ಬೆಂಗಳೂರು: ಬಿಡದಿ ಟೌನ್ಶಿಪ್ ವಿರೋಧಿಸಿ ಜೆಡಿಎಸ್ ಪಾದಯಾತ್ರೆ ನಡೆಸಲು ಉದ್ದೇಶಿಸಿತ್ತು. ಚೆನ್ನಮ್ಮ ದೇವೇಗೌಡರ ನಿಧನದ ಹಿನ್ನೆಲೆಯಲ್ಲಿ ಪಾದಯಾತ್ರೆಯನ್ನು ಮುಂದೂಡಲಾಗಿತ್ತು. ಇದೀಗ ಜೆಡಿಎಸ್ ಹೊಸ ದಿನಾಂಕ ನಿಗದಿಪಡಿಸಿದೆ.

ಈ ಕುರಿತು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ದೋಸ್ತಿ ಪಕ್ಷ ಬಿಜೆಪಿಯನ್ನ ದೂರವಿಟ್ಟು ಪಾದಯಾತ್ರೆ ಮಾಡಲು ಜೆಡಿಎಸ್ ತೀರ್ಮಾನ ಮಾಡಿದೆ. ಆಗಸ್ಟ್ 9, 10 ಮತ್ತು 11 ರಂದು ಪಾದಯಾತ್ರೆ ನಡೆಯಲಿದೆ.

ಆಗಸ್ಟ್ 9ರಂದು ಭೈರಮಂಗಲದಿಂದ ಪಾದಯಾತ್ರೆ ಶುರುವಾಗಲಿದೆ. ಆಗಸ್ಟ್ 11 ರಂದು ಫ್ರೀಡಂ ಪಾರ್ಕ್ಗೆ ಪಾದಯಾತ್ರೆ ತಲುಪಲಿದೆ. ಅಂದೇ ಬೃಹತ್ ಸಮಾವೇಶ ಕೂಡ ಜೆಡಿಎಸ್ ಏರ್ಪಡಿಸಿದೆ. ಪಾದಯಾತ್ರೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ. ಇದು ಮೂರು ದಿನಗಳ ಪಾದಯಾತ್ರೆ. ಇದರಲ್ಲಿ ಒಂದು ದಿನ ಮಾಜಿ ಪ್ರಧಾನಿ ದೇವೇಗೌಡರು ಕೂಡ ಭಾಗಿಯಾಗಲಿದ್ದಾರೆ. ಪಾದಯಾತ್ರೆ ಮುಗಿದ ಬಳಿಕ ಜೆಡಿಎಸ್ ಆಗಸ್ಟ್ 14ರಂದು ವಿಧಾನಸೌಧ ಚಲೋ ನಡೆಸಲಿದೆ. ಫ್ರೀಡಂ ಪಾರ್ಕ್ನಿಂದ ವಿಧಾನಸೌಧಕ್ಕೆ ವಿಧಾನಸೌಧ ಚಲೋ ನಡೆಯಲಿದೆ ಎಂದು ಜೆಡಿಎಸ್ ಹೇಳಿದೆ.







