2014ರ ಮಹಾ ಚುನಾವಣೆಗಳ ನಂತರ ಭಾರತದ ರಾಜಕಾರಣ ಹೆಚ್ಚು ಸಂಕೀರ್ಣವಾಗಿರುವಂತೆಯೇ ಜಟಿಲವೂ ಆಗಿದೆ. ಕಾಂಗ್ರೆಸ್ ಮುಕ್ತ ಭಾರತದ ಗುರಿ ಹೊಂದಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ/ಎನ್ಡಿಎ ಸರ್ಕಾರ ವಸ್ತುಶಃ ವಿರೋಧ ಪಕ್ಷ ಮುಕ್ತ ಭಾರತವನ್ನು ಸಾಧಿಸುವ ನಿಟ್ಟಿನಲ್ಲಿ ಆಡಳಿತ ವ್ಯವಸ್ಥೆಯ ಬತ್ತಳಿಕೆಯಲ್ಲಿರುವ ಎಲ್ಲ ಸಾಂವಿಧಾನಿಕ ಅಸ್ತ್ರಗಳನ್ನೂ ಬಳಸುತ್ತಿದೆ. ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯ ಉಳಿವಿಗೆ ಶಾಸನ ಸಭೆಗಳಲ್ಲಿ ಪ್ರಬಲವಾದ ವಿರೋಧ ಪಕ್ಷ ಇರುವುದು ಅತ್ಯವಶ್ಯ ಎಂದು ನೆಹರೂ, ಅಂಬೇಡ್ಕರ್ ಮುಂತಾದ ನಾಯಕರು ಹಂಬಲಿಸುತ್ತಿದ್ದರು. ಹಾಗೆಯೇ ಆಡಳಿತಾರೂಢ ಪಕ್ಷದ ತಪ್ಪು ಒಪ್ಪುಗಳನ್ನು ಜನತೆಗೆ ಮನದಟ್ಟಾಗುವಂತೆ ತಿಳಿಸುವುದೇ ಅಲ್ಲದೆ, ಸರ್ಕಾರ ನಡೆಯುವ ಹಾದಿಯಲ್ಲಿನ ಲೋಪಗಳನ್ನು ಸರಿಪಡಿಸುವ ಸೂಕ್ತ ಸಲಹೆಗಳನ್ನು ನೀಡುವುದೂ ವಿರೋಧ ಪಕ್ಷಗಳ ಆದ್ಯತೆ ಮತ್ತು ಕರ್ತವ್ಯವಾಗಿರುತ್ತದೆ. ತುರ್ತುಪರಿಸ್ಥಿತಿಯ ಸಂದರ್ಭವನ್ನು ಹೊರತುಪಡಿಸಿದರೆ, ಸ್ವತಂತ್ರ ಭಾರತದ ಇತಿಹಾಸದಲ್ಲಿ ಸದಾ ಕಾಲವೂ ಈ ನೈತಿಕ ತಳಹದಿಯನ್ನು ಕಾಪಾಡಿಕೊಂಡೇ ಬರಲಾಗಿದೆ.
ಆದರೆ 2014ರ ಚುನಾವಣೆಗಳು ಭಾರತಕ್ಕೆ ಹೊಸ ದಿಕ್ಕನ್ನು ತೋರಿಸಿವೆ. 10 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ವ್ಯಾಪಕವಾಗಿದ್ದ ಭ್ರಷ್ಟಾಚಾರ ಹಗರಣಗಳು ಮಾತ್ರವೇ ಈ ಫಲಿತಾಂಶಗಳಿಗೆ ಕಾರಣ ಎನ್ನುವುದು ಅರ್ಧಸತ್ಯ. ವಾಸ್ತವವಾಗಿ 1990ರಿಂದಲೇ ಭಾರತದಲ್ಲಿ ಸ್ಪಷ್ಟ ನೆಲೆ ಕಂಡುಕೊಂಡ ನವ ಉದಾರವಾದ ಮತ್ತು ಬಂಡವಾಳಶಾಹಿ ಮಾರುಕಟ್ಟೆ ಆರ್ಥಿಕತೆಗೆ 1998ರ ವಾಜಪೇಯಿ ಸರ್ಕಾರದ ಅವಧಿಯಲ್ಲೇ ಸುಭದ್ರ ಬುನಾದಿಯನ್ನು ನಿರ್ಮಿಸಲಾಗಿತ್ತು. ವಾಜಪೇಯಿ ಸರ್ಕಾರ ಚಾಲನೆ ನೀಡಿದ ಮಾರುಕಟ್ಟೆ ಆರ್ಥಿಕ ನೀತಿಗಳಿಗೆ ಸ್ಪಷ್ಟ ಕಾಯಕಲ್ಪ ನೀಡುವುದರಲ್ಲಿ 2004ರ ಮನಮೋಹನ್ ಸಿಂಗ್ ಸರ್ಕಾರ ಯಶಸ್ವಿಯಾಗಿತ್ತು. ಕೆಲವು ಜನಪರ ಎನ್ನಬಹುದಾದ ಆಡಳಿತ/ಆರ್ಥಿಕ ನೀತಿಗಳ ಹೊರತಾಗಿಯೂ ಬಂಡವಾಳ ಮಾರುಕಟ್ಟೆಯ ವ್ಯತ್ಯಯಗಳು ಮತ್ತು ಭ್ರಷ್ಟಾಚಾರ ಹಗರಣಗಳು ಸಿಂಗ್ ಸರ್ಕಾರಕ್ಕೆ ಮುಳುವಾಗಿತ್ತು. ಯುಪಿಎ ಸರ್ಕಾರ ರೂಪಿಸಿದ ಮಾರುಕಟ್ಟೆ ಆರ್ಥಿಕ ನೀತಿಗಳ ಮೂಲಕ ಬಂಡವಾಳ ಮಾರುಕಟ್ಟೆ ಸ್ಥಿರತೆಯನ್ನು ಸ್ಥಾಪಿಸಲು ಭಾರತದ ಕಾರ್ಪೋರೇಟ್ ಔದ್ಯಮಿಕ ವಲಯಕ್ಕೆ ಒಂದು ಬಲಿಷ್ಠ ಸರ್ಕಾರ ಅತ್ಯವಶ್ಯವಾಗಿತ್ತು. ಇದರ ಪರಿಣಾಮವೇ ಅಂದು ಕಂಡುಬಂದ ಕಲ್ಪಿತ “ ಮೋದಿ ಅಲೆ ”.
