“With all humility at our command, we are sorry to know that he has passed away. We are shocked…” ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಜಸ್ಟಿಸ್ ಎಸ್ ಎಸ್ ಶಿಂಧೆ ಹೀಗೆ ಉದ್ಘರಿಸುವುದರೊಂದಿಗೆ ಎಲ್ಲ ಮುಗಿದುಹೋಯಿತು. ಶಿಂಧೆಯವರು ಸ್ಟಾನ್ ಸ್ವಾಮಿಯವರ ಜಾಮೀನು ಅರ್ಜಿಯ ವಿಚಾರಣೆ ನಡೆಸುತ್ತಿದ್ದ ದ್ವಿಸದಸ್ಯ ಪೀಠವನ್ನು ಮುನ್ನಡೆಸುತ್ತಿದ್ದವರು.
ನಿನ್ನೆ ಸೋಮವಾರ ಮಧ್ಯಾಹ್ನ 1.24ಕ್ಕೆ ಫಾದರ್ ಸ್ಟಾನ್ ಸ್ವಾಮಿ ತೀರಿಕೊಂಡರೆಂಬ ವಿಷಯವನ್ನು ಹೋಲಿ ಫ್ಯಾಮಿಲಿ ಆಸ್ಪತ್ರೆಯ ನಿರ್ದೇಶಕ ಡಾ ಡಿಸೋಜಾ ಹೈಕೋರ್ಟಿಗೆ ತಿಳಿಸಿದರು. ಅದಕ್ಕೂ ಮುನ್ನ ಹೃದಯಾಘಾತವಾಗಿದ್ದ ಸ್ವಾಮಿಯವರನ್ನು ವೆಂಟಿಲೇಟರ್ ನಲ್ಲಿ ಇಡಲಾಗಿತ್ತು. ಹೈಕೋರ್ಟ್ ಜಾಮೀನು ಅರ್ಜಿಯ ತೀರ್ಪು ನೀಡಿ ಸ್ವಾಮಿಯವರಿಗೆ ಬಿಡುಗಡೆ ನೀಡುತ್ತಿತ್ತೇನೋ? ಆದರೆ ಕಾಲ ಮಿಂಚಿಹೋಗಿತ್ತು.
ಎಂಥ ವಿಚಿತ್ರ ನೋಡಿ, ಭಯೋತ್ಪಾದನೆಯಂಥ ಗಂಭೀರ ಆರೋಪ ಹೊರೆಸಿ, ಯುಎಪಿಎ ಅಡಿಯಲ್ಲಿ ಮಾನವಹಕ್ಕು ಹೋರಾಟಗಾರರಾದ ಸ್ಟಾನ್ ಸ್ವಾಮಿಯವರನ್ನು NIA ಬಂಧಿಸಿದ ಮೇಲೆ ಒಂದೇ ಒಂದು ದಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಅವರನ್ನು ಪಡೆದಿರಲಿಲ್ಲ! ಫಾರ್ಮಾಲಿಟಿಗಾದರೂ ಅಥವಾ ತೋರಿಕೆಗಾದರೂ ಒಂದು ವಾರ, ಹೋಗಲಿ ಒಂದು ದಿನದ ಕಸ್ಟಡಿಯನ್ನು ಕೇಳಬಹುದಿತ್ತಲ್ಲವೇ? ಊಹೂಂ ಅವರು ಕೇಳಲೇ ಇಲ್ಲ!
