ಜನಶಕ್ತಿ ಮುಂದೆ ಯಾವುದೇ ರಾಜ್ಯ ಅಥವಾ ಅಧಿಕಾರದ ಶಕ್ತಿ ನಡೆಯಲ್ಲ. ನಿಮ್ಮ ದ್ವೇಷದ ರಾಜಕಾರಣ ವಿರುದ್ಧ ಜನರು ಎದ್ದೇ ಏಳುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
೭೫ನೇ ಜನ್ಮದಿನಾಚರಣೆ ಅಂಗವಾಗಿ ದಾವಣಗೆರೆಯಲ್ಲಿ ಬುಧವಾರ ನಡೆದ ತಮ್ಮ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ಒಂದು ಚಿನ್ಹೆ, ಒಂದು ಚಿಂತನೆ, ಒಂದು ಭಾಷೆ ಚಿಂತನೆ ಮೂಲಕ ದೇಶದಲ್ಲಿ ಸರ್ವಾಧಿಕಾರ ಹೇರಲು ಬಿಜೆಪಿ ಪ್ರಯತ್ನಿಸುತ್ತಿದೆ. ಇದೇ ಸಿದ್ಧಾಂತವನ್ನು ಹಿಟ್ಲರ್ ನಂಬಿಕೊಂಡಿದ್ದ. ಇದರ ವಿರುದ್ಧ ಜನರು ಎಚ್ಚೆತ್ತುಕೊಳ್ಳುವ ಕಾಲ ಬಂದಿದೆ ಎಂದರು.
ನಮ್ಮ ಆಡಳಿತದಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟಿನ್, ಪಶುಭಾಗ್ಯ, ಮಾತೃಭಾಗ್ಯ ಮುಂತಾದ ಯೋಜನೆಗಳನ್ನು ಕೊಟ್ಟೆವು. ಆದರೆ ಬೊಮ್ಮಾಯಿ ಅವರೇ ನೀವೇನು ಕೊಟ್ಟಿದ್ದೀರಿ? ನಾವು ಬೆಳೆ ಹಾನಿಗೆ ೧೮೦೦ ಕೋಟಿ ಕೊಟ್ಟೆವು. ನೀವು ಮಳೆಯಿಂದ ಹಾನಿಯಾದ ರಸ್ತೆ, ಸೇತುವೆ ರಿಪೇರಿಗೆ ದುಡ್ಡು ಕೊಡಲು ಆಗುತ್ತಿಲ್ಲ ಎಂದು ಕುಟುಕಿದರು.
ನೀವು ರಾಜ್ಯದ ಮುಖ್ಯಮಂತ್ರಿಯೋ ಅಥವಾ ಒಂದು ವರ್ಗದ ಮುಖ್ಯಮಂತ್ರಿಯೋ? ನೀವು ರಾಜ್ಯದ ಮುಖ್ಯಮಂತ್ರಿ ಆಗೋಕೆ ನಾಯಕ್ಕಾ? ಎಲ್ಲರ ಸಿಎಂ ಆಗಲು ಆಗದೇ ಇದ್ದರೆ ರಾಜೀನಾಮೆ ಕೊಟ್ಟು ಹೋಗಿ. ಕರಾವಳಿಯಲ್ಲಿ ಕೊಲೆಗಳು ನಡೆಯುತ್ತಿವೆ. ಪ್ರವೀಣ್ ಕುಟುಂಬದವರನ್ನು ಭೇಟಿ ಮಾಡಿ ಪರಿಹಾರ ಕೊಡುತ್ತೀರಿ. ಇದಕ್ಕೆ ನಾವು ಬೇಡ ಅನ್ನಲ್ಲ. ಕೊಡಬೇಕು. ಆದರೆ ಫಾಜಿಲ್ ಮತ್ತು ಮಸೂದ್ ಮನೆಗೆ ಯಾಕೆ ಭೇಟಿ ಕೊಟ್ಟಿಲ್ಲ? ಯಾಕೆ ಅವರಿಗೆ ಪರೀಹಾರ ಕೊಟ್ಟಿಲ್ಲ ಎಂದು ಪ್ರಶ್ನಿಸಿದರು.
ಪ್ರಧಾನಿ ಮೋದಿ ನಾ ಕಾವೂಂಗಾ, ನಾ ಕಾನೇ ದುಂಗಾ ಎಂದು ಹೇಳುತ್ತಾರೆ. ಆದರೆ ಬಿಜೆಪಿಯವರದ್ದು ೪೦ ಪರ್ಸೆಂಟ್ ಕಮಿಷನ್ ಸರಕಾರ. ಕಮಿಷನ್ ಇಲ್ಲದೇ ಕೆಲಸನೇ ಆಗಲ್ಲ. ರಾಜ್ಯ ಸರಕಾರ ತನ್ನ ಮಿತಿ ಮೀರಿ ಸಾಲ ಮಾಡಿದೆ. ಕೇಂದ್ರದಲ್ಲೂ ಮೋದಿ ಸರಕಾರ ಕೂಡ ಸಾಲ ಮಾಡಿ ದೇಶ ಹರಾಜು ಹಾಕುತ್ತಿದೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.