ಹೊಸ ಮಾರುಕಟ್ಟೆ ಆರ್ಥಿಕ ನೀತಿಗಳು ಮತ್ತು ಮಾರುಕಟ್ಟೆ ಸ್ನೇಹಿ ಬಂಡವಾಳಶಾಹಿಯನ್ನು ಪ್ರೋತ್ಸಾಹಿಸುವಂತಹ ಆಡಳಿತ ನೀತಿಗಳಿಗೆ ಪೂರ್ಣ ಚಾಲನೆ ನೀಡಲು ಸಂಸತ್ತಿನಲ್ಲಿ ಮತ್ತು ವಿಧಾನಸಭೆಗಳಲ್ಲಿ ಹೆಚ್ಚಿನ ವಿರೋಧ ಇಲ್ಲದ ಒಂದು ಪರಿಸ್ಥಿತಿಯನ್ನು ನಿರ್ಮಿಸುವುದು ಬಂಡವಳಿಗ ವರ್ಗ ಮತ್ತು ಕಾರ್ಪೋರೇಟ್ ಉದ್ಯಮದ ಉದ್ದೇಶವೂ ಆಗಿತ್ತು. ಇದರ ನೇರ ಪರಿಣಾಮವೇ ಕಾರ್ಪೋರೇಟ್ ಉದ್ಯಮದ ರಾಜಕೀಕರಣ ಮತ್ತು ರಾಜಕೀಯದ ಕಾರ್ಪೋರೇಟೀಕರಣ. 2014ರ ನಂತರ ಭಾರತದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚುನಾವಣೆಗಳನ್ನು ನಿರ್ವಹಿಸುತ್ತಿರುವುದು ಬಂಡವಾಳವೇ ಎನ್ನುವುದು ವಿಧಾನಸಭಾ ಚುನಾವಣೆಗಳಲ್ಲೂ ನಿರೂಪಿತವಾಗುತ್ತಿದೆ. ಹಾಗಾಗಿಯೇ ಸಂಸತ್ತಿನಲ್ಲಿ ಬ್ಯಾಂಕ್ ಮತ್ತು ವಿಮೆಯ ಖಾಸಗೀಕರಣ, ಕರಾಳ ಕೃಷಿ ಮಸೂದೆಗಳು, ನೂತನ ಕಾರ್ಮಿಕ ಸಂಹಿತೆಗಳು ಮತ್ತು ಬಂಡವಾಳ ಸ್ನೇಹಿ ನೀತಿಗಳು ಹೆಚ್ಚಿನ ವಿರೋಧ ಇಲ್ಲದೆಯೇ ಅನುಮೋದನೆ ಪಡೆಯುತ್ತಿವೆ. ಅಥವಾ ವಿರೋಧವನ್ನು ಲೆಕ್ಕಿಸದೆ ಸುಗ್ರೀವಾಜ್ಞೆಗಳ ಮೂಲಕ ಈ ನೀತಿಗಳನ್ನು ಜಾರಿಗೊಳಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಚುನಾವಣಾ ರಾಜಕಾರಣದಲ್ಲಿ ಹೀನಾಯ ಸೋಲು ಅನುಭವಿಸುತ್ತಲೇ ಇರುವ ಕಾಂಗ್ರೆಸ್ ತನ್ನ ಪುನರುತ್ಥಾನಕ್ಕಾಗಿ ಶತಪ್ರಯತ್ನ ಮಾಡುತ್ತಿದೆ. ಪಂಜಾಬ್, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಕೇರಳ ಮತ್ತು ಕರ್ನಾಟಕ ಈ ರಾಜ್ಯಗಳನ್ನು ಹೊರತುಪಡಿಸಿದರೆ ಕಾಂಗ್ರೆಸ್ ಉಳಿದೆಲ್ಲಾ ರಾಜ್ಯಗಳಲ್ಲೂ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಂತೆ ಸೋಲು ಅನುಭವಿಸುತ್ತಿದೆ. ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಲ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಲ್ಲಿ ಠೇವಣಿ ಕಳೆದುಕೊಂಡವರೇ ಹೆಚ್ಚಾಗಿದ್ದಾರೆ. ಪ್ರಬಲ ಪ್ರಾದೇಶಿಕ ಪಕ್ಷಗಳಿರುವ ಬಂಗಾಲ, ಆಂಧ್ರಪ್ರದೇಶ, ತೆಲಂಗಾಣ, ಹರಿಯಾಣ, ಬಿಹಾರ, ಉತ್ತರಪ್ರದೇಶ, ಗೋವಾ ಮುಂತಾದ ರಾಜ್ಯಗಳಲ್ಲಿ ಕಾಂಗ್ರೆಸ್ ತನ್ನ ಪ್ರಭಾವ ಕ್ಷೀಣಿಸುತ್ತಿರುವುದನ್ನು ಗಮನಿಸುತ್ತಲೇ ಪುನರುತ್ಥಾನಕ್ಕಾಗಿ ಪ್ರಯತ್ನಿಸುತ್ತಿದೆ. ಈ ನಡುವೆ ಪಕ್ಷ ಮೂಲತಃ ನಾಯಕತ್ವದ ಕೊರತೆಯಿಂದಲೇ ಹಿನ್ನಡೆ ಅನುಭವಿಸುತ್ತಿದೆ. 2024ರ ಚುನಾವಣೆಯ ವೇಳೆಗೆ ಕಾಂಗ್ರೆಸ್ ಪುಟಿದೇಳುವುದೇ ಆದರೆ ಅಥವಾ ಪುಟಿದೇಳಬೇಕಾದರೆ ಒಂದು ಸಮರ್ಥ ನಾಯಕತ್ವದ ಅವಶ್ಯಕತೆ ಇದೆ. ಪ್ರಸ್ತುತ ಭಾರತದ ಜ್ವಲಂತ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮಾರ್ಗಗಳನ್ನು ಸೂಚಿಸುವಂತಹ ಸೈದ್ಧಾಂತಿಕ ಸ್ಪಷ್ಟತೆಯೊಂದಿಗೇ, ಆಡಳಿತ ನಿರ್ವಹಣೆಯನ್ನು ಸಮರ್ಪಕವಾಗಿ ನಿಭಾಯಿಸುವ ಸ್ಥಳೀಯ, ಪ್ರಾದೇಶಿಕ ಮತ್ತು ರಾಷ್ಟ್ರೀಯ ನಾಯಕತ್ವವನ್ನು ರೂಪಿಸುವುದೂ ಕಾಂಗ್ರೆಸ್ ಮುಂದಿನ ಪ್ರಮುಖ ಸವಾಲಾಗಿದೆ.
ಈ ಹಂತದಲ್ಲೇ ಪಕ್ಷದ ಹಂಗಾಮಿ ಅಧ್ಯಕ್ಷರಾಗಿರುವ ಸೋನಿಯಾ ಗಾಂಧಿ, ಮುಂದಿನ ವರ್ಷಗಳ ಆಂತರಿಕ ಚುನಾವಣೆಗಳವರೆಗೂ ತಾವೇ ಅಧ್ಯಕ್ಷರಾಗಿ ಮುಂದುವರೆಯುವುದಾಗಿ ಘೋಷಿಸಿದ್ದಾರೆ. ರಾಹುಲ್ ಗಾಂಧಿಯನ್ನು ಪೂರ್ಣ ಪ್ರಮಾಣದ ಅಧ್ಯಕ್ಷನನ್ನಾಗಿ ಆಯ್ಕೆ ಮಾಡುವ ಉತ್ಸುಕತೆ ಮತ್ತು ಕಾತರ ಕಾಂಗ್ರೆಸ್ ಪಕ್ಷದ ಯುವ ಪೀಳಿಗೆಯಲ್ಲಿದೆ. ಇದೇ ವೇಳೆ ಇತ್ತೀಚಿನ ದಿನಗಳಲ್ಲಿ ಉತ್ತರಪ್ರದೇಶದಲ್ಲಿ ತನ್ನ ಕಳೆದುಹೋದ ವರ್ಚಸ್ಸನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಕಾಂಗ್ರೆಸ್ ಪ್ರಿಯಾಂಕಾ ಗಾಂಧಿಯನ್ನು ಮುಂಚೂಣಿಯಲ್ಲಿ ನಿಲ್ಲಿಸಿದೆ. ಪ್ರಿಯಾಂಕಾ ಮತ್ತು ರಾಹುಲ್ ಕಾಂಗ್ರೆಸ್ ಪಕ್ಷದ ಕಳೆದುಹೋದ ವರ್ಚಸ್ಸನ್ನು, ಕುಸಿದು ತಳಮುಟ್ಟಿರುವ ಪಕ್ಷದ ಚುನಾವಣಾ ಭವಿಷ್ಯವನ್ನು ಮರಳಿ ಸ್ಥಾಪಿಸಲು ಸಾಧ್ಯವೇ ಎಂಬ ಪ್ರಶ್ನೆಯೇ ಪರ್ಯಾಯ ರಾಜಕಾರಣದ ಪ್ರಶ್ನೆಗೂ ಉತ್ತರವಾದೀತು.
