ಕರ್ನಾಟಕ ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಇಸ್ಕಾನ್ ಅನ್ನು ಪ್ರತಿಷ್ಠಾಪನೆ ಮಾಡುವ ದೂರಗಾಮಿ ಉದ್ದೇಶ ಹೊಂದಿದೆಯೇ? ಆ ಮೂಲಕ ಕಡಿಮೆ ಸಂಬಳದಲ್ಲಿ ಹೇಗೋ ಬದುಕು ಸಾಗಿಸುತ್ತಿರುವ ಬಿಸಿಯೂಟ ಕಾರ್ಯಕರ್ತರನ್ನು ಬೀದಿಪಾಲು ಮಾಡಲು ಹೊರಟಿದೆಯೇ? ಎಂಬ ಸಂಶಯ ಕಾಡತೊಡಗಿದೆ.
ಇದಕ್ಕೆ ಕಾರಣ ನವೆಂಬರ್ 17 ರಂದು ಶಿಕ್ಷಣ ಇಲಾಖೆ ಹೊರಡಿಸಿದ ಆದೇಶದ ಪ್ರಕಾರ, ಚಿಕ್ಕಬಳ್ಳಾಪುರ ಜಿಲ್ಲೆಯ 8 ಸರ್ಕಾರಿ ಶಾಲೆಗಳ ಬಿಸಿಯೂಟ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಚಂಚಲಪತಿ ಎಂಬ ಕಮರ್ಷಿಯಲ್ ಸನ್ಯಾಸಿ ಮುಖ್ಯಸ್ಥರಾಗಿರುವ ಇಸ್ಕಾನ್ ನಡೆಸುವ ಅಕ್ಷಯ ಪಾತ್ರ ಸಂಸ್ಥೆಗೆ ವಹಿಸಲಾಗಿದೆ. ಸರ್ಕಾರ ಬಿಸಿಯೂಟಕ್ಕೆ ಖರ್ಚು ಮಾಡುವ ಅನುದಾನವನ್ನು ಅಕ್ಷಯಪಾತ್ರದ ಮಡಿಲಿಗೆ ಹಾಕಲಿದೆ.
ಇಷ್ಟು ದಿನ ರಾಜ್ಯದ ನೂರಾರು ಶಾಲೆಗಳಿಗೆ ಊಟ ಪೂರೈಕೆಯ ಕೆಲಸವನ್ನು ಮಾಡುತ್ತಿದ್ದ ಇಸ್ಕಾನ್ ಈಗ ಶಾಲೆಗಳನ್ನೇ ಹೊಕ್ಕು ಝೇಂಢಾ ಊರಲಿದೆ.
ಸರ್ಕಾರದ ಪ್ರಕಾರ ಇದು ಒಂದು ವರ್ಷದ ಪ್ರಾಯೋಗಿಕ ಯೋಜನೆ. ಅಂದರೆ ಮುಂದೆ ಹಂತ ಹಂತವಾಗಿ ಶಾಲೆಗಳಲ್ಲಿ ಅಕ್ಷಯಪಾತ್ರದ ಪಾಕಶಾಲೆಗಳನ್ನು ಪ್ರತಿಷ್ಠಾಪನೆ ಮಾಡುವುದು! ಈಗಿರುವ ಅಡುಗೆ ಸಿಬ್ಬಂದಿಯನ್ನು ಅಕ್ಷಯಪಾತ್ರ ಉಳಿಸಿಕೊಳ್ಳದು. ಏಕೆಂದರೆ ಮೊದಲೇ ಅದು ಜಾತಿ ವ್ಯಸನದ ಸಂಸ್ಥೆ.. ಬ್ರಾಹ್ಮಣರು ಮಾಡುವ ಅಡುಗೆಯೇ ಅದಕ್ಕೆ ಶ್ರೇಷ್ಠ.
ಹೀಗಾಗಿ ಈಗ ಬಿಸಿಯೂಟ ಯೋಜನೆಯಲ್ಲಿ ಅಡುಗೆ ಕೆಲಸ ಮಾಡುತ್ತಿರುವ ದಲಿತ-ಶೂದ್ರ-ಅಲ್ಪಸಂಖ್ಯಾತ ಸಿಬ್ಬಂದಿಯ ಕೆಲಸ ಕೈಬಿಟ್ಟಂತೆಯೇ.
