ಯಾವುದೇ ದೇಶದ ಸಾಮಾಜಿಕಾರ್ಥಿಕ ಬೆಳವಣಿಗೆಯ ಪ್ರಕ್ರಿಯೆಯಲ್ಲಿ ಆಡಳಿತ ವ್ಯವಸ್ಥೆಯು ಸೃಷ್ಟಿಸುವ ತಾರತಮ್ಯಗಳು ಜನಸಾಮಾನ್ಯರ ನಡುವೆ ಅಸಮಾಧಾನದ ಕಿಡಿಯನ್ನು ಸೃಷ್ಟಿಸುತ್ತಲೇ ಇರುತ್ತವೆ. ಪ್ರಭುತ್ವದ ಲಕ್ಷಣ ಮತ್ತು ಚೌಕಟ್ಟು ಯಾವುದೇ ಸೈದ್ಧಾಂತಿಕ ನೆಲೆಗಳಲ್ಲಿ ಸ್ಥಾಪಿತವಾಗಿದ್ದರೂ, ತಳಮಟ್ಟದಲ್ಲಿ ಪ್ರಜೆಗಳ ಜೀವನ ಮತ್ತು ಜೀವನೋಪಾಯಕ್ಕಾಗಿ ಪ್ರಭುತ್ವ ಅನುಸರಿಸುವ ಆರ್ಥಿಕ ನೀತಿಗಳನ್ನೇ ಅವಲಂಬಿಸುವ ಜನರು ನೆಮ್ಮದಿಯ ಬದುಕಿಗಾಗಿ ಅತ್ಯವಶ್ಯವಾದ ಕನಿಷ್ಟ ಸೌಕರ್ಯಗಳಿಗಾಗಿ ಸದಾ ಹಂಬಲಿಸುತ್ತಿರುತ್ತಾರೆ. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಬಂಡವಾಳದ ಹರಿವು ಮತ್ತು ಹಣಕಾಸಿನ ನಿರ್ವಹಣೆ ಎರಡನ್ನೂ ಮಾರುಕಟ್ಟೆಯೇ ನಿರ್ವಹಿಸುವುದರಿಂದ ತಳಮಟ್ಟದಲ್ಲಿ ತಮ್ಮ ಬದುಕು ಸವೆಸುವ ಶ್ರಮಿಕ ವರ್ಗ ಸದಾ ಪರಾವಲಂಬಿಗಳಾಗಿಯೇ ಬದುಕಬೇಕಾಗುತ್ತದೆ. ಉತ್ಪಾದನೆಯ ಮೂಲ ಮತ್ತು ಉತ್ಪಾದನಾ ಸಾಧನಗಳ ಮೇಲೆ ಪೂರ್ಣ ನಿಯಂತ್ರಣ ಸಾಧಿಸುವ ಮಾರುಕಟ್ಟೆ ಶಕ್ತಿಗಳು ಪ್ರಭುತ್ವದ ಆಡಳಿತ ನೀತಿಗಳ ಬೆಂಬಲದೊಂದಿಗೆ ಶ್ರಮಿಕರ ಬದುಕಿನ ಮೇಲೆ ಸಹ ನಿಯಂತ್ರಣ ಸಾಧಿಸುತ್ತವೆ.
ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯಲ್ಲಿ ಸಹಜವಾಗಿಯೇ ಹೆಚ್ಚಾಗುತ್ತಲೇ ಹೋಗುವ ಬಡವ-ಶ್ರೀಮಂತರ ನಡುವಿನ ಅಂತರ ಮತ್ತು ಸಮಾಜದ ಕಟ್ಟಕಡೆಯ ವರ್ಗ ಅನುಭವಿಸುವ ಅಪಮಾನ ಹಾಗೂ ತಾರತಮ್ಯಗಳು ಸಮಾಜದ ಹಿತವಲಯದಲ್ಲಿರುವವರಿಗೆ ಕೆಲವೊಮ್ಮೆ ಅಪ್ಯಾಯಮಾನವಾದರೆ ಇನ್ನು ಕೆಲವು ಸಂದರ್ಭಗಳಲ್ಲಿ ಅಪ್ರಸ್ತುತ ಎನಿಸಿಬಿಡುತ್ತದೆ. ತಮ್ಮ ಸಹಜೀವಿಗಳೊಂದಿಗೆ ಸಮಾನ ಬದುಕು ಸಾಗಿಸಬೇಕು ಎನ್ನುವ ಉದಾತ್ತ ಮನೋಭಾವ ಮನುಕುಲ ಇತಿಹಾಸದ ಯಾವುದೇ ಕಾಲಘಟ್ಟದಲ್ಲೂ ಕಂಡುಬಂದಿಲ್ಲ. ಸಾಮಾಜಿಕಾರ್ಥಿಕ ಸಮಾನತೆಯನ್ನು ಸಾಪೇಕ್ಷವಾಗಿ ನೋಡುವ ಒಂದು ವರ್ಗ (ಮಧ್ಯಮ ವರ್ಗಗಳು) ತನ್ನ ಸ್ವಂತ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಯತ್ನಿಸಿದರೆ, ಮತ್ತೊಂದು ವರ್ಗ (ಶ್ರೀಮಂತ ವರ್ಗಗಳು) ಸಾಮಾಜಿಕ ತರತಮಗಳ ಮೂಲವನ್ನು ನೈಸರ್ಗಿಕ ಅಥವಾ ಅತೀತ ಶಕ್ತಿಗಳ ನೆಲೆಯಲ್ಲಿ ಕಾಣುವ ಮೂಲಕ, ತನ್ನದೇ ಆದ ಗೂಡಿನಲ್ಲಿ ಹುದುಗಿಕೊಳ್ಳುತ್ತದೆ.
