ಕಳೆದ ೭-೮ ವರ್ಷಗಳಲ್ಲಿ ಭಾರತ ಭಯಂಕರವಾಗಿ ಬದಲಾಗಿದೆ. ಈ ಉದ್ದೇಶಿತ ಬದಲಾವಣೆಗಾಗಿ ಸರಿಸುಮಾರು ೯ ದಶಕಗಳ ಹಿಂದೆ ಅಡಿಗಲ್ಲನ್ನಿಡಲಾಗಿತ್ತು. ಒಂದು ದೇಶದ ಮೂಲಭೂತ ಹಾಗು ನೈಸರ್ಗಿಕ ಗುಣಧರ್ಮವನ್ನು ತಮಗೆ ಬೇಕಾದಂತೆ ತಿರುಚಲು ನೀಲನಕ್ಷೆಯೊಂದನ್ನು ಅಂದೇ ಸಿದ್ದಪಡಿಸಲಾಗಿತ್ತು. ಅದರನುಸಾರ ಹಂತಹಂತವಾಗಿ ಕಾರ್ಯಯೋಜನೆ ಅನುಷ್ಟಾನಗೊಳಿಸುತ್ತ ಬರಲಾಗಿತ್ತು. ಆ ಪರಿಶ್ರಮದ ಫಲವಾಗಿ ಅದಕ್ಕೆ ಕಾರಣವಾದವರು ಕಳೆದ ಏಳು ವರ್ಷಗಳ ಹಿಂದೆ ದೇಶದ ಅಧಿಕಾರದ ಗದ್ದುಗೆಯನ್ನು ವಶಪಡಿಸಿಕೊಂಡಿದ್ದಾರೆ. ಆ ಮೂಲಕ ದೇಶದ ಎಲ್ಲ ಮೂಲ ಗುಣಧರ್ಮಗಳಿಗೆ ಕರಸೇವೆಯನ್ನು ಮಾಡಿ ಬದಲಾಯಿಸಲಾಗುತ್ತಿದೆ. ದೇಶದಲ್ಲಾದ ಬದಲಾವಣೆಗಳನ್ನು ನಾವು ಹೀಗೆ ಗುರುತಿಸಬಹುದಾಗಿದೆ:
೧. ಭಾರತೀಯರ ಬೆಳಗಿನ ಹಾಗು ಸಾಯಂಕಾಲದ ವಾಯು ವಿಹಾರದ ಸಮಯವು ಪೊಲಿಟಿಕಲ್ ಸಂಗತಿಗಳುˌ ಕಚೇರಿ ಸಹೊದ್ಯೋಗಿಗಳು ಮತ್ತು ನೆರೆಹೊರೆಯವರ ಕುರಿತು ಗಾಸಿಪ್ ಹರಡುವ ಸಮಯವೆಂದು ಪರಿಗಣಿಸಲಾಗುತ್ತಿದೆ.
೨. ಮಾಧ್ಯಮ: ಮಾಧ್ಯಮಗಳು ದೇಶದ ಜನತಂತ್ರ ವ್ಯವಸ್ಥೆ ಮತ್ತು ಸಂವಿಧಾನವನ್ನು ಮುಗಿಸುವ ಗುತ್ತಿಗೆ ಪಡೆದಿವೆ. ಆಡಳಿರೂಢ ಸಕಾರದ ಸಮರ್ಥನೆˌ ವಿರೋಧ ಪಕ್ಷಗಳ ತೇಜೊವಧೆˌ ಚಿಂತಕರುˌ ವಿಚಾರವಾದಿಗಳುˌ ಬುದ್ದಿಜೀವಿಗಳ ಅವಹೇಳನˌ ಸುಳ್ಳು ಸುದ್ದಿಗಳ ಪ್ರಸಾರˌ ಜ್ಯೋತಿಷ್ಯ ˌ ಪಂಚಾಂಗˌ ಅತಿಮಾನುಷ ಕಥೆಗಳಂತ ಮೌಢ್ಯಗಳ ಅತಿರಂಜನೆ ಇವು ಪ್ರಸ್ತುತ ಭಾರತೀಯ ಮಾಧ್ಯಗಳು ಅನುಸರಿಸುತ್ತಿರುವ ಪಠ್ಯಕ್ರಮ.
