ಅನುಕೂಲತೆಗಳೂ ಲಭಿಸುವುದಿಲ್ಲ. ಖುಲಾ ಮೂಲಕ ಬಿಡುಗಡೆಗೆ ಒಪ್ಪದೆ ಹೋದರೆ ಅಂತಹ ಮಹಿಳೆಯನ್ನು ತ್ಯಜಿಸಿಬಿಡಬಹುದು.
ಸ್ಪಷ್ಟ ವಿಚ್ಚೇದನದ ನಿಯಮ
ಅತೃಪ್ತಿಯಿಂದ ಕೂಡಿದ ಅಥವಾ ದೌರ್ಜನ್ಯಯುತ ವಿವಾಹ ಸಂಬಂಧಗಳಿಗೆ ಅಂತ್ಯ ಹಾಡುವ ಉದ್ದೇಶದಿಂದಲೇ ಪವಿತ್ರ ಕುರಾನ್, ಪತಿ ಅಥವಾ ಪತ್ನಿ ಯಾರೇ ಪ್ರಸ್ತಾಪಿಸಿದರೂ ಸಹ, ವಿಚ್ಚೇದನ ನಿಯಮಗಳನ್ನು ಸ್ಪಷ್ಟವಾಗಿ ನಮೂದಿಸುತ್ತದೆ. ಸುರಾಹ್̲-ಅಲ್-ಬಕಾರಾಹ್ನಲ್ಲಿರುವ 229ನೆಯ ಶ್ಲೋಕದಲ್ಲಿ ಪವಿತ್ರ ಕುರಾನ್, ಮಹಿಳೆ ತನ್ನ ಬಿಡುಗಡೆಗೆ ಪ್ರತಿಯಾಗಿ ಏನನ್ನಾದರೂ ನೀಡುವುದಾದರೆ ಆಕೆಗೆ ವಿವಾಹ ಬಂಧವನ್ನು ಕೊನೆಗೊಳಿಸುವ ಹಕ್ಕು ನೀಡುತ್ತದೆ. ಅಂದರೆ, ಆಕೆ ವಿಚ್ಚೇದನ ಪಡೆಯಲು ಖುಲಾ ಪ್ರಸ್ತಾಪಿಸುವ ಮೂಲಕ ತಾನು ಪಡೆದಿರುವ ಮೆಹರ್ ಹಿಂದಿರುಗಿಸಬೇಕಾಗುತ್ತದೆ. ಇಸ್ಲಾಮಿಕ್ ಚರಿತ್ರೆಯಲ್ಲಿ ಸ್ಪಷ್ಟವಾಗಿ ದಾಖಲಾಗಿರುವ ಇಂತಹ ಒಂದು ಪ್ರಕರಣವೂ ಇದೆ. ತನ್ನ ಪತಿ ಸಾಬಿತ್ ಬಿನ್ ಕೈಸ್ನ ಚಹರೆಯನ್ನು ಇಷ್ಟ ಪಡದ ಕಾರಣ ತನ್ನ ನಿಕಾಹ್ ರದ್ದುಪಡಿಸುವ ಸಲುವಾಗಿ ಪ್ರವಾದಿಯ ಸಲಹೆ ಕೇಳುವ ಜಮೀಲಾ ಪ್ರಕರಣವನ್ನು ಉಲ್ಲೇಖಿಸಬಹುದು. ಇದಕ್ಕೆ ಪ್ರತಿಯಾಗಿ ಪತಿಗೆ ಏನನ್ನಾದರೂ ನೀಡುವಂತೆ ಪ್ರವಾದಿ ಸಲಹೆ ನೀಡುತ್ತಾರೆ. ಆಕೆ ತನ್ನ ಉದ್ಯಾನವನ್ನು ಬಿಟ್ಟುಕೊಟ್ಟ ನಂತರ ಪ್ರವಾದಿಗಳು ಪತಿಗೆ ಸಮ್ಮತಿ ನೀಡುವಂತೆ ಸೂಚಿಸುತ್ತಾರೆ. ಪ್ರವಾದಿಗಳು ಪುರುಷನ ಅನುಮತಿಯನ್ನೂ ಕೇಳುವುದಿಲ್ಲ ಅಥವಾ ನಿರಾಕರಿಸುವ ಹಕ್ಕನ್ನೂ ಆತನಿಗೆ ನೀಡುವುದಿಲ್ಲ. ಬಹುಮುಖ್ಯವಾಗಿ ತಲಾಕ್ ಪದ್ಧತಿಯಲ್ಲಿ ಮೊದಲನೆಯ ಮತ್ತು ಎರಡನೆಯ ತಲಾಕ್ ಘೋಷಣೆಯ ನಂತರ ಪತಿ ಪತ್ನಿಯರಿಗೆ ಒಟ್ಟಿಗೆ ಜೀವನ ನಡೆಸಲು ಹೇಳಲಾಗುತ್ತದೆ, ತನ್ಮೂಲಕ ರಾಜಿಯಾಗುವ ಸಾಧ್ಯತೆಗಳಿಗೆ ಅವಕಾಶ ನೀಡಲಾಗುತ್ತದೆ. ಆದರೆ ಖುಲಾ ಪದ್ಧತಿಯಲ್ಲಿ ಮಹಿಳೆಯು ತಕ್ಷಣವೇ ತನ್ನ ಪತಿಯ ಮನೆಯನ್ನು ತೊರೆಯಬೇಕಾಗುತ್ತದೆ. ಮಹಿಳೆಯ ಜೀವನಸಂಗಾತಿಯಾಗಿ ಉಳಿಯದ ಪುರುಷನಿಂದ ಮಹಿಳೆಯ ಮೇಲೆ ನಡೆಯಬಹುದಾದ ಆಕ್ರಮಣವನ್ನು ತಪ್ಪಿಸಲು ಈ ನಿಯಮವನ್ನು ರೂಪಿಸಲಾಗಿದೆ.
ಎಐಎಮ್ಪಿಎಲ್ಬಿ ಹೊರತಾಗಿ ಇಮಾರತ್ ಶರಿಯಾದ ವಿದ್ವಾಂಸರೂ ಸಹ ಖುಲಾ ನಿಯಮದ ಮೇಲೆ ಪುರುಷರ ನಿರಾಕರಣಾಧಿಕಾರವನ್ನು ಸಮರ್ಥಿಸುತ್ತಾರೆ. ಪುರುಷಾಧಿಪತ್ಯವನ್ನು ಸಮರ್ಥಿಸುವ ಈ ನಿಲುವಿನಿಂದಲೇ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಲಿಯ ಅನೇಕ ಮಹಿಳಾ ಸದಸ್ಯರು ಮಂಡಲಿಯಿಂದ ತಮ್ಮ ಅಂತರವನ್ನು ಕಾಯ್ದುಕೊಂಡಿದ್ದು, ಸಮುದಾಯದ ಉಳಿದ ಮಹಿಳೆಯರನ್ನು ನಡುನೀರಿನಲ್ಲಿ ಕೈಬಿಟ್ಟಿದ್ದಾರೆ. ಪವಿತ್ರ ಗ್ರಂಥ ಅಥವಾ ಹಡಿತ್ಗಳು ವಿಭಿನ್ನವಾದ ಸಾಕ್ಷಿ ಪುರಾವೆಗಳನ್ನು ಒದಗಿಸಬಹುದಾದರೂ ಉಲೇಮಾಗಳು ವೈವಾಹಿಕ ಬದುಕಿನಲ್ಲಿ ಮತ್ತು ವಿಚ್ಚೇದನದ ಪ್ರಕರಣಗಳಲ್ಲಿ ಮಹಿಳೆಯರು ತಮ್ಮ ಹಕ್ಕು ಚಲಾಯಿಸುವುದಕ್ಕೆ ಅವಕಾಶ ನೀಡಲು ತಯಾರಾಗಿಲ್ಲ. ಖುಲಾ ನಿಯಮವೂ ಸಹ ಮುಸ್ಲಿಂ ಧಾರ್ಮಿಕ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.