ಮೇ.28 ರಂದು ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಎನ್.ಜೆ.ಜಾಮಧಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ ಸ್ಟಾನ್ ಸ್ವಾಮಿಯವರನ್ನು ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ದಾಖಲಿಸಲು ಆದೇಶಿಸಿದ್ದರು. ಅಂದೇ ಅವರನ್ನು ಅಲ್ಲಿಗೆ ಶಿಫ್ಟ್ ಮಾಡಲಾಯಿತು. ಜೂನ್ 1ರಂದು ಅವರು ಕರೋನಾ ಪಾಜಿಟಿವ್ ಆದರು. ಅದಕ್ಕೆ ಮುನ್ನ ಒಂದು ವಾರದ ಕೆಳಗಷ್ಟೇ ಅವರನ್ನು ಜೆಜೆ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅವರಿಗೆ ಕೋವಿಡ್ ಪರೀಕ್ಷೆಯನ್ನೂ ಸಹ ಮಾಡಲಾಗಿರಲಿಲ್ಲ.! ಉದ್ದೇಶ ಏನಿದ್ದಿರಬಹುದು ಎಂದು ಯಾರಾದರೂ ಊಹಿಸಬಹುದಲ್ಲವೇ?
ಮೇ ತಿಂಗಳಿನಲ್ಲಿ ಸ್ವಾಮಿ ಅವರ ಜಾಮೀನು ಅರ್ಜಿಯನ್ನು NIA ವಿಶೇಷ ನ್ಯಾಯಾಲಯ ತಿರಸ್ಕರಿಸಿತ್ತು. ಅಲ್ಲಿನ ನ್ಯಾಯಮೂರ್ತಿ ಜಸ್ಟಿಸ್ ಕಥಾವಾಲಾ ಅವರ ಮುಂದೆ ಸ್ವತಃ ಸ್ವಾಮಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ಹೇಳಿಕೆ ನೀಡಿದ್ದರು. ಬಂಧನಕ್ಕೊಳಗಾದ ನಂತರ ಎಂಟು ತಿಂಗಳಲ್ಲಿ ತಮ್ಮ ದೇಹದಲ್ಲಾಗುತ್ತಿರುವ ಬದಲಾವಣೆಗಳ ಕುರಿತು ಅವರು ಗಮನ ಸೆಳೆದಿದ್ದರು.
Also Read: ನ್ಯಾಯ ದೊರೆಯಲಿಲ್ಲ, ಸಾವು ಕಾಯಲಿಲ್ಲ: ಜೈಲಿನಲ್ಲೇ ಕೊನೆಯುಸಿರೆಳೆದ ಫಾದರ್ ಸ್ಟಾನ್ ಸ್ವಾಮಿ!
“ನಾನು ಈ ತಲೋಜಾ ಜೈಲಿಗೆ ಬಂದಾಗ ನನ್ನ ದೇಹದ ವ್ಯವಸ್ಥೆ ಸರಿಯಾಗಿಯೇ ಇತ್ತು. ಎಂಟು ತಿಂಗಳಿನಿಂದ ನನ್ನ ದೇಹದ ಚಟುವಟಿಕೆಗಳು ನಿಧಾನವಾಗಿ ಕುಸಿಯುತ್ತ ಬಂದಿದೆ. ಇಲ್ಲಿಗೆ ಬರುವ ಮುನ್ನ ನಾನು ನಡೆದಾಡುತ್ತಿದ್ದೆ, ಬರೆಯುತ್ತಿದ್ದೆ. ಯಾರ ಸಹಾಯವೂ ಇಲ್ಲದೆ ಸ್ನಾನಮಾಡುತ್ತಿದ್ದೆ. ಈಗ ನಾನು ಬರೆಯಲಾರೆ, ಓಡಾಡಲಾರೆ. ಊಟವನ್ನೂ ಸಹ ಯಾರಾದರೂ ಮಾಡಿಸಬೇಕಾದ ಸ್ಥಿತಿ ತಲುಪಿದ್ದೇನೆ. ಹೀಗೆಲ್ಲ ಯಾಕಾಯಿತು? ಇದರ ಬಗ್ಗೆ ದಯವಿಟ್ಟು ಗಮನಹರಿಸಿ” ಎಂದು ಸ್ವಾಮಿ ಕೋರಿದ್ದರು.
Also Read: ಎಲ್ಗರ್ ಪರಿಷತ್ ಪ್ರಕರಣ: ಉಳಿದ ಕಾರ್ಯಕರ್ತರ ಜಾಮೀನು ಅರ್ಜಿಗಳ ಸ್ಥಿತಿಗತಿಯೇನು?