೩. ಜನರಿಗೆ ಚುನಾವಣೆ ಒಂದು ಹಣ ಗಳಿಕೆಯ ಹಾಗು ಜಾತಿ/ಧರ್ಮಪ್ರೀತಿ ಪ್ರದರ್ಶನದ ಹಬ್ಬವಾಗಿ ಮಾರ್ಪಟ್ಟಿದೆ. ಜಾತಿ/ಮತ/ಧರ್ಮಗಳ ಮೇಲಾಟವು ದೇಶದ ಒಳಿತನ್ನು ನಗಣ್ಯಗೊಳಿಸಿವೆ.
೪. ರಾಜಕಾರಣಿಗಳು ಮತ್ತು ಧರ್ಮಾಧಿಕಾರಿಗಳು ಸಮಾಜವನ್ನು ದೇವರು-ಧರ್ಮ/ಜಾತಿ/ಮತಗಳ ಹೆಸರಿನಲ್ಲಿ ವಿಭಜಿಸುತ್ತಿದ್ದರೆ ಭಯೋತ್ಪಾದಕರು ಆಯಾ ಸಮುದಾಯಗಳನ್ನು ಧರ್ಮ ಹಾಗು ಸಾಂಸ್ಕೃತಿಕ ರಾಜಕಾರಣದ ಹೆಸರಿನಲ್ಲಿ ಒಂದಾಗಿಸುತ್ತಿದ್ದಾರೆ.
೫. ಪ್ರತಿಯೊಬ್ಬರೂ ಅವಸರದಲ್ಲಿದ್ದಾರೆ, ಆದರೆ ಸಮಯಕ್ಕೆ ಸರಿಯಾಗಿ ಯಾರೂ ತಲುಪಬೇಕಾದ ಸ್ಥಳಗಳನ್ನು ತಲುಪುತ್ತಿಲ್ಲ. ಎಲ್ಲರಿಗೂ ದೇಶದ ಒಳಿತಿಗಿಂತ ವೈಯಕ್ತಿಕ ಹಿತಾಸಕ್ತಿ ಮುಖ್ಯವಾಗಿದೆ.
೬. ಮಾಜಿ ಗೋಮಾಂಸ ಭಕ್ಷಕರು ಎಡಡುವರೆ ಸಾವಿರ ವರ್ಷಗಳ ಹಿಂದೆ ಸಸ್ಯಾಹಾರಿಗಳಾಗಿ ಬದಲಾಗಿದ್ದರೂ ಸಹ ಕದ್ದುಮುಚ್ಚಿ ಇಂದಿಗೂ ಮಾಂಸಾಹಾರ ಸೇವಿಸುವುದು ನಿಲ್ಲಿಸಿಲ್ಲ ಹಾಗು ಇಂದಿನ ಬಹಿರಂಗ ಮಾಂಸಾಹಾರಿಗಳನ್ನು ಹಿಯಾಳಿಸುವುದು ಬಿಟ್ಟಿಲ್ಲ. ಅನೇಕ ಮಾಂಸಾಹಾರಿಗಳು ಶ್ರೇಷ್ಟತೆಯ ವ್ಯಸನಕ್ಕೆ ಬಲಿಯಾಗಿ ಸಸ್ಯಾಹಾರಿಗಳೆಂದು ಹೇಳಿಕೊಳ್ಳುವುದು ಒಂದು ಒಣ ಪ್ರತಿಷ್ಚೆಯಾಗಿದೆ. ಅದಾಗ್ಯೂ ಸಹ ಆಹಾರ ಸ್ವಾತಂತ್ರ್ಯದ ಕುರಿತ ಚರ್ಚೆ ಇನ್ನೂ ನಿಂತಿಲ್ಲ.
೭. ದೇಶಭಕ್ತಿ/ರಾಷ್ಟ್ರೀಯವಾದ/ ಸಂಸ್ಕೃತಿ ರಕ್ಷಣೆಯ ನಾಟಕಕಾರರು ಅವಕಾಶ ಸಿಕ್ಕಾಗ ಅವೆಲ್ಲವನ್ನು ದಿಕ್ಕರಿಸಿ ಅಧುನಿಕ ಸೌಲಭ್ಯ ಪಡೆಯಲು ಹಾತೊರೆಯುತ್ತಿದ್ದಾರೆ. ಆದರೆ ಉಳಿದವರನ್ನು ಸಂಸ್ಕೃತಿಯ ಹೆಸರಿನಲ್ಲಿ ಅಧುನಿಕತೆಯಿಂದ ದೂರವಿಡುವ ಹುನ್ನಾರ ಮಾಡುತ್ತಿದ್ದಾರೆ.
