ಫೆ. 19 ರ ಒಂದು ಮುಂಜಾನೆ ಅನೀಶ್ ಖಾನ್ ಎಂಬ ಯುವ ರಾಜಕೀಯ ಹೋರಾಟಗಾರನ ಕೊಲೆಯಾಗಿತ್ತು. ಯುವಕನನ್ನು ಪೊಲೀಸ್ ಸಿಬ್ಬಂದಿಗಳೇ ಎತ್ತರದ ಕಟ್ಟಡದಿಂದ ತಳ್ಳಿ ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. 28 ವರ್ಷದ ಅನೀಷ್ ಖಾನ್ ಪತ್ರಿಕೋದ್ಯಮ ಮತ್ತು ಮಾಸ್ ಕಮ್ಯುನಿಕೇಶನ್ ವಿಧ್ಯಾರ್ಥಿಯಾಗಿದ್ದರು. ಕೊಲ್ಕತ್ತಾ ಸಮೀಪದ ಆಮ್ಟಾ ಮೂಲದ ಅನೀಷ್ ಖಾನ್ ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ಗಮನ ಸೆಳೆದಿದ್ದರು.
ವಿದ್ಯಾರ್ಥಿ ರಾಜಕಾರಣದಲ್ಲಿ ಹೆಸರು ಮಾಡಿಕೊಂಡಿದ್ದ ಅನೀಶ್, ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್) ಜೊತೆ ಗುರುತಿಸಿಕೊಂಡಿದ್ದರು. ಗ್ರಾಮೀಣ ಬಂಗಾಳಿ ಮುಸ್ಲಿಮರನ್ನು ಪ್ರತಿನಿಧಿಸುವ ಇಂಡಿಯನ್ ಸೆಕ್ಯುಲರ್ ಫ್ರಂಟ್ ನಲ್ಲಿ ಮುಂಚೂಣಿಯಲ್ಲಿದ್ದರು.
ದುರದೃಷ್ಟವಶಾತ್ ರಾಜಕೀಯ ಮತ್ತು ಪೊಲೀಸ್ ಹಿಂಸಾಚಾರ ಪಶ್ಚಿಮ ಬಂಗಾಳದಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಅನೀಶ್ ಖಾನ್ ಮರನವು ರಾಜ್ಯದಲ್ಲಿ ತೃಣಮೂಲ ಕಾಂಗ್ರೆಸ್ ವಿರುದ್ಧ ಶಕ್ತವಾದ ಪ್ರತಿಭಟನೆಗೆ ಕಾರಣವಾಗಿದೆ. ಸಾವಿರಾರು ಮಂದಿ ಅನೀಶ್ ಖಾನ್ ಕುಟುಂಬಕ್ಕೆ ನ್ಯಾಯಕ್ಕೆ ಆಗ್ರಹಿಸಿ ಬೀದಿಗಿಳಿಯಲು ಈ ಕೊಲೆಯು ಪ್ರೇರಣೆ ನೀಡಿದೆ,
ಕಳೆದ ಮಂಗಳವಾರ ಎಡ ಪಕ್ಷಗಳ ಕಾರ್ಯಕರ್ತರು ಹಾಗೂ ಇಂಡಿಯನ್ ಸೆಕ್ಯುಲರ್ ಫ್ರಂಟ್ ಕಾರ್ಯಕರ್ತರು ಕೊಲ್ಕತ್ತಾದ ಪ್ರಮುಖ ಬೀದಿಗಳನ್ನು, ಜಂಕ್ಷನ್ಗಳನ್ನು ಬಂದ್ ಮಾಡಿಸಿದ್ದಾರೆ. ಅಮ್ಟಾ ಪಟ್ಟಣವು ನಿರಂತರ ಪ್ರತಿಭಟನೆಗೆ ಸಾಕ್ಷಿಯಾಗಿದೆ. ಪೊಲೀಸರ ಹಾಗೂ ಪ್ರತಿಭಟನಾಕಾರರ ನಡುವಿನ ಜಟಾಪಟಿಗೂ ನಗರ ಸಾಕ್ಷಿಯಾಗಿದೆ.