ಕಳೆದ ಎಂಟು ತಿಂಗಳಲ್ಲಿ ಸ್ವಾಮಿ ಅವರ ವಕೀಲರಾದ ದೇಸಾಯಿಯವರು ಹಲವು ಬಾರಿ ನ್ಯಾಯಾಲಯದ ಬಳಿ ಜಾಮೀನಿಗಾಗಿ ಬೇಡಿಕೊಂಡಿದ್ದರು. ಆದರೆ ಪ್ರತಿಬಾರಿಯೂ NIA ಪ್ರಬಲವಾಗಿ ಜಾಮೀನಿಗೆ ಆಕ್ಷೇಪಣೆ ಸಲ್ಲಿಸುತ್ತಿತ್ತು. ಸ್ವಾಮಿಯವರಿಗೆ ಆಸ್ಪತ್ರೆಗೆ ಸೇರುವುದು ಬೇಡವಾಗಿತ್ತು. ಅವರಿಗೆ ಬೇಕಾಗಿದ್ದು ಬಿಡುಗಡೆ, ಅವರು ರಾಂಚಿಯಲ್ಲಿ ತನ್ನ ಸಂಗಾತಿಗಳ ಜತೆ ಇರಲು ಬಯಸಿದ್ದರು. ಆದರೆ ವ್ಯವಸ್ಥೆ ಕ್ರೂರವಾಗಿತ್ತು. ಅವರು ಬಯಸಿದ್ದು ಅವರಿಗೆ ಸಿಗಲೇ ಇಲ್ಲ.
ಎಲ್ಲರಿಗೂ ಗೊತ್ತಿರುವಂತೆ ಸ್ಟಾನ್ ಸ್ವಾಮಿಯವರಿಗೆ ಪಾರ್ಕಿನ್ಸನ್ ಖಾಯಿಲೆ ಇತ್ತು. ಅವರ ಕೈಗಳು ನಡುಗುತ್ತಿದ್ದವು. ಹೀಗಾಗಿ ಒಂದು ಲೋಟವನ್ನು ಹಿಡಿದುಕೊಳ್ಳಲು ಸಾಧ್ಯವಿರಲಿಲ್ಲ. ಹೀಗಾಗಿ ತಮ್ಮ ಕೈಚೀಲದಲ್ಲಿ ಅವರು ಸ್ಟ್ರಾ ಮತ್ತು ಸಿಪ್ಪರ್ ಇಟ್ಟುಕೊಂಡಿದ್ದರು. NIA ಪೊಲೀಸರು ಫಾದರ್ ಅವರನ್ನು ಬಂಧಿಸಿದಾಗ ಅವರ ಕೈಚೀಲವನ್ನು ಸೀಜ್ ಮಾಡಿದ್ದರು. ಕಳೆದವರ್ಷ ನವೆಂಬರ್ 7ರಂದು ಸ್ವಾಮಿಯವರು ತಮಗೆ ತಮ್ಮ ಕೈಚೀಲದಲ್ಲಿರುವ ಸ್ಟ್ರಾ ಮತ್ತು ಸಿಪ್ಪರ್ ಕೊಡಿಸುವಂತೆ NIA ವಿಶೇಷ ನ್ಯಾಯಾಲಯಕ್ಕೆ ಕೇಳಿಕೊಂಡಿದ್ದರು. ಈ ಬೇಡಿಕೆಯ ಕುರಿತು ಪ್ರತಿಕ್ರಿಯೆ ನೀಡಲು NIA ಪೊಲೀಸರು ನ್ಯಾಯಾಲಯದ ಬಳಿ ಕಾಲಾವಲಾಶ ಕೇಳಿದರು! ನ್ಯಾಯಮೂರ್ತಿ ಕೊಥಾಲಿಕರ್ 20 ದಿನವಳ ಕಾಲಾವಕಾಶ ನೀಡಿದರು! ಇಪ್ಪತ್ತು ದಿನಗಳ ನಂತರ NIA ಪೊಲೀಸರು ತಾವು ಸ್ವಾಮಿಯವರ ಕೈಚೀಲ ಸೀಜ್ ಮಾಡೇ ಇಲ್ಲ, ಹೀಗಾಗಿ ಸ್ಟ್ರಾ, ಸಿಪ್ಪರ್ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದ ಪರಿಣಾಮವಾಗಿ ಸಿಪ್ಪರ್ ಕೇಳಿದ ಅರ್ಜಿಯನ್ನು ನ್ಯಾಯಮೂರ್ತಿ ಕೊಥಾಲಿಕರ್ ವಜಾಗೊಳಿಸಿದರು!