2012ರ ಆದೇಶ ಉಲ್ಲಂಘನೆ
ಈ ಕುರಿತು ’ಪ್ರತಿಧ್ವನಿ’ ’ ಜೊತೆ ಮಾತನಾಡಿದ ಅಕ್ಷರ ದಾಸೋಹ ಕಾರ್ಯಕರ್ತರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಮಾಲಿನಿ ಮೆಸ್ತಾ, ‘ಸರ್ಕಾರದ ಈ ನಡೆಯನ್ನು ನಾವು ಸಂಪೂರ್ಣವಾಗಿ ವಿರೋಧಿಸುತ್ತೇವೆ. 2012ರಲ್ಲಿ ಸರ್ಕಾರವೇ ಹೊರಡಿಸಿದ ಆದೇಶದ ಪ್ರಕಾರ, ಮತ್ತೆ ಹೊಸದಾಗಿ ಬಿಸಿಯೂಟ ಯೋಜನೆಯಲ್ಲಿ ಅಕ್ಷಯಪಾತ್ರ ಸೇರಿದಂತೆ ಯಾವ ಖಾಸಗಿ ಸಂಸ್ಥೇಗೂ ಅವಕಾಶ ನೀಡಲಾಗದು. ಆದರೆ, ಈಗ ಮತ್ತೆ ಸರ್ಕಾರ 8 ಶಾಲೆಗಳನ್ನು ಇಸ್ಕಾನ್ ಸುಪರ್ದಿಗೆ ನೀಡುತ್ತಿರುವುದು 2012 ರ ಆದೇಶದ ಸ್ಪಷ್ಟ ಉಲ್ಲಂಘನೆ’. ಇದರ ವಿರುದ್ಧ ನಾವು ಹೋರಾಟ ರೂಪಿಸುತ್ತೇವೆ’ ಎಂದರು.
ಖಾಸಗೀಕರಣದ ಹುನ್ನಾರ
ಇದು ಬಿಸಿಯೂಟ ಯೋಜನೆಯಿಂದ ಸರ್ಕಾರ ಸಂಪೂರ್ಣವಾಗಿ ಕೈ ತೊಳೆದುಕೊಳ್ಳುವ ಹುನ್ನಾರ. ಪ್ರಭುತ್ವ.ಸರ್ಕಾರ ‘ಪ್ರಾಯೋಗಿಕ’ ಹೆಸರಿನಲ್ಲಿ ಖಾಸಗಿಯರಿಗೆ ಮಣೆ ಹಾಕಿತು ಎಂದರೆ, ಮುಂದೆ ಸಂಪೂರ್ಣ ಖಾಸಗೀಕರಣ ಕಾದಿದೆ ಎಂದೇ ಅರ್ಥ.
ಈ ಕುರಿತು ‘ಪ್ರತಿಧ್ವನಿ’ಗೆ ಪ್ರತಿಕ್ರಿಯಿಸಿದ ಶಿಕ್ಷಣ ತಜ್ಞ ಪ್ರೊ. ನಿರಂಜನಾರಾಧ್ಯ, ‘ 8 ಶಾಲೆಗಳಿಂದ ಸಣ್ಣಗೆ ಆರಂಭಿಸಿ ಅದನ್ನು ವಿಸ್ತರಿಸುತ್ತ ಹೋಗುತ್ತಾರೆ. ಖ್ಯಾತ ರಾಜಕೀಯ-ಆರ್ಥಿಕ ತಜ್ಞ ನೋಮ್ ಚೊಮಸ್ಕಿ ಇದನ್ನು ಹೀಗೆ ವಿವರಿಸುತ್ತಾರೆ: ‘ ಖಾಸಗಿಕರಣ ಎಂಬುದು ನವ ವಸಾಹತುಶಾಹಿಯ ಯೋಜಿತ ಮತ್ತು ವ್ಯವಸ್ಥಿತ ಕುತಂತ್ರ. ಅದು ಸರ್ಕಾರಿ ಶಿಕ್ಷಣ , ಆರೋಗ್ಯ ವ್ಯವಸ್ಥೆ ಮತ್ತು ಉದ್ಯಗಳಿಗೆ ನೀಡಬೇಕಾದ ಪ್ರಾಧಾನ್ಯತೆ ಮತ್ತು ಸಂಪನ್ಮೂಲವನ್ನು ತಗ್ಗಿಸುತ್ತ ಹೋಗುತ್ತದೆ. ಅವು ದುರ್ಬಲಗೊಂಡಾಗ ಅದನ್ನೇ ನೆಪ ಮಾಡಿ ಅವನ್ನು ಖಾಸಗಿಯವರಿಗೆ ವಹಿಸುತ್ತದೆ……’ ಚೋಮಸ್ಕಿಯವರ ಈ ಚಿಂತನೆ ಯನ್ನು ಬಿಸಿಯೂಟಕ್ಕೂ ಅನ್ವಯಿಸಬಹುದು…..’ ಎಂದರು.