ಆದರೆ ಯಾವುದೇ ಭೌಗೋಳಿಕ ದೇಶದ ಪ್ರಗತಿ ಮತ್ತು ಅಭಿವೃದ್ಧಿಯ ಮೂಲ ಇರುವುದು ಈ ತಳಮಟ್ಟದಲ್ಲಿರುವ ಜನಸಮುದಾಯಗಳ ಶ್ರಮದಲ್ಲಿ ಮತ್ತು ಅವರ ಬೇಕು ಬೇಡಗಳಲ್ಲಿ. ಶ್ರಮಿಕ ಜಗತ್ತಿನ ಬದುಕನ್ನು ಹಸನುಗೊಳಿಸುವ ಮೂಲಕ ಆರ್ಥಿಕ ಪ್ರಗತಿ ಸಾಧಿಸುವ ಉದಾತ್ತತೆ ಬಂಡವಾಳ ವ್ಯವಸ್ಥೆಯಲ್ಲಿ ಕಂಡುಬರುವುದಿಲ್ಲ. ಸಂಪನ್ಮೂಲಗಳ ಸಮಾನ ಹಂಚಿಕೆ ಮತ್ತು ಉತ್ಪಾದಿತ ಸಂಪತ್ತಿನ ಸಮಾನ ವಿತರಣೆ ಇರುವುದಿಲ್ಲವಾದ್ದರಿಂದ ಸಮಾಜದ ತಳಮಟ್ಟದಿಂದಲೇ ಅಸಮಾನತೆ ಮತ್ತು ತಾರತಮ್ಯಗಳು ಸೃಷ್ಟಿಯಾಗುತ್ತವೆ. ಸಮಾಜದ ಲಂಬಗತಿಯ ಬೆಳವಣಿಗೆ ಮತ್ತು ಒಂದು ವರ್ಗದ ಮೇಲ್ ಚಲನೆಯೊಂದಿಗೇ ಸಮತಲ ನೆಲೆಯಲ್ಲಿ ವಿಸ್ತರಿಸುವ ಶೋಷಿತ ಸಮುದಾಯಗಳ ನಡುವೆ ತಾರತಮ್ಯಗಳ ಗೋಡೆಗಳನ್ನು ನಿರ್ಮಿಸುತ್ತಲೇ ಹೋಗುವುದು ಬಂಡವಾಳಶಾಹಿ ಸಮಾಜದ ಮೂಲ ಲಕ್ಷಣವೂ ಆಗಿರುತ್ತದೆ. ಇಂತಹ ಒಂದು ಅಸಮಾನತೆಯುಳ್ಳ ಸಮಾಜವನ್ನು ನಿರ್ವಹಿಸುವ ಆಡಳಿತ ವ್ಯವಸ್ಥೆ ಮತ್ತು ಅದನ್ನು ಪ್ರತಿನಿಧಿಸುವ ಆಡಳಿತಾರೂಢ ರಾಜಕೀಯ ಪಕ್ಷಗಳಲ್ಲಿ ಮನುಜ ಸೂಕ್ಷ್ಮತೆ ಮತ್ತು ಸಂವೇದನೆ ಇಲ್ಲವಾದಾಗ ಸಹಜವಾಗಿಯೇ ಅವಕಾಶವಂಚಿತ ಜನಸಮುದಾಯಗಳಲ್ಲಿನ ಅತೃಪ್ತಿ ಮತ್ತು ಅಸಮಾಧಾನಗಳು ಗುಪ್ತಗಾಮಿನಿಯಂತೆ ಹರಿಯುತ್ತಲೇ ಇರುತ್ತವೆ. ಈ ಜನಸಮೂಹಕ್ಕೆ ಸಾಂತ್ವನ ಹೇಳುವ ಸಂಯಮ, ಸೌಜನ್ಯ, ಸಂವೇದನೆ ಮತ್ತು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವುದು ರಾಜಕೀಯ ಪಕ್ಷಗಳಿಗೆ ಅನಿವಾರ್ಯವಾಗುತ್ತದೆ.
ಭಾರತೀಯ ಸಮಾಜದ ದುರಂತ ಎಂದರೆ ಬಂಡವಾಳಶಾಹಿಯನ್ನು ಪೋಷಿಸುತ್ತಲೇ ಸಮ ಸಮಾಜದ ಕನಸಿನ ಕೋಟೆಗಳನ್ನು ಕಟ್ಟುವ ಬಂಡವಳಿಗ (ಬೂರ್ಷ್ವಾ) ರಾಜಕೀಯ ಪಕ್ಷಗಳಲ್ಲಿ ಈ ಯಾವುದೇ ಮೌಲ್ಯಗಳನ್ನು ಕಾಣಲಾಗುವುದಿಲ್ಲ. ಬಹುಸಂಖ್ಯಾತ ಜನತೆಯ ಜೀವನ ಮತ್ತು ಜೀವನೋಪಾಯದ ಮಾರ್ಗಗಳಲ್ಲಿ ಎದುರಾಗುವ ತೊಡಕುಗಳನ್ನು ನಿವಾರಿಸಲು ಆಡಳಿತಾರೂಢ ಪಕ್ಷಗಳು ಜಾರಿಗೊಳಿಸುವ ಆಡಳಿತ ನೀತಿಗಳು ಅಸಮಾನತೆ ಮತ್ತು ಶೋಷಣೆಯ ನೈಜ ನೆಲೆಗಳನ್ನು ಜನಸಾಮಾನ್ಯರಿಂದ ಮರೆಮಾಚುತ್ತಲೇ ಇರುತ್ತವೆ. ತಾವು ಎದುರಿಸುತ್ತಿರುವ ಬಡತನ ಮತ್ತು ಅನಕ್ಷರತೆಯ ಕಾರಣಗಳನ್ನು ಜನರು ಆಡಳಿತ ವ್ಯವಸ್ಥೆಯ ಕಾರ್ಯವೈಖರಿ ಮತ್ತು ನೀತಿ ನಿರೂಪಣೆಗಳಲ್ಲಿ ಕಾಣದೆ, ತಮ್ಮ ಸುತ್ತಲಿನ ಸಾಮಾಜಿಕ-ಸಾಂಸ್ಕೃತಿಕ ನೆಲೆಗಳಲ್ಲಿ ಗುರುತಿಸದೆ, ಮತ್ತಾವುದೋ ಅತೀತ ನೆಲೆಯಲ್ಲಿ ಅಥವಾ ಅನ್ಯ ಜಾತಿ-ಮತ-ಪ್ರಾದೇಶಿಕ ಅಸ್ಮಿತೆಗಳ ನೆಲೆಯಲ್ಲಿ ಕಾಣತೊಡಗುತ್ತಾರೆ. ಈ ಭ್ರಮೆಯನ್ನು ಸೃಷ್ಟಿಸುವಲ್ಲಿ ಬಂಡವಾಳ ಮತ್ತು ಮಾರುಕಟ್ಟೆಯಷ್ಟೇ ಪರಿಣಾಮಕಾರಿಯಾಗಿ ಭಾರತದ ಶ್ರೇಣೀಕೃತ ಜಾತಿವ್ಯವಸ್ಥೆಯ ಸಾಂಸ್ಕೃತಿಕ ಆಧಿಪತ್ಯವೂ ಯಶಸ್ವಿಯಾಗಿರುವುದು ನಿರ್ವಿವಾದ ಸಂಗತಿ.
ನಾಳೆಯ ಕನಸುಗಳೊಂದಿಗೆ ವಿಕಸನ ಹೊಂದುವ ಯುವ ಪೀಳಿಗೆ ಎಷ್ಟೇ ಭ್ರಮಾಧೀನವಾಗಿದ್ದರೂ ತನ್ನ ನಿರೀಕ್ಷೆಗಳು ಕೈಗೂಡುವುದಿಲ್ಲ ಎಂದು ಅರಿವಾದಾಗ ಮಡುಗಟ್ಟಿದ ಹತಾಶೆ ಆಕ್ರೋಶವಾಗಿ ಪರಿವರ್ತನೆಯಾಗುತ್ತದೆ. ಈ ಹತಾಶೆಯನ್ನು ಅದುಮಿಡಲೆಂದೇ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಕಲ್ಯಾಣ ರಾಜ್ಯದ ಪರಿಕಲ್ಪನೆಯ ಆಡಳಿತ ನೀತಿಗಳು ಸದಾ ಜಾರಿಯಲ್ಲಿರುತ್ತವೆ. ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ಜೀವನೋಪಾಯದ ನೆಲೆಗಳಲ್ಲಿ ಜನಸಾಮಾನ್ಯರಲ್ಲಿ ಸಹಜವಾಗಿಯೇ ಸ್ಫೋಟಿಸಬಹುದಾದ ಅಸಂತೃಪ್ತಿಯನ್ನು ತಣಿಸಲೆಂದೇ ಸಾಮಾಜಿಕ ನ್ಯಾಯದ ಅಲಂಕಾರಿಕ ಯೋಜನೆಗಳನ್ನು ಜಾರಿಗೊಳಿಸಲಾಗುತ್ತದೆ. ಭಾರತದ ಸಂದರ್ಭದಲ್ಲಿ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಸಾಂವಿಧಾನಿಕ ಸವಲತ್ತು ಮತ್ತು ಸೌಲಭ್ಯಗಳೂ ಸಹ ಇದರ ಒಂದು ಆಯಾಮ ಎನ್ನಬಹುದು. ಈ ಸವಲತ್ತು, ಸೌಲಭ್ಯಗಳು ಸಾಂವಿಧಾನಿಕವಾಗಿ ಲಭ್ಯವಾಗುತ್ತಿರುವಾಗಲೇ, ಇವುಗಳಿಂದ ವಂಚಿತರಾಗುತ್ತಿರುವ ಜನಸಮೂಹಗಳ ಸಂಖ್ಯೆ ಹೆಚ್ಚಾಗುತ್ತಲೇ ಇದ್ದರೂ, ಇದರ ವಿರುದ್ಧ ಜನಾಕ್ರೋಶ ಕಂಡುಬರುವುದಿಲ್ಲ. ಒಂದೆಡೆ ಸಂಪನ್ಮೂಲಗಳ ಸಮಾನ ವಿತರಣೆಯಾಗದೆ ಮತ್ತೊಂದೆಡೆ ಸಂಪತ್ತಿನ ಏಕಮುಖೀ ಕ್ರೋಢೀಕರಣ ಹೆಚ್ಚಾಗುತ್ತಿರುವುದರಿಂದ ಸಮಾನತೆಯ ಸಾಂವಿಧಾನಿಕ ಆಶಯಗಳು ಕೈಗೂಡುವುದಿಲ್ಲ ಎಂಬ ಆಲೋಚನೆಯೂ ಜನಮಾನಸದಲ್ಲಿ ಮೂಡದಂತೆ ಜಾತೀಯ ಮತೀಯ ಭಾಷಿಕ ಮತ್ತು ಪ್ರಾದೇಶಿಕ ಅಸ್ಮಿತೆಗಳ ಸುತ್ತ ಗೋಡೆಗಳನ್ನು ನಿರ್ಮಿಸಲಾಗುತ್ತದೆ.