೮. ಅನ್ಯಧರ್ಮ ದ್ವೇಷದ ಏಕೈಕ ಅಜೆಂಡಾ ಹೊಂದಿರುವ ಅನೇಕ ಅಸಹಿಷ್ಟು ಕಾರ್ಯಕ್ರಮಗಳನ್ನು ಪ್ರಸಾರಮಾಡುವ ಮನೆಹಾಳ ಟಿವಿ ಆಂಕರ್ ಗಳನ್ನು ರಾಷ್ಟ್ರೀಯವಾದಿ ಪತ್ರಕರ್ತನೆಂದು ಕರೆಯಲಾಗುತ್ತಿದೆ.
೯. ಗೀತೆ ಹಾಗು ಖುರಾನ್ ಹೆಸರಿನಲ್ಲಿ ಹೊಡೆದಾಡುವ ಮೂಢರು ಬಹುಶಃ ಗೀತೆ-ಖುರಾನ್ ಗಳನ್ನು ಓದಿಯೇಯಿಲ್ಲ. ಸಂಸ್ಕೃತಿಯ ಬಗ್ಗೆ ಭಾಷಣ ಮಾಡುವ ನಕಲಿಗಳ ಅಸಂಸ್ಕೃತ ಚಟುವಟಿಕೆಗಳು ಮೇಳೈಸುತ್ತಿವೆ. ಅಸಖ್ಯಾತ ಸಾಧಕ/ಮಹಾತ್ಮ/ದಾರ್ಶನಿಕರ ಅಂಚೆ ಚೀಟಿಗಳಿದ್ದರೂ ಕೇವಲ ಬಾಲಗಂಗಾಧರನಾಥ ತಿಲಕ್ ಮತ್ತು ದೀನ್ ದಯಾಳ್ ಉಪದ್ಯಾಯರ ಅಂಚೆ ಚೀಟಿಗಳನ್ನು ಮಾತ್ರ ಮುದ್ರಿಸಲಾಗುತ್ತಿದೆ.
೧೦. ರಾಷ್ಟ್ರೀಯವಾದದ ಹೆಸರಿನಲ್ಲಿ ಹುಟ್ಟಿಕೊಂಡಿರುವ ಸಂಘಟನೆಗಳ ಭಯೋತ್ಪಾದಕ ಮತ್ತು ಸಲಿಂಗ ಕಾಮಕೇಳಿ ಚಟುವಟಿಕೆಗಳು ತನ್ನ ಗರಿಷ್ಟತೆಯನ್ನು ಮುಟ್ಟಿನಿಂತಿವೆ. ಯಾರು ಏನನ್ನು ಉಡಬೇಕುˌ ಏನನ್ನು ಉಣಬೇಕುˌ ಯಾವುದನ್ನು ಅನುಸರಿಸಬೇಕುˌ ಏನನ್ನು ಮಾತನಾಡಬೇಕು ಎನ್ನುವುದನ್ನು ಕೆಲವೇಕೆಲವರು ನಿರ್ಧರಿಸುತ್ತಿದ್ದಾರೆ.
೧೧. ಬೇಟಿ ಬಚಾವ್-ಬೇಟಿ ಪಡಾವ್ ಘೋಷಣೆಗಳು ಮೊಳಗಿಸುತ್ತಲೆ ದೇಶವು ಸ್ತ್ರೀ ಶೋಷಣೆಯ ಹಾಗು ಅತ್ಯಾಚಾರಗಳ ಜಾಗತಿಕ ಗುರುವಾಗಿ ಮಾರ್ಪಡುತ್ತಿದೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಖರ್ಚು ಮಾಡುವುದಕ್ಕಿಂತ ಅಧಿಕ ಹಣ ಅವರ ಮದುವೆಗೆ ಖರ್ಚು ಮಾಡಲಾಗುತ್ತಿದೆ.
೧೨. ಮಠಗಳು ಗುಪ್ತ ಲೈಂಗಿಕತೆˌ ಧರ್ಮದ್ವೇಷˌ ಅಕ್ರಮ ಹಣಗಳಿಕೆ ಹಾಗು ಅನೈತಿಕ ಚಟುವಚಿಕೆಗಳ ಆಶ್ರಯ ತಾಣಗಳಾಗಿವೆ. ದೇಶದಲ್ಲಿ ಅಪಾರ ಪ್ರಮಾಣದ ಮಾದಕದ್ರವ್ಯ ಎಗ್ಗಿಲ್ಲದೆ ಹರಿದಾಡುತ್ತಿದೆ. ದೇಶದ ಯುವಶಕ್ತಿಯನ್ನು ಕೇವಲ ಧಾರ್ಮಿಕ ವಿಷ ಮಾತ್ರವಲ್ಲದೆ ಮಾದಕ ದ್ರವ್ಯಗಳ ವಿಷ ವರ್ತುಲದಲ್ಲಿ ಬೀಳಿಸಲಾಗಿದೆ.
