ರಾಜ್ಯದಲ್ಲಿ ಕೋಮು ಧ್ರುವೀಕರಣ ರಾಜಕಾರಣ ವಿಪರೀತವಾಗುತ್ತಿದೆ. ಮುಂದಿನ ಬಾರಿ ಚುನಾವಣೆಯಲ್ಲಿ ನೇರ ಮಾರ್ಗದ ಮೂಲಕ ಗೆಲ್ಲಲು ಸಾಧ್ಯವಿಲ್ಲದ ಬಿಜೆಪಿ ಕೋಮು ಆಧಾರದಲ್ಲಿ ಜನರನು ಒಡೆದು ಆಳಲು ಯೋಜನೆ ಹಾಕಿಕೊಂಡಿದೆ ಎಂಬ ವಿಶ್ಲೇಷಣೆಗಳು ಕೇಳ ಬರತೊಡಗಿದೆ. ಅದರಂತೆ, ಮುಸ್ಲಿಮರ ವಿರುದ್ಧ ಹಿಜಾಬ್, ಹಲಾಲ್, ಆಝಾನ್ ಮೊದಲಾದ ವಿಚಾರದಲ್ಲಿ ಹಸ್ತಕ್ಷೇಪ ಮಾಡಿ ಬಹುಸಂಖ್ಯಾತರನ್ನು ತುಷ್ಟೀಕರಣ ಮಾಡುತ್ತಿದೆ.
ಸಂಘಪರಿವಾರದ ಕೆಲವು ಸಂಘಟನೆಗಳು ನೇರವಾಗಿ ಮುಸ್ಲಿಂ ವರ್ತಕರನ್ನು ಬಹಿಷ್ಕರಿಸಿ ತಮ್ಮ ಅಸಹಿಷ್ಣುತೆಯ ಮಟ್ಟವನ್ನು ನಿರೂಪಿಸಿದ್ದಾರೆ. ಆದರೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಿಂದುತ್ವ ಪ್ರೇರಿತ ರಾಜಕಾರಣ ತೀವ್ರವಾಗುತ್ತಿದ್ದರೂ ಶರಣ, ಸೂಫೀ ಸಂತರು ನಡೆದಾಡಿದ ಕರುನಾಡಿನ ನಿಜದ ಭಾವೈಕ್ಯತೆಯನ್ನು ಎತ್ತಿ ಹಿಡಿಯುವ ಘಟನೆಗಳು ಅಲ್ಲಲ್ಲಿ ವರದಿಯಾಗುತ್ತಲೇ ಇದೆ. ಇದು ಅಂತಹದ್ದೇ ಒಂದು ಭಾವೈಕ್ಯತೆ ಸಾರುವ ಅದ್ಭುತ ಗ್ರಾಮದ ಕತೆ.
ಅದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಒಂದು ಪುಟ್ಟ ಗ್ರಾಮ, ಆ ಗ್ರಾಮದ ಹೆಸರು ಇಂಗಾಳಿ. ಇಲ್ಲಿನ ವಿಶೇಷತೆ ಏನೆಂದರೆ ಪಾರಂಪರಿಕವಾಗಿ ನಡೆದು ಬಂದಿರುವ ಸೌಹಾರ್ದದ ಸೆಲೆ. ಈ ಗ್ರಾಮದಲ್ಲಿ ಯುಗಾದಿ ಹಬ್ಬವನ್ನು ಹಿಂದೂ – ಮುಸ್ಲಿಮರು ಒಟ್ಟಿಗೆ ಆಚರಿಸುತ್ತಾರೆ. ಕೃಷ್ಣಾ ನದಿಗೆ ಒಟ್ಟಿಗೆ ಬಾಗೀನ ಅರ್ಪಿಸುತ್ತಾರೆ. ಬಳಿಕ ಹಲಾಲ್ ಮಾಂಸದಿಂದ ತಯಾರಿಸಿದ ವಿವಿಧ ಬಗೆಯ ಬಾಡೂಟವನ್ನು ಒಟ್ಟಿಗೆ ಸೇವಿಸಿ ಹಬ್ಬವನ್ನು ಸಂಭ್ರಮಿಸುತ್ತಾರೆ. ಇದು ಈ ಗ್ರಾಮದಲ್ಲಿ ತಲತಲಾಂತರದಿಂದಲೂ ಬಂದ ಸಂಪ್ರದಾಯವಾಗಿದ್ದು, ಇನ್ನೂ ಮುಂದುವರೆಯುತ್ತದೆ ಎಂದು ಗ್ರಾಮಸ್ಥರು ಹೆಮ್ಮೆ ಪಟ್ಟುಕೊಳ್ಳುತ್ತಾರೆ.
ಬೆಳಗಾವಿ ನಗರದಿಂದ 100 ಕಿಮೀ ದೂರದಲ್ಲಿ ಈ ಗ್ರಾಮವಿದೆ. ಇಲ್ಲಿನ ನಿವಾಸಿಗಳು ಯುಗಾದಿಯನ್ನು ಮಾತ್ರವಲ್ಲ, ಉಭಯ ಧರ್ಮದ ಎಲ್ಲಾ ಹಬ್ಬಗಳನ್ನು ಒಟ್ಟಿಗೆ ಆಚರಿಸುತ್ತಾರೆ. ಎರಡೂ ಧರ್ಮಗಳ ಪ್ರಮುಖ ನಾಯಕರು ಹಬ್ಬಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತಾರೆ.