ಕಾಂಗ್ರೆಸ್ಸೇತರ ಪರ್ಯಾಯದ ಹಾದಿಗಳು
1980ರ ದಶಕದಿಂದಲೇ ಆರಂಭವಾದ ಭಾರತದ ಪ್ರಾದೇಶಿಕ ಪಕ್ಷಗಳ ರಾಜಕಾರಣ ಇಂದು ತನ್ನದೇ ಆದ ಪ್ರಾಧಾನ್ಯತೆಯನ್ನು ಗಳಿಸಿಕೊಂಡಿದೆ. ಇಂದು ಯಾವುದೇ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವನ್ನು ಬದಿಗಿಟ್ಟು ಸರ್ಕಾರ ರಚಿಸಲು ಪ್ರಧಾನ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಯೋಚಿಸುವಂತಹ ಪರಿಸ್ಥಿತಿ ಉಂಟಾಗಿದೆ. ಕೊಂಚಮಟ್ಟಿಗೆ ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಕೊಂಚ ಮಟ್ಟಿಗೆ ಕರ್ನಾಟಕವನ್ನು ಹೊರತುಪಡಿಸಿ ಈ ಎರಡೂ ಪಕ್ಷಗಳು ಸ್ವಂತ ಬಲದ ಮೇಲೆ ಸರ್ಕಾರ ರಚಿಸಲು ಯಾವುದೇ ರಾಜ್ಯದಲ್ಲೂ ಸಾಧ್ಯವಾಗದ ಪರಿಸ್ಥಿತಿಯನ್ನು ಎದುರಿಸುತ್ತಿವೆ. ತೃಣಮೂಲ ಕಾಂಗ್ರೆಸ್, ಬಿಜು ಜನತಾದಳ, ಶಿವಸೇನೆ, ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ, ಟಿಆರ್ಎಸ್, ವೈಎಸ್ಆರ್ ಕಾಂಗ್ರೆಸ್, ಡಿಎಂಕೆ, ಅಣ್ಣಾ ಡಿಎಂಕೆ, ರಾಷ್ಟ್ರೀಯ ಜನತಾ ದಳ. ಎಲ್ಜೆಪಿ ಈ ಪ್ರಾದೇಶಿಕ ಪಕ್ಷಗಳು ಮುಂಬರುವ ಯಾವುದೇ ಅತಂತ್ರ ಲೋಕಸಭೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ. ಈ ಪಕ್ಷಗಳನ್ನು ಹೊರತುಪಡಿಸಿದ ಸರ್ಕಾರವನ್ನು ಸ್ಥಾಪಿಸಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಿಲ್ಲದಂತಾಗಿದೆ.
ಪ್ರಸ್ತುತ ಲೋಕಸಭೆಯಲ್ಲಿ ಬಿಜೆಪಿ ಪೂರ್ಣ ಬಹುಮತ ಸಾಧಿಸಿದ್ದರೂ, ಭಾರತದ ಪ್ರಜಾತಂತ್ರ ವ್ಯವಸ್ಥೆ ಈವರೆಗಿನ ಇತಿಹಾಸದಲ್ಲಿ ಯಾವುದೇ ಒಂದು ಪಕ್ಷದ ಪಾರಮ್ಯವನ್ನು ಒಪ್ಪಿಕೊಂಡಿಲ್ಲ. ತುರ್ತುಪರಿಸ್ಥಿತಿಯ ನಂತರದ ಐದು ದಶಕಗಳಲ್ಲಿ ಇದು ಸ್ಪಷ್ಟವಾಗಿ ಸಾಬೀತಾಗಿದೆ. ಈ ಹಿನ್ನೆಲೆಯಲ್ಲೇ ಕಾಂಗ್ರೆಸ್ ತನ್ನ ಚುನಾವಣಾ ನೀತಿಯನ್ನೂ ಪರಾಮರ್ಶೆಗೊಳಪಡಿಸಬೇಕಿದೆ. ಕಾಂಗ್ರೆಸ್ ಪಕ್ಷವನ್ನು ಹೊರತುಪಡಿಸಿ ಉಳಿದೆಲ್ಲಾ ಪ್ರಾದೇಶಿಕ ಪಕ್ಷಗಳು ಸಮ್ಮಿಶ್ರ ಸರ್ಕಾರವನ್ನು ಸ್ಥಾಪಿಸುವ ಸಾಧ್ಯತೆಗಳು ಎಷ್ಟೇ ಕ್ಷೀಣ ಎನಿಸಿದರೂ ಇದರ ಸಾಧ್ಯತೆಗಳನ್ನು ಇಂದಿಗೂ ಅಳಿಸಿಹಾಕಲಾಗುವುದಿಲ್ಲ. ಆದರೆ ಈ ಪಕ್ಷಗಳ ಸೈದ್ಧಾಂತಿಕ ನೆಲೆಗಳು, ತಾತ್ವಿಕ ನಿಲುವುಗಳು ಮತ್ತು ರಾಜಕೀಯ ಉದ್ದೇಶಗಳು ಒಂದು ಭೂಮಿಕೆಯಲ್ಲಿ ಸಮ್ಮಿಳಿತವಾಗುವುದು ಸವಾಲಿನ ಪ್ರಶ್ನೆಯಾಗಿಯೇ ಉಳಿಯಲಿದೆ. ಹಾಗೆಯೇ ಈ ಪ್ರಾದೇಶಿಕ ಪಕ್ಷಗಳ ಪೈಕಿ ಬಿಜೆಪಿಯೊಡನೆ ಯಾವುದೇ ಕಾರಣಕ್ಕೂ ಕೈಜೋಡಿಸುವುದಿಲ್ಲ ಎಂದು ಖಚಿತವಾಗಿ ಹೇಳಬಹುದಾದರೆ ಅದು ಡಿಎಂಕೆ ಮತ್ತು ಆರ್ಜೆಡಿ ಪಕ್ಷ ಮಾತ್ರವೇ.