ಒಟ್ಟಾರೆ ಈ ಬೆಳವಣಿಗೆಯು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲೆ ರಾಜ್ಯದ ಮುಸ್ಲಿಮರಿಗೆ ಗೊಂದಲ ಉಂಟಾಗಲು ಕಾರಣವಾಗತೊಡಗಿದೆ. ಮಮತಾ ಬ್ಯಾನರ್ಜಿಗೆ ಮುಸ್ಲಿಮರದ್ದು ಪ್ರಬಲ ವೋಟ್ ಬ್ಯಾಂಕ್ ಆಗಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಅಮೋಘ ಪ್ರದರ್ಶನಕ್ಕೆ ಮುಸ್ಲಿಮರ ಮತಗಳು ತೀವ್ರ ಬೆಂಬಲ ನೀಡಿತ್ತು.
ಪಶ್ಚಿಮ ಬಂಗಾಳ ರಾಜಕಾರಣದಲ್ಲಿ ಕೋಮುವಾದ ಅಥವಾ ಮತೀಯ ವೋಟ್ಬ್ಯಾಂಕ್ ಗೆ ಅಷ್ಟು ದೊಡ್ಡ ಇತಿಹಾಸವೇನಿಲ್ಲ. ಸುದೀರ್ಘ 34 ವರ್ಷದ ಎಡ ಪಕ್ಷಗಳ ಆಳ್ವಿಕೆ ನಂತರ 2011 ರ ಹೊತ್ತಿಗೆ ರಾಜ್ಯದ ಮುಸ್ಲಿಮರು ಮಮತಾ ಬ್ಯಾನರ್ಜಿ ಕಡೆಗೆ ವಾಲತೊಡಗಿದರು. ಬ್ಯಾನರ್ಜಿ ಕೂಡಾ ಬಲವಾಗಿ ಮುಸ್ಲಿಮರ ಪರ ದನಿಯೆತ್ತ ತೊಡಗಿದರು. ಪೊಲೀಸರ ಮುಸ್ಲಿಂ ವಿರೋಧಿ ಧೋರಣೆಗಳನ್ನು ಉಲ್ಲೇಖಿಸಿ ಮುಸ್ಲಿಮರ ವಿಶ್ವಾಸ ಗೆಲ್ಲುವಲ್ಲಿ ಯಶಸ್ಸುಹೊಂದಿದರು.
ಅಧಿಕಾರಕ್ಕೆ ಬಂದ ಮೇಲೆ ಹಿಂದುಳಿದ ಮುಸ್ಲಿಮರಿಗೆ ಹಿಂದುಳಿದ ವರ್ಗಗಳ ಅಡಿಯಲ್ಲಿ ಯೋಜನೆಗಳನ್ನು ಘೋಷಿಸಿದರು. ಮುಸ್ಲಿಂ ಧಾರ್ಮಿಕ ಗುರುಗಳಿಗೆ ಗೌರವ ವೇತನ ನೀಡಿದರು. ಮೊದಲಾದ ಯೋಜನೆಗಳಿಂದ ಮಮತಾ ಮುಸ್ಲಿಮರ ವಿಶ್ವಾಸವನ್ನು ಗಳಿಸಿಕೊಂಡಿದ್ದರು.
ತೃಣ ಮೂಲ ಕಾಂಗ್ರೆಸ್ನ ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ಮುಸ್ಲಿಂ ನಾಯಕತ್ವ ಬೆಳೆಯಲು ಕಾರಣವಾಯಿತು. ಅಲ್ಲಿಯವರೆಗೂ ಎಡಪಕ್ಷಗಳಲ್ಲಿದ್ದ ಈ ವೋಟ್ ಬ್ಯಾಂಕ್ಗಳು ಭದ್ರವಾಗಿತ್ತು, ಆದರೆ ಸ್ಥಳೀಯ ನಾಯಕತ್ವವು ಮೇಲ್ಜಾತಿ ಹಿಂದೂಗಳಿಗೆ ಸೀಮಿತವಾಗಿತ್ತು.