ಈ ಪ್ರವೃತ್ತಿ ಆಳವಾಗಿ ಬೇರೂರುವಂತೆ ಮಾಡಲು ಅಸ್ಮಿತೆ ಆಧಾರಿತ ರಾಜಕಾರಣ ನೆರವಾಗುತ್ತದೆ. ಈ ರಾಜಕೀಯ ಪರಂಪರೆಯಲ್ಲಿ ಪೋಷಿಸಲಾಗುವ ಯುವ ಮನಸುಗಳು ನಿರ್ದಿಷ್ಟ ಅಸ್ಮಿತೆಗಳಲ್ಲೇ ಬಂಧಿಯಾಗಿರುತ್ತವೆ. ರಾಜಕೀಯ ಪಕ್ಷಗಳು ಸಾಮಾಜಿಕ ಸಂವೇದನೆ ಮತ್ತು ಮನುಜ ಸೂಕ್ಷ್ಮತೆಗಳನ್ನು ಕಳೆದುಕೊಂಡಾಗ ಈ ಪಕ್ಷಗಳನ್ನು ಹಿಂಬಾಲಿಸುವ ಜನಸ್ತೋಮವೂ ಭ್ರಮಾಧೀನತೆಗೊಳಗಾಗಿ ಸ್ವಂತಿಕೆಯನ್ನು ಕಳೆದುಕೊಳ್ಳುತ್ತದೆ. 1990ರ ನಂತರದ ಜಾಗತೀಕರಣದ ಸಂದರ್ಭದಲ್ಲಿ ಮತ್ತು 2014ರ ನಂತರದ ಹಿಂದುತ್ವ ರಾಜಕಾರಣದಲ್ಲಿ ಇದನ್ನು ಕಾಣುತ್ತಿದ್ದೇವೆ. ಸಾಮಾಜಿಕ-ಸಾಂಸ್ಕೃತಿಕ ಪಲ್ಲಟಗಳಿಗೆ ಸ್ಪಂದಿಸಲೇಬೇಕಾದ ಮನಸುಗಳು ಇಡೀ ಸಮಾಜವನ್ನು ಕಾಡುವ ಜ್ವಲಂತ ಸಮಸ್ಯೆಗಳನ್ನೂ ಸಾಪೇಕ್ಷ ನೆಲೆಯಲ್ಲೇ ಪರಿಭಾವಿಸುವ ಮೂಲಕ ಕೇವಲ ಭಾವನಾತ್ಮಕ ಪ್ರತಿಕ್ರಿಯೆಗೆ ಸೀಮಿತವಾಗುತ್ತವೆ. ಹಾಗಾಗಿಯೇ ಕಳೆದ 30 ವರ್ಷಗಳ ಸಮಕಾಲೀನ ಇತಿಹಾಸವನ್ನು ಕೆದಕಿ ನೋಡಿದಾಗ ಭಾರತೀಯ ಸಮಾಜದಲ್ಲಿನ ಪಲ್ಲಟಗಳಿಗೆ, ತಲ್ಲಣಗಳಿಗೆ ಕೇವಲ ಭಾವನಾತ್ಮಕ ಜನಸ್ಪಂದನೆಯನ್ನು ಮಾತ್ರ ಗುರುತಿಸಬಹುದು.
ಜಾತಿ ಮತ್ತು ಧರ್ಮಗಳ ಸುತ್ತ ಹೆಣೆಯಲಾಗುವ ಭಾವನಾತ್ಮಕ ಸನ್ನಿವೇಶಗಳು ಮತ್ತು ಅಲ್ಲಿ ಸೃಷ್ಟಿಯಾಗುವ ಪಲ್ಲಟಗಳು ಸುಶಿಕ್ಷಿತ ಯುವ ಸಮುದಾಯಗಳಲ್ಲೂ ತೀಕ್ಷ್ಣವಾದ ಪ್ರತಿಸ್ಪಂದನೆಯನ್ನು ಸೃಷ್ಟಿಸುತ್ತವೆ. ಆದರೆ ಇದೇ ಅಸ್ಮಿತೆಗಳ ನೆಲೆಯಲ್ಲೇ ತಳಮಟ್ಟದಲ್ಲಿ ಅವಕಾಶವಂಚಿತ ಜನಸಮುದಾಯಗಳನ್ನು ಕಾಡುವ ಅನಕ್ಷರತೆ, ಬಡತನ, ದಾರಿದ್ರ್ಯ, ಅನೈರ್ಮಲ್ಯ, ಅಪೌಷ್ಟಿಕತೆ, ಅಸ್ಪೃಶ್ಯತೆ ಮತ್ತು ಜೀವ ವಿರೋಧಿ ವಿದ್ಯಮಾನಗಳು ನೇಪಥ್ಯಕ್ಕೆ ಸರಿದುಬಿಡುತ್ತವೆ. ಇಡೀ ಸಮಾಜದ ಅಥವಾ ಸಮುದಾಯದ ಭವಿಷ್ಯವನ್ನೇ ಮಸುಕಾಗಿಸುವ, ಅಸಂಖ್ಯಾತ ಜನರನ್ನು ಅಂಧಕಾರದ ಕೂಪಕ್ಕೆ ದೂಡುವ ಈ ಜ್ವಲಂತ ಸಮಸ್ಯೆಗಳು ಮುನ್ನೆಲೆಗೆ ಬಾರದಂತೆ ಎಚ್ಚರ ವಹಿಸುವ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು, ಆರ್ಥಿಕ ಸಮಸ್ಯೆಗಳನ್ನು ಸಾಂಸ್ಕೃತಿಕ ನೆಲೆಯಲ್ಲೂ, ಸಾಮಾಜಿಕ ಸಮಸ್ಯೆಗಳನ್ನು ಭಾಷಿಕ-ಪ್ರಾದೇಶಿಕ ನೆಲೆಯಲ್ಲೂ, ಸಾಂಸ್ಕೃತಿಕ ಸಮಸ್ಯೆಗಳನ್ನು ಧಾರ್ಮಿಕ ನೆಲೆಯಲ್ಲೂ ವ್ಯಾಖ್ಯಾನಿಸುವ ಮೂಲಕ, ಅಸಮಾನತೆಯ ಹಂದರವನ್ನು ವಿಸ್ತರಿಸುತ್ತಲೇ ಹೋಗುತ್ತವೆ. ಈ ಪ್ರಕ್ರಿಯೆಯಲ್ಲೇ ಸಾರ್ವತ್ರಿಕವಾಗಿ ಗುರುತಿಸಬೇಕಾದ ಈ ಎಲ್ಲ ಜ್ವಲಂತ ಸಮಸ್ಯೆಗಳೂ ಸಾಪೇಕ್ಷವಾಗಿ ಗುರುತಿಸಲ್ಪಟ್ಟು ಭ್ರಮಾಧೀನ ಜಗತ್ತಿನ ಕ್ರಿಯೆ-ಪ್ರತಿಕ್ರಿಯೆಗಳಿಗೆ ಸೀಮಿತವಾಗಿಬಿಡುತ್ತದೆ.
