ಇತ್ತೀಚೆಗೆ ನಡೆದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಸಂಸತ್ ಅಧಿವೇಶನದಲ್ಲಿ ಕೇಂದ್ರದ ನೂತನ ಸಚಿವರನ್ನು ಪರಿಚಯಿಸಲು ಅವಕಾಶ ನೀಡದೆ ಕಾಂಗ್ರೆಸ್ ಗದ್ದಲ ಮಾಡಿತ್ತು. ಹಾಗಾಗಿ ಕೇಂದ್ರದ ನೂತನ ಸಚಿವರನ್ನು ಕೇವಲ ಸಂಸತ್ನಲ್ಲಿ ಮಾತ್ರವಲ್ಲದೇ ನೇರ ಜನರಿಗೆ ಪರಿಚಯಿಸಲು ಇಂದನಿಂದ ಬಿಜೆಪಿ ಜನಾಶೀರ್ವಾದ ಯಾತ್ರೆ ಕೈಗೊಂಡಿದೆ. ಜನಾಶೀರ್ವಾದ ಯಾತ್ರೆ ಭಾಗವಾಗಿ ದೇಶದಲ್ಲಿ ಒಟ್ಟು 160 ದಿನ ವಿವಿಧ ತಂಡಗಳು ಪ್ರವಾಸ ಮಾಡಲಿವೆ. ಹೀಗೆಯೇ ರಾಜ್ಯದಲ್ಲೂ 5 ದಿನಗಳ ಪ್ರವಾಸದಲ್ಲಿ 2,030 ಕಿಮೀ ದೂರವನ್ನು ಕ್ರಮಿಸಲಿವೆ. 24 ಲೋಕಸಭಾ ಕ್ಷೇತ್ರಗಳು, 72 ವಿಧಾನಸಭಾ ಕ್ಷೇತ್ರಗಳಲ್ಲಿ ಹಾಗೂ 25 ಕಂದಾಯ ಜಿಲ್ಲೆಗಳಲ್ಲಿ 161 ಕಾರ್ಯಕ್ರಮಗಳು ನಡೆಯಲಿವೆ.
ಇನ್ನು ಭಾರತ ಮಾತ್ರವಲ್ಲದೇ ರಾಜ್ಯದಲ್ಲೂ ಇಂದಿನಿಂದ ಕೇಂದ್ರದ ನೂತನ ಸಚಿವರ ಜನಾಶೀರ್ವಾದ ಯಾತ್ರೆ ಶುರುವಾಗಿದೆ. ರಾಜ್ಯವನ್ನು ಪ್ರತಿನಿಧಿಸುವ ನಾಲ್ವರು ಹೊಸ ಕೇಂದ್ರ ಸಚಿವರು ಹಲವು ಉದ್ದೇಶಗಳ ಜತೆಗೆ ಜನರ ಬಳಿಗೆ ಹೋಗುತ್ತಿದ್ದಾರೆ. ಈ ಮೂಲಕ ಮೋದಿ ಸರ್ಕಾರವೇ ಜನರ ಬಳಿಗೆ ಬರುತ್ತಿದೆ ಎಂಬ ಸಂದೇಶ ಸಾರುತ್ತಿದ್ದಾರೆ. ಕೇಂದ್ರದ ನೂತನ ಸಚಿವರಾದ ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ಎ. ನಾರಾಯಣಸ್ವಾಮಿ ಹಾಗೂ ರಾಜೀವ್ ಚಂದ್ರಶೇಖರ್ ಜನಾಶೀರ್ವಾದ ಯಾತ್ರೆ ಕೈಗೊಂಡಿದ್ದಾರೆ. ಕೇಂದ್ರದ ನಾಲ್ವರು ಸಚಿವರು ರಾಜ್ಯದ ನಾಲ್ಕು ದಿಕ್ಕುಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ. ನಮ್ಮ ನಡೆ, ಜನರ ಕಡೆ ಎನ್ನುತ್ತಿದ್ದಾರೆ.
ಜನಾಶಿರ್ವಾದ ಯಾತ್ರೆಯ ಅಸಲಿ ಉದ್ದೇಶವೇನು?