ಉಳಿದೆಲ್ಲಾ ಪಕ್ಷಗಳೂ ಅಧಿಕಾರ ರಾಜಕಾರಣದ ಬಾಲಂಗೋಚಿಗಳಾಗಿಯೇ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತವೆ ಇದರಲ್ಲಿ ಕರ್ನಾಟಕದ ಜೆಡಿಎಸ್ ಸಹ ಒಂದಾಗಿದೆ. ಈ ಪಕ್ಷಗಳು ಒಂದಾಗಿ ಕಾಂಗ್ರೆಸ್-ಬಿಜೆಪಿಯನ್ನು ಹೊರತುಪಡಿಸಿದ ಸಮ್ಮಿಶ್ರ ಸರ್ಕಾರವನ್ನು ರಚಿಸಲು ಸಾಧ್ಯವಾದರೂ, ಯಾವುದೇ ಪಕ್ಷಕ್ಕೂ ಒಂದು ಸ್ಪಷ್ಟ ಆರ್ಥಿಕ ನೀತಿಯಾಗಲೀ, ಸೈದ್ಧಾಂತಿಕ ತಳಹದಿಯಾಗಲೀ ಇಲ್ಲದಿರುವುದು ಮುಖ್ಯ ಸಮಸ್ಯೆಯಾಗುತ್ತದೆ. ಈವರೆಗಿನ ಚುನಾವಣೆಗಳಲ್ಲಿ ಈ ಯಾವುದೇ ಪಕ್ಷಗಳೂ ಸಹ ನವ ಉದಾರವಾದದ ಬಗ್ಗೆ, ಮಾರುಕಟ್ಟೆ ಆರ್ಥಿಕ ನೀತಿಗಳ ಬಗ್ಗೆ ಸ್ಪಷ್ಟ ನಿಲುವು ಸ್ಪಷ್ಟಪಡಿಸಿಲ್ಲ. ಹಾಗೆಯೇ ಹಣಕಾಸು ಬಂಡವಾಳದ ಆಧಿಪತ್ಯವನ್ನು ಪ್ರಶ್ನಿಸಿಯೂ ಇಲ್ಲ. ಕಾಂಗ್ರೆಸ್ ಅಥವಾ ಬಿಜೆಪಿ ಅನುಸರಿಸುವ ಮಾರುಕಟ್ಟೆ ನೀತಿಗಳನ್ನೇ ಮೌನವಾಗಿ ಅಥವಾ ಕೊಂಚ ವಿರೋಧದೊಡನೆ ಅನುಮೋದಿಸುವ ಈ ಪಕ್ಷಗಳು ತಮ್ಮ ಪ್ರಾದೇಶಿಕ ಅಸ್ತಿತ್ವ ಮತ್ತು ನೆಲೆಯನ್ನು ಸಂರಕ್ಷಿಸಿಕೊಳ್ಳಲು ಅಗತ್ಯವಾದ ರಾಜಕೀಯ ನಿರ್ಧಾರಗಳನ್ನು ಕೈಗೊಳ್ಳುತ್ತವೆ. ಪರ್ಯಾಯ ರಾಜಕಾರಣದ ಬಹುದೊಡ್ಡ ಕೊರತೆಯೂ ಇದೇ ಆಗಿದೆ.
ರಾಹುಲ್ ಪ್ರಿಯಾಂಕ ನಾಯಕತ್ವ
ಒಂದು ರೀತಿಯಲ್ಲಿ 2014ರ ನಂತರದ ರಾಜಕಾರಣದಲ್ಲಿ ಕಾಂಗ್ರೆಸ್ ನಿರಂತರ ಅಗ್ನಿಪರೀಕ್ಷೆ ಎದುರಿಸುತ್ತಿದೆ. ಪಕ್ಷವನ್ನು ತಳಮಟ್ಟದಿಂದಲೇ ಪುನರ್ ಸಂಘಟಿಸಬೇಕಾದ ಅನಿವಾರ್ಯತೆ ಪಕ್ಷಕ್ಕೆ ಎದುರಾಗಿದೆ. ವಿವಿಧ ರಾಜ್ಯಗಳಲ್ಲಿ ತನ್ನ ಕುಸಿದ ಜನಬೆಂಬಲಕ್ಕೆ ಕಾರಣಗಳನ್ನು ಶೋಧಿಸುವಲ್ಲಿಯೂ ಕಾಂಗ್ರೆಸ್ ನಾಯಕತ್ವ ಸಂಪೂರ್ಣ ವಿಫಲವಾಗಿದೆ. ಇದಕ್ಕೆ ಕುಟುಂಬ ರಾಜಕಾರಣವೇ ಪ್ರಧಾನ ಕಾರಣ ಎನ್ನಲಾಗುವುದಿಲ್ಲವಾದರೂ, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕತ್ವವನ್ನು ಕುರಿತು ಚರ್ಚಿಸುವಾಗ ಗಾಂಧಿ ಕುಟುಂಬ(ಇಂದಿರಾಗಾಂಧಿ)ದ ಆಚೆಗೆ ಯೋಚಿಸಲೂ ಪಕ್ಷಕ್ಕೆ ಸಾಧ್ಯವಾಗದೆ ಇರುವುದು ದುರಂತ. ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರ ಕೊರತೆ ಇಲ್ಲ. ಇಂದಿಗೂ ಸಹ ರಾಷ್ಟ್ರವ್ಯಾಪಿಯಾಗಿ ಗ್ರಾಮ ಗ್ರಾಮಗಳಲ್ಲೂ ತಳಮಟ್ಟದ ಕಾರ್ಯಕರ್ತರನ್ನು ಹೊಂದಿರುವ ಏಕೈಕ ರಾಜಕೀಯ ಪಕ್ಷ ಎಂದರೆ ಕಾಂಗ್ರೆಸ್ ಮಾತ್ರವೇ. ಆದರೆ ಚುನಾವಣಾ ಸೋಲುಗಳು ಮತ್ತು ನಾಯಕತ್ವದ ಕೊರತೆಯಿಂದ ಈ ಕಾರ್ಯಕರ್ತರು ಪ್ರಾದೇಶಿಕ ಪಕ್ಷಗಳೆಡೆಗೆ ಅಥವಾ ಜಾತಿ ರಾಜಕಾರಣದೆಡೆಗೆ ಅಥವಾ ಬಿಜೆಪಿಯ ಕೋಮುವಾದದಿಂದ ಆಕರ್ಷಿತರಾಗಿ ತಮ್ಮ ಭವಿಷ್ಯವನ್ನು ನಿರ್ಧರಿಸಿಕೊಳ್ಳಲು ಮುಂದಾಗಿದ್ದಾರೆ.