ಇದಾದ ನಂತರ ಅನಿವಾರ್ಯವಾಗಿ ಸ್ವಾಮಿ ಪರ ವಕೀಲರಾದ ಶರೀಫ್ ಶೇಕ್, ಕೃತ್ತಿಕಾ ಅಗರ್ ವಾಲ್ ಅವರುಗಳು ಮತ್ತೆ ನ್ಯಾಯಾಲಯದ ಮುಂದೆ ಇನ್ನೊಂದು ಅರ್ಜಿಹಾಕಿ, ಹೊಸ ಸ್ಟ್ರಾ ಖರೀದಿ ಮಾಡಿ ಒದಗಿಸಲು ಅವಕಾಶ ನೀಡುವಂತೆ ಕೇಳಿದರು. ಈ ಬಾರಿ ಆಶ್ಚರ್ಯಪಡುವಂಥದ್ದೇನೂ ಇರಲಿಲ್ಲ, ಇದೇ ನ್ಯಾಯಮೂರ್ತಿ ಕೊಥಾಲಿಕರ್ ಜೈಲಿನ ಅಧಿಕಾರಿಗಳಿಗೆ ಈ ಕುರಿತು ಪ್ರತಿಕ್ರಿಯೆ ನೀಡಲು ಒಂದು ವಾರದ ಕಾಲಾವಕಾಶ ನೀಡಿದರು!
ಕೊನೆಗೆ ಜೈಲಿನ ಅಧಿಕಾರಿಗಳು, ವಕೀಲರುಗಳ ಒತ್ತಡದಿಂದಾಗಿ ಸ್ವಾಮಿ ಅವರಿಗೆ ಸ್ಟ್ರಾ ಒದಗಿಸಿದರು. ಕೊನೆಗೂ ನ್ಯಾಯಾಲಯದ ಸಹಾಯ ದೊರೆಯಲೇ ಇಲ್ಲ.!
ಇದೆಲ್ಲ ಮಾಡುವ ಮುನ್ನ ಬಂಧಿಸಿದ ಮಾರನೇ ದಿನವೇ ಗಲ್ಲಿಗೆ ಹಾಕಿಬಿಡಬಹುದಿತ್ತಲ್ಲವೇ? ಇಷ್ಟು ತಿಂಗಳುಗಳ ಕಾಲ ಆ ಹಿರಿಯ ಜೀವ ನರಳುವುದಾದರೂ ತಪ್ಪುತ್ತಿತ್ತು.
ಇದೆಲ್ಲ ನಾವು ಮಾತನಾಡುತ್ತಿರುವ ಹೊತ್ತಿಗೆ ಇನ್ನೊಬ್ಬ ಹಿರಿಯ ಮಾನವ ಹಕ್ಕು-ಕಾರ್ಮಿಕ ಹಕ್ಕು ಹೋರಾಟಗಾರ್ತಿ ಸುಧಾ ಭಾರದ್ವಾಜ್ ಅವರ ದೇಹಸ್ಥಿತಿ ವಿಷಮಿಸುತ್ತಿದೆ. ಹೇಳಲೇನು ಉಳಿದಿದೆ? ನಮ್ಮ ಆತ್ಮಸಾಕ್ಷಿಗಳು ಸತ್ತು, ಕೊಳೆತು ನಾರಲು ಶುರುವಾಗಿ ಎಷ್ಟೋ ಕಾಲವಾಗಿದೆ.