‘ಬಿಸಿಯೂಟವನ್ನು ಅದೇ ಊರಿನ ಕೆಲಸಗಾರರು ತಯಾರಿಸಬೇಕು. ಕೇಂದ್ರೀಕೃತ ಅಡುಗೆ ವ್ಯವಸ್ಥೆಯೇ ತಪ್ಪು. ಬೆಳ್ಳುಳ್ಳಿ, ಈರುಳ್ಳಿ ಇಲ್ಲದ ಅಡುಗೆ ಒದಗಿಸುವವರಿಗೆ ಸರ್ಕಾರ ಮಣೆ ಹಾಕಬಾರದು. ಖಾಸಗೀಕರಣದ ಬದಲು ಖಾಸಗಿ ಸಂಸ್ಥೆಗಳಿಗೆ ಭಾಗವಹಿಸುವಿಕೆಯ ಅವಕಾಶ ನೀಡಬಹುದು. ಇದಕ್ಕಾಗಿ ಸರ್ಕಾರ ಒಂದು ನಿಧಿ ಸ್ಥಾಪಿಸಬೇಕು. ಬೇಕಾದವರು ಆ ನಿಧಿಗೆ ಹಣ ಕೊಡಲಿ…ಅದು ಬಿಟ್ಟು ಖಾಸಗಿಯವರಿಗೇ ಯೋಜನೆ ಒಪ್ಪಿಸುವುದು ಸಂವಿಧಾನ ದ್ರೋಹ. ಇದು ಖಂಡನೀಯ’ ಎಂದು ನಿರಂಜನಾರಾಧ್ಯ ಅಭಿಪ್ರಾಯ ಪಟ್ಟರು.
ಪ್ರತಿಧ್ವನಿ ಜೊತೆ ಮಾತನಾಡಿದ ಖ್ಯಾತ ಆಹಾರ ತಜ್ಞ ಡಾ. ಕೆಸಿ. ರಘು ಅವರು ‘ಮುಠ್ಠಾಳರು ಕಣ್ರೀ. ಈರುಳ್ಳಿ, ಬೆಳ್ಳುಳ್ಳಿ ದೇಹ ಸೇರಿದ ನಂತರ ಅಲ್ಲಿ ಮೆಟಾಬಾಲಿಕಲ್ ಪ್ರಕ್ರಿಯೆ ಜರುಗಿ ಆಲಿಸಿನ್ ಎಂಬ ರಾಸಾಯನಿಕ ಉತ್ಪಾದನೆಯಾಗುತ್ತದೆ. ಇದು ದೇಹದ ಕೊಲೆಸ್ಟೊರಾಲ್ ಅನ್ನು ನಿಯಂತ್ರಣ ಮಾಡುತ್ತದೆ. ನಾವು ಅದನ್ನು ತಿನ್ನಲ್ಲ, ಇದನ್ನು ತಿನ್ನಲ್ಲ, ನಾವು ಪ್ಯೂರ್ ಎಂಬ ಪರಿಕಲ್ಪನೆಯೇ ಮೂರ್ಖತನದ್ದು. ಇಸ್ಕಾನ್ ತನ್ನ ಅಡುಗೆಯಲ್ಲಿ ಬಳಸುವ ಡಾಲ್ಡಾದಿಂದ ದೇಹಕ್ಕೆ ನಷ್ಟವೇ ಹೊರತು ಲಾಭವಂತೂ ಇಲ್ಲ. ಇಂತಹ ಸಂಸ್ಥೆಯ ಹೆಸರಲ್ಲಿ ನಾಣ್ಯ ಬಿಡುಗಡೆ ಮಾಡಿರುವುದು ಮೂರ್ಖತನವಷ್ಟೇ ಅಲ್ಲ, ವ್ಯಾಪಾರಿ ಸಂಸ್ಥೆಯೊಂದಕ್ಕೆ ಸರ್ಕಾರವೇ ಮನ್ನಣೆ ನೀಡಿದ ಅಸಹ್ಯದ ಪರಮಾವಧಿ’ ಎಂದರು.
‘ಎಲ್ಲ ಜಾತಿ-ಧರ್ಮಹಳ ಮಕ್ಕಳು ಓದುವ ಸರ್ಕಾರಿ ಶಾಲೆಯಲ್ಲಿ ಇಸ್ಕಾನ್ ಹೊಕ್ಕರೆ ಅಲ್ಲಿ ಒಂದು ಜಾತಿಯ ಆಚರಭಡಗಳೆ ವಿಜೃಂಭಿಸಲಿವೆ. ಅಲ್ಲಿ ಭಜನೆಯೂ ಶುರುವಾಗಬಹದು. ಹೊಟೆಲ್, ಅಪಾರ್ಟ್ಮೆಂಟ್ ಕಟ್ಟಿ ಲಾಭ ಮಾಡಿಕೊಳ್ಳುವ ಇಸ್ಕಾನ್ ಎಂಬ ವ್ಯಾಪಾರಿ ಸಂಸ್ಥೆಯನ್ನು ನಮ್ಮ ಶಿಕ್ಷಣ ಇಲಾಖೆಯೊಳಕ್ಕೆ ಬಿಟ್ಟುಕೊಳ್ಳುವುದೇ ಅಪಾಯಕಾರಿ’ ಎನ್ನುತ್ತಾರೆ ಕಮ್ಯುನಿಸ್ಟ್ ಹಿನ್ನೆಲೆಯ ಸಾಮಾಜಿಕ ಕಾರ್ಯಕರ್ತ ಭೀಮನಗೌಡ ಕಾಶಿರೆಡ್ಡಿ.