ಈ ಕಳೆದುಕೊಂಡ ಕಾರ್ಯಕರ್ತರ ನೆಲೆಯನ್ನು ಪುನಃ ಸಂಪಾದಿಸಬೇಕೆಂದರೆ ಕಾಂಗ್ರೆಸ್ ಪಕ್ಷಕ್ಕೆ ಒಂದು ಸಮರ್ಥ ನಾಯಕತ್ವ ಬೇಕಿದೆ. ಈ ನಾಯಕತ್ವವನ್ನು ಗಾಂಧಿ ಕುಟುಂಬದಲ್ಲೇ ಕಂಡುಕೊಳ್ಳುವ ಅನಿವಾರ್ಯತೆ ಇಲ್ಲವಾದರೂ, ಕಾಂಗ್ರೆಸ್ ಹೈಕಮಾಂಡ್ ಇದೇ ನಿರ್ಧಾರವನ್ನು ಕೈಗೊಂಡಂತಿದೆ. ಹಾಗಾಗಿಯೇ ಉತ್ತರಪ್ರದೇಶದಲ್ಲಿ ಪ್ರಿಯಾಂಕ ತಮ್ಮ ಪ್ರಭಾವವನ್ನು ವಿಸ್ತರಿಸುವ ಪ್ರಯತ್ನದಲ್ಲಿದ್ದಾರೆ. ರಾಹುಲ್ ರಾಷ್ಟ್ರಮಟ್ಟದಲ್ಲಿ ಮೋದಿಗೆ ಪರ್ಯಾಯವಾಗಿ ಒಬ್ಬ ನಾಯಕನಾಗಿ ಹೊರಹೊಮ್ಮುವ ಪ್ರಯತ್ನದಲ್ಲಿದ್ದಾರೆ. ಹಾಗೆ ನೋಡಿದರೆ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ನಾಯಕತ್ವ ವಹಿಸಿಕೊಳ್ಳುವ ಸಾಮರ್ಥ್ಯ ಬಹಳಷ್ಟು ನಾಯಕರಲ್ಲಿದೆ. ರಾಷ್ಟ್ರವ್ಯಾಪಿ ವರ್ಚಸ್ಸಿನ ಕೊರತೆ ಇದ್ದರೂ, ಪಕ್ಷದ ವರ್ಚಸ್ಸು ಹೆಚ್ಚಾದಲ್ಲಿ ಈ ಕೊರತೆಯನ್ನೂ ನೀಗಿಸಬಹುದು. ಆದರೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಈ ಕುರಿತು ಗಂಭೀರ ಆಲೋಚನೆಯನ್ನೇ ಮಾಡದಿರುವುದು ದುರಾದೃಷ್ಟಕರ.
