ಟಿ-20 ವಿಶ್ವಕಪ್ ಗೆ ಭರ್ಜರಿ ಸಿದ್ಧತೆ ನಡೆಸಿರುವ ಭಾರತ ತಂಡ ಆಸ್ಟ್ರೇಲಿಯಾ ಸರಣಿ ಗೆದ್ದ ಸಂಭ್ರಮದಲ್ಲಿದ್ದು, ಬುಧವಾರ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯನ್ನೂ ವಶಪಡಿಸಿಕೊಳ್ಳುವ ಉಮೇದಿನಲ್ಲಿದೆ.
ಕೇರಳದ ತಿರುವನಂಪುರಂನಲ್ಲಿ ನಡೆಯಲಿರುವ ಪಂದ್ಯ ಉಭಯ ತಂಡಗಳಿಗೆ ಮಹತ್ವದ್ದಾಗಿದೆ. ಟಿ-20 ವಿಶ್ವಕಪ್ ಗೂ ಮುನ್ನ ನಡೆಯಲಿರುವ ಕೊನೆಯ ಸರಣಿ ಇದಾಗಿರುವುದರಿಂದ ಎರಡೂ ತಂಡಗಳು ತಮ್ಮ ಸಾಮರ್ಥ್ಯವನ್ನು ಖಚಿತಪಡಿಸಿಕೊಳ್ಳುವ ಗುರಿ ಹೊಂದಿವೆ.
ಭಾರತ ತಂಡ ಈಗಾಗಲೇ ಬ್ಯಾಟಿಂಗ್ ನಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದೆ. ಆರಂಭಿಕನಾಗಿ ಕೆಎಲ್ ರಾಹುಲ್ ವೈಫಲ್ಯ ತಂಡವನ್ನು ಚಿಂತೆಗೀಡು ಮಾಡಿದ್ದರೆ, ವಿಕೆಟ್ ಕೀಪರ್ ಆಗಿ ಯಾರನ್ನು ಉಳಿಸಿಕೊಳ್ಳುವುದು ಎಂಬುದು ಮತ್ತೊಂದು ಚಿಂತೆಯ ವಿಷಯವಾಗಿದೆ.
ರೋಹಿತ್ ಶರ್ಮ, ಸೂರ್ಯಕುಮಾರ್, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಮತ್ತು ದಿನೇಶ್ ಕಾರ್ತಿಕ್ ಫಾರ್ಮ್ ನಲ್ಲಿ ಇರುವುದರಿಂದ ತಂಡ ಸಮಾಧಾನ ನಿಟ್ಟುಸಿರುಬಿಟ್ಟಿದೆ. ಆದರೆ ಕೊನೆಯ ಓವರ್ ಗಳಲ್ಲಿ ಕೈಚೆಲ್ಲುತ್ತಿರುವ ಬೌಲರ್ ಗಳ ಬಗ್ಗೆ ಹೆಚ್ಚು ಚಿಂತೆ ಮಾಡುವಂತಾಗಿದೆ.
ಹರ್ಷಲ್ ಪಟೇಲ್ ಗಾಯದಿಂದ ಚೇತರಿಸಿಕೊಂಡ ನಂತರ ಇನ್ನಷ್ಟೇ ಲಯ ಕಂಡುಕೊಳ್ಳಬೇಕಿದೆ. ಭುವನೇಶ್ವರ್ ಕುಮಾರ್ ಕೂಡ ಫಾರ್ಮ್ ಗೆ ಮರಳಬೇಕಿದೆ. ಅಕ್ಸರ್ ಪಟೇಲ್ ಮತ್ತು ಜಸ್ ಪ್ರೀತ್ ಬುಮ್ರಾ ಇಬ್ಬರ ಮೇಲೆ ತಂಡ ಹೆಚ್ಚು ಅವಲಂಬಿತವಾಗಿದೆ. ಹಾರ್ದಿಕ್ ಪಾಂಡ್ಯ ಬೌಲಿಂಗ್ ನಲ್ಲಿ ಅಷ್ಟೇನೂ ಗಮನಾರ್ಹ ಪ್ರದರ್ಶನ ನೀಡುತ್ತಿಲ್ಲ. ಆಲ್ ರೌಂಡರ್ ದೀಪಕ್ ಚಾಹರ್ ಗೆ ಇನ್ನೂ ಅವಕಾಶವೇ ಸಿಕ್ಕಿಲ್ಲ.
ಆದರೆ ಭಾರತಕ್ಕೆ ಹೋಲಿಸಿದರೆ ಆಸ್ಟ್ರೇಲಿಯಾ ಪಿಚ್ ಸಂಪೂರ್ಣ ಭಿನ್ನವಾಗಿದೆ. ಬೌನ್ಸಿ ಪಿಚ್ ಅಲ್ಲದೇ ಮೈದಾನ ಕೂಡ ದೊಡ್ಡದಾಗಿ ಇರುವುದರಿಂದ ಬೌಲರ್ ಗಳಿಗೆ ಸ್ವಲ್ಪ ಅವಕಾಶ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ.
ಟೆಂಬಾ ಬವುಮಾ ನೇತೃತ್ವದ ದಕ್ಷಿಣ ಆಫ್ರಿಕಾ ತಂಡದಲ್ಲಿ ಕ್ವಿಂಟನ್ ಡಿ ಕಾಕ್, ಏಡಿಯನ್ ಮರ್ಕರಂ ಮುಂತಾದ ಸ್ಟಾರ್ ಬ್ಯಾಟ್ಸ್ ಮನ್ ಗಳಿದ್ದಾರೆ ಬೌಲಿಂಗ್ ಕೂಡ ಉತ್ತಮವಾಗಿದ್ದು, ಕಾಗಿಸೊ ರಬಡಾ, ರಸೊವೌ ಮುಂತಾದವರು ಭಾರತದ ಬ್ಯಾಟ್ಸ್ ಮನ್ ಗಳನ್ನು ಕಾಡಬಲ್ಲರು.