- ಕೇಂದ್ರ ಸರ್ಕಾರವು ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅನುಷ್ಠಾನಗೊಳಿಸಿದ ಯೋಜನೆಗಳನ್ನು ಜನರಿಗೆ ತಿಳಿಸುವುದು
- ರೈತರ ಆದಾಯ ದ್ವಿಗುಣ, ದೀನದಲಿತರು, ಬಡವರ ಅಭ್ಯುದಯಕ್ಕಾಗಿ ಕೈಗೊಂಡ ಕಾರ್ಯಕ್ರಮಗಳನ್ನು ಪರಿಚಯಿಸಲಾಗುವುದು
- ದೇಶದಲ್ಲಿ 55 ಕೋಟಿಗೂ ಹೆಚ್ಚು ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಮಾಹಿತಿ ನೀಡುವುದು
- ದೀಪಾವಳಿವರೆಗೆ ಬಡವರಿಗೆ ಉಚಿತ ಪಡಿತರ ನೀಡುತ್ತಿದ್ದೇವೆ ಎಂದು ಹೇಳುವುದು
- ಕೇಂದ್ರದ ಯೋಜನೆಗಳ ಬಗ್ಗೆ ಜನಜಾಗೃತಿ ಮೂಡಿಸುವುದು
- ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ಇಲ್ಲ ಎಂಬ ಅಪವಾದ ತೊಡೆದು ಹಾಕುವುದು
- ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳಿಗಾಗಿ ಪಕ್ಷದ ಸಂಘಟನೆ ಬಲಪಡಿಸುವುದು
- ಪಕ್ಷದ ಗೆಲುವಿಗಾಗಿ ಶ್ರಮಿಸಲು ಕಾರ್ಯಕರ್ತರನ್ನು ಹುರಿಗೊಳಿಸುವುದು
- ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನಂತರ ರಾಜ್ಯದಲ್ಲಿ ನಾಯಕತ್ವದ ಅಭಾವ ಎದುರಾಗಿಲ್ಲ ಎಂಬ ಸಂದೇಶ ಸಾರುವುದು
- ಸಾಮೂಹಿಕ ನಾಯಕತ್ವಕ್ಕೆ ಪಕ್ಷವನ್ನು ಸಜ್ಜುಗೊಳಿಸುವುದಕ್ಕಾಗಿ ನೂತನ ಸಚಿವರು ಮತದಾರ ಪ್ರಭುವಿನ ಮನೆ ಬಾಗಿಲಿಗೆ ತೆರಳುತ್ತಿರುವುದು
ಜನಾಶೀರ್ವಾದ ಯಾತ್ರೆ ಭಾಗವಾಗಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಹಳೆ ಮೈಸೂರು ಭಾಗಕ್ಕೆ ಭೇಟಿ ನೀಡಲಿದ್ದಾರೆ. ಮಂಡ್ಯಕ್ಕೆ ಭೇಟಿ ನೀಡಿ ರೈತ ಮಹಿಳೆಯರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಆಲೆಮನೆ ವೀಕ್ಷಣೆ ಸೇರಿದಂತೆ ಹತ್ತಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಕಾರ್ಯಕರ್ತರ ಜತೆ ಮಹತ್ವದ ಸಭೆ ನಡೆಸಲಿದ್ದಾರೆ.
ಕೇಂದ್ರ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಯ ರಾಜ್ಯ ಮಂತ್ರಿಗಳಾದ ರಾಜೀವ್ ಚಂದ್ರಶೇಖರ್ ಕೂಡ ಜನಾಶೀರ್ವಾದ ಯಾತ್ರೆಯ ಅಂಗವಾಗಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಗೆ ತೆರಳಿಲಿದ್ದಾರೆ. ಇವರಿಗೆ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಸಾಥ್ ನೀಡಲಿದ್ದಾರೆ.
ಇಂಧನ ಮತ್ತು ರಾಸಾಯನಿಕ ರಸಗೊಬ್ಬರ ಖಾತೆಯ ರಾಜ್ಯ ಸಚಿವರಾದ ಭಗಂತ್ ಖೂಬಾ ಅವರು ಯತ್ರೆಯ ಅಂಗವಾಗಿ ಬೀದರ್ಗೆ ತೆರಳಲಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಯಾತ್ರೆಯಲ್ಲಿ ಸಾಹಿತಿಗಳು, ಗಡಿ ಕಾಯುವ ಯೋಧರ ಮನೆ, ಗಣ್ಯ ವ್ಯಕ್ತಿಗಳ ಮನೆ, ಜನಸಂಘ ಮತ್ತು ಬಿಜೆಪಿಯ ಹಿರಿಯ ನಾಯಕರ ಮನೆಗಳಿಗೆ ಭೇಟಿ ಕೊಟ್ಟು ಅವರ ಆಶೀರ್ವಾದ ಪಡೆಯಲಾಗುವುದು. ಕೋವಿಡ್ ನಿಯಮಾವಳಿ ಕಡ್ಡಾಯವಾಗಿ ಪಾಲಿಸಿ ಕಾರ್ಯಕ್ರಮಗಳನ್ನು ಭಾಗಿಯಾಗಲಾಗುವುದು ಎಂದು ತಿಳಿಸಿದ್ದಾರೆ.