2016 ರಲ್ಲಿ ನಡೆದ ಅಧ್ಯಯನದ ಪ್ರಕಾರ 51% ಮುಸ್ಲಿಮರು ಮಮತಾ ಬ್ಯಾನರ್ಜಿ ಪಕ್ಷಗಳಿಗೆ ಮತ ಹಾಕಿದ್ದಾರೆ. ಅದರಲ್ಲೂ, 2019 ರ ವೇಳೆಗೆ ಎನ್ಆರ್ಸಿ ಪ್ರಸ್ತಾಪಿಸುತ್ತಾ ಅಖಾಡಕ್ಕೆ ಬಿಜೆಪಿ ಇಳಿಯುತ್ತಿದ್ದಂತೆ ಇನ್ನಷ್ಟು ಹೆಚ್ಚಿನ ಮುಸ್ಲಿಂ ಮತಗಳು ಟಿಎಂಸಿ ಖಾತೆ ಸೇರಿಕೊಂಡವು. 2019 ರ ಲೋಕಸಭಾ ಚುನಾವಣೆಯಲ್ಲಿ 70% ಮುಸ್ಲಿಂ ಮತಗಳು ಬ್ಯಾನರ್ಜಿ ಪಕ್ಷಕೆ ಬಿದ್ದರೆ, 2021 ರ ವಿಧಾನಸಭಾ ಚುನಾವಣೆಯಲ್ಲಿ 75% ಮತಗಳು ಬ್ಯಾನರ್ಜಿ ಪಕ್ಷಕ್ಕೆ ಸೇರಿದವು. ಒಟ್ಟಾರೆ ರಾಜ್ಯದ ಮುಕ್ಕಾಲಂಶ ಮುಸ್ಲಿಂ ಮತಗಳು ತೃಣಮೂಲ ಕಾಂಗ್ರೆಸ್ ಸೇರಿಕೊಂಡಿದೆ.
ಅದಾಗ್ಯೂ, ಕಳೆದ ಒಂದು ವರ್ಷಗಳಲ್ಲಿ ರಾಜ್ಯ ರಾಜಕಾರಣದ ಪರಿಸ್ಥಿತಿಯಲ್ಲಿ ನಾಟಕೀಯ ಬದಲಾವಣೆಗಳಾಗಿವೆ. ರಾಜ್ಯದ ಪ್ರಮುಖ ಭಾಗಗಳಲ್ಲಿ ಬಿಜೆಪಿ ಶಕ್ತಿ ಕಳೆಗುಂದಿ, ಕಣ್ಮರೆಯಾಗುತ್ತಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡ ಪಕ್ಷಗಳು ಮತ್ತೆ ಚಿಗುರೊಡೆಯುತ್ತಿದೆ. ಹಲವೆಡೆ ಪ್ರಮುಖ ವಿರೋಧ ಪಕ್ಷಗಳಾಗಿ ಹೊರ ಹೊಮ್ಮಿದೆ. ಅಂದರೆ, ರಾಜ್ಯ ರಾಜಕಾರಣದ ಚಿತ್ಣದಲ್ಲಿ ಸ್ಪಷ್ಟ ಬದಲಾವಣೆಗಳು ಗೋಚರಿಸತೊಡಗಿದೆ. ಮುಖ್ಯವಾಗಿ, ಬಿಜೆಪಿ ಕೂಡಾ ಈಗ ಎನ್ಆರ್ಸಿ ಬಗ್ಗೆ ತೀವ್ರವಾಗಿ ಮಾತಾಡುತ್ತಿಲ್ಲ.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಮಮತಾ ಬ್ಯಾನರ್ಜಿ ಪಕ್ಷಕ್ಕೆ ಮುಸ್ಲಿಮರು ನೀಡುತ್ತಿದ್ದ ಅಸಾಮಾನ್ಯ ಒಲವು ಕ್ಷೀಣಿಸುತ್ತಾ ಬಂದಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಈಗಾಗಲೇ ಮುಸ್ಲಿಮ್ ಮತದಾರರು ಕಾಂಗ್ರೆಸ್ ಹಾಗೂ ಎಡ ನಾಯಕರಿಗೆ ಮಣೆ ಹಾಕುತ್ತಿರುವ ಸೂಚನೆಗಳು ಲಭಿಸಿದೆ. ಈ ಹಿನ್ನೆಲೆಯಲ್ಲಿ ಅನೀಶ್ ಖಾನ್ ಪ್ರಕರಣವು ಟಿಎಂಸಿಗೆ ಪರ್ಯಾಯ ಅವಕಾಶಗಳನ್ನು ನೋಡುವಲ್ಲಿ ಮುಸ್ಲಿಮರಿಗೆ ಕಾರಣವಾದರೂ ಆಶ್ಚರ್ಯವೇನಿಲ್ಲ.
