
ಕಲಬುರಗಿ:ಯಡ್ರಾಮಿ ತಾಲ್ಲೂಕಿನ ಮುತ್ತಕೋಡ ಗ್ರಾಮದಲ್ಲಿ ಈ ಹಿಂದೆ ಕೆರೆ ನಿರ್ಮಿಸಲು ಜಿಲ್ಲಾ ಪಂಚಾಯಿತಿಗೆ ಜಮೀನು ನೀಡಿದ್ದ ವ್ಯಕ್ತಿ ಮತ್ತು ಕೆಲ ಅಧಿಕಾರಿಗಳು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಕೆರೆ ಜಮೀನು ಕಬಳಿಸಲು ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿ ಕಳೆದ 10 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವವರು ಬುಧವಾರ ಕೆಕೆಆರ್ಡಿಬಿ ಅಧ್ಯಕ್ಷ, ಶಾಸಕ ಡಾ.ಅಜಯ್ ಸಿಂಗ್ ಅವರ ಕಾರಿಗೆ ಮುತ್ತಿಗೆ ಹಾಕಿದರು.ಜೇವರ್ಗಿ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನದ ಮುಖಂಡರು ಪ್ರತಿಭಟನೆ ನಡೆಸುತ್ತಿದ್ದಾರೆ.
ಪಟ್ಟಣದ ರಸ್ತೆಯಲ್ಲಿ ಪ್ರತಿಭಟನಾಕಾರರು ಕಾರು ತಡೆಯುತ್ತಿದಂತೆ ಕೆಳಗೆ ಇಳಿದ ಡಾ.ಅಜಯ್ ಸಿಂಗ್, ಅವರ ಮನವಿ ಆಲಿಸಿದರು.ಸಂಘಟನೆಯ ರಾಷ್ಟ್ರೀಯ ಮಂಡಳಿ ಸದಸ್ಯ ಮಹೇಶಕುಮಾರ ರಾಠೋಡ ಮಾತನಾಡಿ, ‘ಮುತ್ತಕೋಡ ಗ್ರಾಮದ ಈ ಜಮೀನನನ್ನು ಸಾರ್ವಜನಿಕ ಕೆರೆಗಾಗಿ ಸಾರ್ವಜನಿಕರ ಸಮಕ್ಷಮದಲ್ಲಿ ಬರೆದು ಕೊಡಲಾಗಿತ್ತು. ಆ ಬಳಿಕ ಜಿ.ಪಂ. ₹10 ಲಕ್ಷ ಅನುದಾನದಲ್ಲಿ ಜಿನುಗು ಕೆರೆ ನಿರ್ಮಿಸಿತ್ತು. ಆ ಬಳಿಕ ಹಲವು ಬಾರಿ ಟೆಂಡರ್ ಕರೆದು ಕಾಮಗಾರಿಗಳನ್ನು ನಡೆಸಲಾಗಿದೆ.
ಆದರೆ, ವಾಸ್ತವದಲ್ಲಿ ಆ ಜಮೀನು ಸರ್ಕಾರದ ಹೆಸರಿಗೆ ನೋಂದಣಿಯೇ ಆಗಿಲ್ಲ’ ಎಂದರು. ‘ಆ ಜಮೀನು ಅನ್ನು ಖಾಸಗಿ ವ್ಯಕ್ತಿಯೊಬ್ಬರು ಕೆಲವು ಅಧಿಕಾರಿಗಳ ನೆರವಿನಿಂದ ತಮ್ಮ ಹೆಸರಿನಲ್ಲೇ ಉಳಿಸಿಕೊಂಡಿದ್ದಾರೆ. ಕೆರೆಯಲ್ಲಿ ಹಲವು ಸರ್ಕಾರಿ ಕಾಮಗಾರಿಗಳು ಸಹ ನಡೆದಿವೆ. ಇದರಲ್ಲಿ ಭಾಗಿಯಾದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.ಹೋರಾಟಗಾರರ ಮನವಿ ಆಲಿಸಿದ ಬಳಿಕ ಶಾಸಕರು, ತಹಶೀಲ್ದಾರ್ ಕಚೇರಿಯಲ್ಲಿ ಸಭೆ ನಡೆಸಿದ್ದಾರೆ. ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ ಎಂದು ವಕೀಲ ಭೀಮಾಶಂಕರ ಮಾಡಿಯಾಳ ತಿಳಿಸಿದ್ದಾರೆ.