ಕೋವಿಡ್ ನಿಯಂತ್ರಣ ಹಿನ್ನೆಲೆ, ಲಾಕ್ಡೌನ್ನಿಂದಾಗಿ ವಿವಿಧ ಬೆಳೆಗಳನ್ನು ಬೆಳೆದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಹಣ್ಣು, ಹೂ, ತರಕಾರಿ ಹೊಲದಲ್ಲಿಯೇ ಕೊಳೆತು ಹೋಗುತ್ತಿದ್ದು, ರೈತ ಆರ್ಥಿಕವಾಗಿ ಸಮಸ್ಯೆಗೆ ಸಿಲುಕಿದ್ದಾನೆ. ಸೂಕ್ತ ಬೆಲೆ ಸಿಗದೆ ನೊಂದ ರೈತರು ಹಣ್ಣು-ತರಕಾರಿ, ಹೂವುಗಳನ್ನು ರಸ್ತೆಯಲ್ಲಿ ಚೆಲ್ಲಿದ ಘಟನೆಗಳು ಹಲವೆಡೆ ನಡೆದಿದೆ. ಮಲೆನಾಡಿನಲ್ಲಿ ಕಲ್ಲಂಗಡಿ ಬೆಳೆದ ರೈತರೊಬ್ಬರು ಬೆಳೆದ ಬೆಳೆಗೆ ಬೆಲೆಯಿಲ್ಲದೆ ನಷ್ಟವಾಯಿತಲ್ಲಾ ಎಂದು, ಕೈಚೆಲ್ಲಿ ಕುಳಿತುಕೊಳ್ಳದೆ ಅದರಿಂದ ಬೆಲ್ಲ ತಯಾರಿಸಿ ರಾಜ್ಯದ ಜನತೆಯ ಗಮನ ಸೆಳೆದಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಿಟ್ಟೂರಿನ ಜಯರಾಮ್ ಶೆಟ್ಟಿ ಎಂಬುವವರು 8 ಎಕರೆ ಜಮೀನಿನಲ್ಲಿ ಕಲ್ಲಂಗಡಿ ಬೆಳೆದಿದ್ದರು. ಲಾಕ್ಡೌನ್ನಿಂದಾಗಿ ಬೇಡಿಕೆ ಇಲ್ಲದಂತಾಗಿದೆ. ಅರ್ಧ ದುಡ್ಡಿಗೆ ಮಾರಾಟ ಮಾಡುವ ಪರಿಸ್ಥಿತಿ ಎದುರಾಗಿದೆ. ಕೆಲವೊಮ್ಮೆ ಅದು ಸಿಗದೆ ಜಮೀನಿನಲ್ಲಿಯೇ ಕೊಳೆತು ಹೋದ ಊದಾಹರಣೆಗಳು ಹೆಚ್ಚಿದೆ. ಸರಿಯಾದ ಬೆಲೆಯಿಲ್ಲ ಎಂದು ಜಯರಾಮ್ ಶೆಟ್ಟಿ ಕೈ ಚೆಲ್ಲಿ ಕುಳಿತುಕೊಳ್ಳದೆ ಕಬ್ಬಿನಿಂದ ಸಾಂಪ್ರದಾಯಿಕವಾಗಿ ಹೇಗೆ ಬೆಲ್ಲ ತೆಗೆಯುತ್ತಾರೆಯೋ ಹಾಗೆಯೇ ಕಲ್ಲಂಗಡಿ ಹಣ್ಣಿನಿಂದಲೂ ಜಯರಾಮ್ ಶೆಟ್ಟಿ ಬೆಲ್ಲ ತಯಾರಿಸಿದ್ದಾರೆ.