ಹಾಗಾಗಿಯೇ ಹೆಣ್ಣು ಮಕ್ಕಳು, ವಿಶೇಷವಾಗಿ ದಲಿತ-ಅಲ್ಪಸಂಖ್ಯಾತ ಸಮುದಾಯದ ಹೆಣ್ಣುಮಕ್ಕಳು ಶಿಕ್ಷಣವಂಚಿತರಾಗುತ್ತಿರುವುದು ನೇಪಥ್ಯಕ್ಕೆ ಸರಿದು, ಹಿಜಾಬ್ ವಿವಾದ ಸಾಮಾಜಿಕ ಸ್ಪಂದನೆಯ ಕೇಂದ್ರ ಬಿಂದು ಆಗುತ್ತದೆ. ದಲಿತ ಸಮುದಾಯದ ಶೇ 80ರಷ್ಟು ಜನರು ಎದುರಿಸುತ್ತಿರುವ ಅನಕ್ಷರತೆ, ಹಸಿವು, ಬಡತನ, ವಸತಿಹೀನತೆ ಮತ್ತು ಸಾಮಾಜಿಕ ಅಸ್ಥಿರತೆಯ ಸಮಸ್ಯೆಗಳು ಬದಿಗೆ ಸರಿದು ಮೀಸಲಾತಿ ಮತ್ತಿತರ ಸಾಂವಿಧಾನಿಕ ಸವಲತ್ತುಗಳು ಮುನ್ನೆಲೆಗೆ ಬರುತ್ತವೆ. ಹಿಜಾಬ್, ತಲಾಖ್ ಮುಂತಾದ ಸಾಮಾಜಿಕ ಸಮಸ್ಯೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಯಿಸುವ ಮುಸ್ಲಿಂ ಸಮುದಾಯ ತನ್ನೊಳಗೇ ಇರುವ ಇದೇ ಸಮಸ್ಯೆಗಳ ಬಗ್ಗೆ ಸೊಲ್ಲೆತ್ತುವುದೂ ಕಂಡುಬರುವುದಿಲ್ಲ. ಉದ್ಯೋಗದಲ್ಲಿ ಮತ್ತು ಶಿಕ್ಷಣದಲ್ಲಿ ಮೀಸಲಾತಿಗಾಗಿ, ಇನ್ನೂ ಹೆಚ್ಚಿನ ಸೌಲಭ್ಯಗಳಿಗಾಗಿ ಹೋರಾಡುವ ಸಮಾಜ, ಈ ಎರಡರಿಂದಲೂ ವಂಚಿತರಾಗಿಯೇ ಹಿಂದುಳಿದಿರುವ ಬಹುಸಂಖ್ಯಾತ ಜನತೆಯ ಹತಾಶೆ ಮತ್ತು ತಲ್ಲಣಗಳಿಗೆ ಸ್ಪಂದಿಸಲು ಮುಂದಾಗದಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.
ಅಗ್ನಿಪಥ್ ಯೋಜನೆಯನ್ನು ಜಾರಿಗೊಳಿಸಿದ ಕೂಡಲೇ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಸ್ಫೋಟಿಸಿದ ಆಕ್ರೋಶದ ಕಿಡಿಗಳನ್ನು ಈ ತಲ್ಲಣಗಳ ನಡುವೆ ಕಾಣಬಹುದು. ಕೆಲವೇ ತಿಂಗಳುಗಳ ಹಿಂದೆ ಮತಧಾರ್ಮಿಕ ಅಸ್ಮಿತೆಗಳ ನೆಲೆಯಲ್ಲಿ ಹೋರಾಡಿದ ಯುವ ಪೀಳಿಗೆಯೇ, ಅಗ್ನಿಪಥ್ ಯೋಜನೆಯ ವಿರುದ್ಧ ಅಸ್ಮಿತೆಯ ಗೋಡೆಗಳನ್ನು ಭಂಜಿಸಿ ಹೋರಾಡಿರುವುದನ್ನು ಗಮನಿಸಬೇಕಿದೆ. ಭಾರತೀಯ ಸಮಾಜದ ಆಂತರ್ಯದಲ್ಲಿ ಮಡುಗಟ್ಟಿರುವ ಆಕ್ರೋಶ ಮತ್ತು ಹತಾಶೆಯನ್ನೂ ಇಲ್ಲಿಯೇ ಗುರುತಿಸಬೇಕಿದೆ. ಅನ್ನದ ಪ್ರಶ್ನೆ ಎದುರಾದಾಗ, ಅಕ್ಷರದ ಸವಾಲು ಎದುರಾದಾಗ ಎಲ್ಲ ಅಸ್ಮಿತೆಗಳನ್ನೂ ಭಂಜಿಸಿ ಎದುರಿಸಲು ಯುವ ಮನಸುಗಳು ಸದಾ ಸಿದ್ಧವಾಗಿರುತ್ತವೆ. ಈ ಯುವ ಪೀಳಿಗೆಯನ್ನು ಅಸ್ಮಿತೆ ರಾಜಕಾರಣದ ಸಂಕೋಲೆಗಳಿಂದ ಬಿಡಿಸಿ, ತಳಸಮುದಾಯಗಳ ತಲ್ಲಣಗಳಿಗೆ ಸ್ಪಂದಿಸುವಂತಹ ಒಂದು ಮನಸ್ಥಿತಿಯನ್ನು ರೂಪಿಸುವುದು ವರ್ತಮಾನದ ಅನಿವಾರ್ಯತೆಯಾಗಿದೆ.