೧೩. ರಾಜಕಾರಣಿಗಳಿಗೆ ಜಾತಿ-ಮತ-ಧರ್ಮಗಳು ಅಧಿಕಾರಕ್ಕೇರುವ ಏಣಿಗಳಾಗಿವೆ. ಅಧಿಕಾರ ಸಿಗದಿದ್ದಾಗ ಇಡೀ ಸಮುದಾಯಕ್ಕಾದ ಅನ್ಯಾಯವೆಂದು ಬಿಂಬಿಸಿ ಅಧಿಕಾರ ಗಿಟ್ಟಿಸಿಕೊಂಡು ಸಮುದಾಯವನ್ನು ವಂಚಿಸಿ ತಾವಷ್ಟೇ ಬೆಳೆಯುವುದು ಮಾಮೂಲಾಗಿದೆ.
೧೪. ಕೃಷಿಕ್ಷೇತ್ರವನ್ನು ಕಾರ್ಪೋರೇಟ್ ಕಳ್ಳರಿಗೆ ಒತ್ತೆ ಇಡಲು ಕಾನೂನುಗಳು ರಚನೆಯಾಗುತ್ತಿವೆ. ದೇಶದ ಅತಿದೊಡ್ಡ ಅಹಾರ ಧಾನ್ಯಗಳ ಮಾರುಕಟ್ಟೆಯ ಮೇಲೆ ಕಳ್ಳೋದ್ಯಮಿಗಳ ಕಾಕದೃಷ್ಟಿ ಬಿದ್ದಿದೆ. ಮೆಟ್ಟುವ ಚಪ್ಪಲಿಗಳನ್ನು ನಾವು ಎಸಿ ಅಂಗಡಿಗಳಲ್ಲಿ ಖರೀದಿಸಿದರೆ ನಾವು ಉಣ್ಣುವ ಕೃಷಿ ಉತ್ಪನ್ನಗಳಾದ ತರಕಾರಿಗಳನ್ನು ರಸ್ತೆಯ ಬದಿಯ ಫೂಟಪಾತಿನಲ್ಲಿ ಖರೀದಿಸುತ್ತಿದ್ದೇವೆ.
೧೫. ಜನರು ಒಬ್ಬ ಪೋಲಿಸ್ ಸಿಬ್ಬಂದಿಯನ್ನು ಕಂಡಾಗ ಸುರಕ್ಷಿತ ಭಾವ ಹೊಂದುವುದಕ್ಕಿಂತ ಹೆದರಿಕೊಳ್ಳುವುದೇ ಹೆಚ್ಚಾಗಿದೆ. ಸೈನ್ಯ ಹಾಗು ಪೊಲೀಸ್ ವ್ಯವಸ್ಥೆಯಲ್ಲೂ ಕೋಮುವಾದವನ್ನು ಬಿತ್ತಲಾಗಿದೆ.
೧೬. ಭಾರತದ ಆಡಳಿತಾತ್ಮಕ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಭ್ಯರ್ಥಿಯು ೧೫೦೦ ಶಬ್ಧಗಳ ವರದಕ್ಷಿಣೆ ವಿರೋಧಿ ಪ್ರಬಂಧ ಬರೆಯುತ್ತಾನೆ. ಒಂದು ವರ್ಷದ ನಂತರ ಅಧಿಕಾರಿಯಾಗಿ ಆತ ನೇಮಕವಾದಾಗ ಮದುವೆಯ ಸಂದರ್ಭದಲ್ಲಿ ಕೋಟ್ಯಾಂತರ ವರದಕ್ಷಿಣೆ ಕೇಳುತ್ತಾನೆ. ವರದಕ್ಷಿಣೆ ಸಾವುಗಳು ಎಗ್ಗಿಲ್ಲದೆ ಘಟಿಸುತ್ತಿವೆ.