ರಾಹುಲ್ ಅಧಿಕಾರ ರಾಜಕಾರಣದಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿದ್ದರೂ ಒಂದು ಸಚಿವ ಪದವಿಯನ್ನೂ ಅನುಭವಿಸಿದವರಲ್ಲ. ಒಂದು ಪಕ್ಷದ ರಾಜಕೀಯ ನಾಯಕತ್ವ ವಹಿಸುವುದಕ್ಕೂ, ಅದೇ ಪಕ್ಷದ ಸರ್ಕಾರ ರಚನೆಯಾದಾಗ ಆಡಳಿತ ನಿರ್ವಹಣೆಯ ಮುಂದಾಳತ್ವ ವಹಿಸುವುದಕ್ಕೂ ಬಹಳಷ್ಟು ಅಂತರವಿದೆ ಎಂಬ ವಾಸ್ತವವನ್ನು ರಾಹುಲ್ ಗ್ರಹಿಸಬೇಕಿದೆ. ಇಲ್ಲಿ ಕೇವಲ ಅನುಭವದ ಪ್ರಶ್ನೆಯೊಂದೇ ಕಾಡುವುದಿಲ್ಲ. ರಾಜೀವ್ ಗಾಂಧಿ ಸಹ ಯಾವುದೇ ಅನುಭವವಿಲ್ಲದೆ ಅಧಿಕಾರದ ಗದ್ದುಗೆ ಏರಿದವರು. ಆದರೆ ಈ ಹಂತದಲ್ಲಿ ಒಬ್ಬ ನಾಯಕನಿಗೆ ಪಕ್ಷದೊಳಗಿನ ಆಂತರಿಕ ತುಮುಲಗಳನ್ನು, ವೈರುಧ್ಯಗಳನ್ನು ಮತ್ತು ಆಕಾಂಕ್ಷೆಗಳನ್ನು ಸಮಚಿತ್ತದೊಂದಿಗೆ ನಿಭಾಯಿಸುವ ಸಾಮಥ್ರ್ಯ ಇರಬೇಕಾಗುತ್ತದೆ. ಹಾಗೆಯೇ ಪಕ್ಷದಲ್ಲಿನ ಕಿರಿಯರ ಆಕಾಂಕ್ಷೆಗಳನ್ನು, ಹಿರಿಯ ನಾಯಕರ ಅಹಮಿಕೆ, ಪ್ರತಿಷ್ಠೆ ಮತ್ತು ನಿರೀಕ್ಷೆಗಳನ್ನು ನಿಭಾಯಿಸುವ ಕ್ಷಮತೆಯೂ ಇರಬೇಕಾಗುತ್ತದೆ. ರಾಹುಲ್ ಗಾಂಧಿಯಲ್ಲಿ ಈ ಗುಣಗಳು ಇವೆ ಎನ್ನಲು ಯಾವುದೇ ಪೂರ್ವ ನಿದರ್ಶನಗಳಿಲ್ಲ. ಅವರು ಪಕ್ಷದ ಮುಖವಾಣಿಯಾಗಿ, ವಕ್ತಾರರಾಗಿ, ವಸ್ತುಶಃ ಅಧ್ಯಕ್ಷರಾಗಿಯೇ ರಾಹುಲ್ ಗಾಂಧಿಯ ನಿರ್ವಹಣೆಯ ಶೈಲಿಯನ್ನು ಗಮನಿಸಿದರೆ ಈ ಲಕ್ಷಣಗಳನ್ನು ಕಾಣಲಾಗುವುದಿಲ್ಲ.
ಪ್ರಿಯಾಂಕ ಕಳೆದ ಮಹಾ ಚುನಾವಣೆಗಳ ನಂತರದಲ್ಲಿ ಹೆಚ್ಚು ಸಕ್ರಿಯವಾಗಿದ್ದರೂ, ಆಕೆಯಲ್ಲಿನ ನಾಯಕತ್ವದ ಗುಣಗಳನ್ನು ಅಳೆಯಲು ಯಾವುದೇ ಅವಕಾಶಗಳೂ ಲಭ್ಯವಾಗಿಲ್ಲ. ಇಂದಿರಾಗಾಂಧಿಯ ಅಳಿಯದ ವರ್ಚಸ್ಸು ಉತ್ತರ ಪ್ರದೇಶ ಮತ್ತು ಉತ್ತರದ ಕೆಲವು ರಾಜ್ಯಗಳಲ್ಲಿ ನೆರವಾಗಬಹುದಾದರೂ ಇತರ ರಾಜ್ಯಗಳಲ್ಲಿ ಈ ಪ್ರಭಾವ ಹೆಚ್ಚಾಗಿ ಕಾಣಲಾಗುವುದಿಲ್ಲ. ಸಾರ್ವಜನಿಕ ಸಭೆಗಳಲ್ಲಿ ನೆರೆಯುವ ಜನರನ್ನು ಚುನಾವಣೆಗಳ ಸಂದರ್ಭದಲ್ಲಿ ಮತದಾರರಾಗಿ ಪರಿವರ್ತಿಸಲು ಬೂತ್ ಮಟ್ಟದಲ್ಲೇ ಸಾಕಷ್ಟು ತಯಾರಿ ನಡೆಯಬೇಕಾಗುತ್ತದೆ. ಈ ತಯಾರಿಗೆ ಪೂರಕವಾಗಿ ಪಕ್ಷದ ವತಿಯಿಂದ ರಾಷ್ಟ್ರಮಟ್ಟದ, ರಾಜ್ಯಮಟ್ಟದ ಮತ್ತು ಪ್ರಾದೇಶಿಕ ಮಟ್ಟದ ಕಾರ್ಯಯೋಜನೆಗಳು, ಆಡಳಿತ ನೀತಿಗಳ ರೂಪುರೇಷೆಗಳು ಸಿದ್ಧವಾಗುವುದೂ ಅತ್ಯವಶ್ಯಕ. ಇದಾವುದರ ಆಲೋಚನೆಯೂ ಇಲ್ಲದೆ ಸಾರ್ವಜನಿಕ ಜೀವನದಲ್ಲಿ ವ್ಯಕ್ತವಾಗುವ ವಿಶ್ವಾಸವನ್ನೇ ನೆಚ್ಚಿಕೊಂಡಿರುವುದು ಪ್ರಬುದ್ಧ ರಾಜಕಾರಣದ ಲಕ್ಷಣವೂ ಅಲ್ಲ ಈ ನಿಟ್ಟಿನಲ್ಲಿ ಪ್ರಿಯಾಂಕಾ ಕಲಿಯಬೇಕಾದ್ದು ಸಾಕಷ್ಟಿದೆ.