ಮುಂಬೈಯಲ್ಲಿ ಕಳೆದ 30 ವರ್ಷಗಳಿಂದ ಜಯರಾಮ ಶೆಟ್ಟಿ ಹೊಟೇಲ್ ಉದ್ಯಮ ನಡೆಸುತ್ತಿದ್ದರು.ಕರೋನಾ ಕಾರಣದಿಂದಾಗಿ ಕಳೆದ ವರ್ಷ ಲಾಕ್ಡೌನ್ ವೇಳೆ ತಮ್ಮ ಸ್ವಂತ ಊರಿಗೆ ಹಿಂದುರುಗಿದ್ದಾರೆ. ನಿಟ್ಟೂರಿನಲ್ಲಿ ಹೋಟೆಲ್ ನಡೆಸುವುದರ ಜೊತೆಗೆ ಜಮೀನಿನಲ್ಲಿ ಬೆಳೆ ಬೆಳೆಯಲು ಆರಂಭಿಸಿದ್ದು, ಇದೀಗ ನೂತನ ಆವಿಷ್ಕಾರ ಮಾಡಿರುವ ಜಯರಾಮ ಶೆಟ್ಟಿ ಕಲ್ಲಂಗಡಿ ಹಣ್ಣಿನಿಂದ ಬೆಲ್ಲ ತಯಾರಿಸಿ ರೈತ ಸಮುದಾಯಕ್ಕೆ ಸಿಹಿ ಸುದ್ದಿ ಕೊಟ್ಟಿದ್ದಾರೆ.
ಬೆಲ್ಲ ತಯಾರಿಸಿದ ವಿಧಾನ: ಕಲ್ಲಂಗಡಿ ಹಣ್ಣಿನ ಸಿಪ್ಪೆ ತೆಗೆದು, 700 ಲೀಟರ್ನಷ್ಟು ಜ್ಯೂಸ್ ತಯಾರಿಸಿ ಅದನ್ನು ಎರಡು ಬಾರಿ ಫಿಲ್ಟರ್ ಮಾಡಿ 4-5 ಗಂಟೆ ಚೆನ್ನಾಗಿ ಕುದಿಸಬೇಕು. ನಂತರ ನೀರಿನ ಅಂಶ ಸಂಪೂರ್ಣವಾಗಿ ಆವಿಯಾಗಿ ಬೆಲ್ಲದ ಪಾಕ ಮಾತ್ರಾ ಉಳಿಯುತ್ತದೆ. ಅದರ ಅದ ನೋಡಿ ಇಳಿಸಿದರೆ ಬೆಲ್ಲ ತಯಾರಾಗುತ್ತದೆ. ರುಚಿ, ಬಣ್ಣದಲ್ಲಿ ಕಬ್ಬಿನ ಬೆಲ್ಲಕ್ಕೂ ಕಲ್ಲಂಗಡಿಯ ಬೆಲ್ಲಕ್ಕೂ ವ್ಯತ್ಯಾಸವಿಲ್ಲ ಎಂಬುವುದು ಹೊಸ ಆವಿಷ್ಕಾರ ಮಾಡಿದ ಜಯರಾಮ ಶೆಟ್ಟಿ ಮಾತು. ಈಗ 250 ಕೆಜಿ ಬೆಲ್ಲದ ದಾಸ್ತಾನು ಇದೆ. ಆದರೆ ಅದು ಎಷ್ಟು ಸಮಯ ಉಳಿಯಬಹುದು ಎಂಬ ಬಗ್ಗೆ ಖಾತ್ರಿಯಿಲ್ಲ, ಇದನ್ನು ಹೆಚ್ಚು ಸಮಯ ಇಟ್ಟುಕೊಳ್ಳಲು ಬಯಸಿದರೆ, ರೆಫ್ರಿಜರೇಟರ್ನಲ್ಲಿ ಸಂಗ್ರಹಿಸಬಹುದು. ಕಲ್ಲಂಗಡಿಯಿಂದ ಬೆಲ್ಲ ತಯಾರಿಸಿದ ಪ್ರಕ್ರಿಯೆ ಕುರಿತು ಸರ್ಕಾರ ಸಂಶೋಧನೆ ನಡೆಸಿ ವಾಣಿಜ್ಯೀಕರಣವಾಗಿ ಯಶಸ್ವಿಗೊಳಿಸಬೇಕು, ಹೀಗೆ ಮಾಡುವುದರಿಂದ ರೈತರಿಗೆ ಅನುಕೂಲವಾಗಬಹುದು ಎಂದು ಜಯರಾಮ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.