ಮತೀಯತೆ, ಜಾತೀಯತೆ ಅಥವಾ ಯಾವುದೋ ಸೈದ್ಧಾಂತಿಕ ಅಸ್ಮಿತೆಗೊಳಗಾಗಿ ಹಿಂಸಾತ್ಮಕ ಹೋರಾಟಕ್ಕೆ ಮುಂದಾಗುವ ಯುವ ಮನಸುಗಳಿಗೆ ಈ ಮುಕ್ತ ಚಿಂತನೆಯ ವೇದಿಕೆಗಳು ಬೇಕಾಗಿವೆ. ಪ್ರಭುತ್ವದ ದೃಷ್ಟಿಯಲ್ಲಿ ಅಥವಾ ಹಿತವಲಯ ಸಮಾಜದ ದೃಷ್ಟಿಯಲ್ಲಿ ಉದ್ಯೋಗಾವಕಾಶಗಳಿಗಾಗಿ, ಶೈಕ್ಷಣಿಕ ಅವಕಾಶಗಳಿಗಾಗಿ ಮತ್ತು ಸಾಮಾಜಿಕ ಭದ್ರತೆಗಾಗಿ ಹೋರಾಡುವ ಯುವ ಪೀಳಿಗೆ ಅನೇಕ ಸಂದರ್ಭಗಳಲ್ಲಿ ಸಮಾಜಘಾತುಕ ಶಕ್ತಿಯಂತೆ ಕಾಣುತ್ತದೆ. ಏಕೆಂದರೆ ಈ ಪೀಳಿಗೆಯಲ್ಲಿ ಮಡುಗಟ್ಟಿದ ಆಕ್ರೋಶ ಸುಲಭವಾಗಿ ಸ್ಫೋಟಿಸುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಯುವ ಮನಸುಗಳನ್ನು ಮತೀಯವಾದ, ಮತಾಂಧತೆ, ಜಾತೀಯತೆ ಮುಂತಾದ ವರ್ಗೀಕರಣಕ್ಕೊಳಗಾದ ಅಸ್ಮಿತೆಗಳು ಆವರಿಸುತ್ತಿವೆ. ದ್ವೇಷ ರಾಜಕಾರಣದ ವಾರಸುದಾರರು ಮತ್ತು ಮತಾಂಧತೆಯ ಪ್ರತಿಪಾದಕರು, ಯುವ ಮನಸುಗಳಲ್ಲಿರುವ ಹತಾಶೆಯನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ತಮ್ಮದೇ ಆದ ಭದ್ರಕೋಟೆಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ. ಮುಸ್ಲಿಂ ಹೆಣ್ಣುಮಕ್ಕಳ ಹಿಜಾಬ್ ಹಿಂದೂ ಯುವಪೀಳಿಗೆಯ ಮನಸುಗಳನ್ನು ಪ್ರಕ್ಷುಬ್ಧಗೊಳಿಸುತ್ತದೆ ಅಥವಾ ದಲಿತ ಯುವತಿ ಮತ್ತು ಮೇಲ್ಜಾತಿ ಯುವಕನ ವೈವಾಹಿಕ ಸಂಬಂಧಗಳು ಇಡೀ ಸವರ್ಣೀಯ ಸಮುದಾಯವನ್ನು ಕೆರಳಿಸುತ್ತದೆ. ಅಂತರ್ ಧರ್ಮೀಯ ವಿವಾಹಗಳು ಯುವ ಪೀಳಿಗೆಯಲ್ಲಿ ಹತ್ಯೆ ಮಾಡುವಂತಹ ಕ್ರೌರ್ಯವನ್ನು ಹುಟ್ಟುಹಾಕುತ್ತವೆ.
ಈ ಯುವ ಮನಸುಗಳನ್ನು ಆವರಿಸಿ, ಆಕ್ರಮಿಸಿ ತಮ್ಮ ಸಾಂಸ್ಕೃತಿಕ ಆಧಿಪತ್ಯಕ್ಕೊಳಪಡಿಸುವ ಮತಾಂಧ ಸಂಘಟನೆಗಳು, ಜಾತಿ ಗುಂಪುಗಳು, ಧಾರ್ಮಿಕ ಸಂಸ್ಥೆಗಳು ಮೇಲ್ ಸ್ತರದ ರಾಜಕೀಯ ಮತ್ತು ಆರ್ಥಿಕ ಹಿತಾಸಕ್ತಿಗಳಿಗೆ ಪೂರಕವಾಗಿ ಸಮಾಜವನ್ನು ವಿಘಟನೆಯ ಮಾರ್ಗದಲ್ಲಿ ಕರೆದೊಯ್ಯುತ್ತವೆ. ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಮತಧಾರ್ಮಿಕ ನೆಲೆಯಲ್ಲಿ ರಾಜಕೀಯವಾಗಿ ಪರಮಾಧಿಕಾರ ಸ್ಥಾಪಿಸಲು ಹವಣಿಸುವ ರಾಜಕೀಯ ಶಕ್ತಿಗಳು ಈ ಯುವ ಮನಸುಗಳನ್ನು ನಿಯಂತ್ರಿಸಲೆಂದೇ, ಬದುಕು ಮತ್ತು ಜೀವನೋಪಾಯಕ್ಕೆ ಸಂಭಂಧಿಸಿದ ಸಮಸ್ಯೆಗಳೆಲ್ಲವನ್ನೂ ಸಾಪೇಕ್ಷ ನೆಲೆಯಲ್ಲಿ ವ್ಯಾಖ್ಯಾನಿಸಿ ಜಾತಿ, ಮತ, ಧರ್ಮ ಅಥವಾ ಸಾಮುದಾಯಿಕ ಚೌಕಟ್ಟಿನಲ್ಲಿ ಬಂಧಿಸುತ್ತವೆ. ಈ ಚೌಕಟ್ಟಿನೊಳಗೆ ಬಂಧಿಯಾಗುವ ಯುವ ಮನಸುಗಳು ತಮ್ಮ ಕಾಲ ಬುಡದಲ್ಲೇ ಹರಿಯುತ್ತಿರುವ ಅಪಾಯಗಳ ಪರಿವೆಯೂ ಇಲ್ಲದೆ ಭ್ರಮಾಧೀನರಾಗಿ, ಅಗೋಚರ ಶತ್ರುಗಳ ವಿರುದ್ಧ ಹೋರಾಡಲು ಸಜ್ಜಾಗುತ್ತಿರುತ್ತವೆ. ಇಂತಹ ಯುವ ಪೀಳಿಗೆಯನ್ನು ಸಶಸ್ತ್ರೀಕರಿಸುವ ಒಂದು ಪ್ರಕ್ರಿಯೆ ತೀಕ್ಷ್ಣವಾಗುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ.