2024ರ ಸಿದ್ಧತೆಗಳೂ ಪರ್ಯಾಯವೂ
2024ರ ವೇಳೆಗೆ ನರೇಂದ್ರ ಮೋದಿ ಮತ್ತು ಬಿಜೆಪಿ ಗಳಿಸಿರುವ ರಾಷ್ಟ್ರವ್ಯಾಪಿ ವರ್ಚಸ್ಸು ಮತ್ತು ಜನಬೆಂಬಲವನ್ನು ಮೀರಿ ಒಂದು ಪರ್ಯಾಯ ಸರ್ಕಾರವನ್ನು ರಚಿಸಬೇಕೆಂದರೆ ಕಾಂಗ್ರೆಸ್ ಪಕ್ಷ ಒಂದು ಸ್ಪಷ್ಟ ಆರ್ಥಿಕ ನೀತಿಯನ್ನು ಸಿದ್ಧಪಡಿಸಬೇಕಾಗುತ್ತದೆ. ಶೋಷಿತ ಸಮುದಾಯಗಳಿಗೆ ಆಡಳಿತ ವ್ಯವಸ್ಥೆಯಲ್ಲಿ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ನೀಲನಕ್ಷೆಯನ್ನು ಸಿದ್ಧಪಡಿಸಬೇಕಾಗುತ್ತದೆ. ಮೋದಿ ಸರ್ಕಾರ ಅನುಸರಿಸುತ್ತಿರುವ ವಿನಾಶಕಾರಿ, ಜನವಿರೋಧಿ ಆರ್ಥಿಕ ನೀತಿಗಳಿಂದ ಭಿನ್ನವಾದ ಒಂದು ಸಮಾಜವಾದಿ ದೃಷ್ಟಿಕೋನದ ಆರ್ಥಿಕ ನೀತಿಯನ್ನು ಕಾಂಗ್ರೆಸ್ ಜನತೆಯ ಮುಂದಿಡಬೇಕಾಗುತ್ತದೆ. ಇಂದು ಅತಿ ಹೆಚ್ಚು ವಿವಾದಕ್ಕೀಡಾಗಿರುವ ಕೃಷಿ ಕಾಯ್ದೆಗಳು ಮತ್ತು ಕಾರ್ಮಿಕ ಸಂಹಿತೆಗಳು ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ಅನಿವಾರ್ಯತೆಯಾಗಿದ್ದು, ಇದಕ್ಕೆ ವಿರುದ್ಧವಾಗಿ ಜನಪರವಾದ, ರೈತ ಕಾರ್ಮಿಕ ಪರವಾದ ಆರ್ಥಿಕ ನೀತಿಗಳನ್ನು ಜಾರಿಗೊಳಿಸಲು ಕಾಂಗ್ರೆಸ್ ಸಜ್ಜಾಗಿದೆಯೇ ?
ಈ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಲಾಗದಿದ್ದರೆ ಬಹುಶಃ ಜನಸಾಮಾನ್ಯರನ್ನು ಬಿಜೆಪಿಯಿಂದ ದೂರ ಸೆಳೆಯುವುದು ಕಷ್ಟವಾಗುತ್ತದೆ. ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯೊಂದಿಗೆ, ಕಾರ್ಪೋರೇಟ್ ಔದ್ಯಮಿಕ ಹಿತಾಸಕ್ತಿಗಳಿಗೆ ಪೂರಕವಾದ ಆರ್ಥಿಕ ನೀತಿಗಳನ್ನು ಅನುಸರಿಸುತ್ತಲೇ, ಜನರ ಹಿಂದೂ ಅಸ್ಮಿತೆಯನ್ನೂ ಕಾಪಾಡುವ ಭರವಸೆಯೊಂದಿಗೆ ಬಿಜೆಪಿ ಇನ್ನೂ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಇದರ ವಿರುದ್ಧ ಕಾಂಗ್ರೆಸ್ ತನ್ನ ಕಾರ್ಯಯೋಜನೆ ಮತ್ತು ಕಾರ್ಯನೀತಿಯನ್ನು ರೂಪಿಸಬೇಕಿದೆ. ಇಲ್ಲವಾದಲ್ಲಿ ಮಮತಾ ಬ್ಯಾನರ್ಜಿಯಂತಹ ಪ್ರಾದೇಶಿಕ ನಾಯಕತ್ವಕ್ಕೆ ಮನ್ನಣೆ ನೀಡಿ ಕಾಂಗ್ರೆಸ್ ಪಕ್ಷ ಬಿಜೆಪಿಯನ್ನು ಹೊರಗಿಡುವ ಪ್ರಯತ್ನವನ್ನು ಮಾಡಬೇಕಿದೆ. ತನ್ನ ನೆಲೆಯೇ ಇಲ್ಲದ ಸ್ಥಾನಗಳಲ್ಲೂ ಪ್ರತಿಷ್ಠೆಗಾಗಿ ಸ್ಪರ್ಧಿಸುವ ಹಠಮಾರಿ ಧೋರಣೆಯಿಂದ ಮುಕ್ತವಾಗುವವರೆಗೂ ಕಾಂಗ್ರೆಸ್ ಪಕ್ಷ ಈ ಒಂದು ಸಮನ್ವಯ ಸಾಧಿಸುವುದು ಅಸಾಧ್ಯ ಎಂದೇ ಹೇಳಬಹುದು. ಈ ಎಲ್ಲ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಕ್ಷಮತೆ ರಾಹುಲ್ ಮತ್ತು ಪ್ರಿಯಾಂಕ ಅವರಲ್ಲಿದೆಯೇ ಎನ್ನುವುದೇ ಯಕ್ಷಪ್ರಶ್ನೆ.
ಕೃಪೆ : ಶೌರ್ಯ ಸಂದೇಶ ವಾರಪತ್ರಿಕೆ