ಹಲಿಗಳ ಗಣತಿಯಲ್ಲಿ ಎರಡನೇ ಸ್ಥಾನ ಪಡೆದಿರುವ ಕರ್ನಾಟಕ ರಾಜ್ಯಕ್ಕೆ ಆನೆಗಳ ಗಣತಿಯಲ್ಲಿ ಮೊದಲ ಸ್ಥಾನ ದೊರೆತಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಬುಧವಾರ (ಆಗಸ್ಟ್ 9) ಹೇಳಿದ್ದಾರೆ.
ಈ ವರ್ಷದ ಹುಲಿಗಳ ಗಣತಿಯಲ್ಲಿ ಕರ್ನಾಟಕ ಎರಡನೇ ಸ್ಥಾನ ಪಡೆದಿದೆ. ಆದರೆ ಆನೆಗಳ ಗಣತಿಯಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ. ವರದಿ ಪ್ರಕಾರ ರಾಜ್ಯದಲ್ಲಿ ಈಗ 6.395 ಆನೆಗಳಿವೆ ಎಂದು ಸಚಿವ ಖಂಡ್ರೆ ತಿಳಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು. “2017ರ ಗಣತಿ ಪ್ರಕಾರ ರಾಜ್ಯದಲ್ಲಿ 6,049 ಆನೆಗಳಿದ್ದವು. ಈ ವರ್ಷ 6,395 ಆನೆಗಳಿರುವುದು ಗಣತಿಯಲ್ಲಿ ಪತ್ತೆಯಾಗಿದೆ. ಅನೆಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ” ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.
2023ರ ಮೇ 17ರಿಂದ ಮೇ 19ರವರೆಗೆ ಮೂರು ದಿನಗಳ ಕಾಲ ರಾಜ್ಯದ 32 ವಿಭಾಗಗಳಲ್ಲಿ ಆನೆ ಗಣತಿ ನಡೆಸಲಾಗಿದೆ. ಸುಮಾರು 3,400 ಅಧಿಕಾರಿಗಳು, ಸಿಬ್ಬಂದಿ ಗಣತಿಯಲ್ಲಿ ಪಾಲ್ಗೊಂಡಿದ್ದರು ಎಂದು ಮಾಹಿತಿ ನೀಡಿದರು.
32 ವಿಭಾಗಗಳ ಪೈಕಿ 23 ವಿಭಾಗಗಳಲ್ಲಿ ಗಣತಿ ಸಮಯದಲ್ಲಿ ನೇರವಾಗಿ ಆನೆಗಳು ಕಂಡು ಬಂದಿವೆ. 2,219 ಆನೆಗಳನ್ನು ನೇರವಾಗಿ ಗುರುತಿಸಲಾಗಿದೆ ಎಂದು ಈಶ್ವರ ಖಂಡ್ರೆ ಹೇಳಿದರು.
ಈ ಸುದ್ದಿ ಓದಿದ್ದೀರಾ? ಮೈತ್ರಿ ಬಗ್ಗೆ ವರಿಷ್ಠರು ತೀರ್ಮಾನ ಮಾಡಲಿದ್ದಾರೆ; ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ
ಅರಣ್ಯ ಇಲಾಖೆಯ ಆಡಳಿತ ನಿರ್ವಹಣೆಗೆ ಸಂಪೂರ್ಣ ತಂತ್ರಾಂಶ ಅಳವಡಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಆಡಳಿತ ನಿರ್ವಹಣೆ, ನಾಗರಿಕರಿಗೆ ಸ್ಪಂದನೆ ಮತ್ತು ಅರಣ್ಯ ಜಮೀನು ಹಾಗೂ ಇತರ ಸಂಪನ್ಮೂಲದ ನಿರ್ವಹಣೆಗೆ ಪ್ರತ್ಯೇಕ ತಂತ್ರಾಂಶಗಳನ್ನು ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸಂಜಯ್ ಕುಮಾರ್ ನೇತೃತ್ವದ ಪರಿಶೀಲನಾ ಸಮಿತಿ ನೇಮಿಸಿದೆ. ಆ ಸಮಿತಿ ವರದಿ ಸಲ್ಲಿಕೆಯಾದ ಬಳಿಕ ರಾಜ್ಯ ಸರ್ಕಾರ ತನ್ನ ನಿಲುವು ಪ್ರಕಟಿಸಲಿದೆ. ಅರಣ್ಯ ಮತ್ತು ಪರಿಸರದ ಸಂರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿ ಎರಡೂ ಸರ್ಕಾರದ ಆದ್ಯತೆ ಎಂದು ಈಶ್ವರ ಖಂಡ್ರೆ ವಿವರಿಸಿದರು.
ಇತ್ತೀಚೆಗೆ ಬಿಡುಗಡೆಯಾಗಿದ್ದ ಅರಣ್ಯ ಇಲಾಖೆ ವರದಿಯಲ್ಲಿ ಹುಲಿಗಳ ಗಣತಿಯಲ್ಲಿ ಮಧ್ಯಪ್ರದೇಶ ಮೊದಲ ಸ್ಥಾನ ಪಡೆದಿದೆ. ರಾಜ್ಯದಲ್ಲಿ ಈಗ 526 ಹುಲಿಗಳಿವೆ ಎಂದು ವರದಿ ಹೇಳಿದೆ.