ಇಸ್ಕಾನ್ ಹೆಸಾರಲ್ಲಿ ನಾಣ್ಯ!
ಪ್ರಧಾನಿ ಮೋದಿಯವರು 3 ತಿಂಗಳ ಹಿಂದೆ ಇಸ್ಕಾನ್ಗೆ ನೂರು ವರ್ಷ ತುಂಬಿತು ಎಂದು 125 ರೂ. ನಾಣ್ಯ ಬಿಡುಗಡೆ ಮಾಡಿದ್ದರು! ಒಂದೂ ಶಾಲೆ, ಆಸ್ಪತ್ರೆ, ಹಾಸ್ಟೇಲ್ ನಿರ್ಮಿಸದ ಇಸ್ಕಾನ್ ಬಿಸಿಯೂಟದ ಫೋಟೊ ತೋರಿಸಿಯೇ ವಿದೇಶಗಳಿಂದ ಫಂಡ್ ಎತ್ತುತ್ತ ಬಂದಿದೆ. ಶರಣ ಪರಂಪರೆಯ ಈ ನೆಲದಲ್ಲಿ ದಾಸೋಹ ಎಂಬುದು ಕೇವಲ ಪದವಲ್ಲ. ಅದು ಕಾಯಕದ ಪರಿಕಲ್ಪನೆಯಲ್ಲಿ ಒಡಮೂಡಿ ಬಂದ ಒಂದು ಶ್ರೇಷ್ಠ ಕಾರ್ಯ., ಆ ಕಾರಣಕ್ಕೇ ಸರ್ಕಾರ ಮಧ್ಯಾಹ್ನದ ಬಿಸಿಯೂಟಕ್ಕೆ ‘’ಅಕ್ಷರ ದಾಸೋಹ’ ಎಂಬ ಅರ್ಥಪೂರ್ಣ ಹೆಸರನ್ನು ಇಟ್ಟಿತು. ಆದರೆ ಮುಂದೆ ಈ ಯೋಜನೆಯೊಳಕ್ಕೆ ತೂರಿಕೊಂಡ ಇಸ್ಕಾನ್ ಸರ್ಕಾರದ ಅನುದಾನ ಪಡೆಯುತ್ತಲೇ ಅದಕ್ಕೆ ಅಕ್ಷಯ ಪಾತ್ರೆ ಎಂದು ಹೆಸರು ಇಟ್ಟುಕೊಂಡಿತು.
ದಾಸೋಹ ಎಂಬುದು ವಾಸ್ತವವಾದರೆ, ಅಕ್ಷಯ ಪಾತ್ರೆ ಎಂಬುದು ಊಹಾತ್ಮಕವಾದುದು. ಇದಕ್ಕೆ ಯಾವುದೇ ವೈಜ್ಞಾನಿಕ ತಳಹದಿ ಇಲ್ಲ. ಬಹುಷಃ ಇದು ಇಸ್ಕಾನ್ ಪಾಲಿಗೆ ವಿದೇಶಿ ದೇಣಿಗೆ ತಂದು ಕೊಡುವ ಅಕ್ಷಯ ಪಾತ್ರೆ ಅಷ್ಟೇ.
ಅದರ ಟ್ರಸ್ಟಿನಲ್ಲಿ ಕೋಟ್ಯಂತರ ರೂ ಅವ್ಯವಹಾರ ನಡೆದ ಅಪಾದನೆಗಳಿವೆ. ಆದರೆ ಪ್ರಧಾನಿ ಮೋದಿಯ ನೆಚ್ಚಿನ ಇಸ್ಕಾನ್ ಅನ್ನು ರಾಜ್ಯ ಸರ್ಕಾರ ಮರೆತೀತೆ?
ಅಕ್ಷರ ದಾಸೋಹ ಸಂಘಟನೆ ಸರ್ಕಾರದ ಈ ನಡೆ ವಿರೋಧಿಸಿ ಪ್ರತಿಭಟನೆ ನಡೆಸಲು ಉದ್ದೇಶಿಸಿರುವುದು ಸ್ವಾಗತಾರ್ಹ.