ಈ ವಾತಾವರಣದಲ್ಲೇ ನಾವು ದಿನನಿತ್ಯ ಹಿಜಾಬ್, ಹಲಾಲ್, ಮಂದಿರ, ಮಸೀದಿ, ಸ್ಮಾರಕ, ಪ್ರತಿಮೆ ಮುಂತಾದ ಸಂಕುಚಿತ ಸ್ಥಾವರಗಳಲ್ಲಿ, ಲವ್ ಜಿಹಾದ್, ಅಂತರ್ಜಾತಿ ವಿವಾಹ, ಮತಾಂತರ ಮುಂತಾದ ಸೀಮಿತ ಬೌದ್ಧಿಕ ಚೌಕಟ್ಟುಗಳಲ್ಲಿ ಯುವ ಪೀಳಿಗೆ ಸಿಲುಕಿರುವುದನ್ನು ಗಮನಿಸುತ್ತಾ ಬಂದಿದ್ದೇವೆ. ಹಿಜಾಬ್ ವಿರುದ್ಧ ಕೇಸರಿ ಶಾಲು ಧರಿಸುವವರಿಗಾಗಲೀ, ಮಸೀದಿಗಳಲ್ಲಿ ಶಿವಲಿಂಗಗಳನ್ನು ಶೋಧಿಸುವವರಿಗಾಗಲೀ ಅಥವಾ ಹಿಜಾಬ್ ಧರಿಸುವುದರದಲ್ಲೇ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳುವವರಿಗಾಗಲೀ, ತಾವು ಬದುಕುತ್ತಿರುವ ಸಮಾಜದ ಅಂತಃಸತ್ವವೇ ಶಿಥಿಲವಾಗುತ್ತಿರುವುದು ಗೋಚರಿಸದಂತಾಗಿದೆ. ಶಾಲೆ, ದೇವಾಲಯ, ಮಸೀದಿ, ದಾಸೋಹ ಭವನಗಳನ್ನು ಪ್ರವೇಶಿಸಲು ಅಗತ್ಯವಾದ ಕನಿಷ್ಠ ಆರ್ಥಿಕ ಶಕ್ತಿಯನ್ನೂ ಹೊಂದಿಲ್ಲದ ಕೋಟ್ಯಂತರ ಮಕ್ಕಳು, ಪೌಷ್ಟಿಕ ಆಹಾರವೂ ಇಲ್ಲದೆ, ಎರಡು ಹೊತ್ತಿನ ಕೂಳಿಗೂ ಪರದಾಡುವ ಲಕ್ಷಾಂತರ ಮಕ್ಕಳು, ಜೀವನ ನಿರ್ವಹಣೆಯ ಕನಿಷ್ಠ ಸೌಲಭ್ಯಗಳನ್ನೂ ಎಟುಕಿಸಿಕೊಳ್ಳಲಾಗದ ಕೋಟ್ಯಂತರ ಮಕ್ಕಳು ನಮ್ಮ ನಡುವೆ ಇರುವಂತೆಯೇ ನಮ್ಮ ಹಿತವಲಯದ ಸಮಾಜವೊಂದು ಆಹಾರ ಸಂಹಿತೆಗಳನ್ನು, ಧರ್ಮಸಂಹಿತೆಗಳನ್ನು, ಸಾಂಸ್ಕೃತಿಕ ಕಟ್ಟುಪಾಡುಗಳನ್ನು, ವಸ್ತ್ರ ಸಂಹಿತೆಗಳನ್ನು ಜನಸಮುದಾಯಗಳ ಮೇಲೆ ಹೇರುತ್ತಲೇ ಬಂದಿದೆ. ಇದನ್ನು ನಾವು ಸಹಿಸಿಕೊಂಡೇ ಬಂದಿದ್ದೇವೆ.