ಅದೂ ಅಲ್ಲದೆ, ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣದ ಕಡೆಗೆ ಮುಖ ಮಾಡಿರುವ ಮಮತಾ ಬ್ಯಾನರ್ಜಿಯು, ʼಮುಸ್ಲಿಂ ಓಲೈಕೆʼ ರಾಜಕಾರಣದಿಂದ ಚೂರು ಹಿಂದೆ ಸರಿದಂತೆ ಕಾಣುತ್ತಿದೆ. ಉದಾಹರಣೆಗೆ, ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ನಿಷೇಧದ ಬಗ್ಗೆ ಹಾಗೂ, ಮುಸ್ಲಿಮರ ವಿರುದ್ಧ ಸಾರ್ವಜನಿಕ ಹಿಂಸಾಚಾರ ಮೊದಲಾದ ವಿಷಯಗಳ ಬಗ್ಗೆ ಮೌನ ವಹಿಸಿದ್ದಾರೆ, ಇದು ರಾಜ್ಯದಲ್ಲಿ ಮುಸ್ಲಿಂ ಅಸಮಾಧಾನವನ್ನು ಮತ್ತಷ್ಟು ಹುಟ್ಟುಹಾಕಿದೆ. ಪಕ್ಷವು ಸ್ಥಳೀಯ ಮಟ್ಟದಲ್ಲಿ ಮುಸ್ಲಿಂ ನಾಯಕರನ್ನು ಹೊಂದಿದ್ದರೂ, ಕೋಲ್ಕತ್ತಾದಲ್ಲಿ ಅದರ ಹೈಕಮಾಂಡ್ ಹೆಚ್ಚಿನ ಸಂಖ್ಯೆಯ ಅಲ್ಪಸಂಖ್ಯಾತರ ಮತಗಳನ್ನು ಪ್ರತಿಬಿಂಬಿಸುವುದಿಲ್ಲ.
ಸದ್ಯ, ಪಕ್ಷದೊಳಗೆ ಅರಾಜಕತೆ ಇರುವ ತೃಣ ಮೂಲ ಕಾಂಗ್ರೆಸ್ ಗೆ ಮುಸ್ಲಿಂ ವೋಟ್ಬ್ಯಾಂಕ್ ಉಳಿಸಿಕೊಳ್ಳುವಲ್ಲಿ ಕೈ ಸೋಲುವ ಆರಂಭಿಕ ಸೂಚನೆಗಳು ಲಭಿಸತೊಡಗಿವೆ. ರಾಷ್ಟ್ರೀಯ ಮಟ್ಟದಲ್ಲಿ ಕೋಮು ಆಧಾರಿತ ಮತಬ್ಯಾಂಕ್ಗಳನ್ನು ಬಿಜೆಪಿ ಭದ್ರಪಡಿಸಿ ಈಗಾಲೇ ಎರಡು ಅವಧಿಯ ಆಡಳಿತ ಪೂರೈಸುತ್ತಾ ಬಂದಿದೆ. ಅದಾಗ್ಯೂ, ರಾಜ್ಯ ಚುನಾವಣೆಗಳಲ್ಲಿ ಬಿಜೆಪಿ ನಿರೀಕ್ಷಿತ ಸಾಧನೆ ಮಾಡದೆ, ಕಳಪೆ ಪ್ರದರ್ಶನ ಮಾಡುತ್ತಾ ಬಂದಿದೆ. ಅಂದರೆ, ಚುನಾವಣಾ ರಾಜಕಾರಣದಲ್ಲಿ ಕೋಮು ಆಧಾರಿತ ರಾಜಕಾರಣ ಮಾಡಿದರೂ ಅದನ್ನು ಶಾಶ್ವತಗೊಳಿಸುವಲ್ಲಿ ಸಾಧ್ಯವಿಲ್ಲ ಎಂಬ ಅಭಿಪ್ರಾಯವಿದೆ. ಈಗಾಗಲೇ, ಹಲವಾರು ಮಂದಿ ಭಾರತದಂತಹ ಬಹು ಸಂಸ್ಕೃತಿಯ ನಾಡಿನಲ್ಲಿ ಕೋಮು ಆಧಾರಿತ ರಾಜಕಾರಣಗಳು ದೀರ್ಘ ಕಾಲ ನಿಲ್ಲುವುದು ಅಸಂಭವ ಎಂದು ಬರೆದಿದ್ದಾರೆ. ಇದೀಗ ಪಶ್ಚಿಮ ಬಂಗಾಳದ ಬದಲಾಗುತ್ತಿರುವ ರಾಜಕೀಯ ವಿದ್ಯಮಾನ ಗಮನಿಸಿದರೆ ಈ ವಾದದಲ್ಲೂ ಹುರುಳಿದೆ ಅನಿಸುತ್ತದೆ.