ವಿಶೇಷವಾಗಿ, ಯುಗಾದಿಯಂದು, ಗ್ರಾಮದ ಪ್ರತಿಯೊಬ್ಬರೂ ಕೃಷ್ಣಾ ನದಿಯಲ್ಲಿ ಸ್ನಾನವನ್ನು ಮಾಡುತ್ತಾರೆ. ಪರಸ್ಪರ ಸಿಹಿತಿಂಡಿಗಳನ್ನು ಹಂಚಿಕೊಂಡು ಮುಂಬರುವ ವರ್ಷವು ಸಮೃದ್ಧಿ ಬರಲೆಂದು ಆಶಿಸುತ್ತಾರೆ. ಈ ಗ್ರಾಮದಲ್ಲಿ 15,000 ಜನಸಂಖ್ಯೆ ಇದೆ. ಅದರಲ್ಲಿ 70 ಕುಟುಂಬಗಳು ಮುಸ್ಲಿಮರದ್ದು.
ಇಲ್ಲಿನ ಮುಸ್ಲಿಂ ಗಣೇಶ ಮಂಡಲ ಫೇಮಸ್. ಇಲ್ಲಿ ಗಣೇಶನ ವಿಗ್ರಹ ಪ್ರತಿಷ್ಟಾಪಿಸಲಾಗುತ್ತದೆ, ಮತ್ತು ಹಬ್ಬದ ಊಟವನ್ನು ಬಡಿಸಲಾಗುತ್ತದೆ. ಈ ಗ್ರಾಮದಲ್ಲಿ ಕೋಮು ಸಂಘರ್ಷ ನಡೆದ ಇತಿಹಾಸವೇ ಇಲ್ಲವೆಂದು ಊರಜನ ಹೆಮ್ಮೆ ಪಟ್ಟುಕೊಳ್ಳುತ್ತಾರೆ.
ಯುಗಾದಿಯ ಒಂದು ದಿನ ಮೊದಲು ಕುಟುಂಬಗಳು ‘ಹೋಳಿಗೆʼ ತಯಾರಿಸುತ್ತದೆ. ಮುಸ್ಲಿಮರು ಸೇರಿದಂತೆ ಕೆಲವರು ಗ್ರಾಮ ದೇವತೆಯಾದ ಬಸವಣ್ಣನನ್ನು ಮೆಚ್ಚಿಸಲು ತಮ್ಮ ಮನೆಯಿಂದ ನದಿಗೆ ‘ಉರುಳು ಸೇವೆʼಮಾಡುತ್ತಾರೆ. ಇದು ತಲೆಮಾರುಗಳಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ, ಇಲ್ಲಿ ಧರ್ಮ ಅಡ್ಡಿಯಲ್ಲ ಎಂದು ಈ ಗ್ರಾಮದ ನಿವಾಸಿ ಮೆಹಬೂಬ್ ದಫೇದಾರ್ ಹೇಳಿದ್ದಾರೆ. ಇಲ್ಲಿನ ಹಿಂದೂಗಳು ಮುಸ್ಲಿಮರ ಹಬ್ಬಗಳಾದ ಮುಹರಂ ಹಾಗೂ ರಮಝಾನ್ ಹಬ್ಬಗಳನ್ನೂ ಆಚರಿಸುತ್ತಾರೆ ಎಂದು ಅವರು ಟೈಮ್ಸ್ ಆಫ್ ಇಂಡಿಯಾದ ಜೊತೆಗೆ ತಿಳಿಸಿದ್ದಾರೆ.
ಅದೇ ರೀತಿ, ಹಲಾಲ್ ಮಾಂಸದ ಬಗ್ಗೆಯೂ ಕರ್ನಾಟಕದ ಬಹುತೇಕ ಪ್ರದೇಶಗಳಂತೆ ಈ ಗ್ರಾಮದಲ್ಲೂ ತಕರಾರುಗಳೇನಿಲ್ಲ. ಯುಗಾದಿ ಹಬ್ಬದ ಬಳಿಕ ಗ್ರಾಮದ ಎಲ್ಲರೂ ಮುಸ್ಲಿಮರು ಮಾಡಿದ ಚಿಕನ್, ಮಟನ್ ಖಾದ್ಯಗಳನ್ನು ಸವಿಯುತ್ತಾರೆ. ನಮಗೆ ಹಲಾಲ್ ಮಾಂಸದೊಂದಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಗ್ರಾಮದ ನಿವಾಸಿ ಮಹೇಶ್ ಶಿಂಗೆ ಹೇಳುತ್ತಾರೆ.
ಇಲ್ಲಿನ ಬಹುತೇಕ ಎಲ್ಲಾ ಮಾಂಸ ವ್ಯಾಪಾರಿಗಳು ಮುಸ್ಲಿಮರು. ನಾವು ಅವರಿಂದ ಮಾಂಸ ಖರೀದಿಸುವುದನ್ನು ಮುಂದುವರೆಸಿದ್ದೇವೆ. ನಮ್ಮಲ್ಲಿ ಸೌಹಾರ್ದದ ಪರಂಪರೆ ಇದೆ, ಅದನ್ನು ಕೆಡಿಸಲು ಬಯಸುವುದಿಲ್ಲ. ಹಿಂದೂಗಳು ರಮ್ಜಾನ್, ಮುಹರಂ ಆಚರಿಸಿದಂತೆ ಮುಸ್ಲಿಮರು ಹಿಂದೂಗಳ ಹಬ್ಬಗಳಾದ ದೀಪಾವಳಿ, ಸಂಕ್ರಾಂತಿ ಹಬ್ಬಗಳನ್ನು ಕುಷಿಯಿಂದ ಆಚರಿಸುತ್ತಾರೆ ಎಂದು ಶಿಂಗೆ ಟೈಮ್ಸ್ ಆಫ್ ಇಂಡಿಯಾ ತಿಳಿಸಿದ್ದಾರೆ.