ಕೋಟ್ಯಂತರ ಅಕ್ಷರ ವಂಚಿತ, ಅನ್ನ ವಂಚಿತ, ಸೂರು ವಂಚಿತ ಜನರು ಈ ಅಸ್ಮಿತೆಗಳ ಮೇಲಾಟದಲ್ಲಿ ಎಲ್ಲೋ ಕಳೆದುಹೋಗಿದ್ದಾರೆ. ಈ ವಂಚಿತ ಸಮುದಾಯಗಳಲ್ಲಿ ಜಾತ್ಯತೀತತೆ ಸಹಜವಾಗಿಯೇ ಇರುತ್ತದೆ. ಹಾಗೆಯೇ ಸಹಿಷ್ಣುತೆಯೂ ಧಾರಾಳವಾಗಿ ಇರುತ್ತದೆ. ಕಲ್ಲೆಸೆಯುವ ಆಕ್ರೋಶಭರಿತ ಪ್ರತಿಭಟನಾಕಾರರನ್ನು ದಂಡಿಸಲು ಕಾನೂನು ಅಸ್ತ್ರಗಳನ್ನು ಬಳಸಲು ಮುಂದಾಗುವ ಸರ್ಕಾರಕ್ಕೆ ಮತ್ತು ಜನಪ್ರತಿನಿಧಿಗಳಿಗೆ ಮನುಜ ಸೂಕ್ಷ್ಮತೆ ಮತ್ತು ಸಂವೇದನೆ ಇಲ್ಲದಿರುವುದರಿಂದಲೇ ಈ ವಂಚಿತ ಸಮುದಾಯಗಳು ನೇಪಥ್ಯದಲ್ಲೇ ಉಳಿದುಬಿಡುತ್ತವೆ. ಬಂಡವಾಳಶಾಹಿ ವ್ಯವಸ್ಥೆಗೆ ಈ ಶೋಷಿತ ಸಮುದಾಯಗಳು ಅನಿವಾರ್ಯವಾಗಿ ಬೇಕಾಗುತ್ತವೆ. ಏಕೆಂದರೆ ಸಂಪತ್ತಿನ ವೃದ್ಧಿಗೆ, ಸಂಪನ್ಮೂಲಗಳ ಶೋಷಣೆಗೆ ಉತ್ಪಾದಕೀಯ ಶಕ್ತಿಗಳನ್ನು ಈ ಸಮುದಾಯಗಳೇ ಒದಗಿಸುತ್ತವೆ. ಈ ಬಂಡವಾಳಶಾಹಿ ವ್ಯವಸ್ಥೆಯೊಡನೆ ರಾಜಿ ಮಾಡಿಕೊಂಡು ತಮ್ಮ ಸಾಂಸ್ಕೃತಿಕ ರಾಜಕಾರಣವನ್ನು ಪೋಷಿಸುವ ರಾಜಕೀಯ ಪಕ್ಷಗಳಿಗೆ, ಸಂಘಟನೆಗಳಿಗೆ ಮತ್ತು ಸಾಂಸ್ಥಿಕ ಶಕ್ತಿಗಳಿಗೆ ಈ ಸಮುದಾಯಗಳು ಬಳಕೆಯ ವಸ್ತುಗಳಾಗಿ ಕಾಣುವುದೇ ಅಲ್ಲದೆ ಸಮುದಾಯದೊಳಗಿನ ಯುವಶಕ್ತಿ ತಮ್ಮ ಮುಂಚಲನೆಯ ಇಂಧನವಾಗಿ ಪರಿಣಮಿಸುತ್ತದೆ.
ಇಂದು ಭಾರತದಲ್ಲಿ ಇಂತಹ ಒಂದು ಯುವಪೀಳಿಗೆ ಒಂದು ಹೊಸ ಜಗತ್ತಿನ ನಿರೀಕ್ಷೆಯಲ್ಲಿದೆ. ಸಾಂವಿಧಾನಿಕ ಸವಲತ್ತುಗಳ ಫಲಾನುಭವಿಗಳಾಗಿ ಹಿತವಲಯದಲ್ಲಿರುವ ಯುವ ಪೀಳಿಗೆ ಉಜ್ವಲ ಭವಿಷ್ಯಕ್ಕಾಗಿ ಹಾತೊರೆಯುತ್ತಿದ್ದರೆ, ಈ ಸವಲತ್ತುಗಳಿಂದ ವಂಚಿತರಾಗಿರುವ ಕೋಟ್ಯಂತರ ಸಂಖ್ಯೆಯ ಯುವಪೀಳಿಗೆ ನಾಳಿನ ಬದುಕಿಗಾಗಿ ಹಾತೊರೆಯುತ್ತಿದೆ. ಜಾತಿ-ಮತ-ಧರ್ಮ-ಭಾಷೆಯ ಮಸೂರಗಳನ್ನು ತೆಗೆದಿಟ್ಟು ಸೂಕ್ಷ್ಮಾವಲೋಕನ ಮಾಡಿದರೆ ನಮ್ಮ ನಡುವೆಯೇ ಹರಿಯುತ್ತಿರುವ ಈ ವಂಚಿತರ ದನಿಗೆ ಕಿವಿಗೊಡಬಹುದು. ಈ ದನಿಯನ್ನು ಆಲಿಸಿ ಅಲ್ಲಿ ಮಡುಗಟ್ಟಿರುವ ಹತಾಶೆ ಮತ್ತು ಹಪಹಪಿಗೆ ಸ್ಪಂದಿಸುವ ಮೂಲಕ ಹೊಸ ಲೋಕದ ಬಾಗಿಲುಗಳನ್ನು ತೆರೆಯುವ ಹೊಣೆಗಾರಿಕೆ ನಮ್ಮ ನಡುವಿನ ಎಡಪಂಥೀಯ ಪಕ್ಷ-ಸಂಘಟನೆಗಳ ಮೇಲಿದೆ, ಪ್ರಜಾಸತ್ತಾತ್ಮಕ ಸಂಘಟನೆಗಳ ಮೇಲಿದೆ, ಪ್ರಗತಿಪರರ ಮೇಲಿದೆ. ಜಾತಿ ಮತಗಳ ಮೌಢ್ಯಕ್ಕೆ ಬಲಿಯಾಗಿ ಉನ್ಮಾದದ ಅಲೆಗೆ ಸಿಲುಕುತ್ತಿರುವ ಯುವ ಪೀಳಿಗೆಯನ್ನು ಮುಕ್ತ ಚಿಂತನೆಯ ವೇದಿಕೆಗೆ ಕರೆತರುವ ಜವಾಬ್ದಾರಿ ಪ್ರಜ್ಞಾವಂತ ಸಮಾಜದ ಮೇಲಿದೆ.