೧೭. ಭಾರತೀಯರು ಬಹಳ ಸಂಕೋಚದ ಸ್ವಭಾವದವರು ಎಂದು ಹೇಳಲಾಗುತ್ತಿದೆಯಾದರೂ ನಾವು ೧೩೪ ಕೋಟಿಯ ಜನಸಂಖ್ಯೆ ಮುಟ್ಟಿದ್ದೇವೆ.
೧೮. ಗೀಚು ಬೀಳಬಾರದೆಂದು ನಾವು ನಮ್ಮ ಸ್ಮಾರ್ಟ್ ಫೋನುಗಳಿಗೆ ಸ್ಕ್ರೀನ್ಗಾರ್ಡ್ ಮತ್ತು ಗೋರಿಲ್ಲಾ ಗ್ಲಾಸ್ ಹಾಕಿಸುತ್ತಿದ್ದೇವೆ, ಆದರೆ ದಂಡ ತಪ್ಪಿಸಿಕೊಳ್ಳಲೆಂದು ಮಾತ್ರ ತಲೆಗೆ ಹೆಲ್ಮೇಟ್ ಹಾಕುತ್ತೇವೆ. ನಮ್ಮ ಜೀವಕ್ಕಿಂತ ಮೋಬೈಲ್ ಫೋನುಗಳಿಗೆ ಹೆಚ್ಚಿನ ಸುರಕ್ಷತೆ ಬೇಕೆಂದು ನಾವು ಭಾವಿಸುತ್ತಿದ್ದೇವೆ.
೧೯. ಭಾರತೀಯ ಸಮಾಜವು ಹುಡುಗಿಯರಿಗೆ ಅತ್ಯಾಚಾರದಿಂದ ರಕ್ಷಿಸಿಕೊಳ್ಳುವುದನ್ನು ಕಲಿಸುತ್ತದೆ. ಆದರೆ ಹುಡುಗರಿಗೆ ಅತ್ಯಾಚಾರ ಮಾಡಬೇಡಿ ಎಂದು ಕಲಿಸುವುದೇಯಿಲ್ಲ. ಅತ್ಯಾಚಾರದ ಪ್ರಕರಣಗಳು ಘಟಿಸಿದಾಗ ಅದಕ್ಕೆ ಹುಡುಗಿಯರನ್ನೇ ಜವಾಬ್ದಾರರನ್ನಾಗಿಸಿ ಅತ್ಯಾಚಾರಿಗಳನ್ನು ರಕ್ಷಿಸುವ ಕಾರ್ಯ ಮಾಡುತ್ತಿದ್ದೇವೆ. ಒಬ್ಬ ಪೋರ್ನ್ ಸ್ಟಾರನನ್ನು ಸೆಲೆಬ್ರಿಟಿಯಾಗಿ ಸ್ವೀಕರಿಸುವ ನಮ್ಮ ಸಮಾಜ ಅತ್ಯಾಚಾರಕ್ಕೊಳಗಾದ ಮಹಿಳೆಯನ್ನು ಸಾಮಾನ್ಯ ಮನುಷ್ಯಳಂತೆ ಕಾಣುವುದಿಲ್ಲ.
೨೦. ಎಲ್ಲಕ್ಕಿಂತ ಕೆಟ್ಟ ಚಲನಚಿತ್ರ ಕೂಡ ಎಲ್ಲಕ್ಕಿಂತ ಅಧಿಕ ಹಣ ಗಳಿಕೆ ಮಾಡಿಕೊಳ್ಳುತ್ತಿದೆ. ಸಮಾಜಘಾತುಕರುˌ ಪಂಕ್ತಿಭೇದದ ಹರಿಕಾರರುˌ ಸರಕಾರಿ ಪತ್ರಕರ್ತರುˌ ಕೋಮು ಗಲಭೆಯ ರೂವಾರಿಗಳು ಮತ್ತು ಆಸ್ತಾನ ವಿಧೂಷಕರು ರಾಷ್ಟ್ರಿಯ ಪ್ರಶಸ್ತಿಗಳಿಗೆ ಭಾಜನರಾಗುತ್ತಿದ್ದಾರೆ.
೨೧. ಕೃತಕ ಲೇಮನ್ ಗ್ರಾಸ್ ನ್ನು ಅನೇಕ ಸಾಫ್ಟ್ ಡ್ರಿಂಕ್ಸ್ ಗಳಲ್ಲಿ ಬಳಸುತ್ತಿದ್ದೇವೆ. ಆದರೆ ಅಸಲಿ ನಿಂಬೆಹಣ್ಣು ಫಿಂಗರ್ ಬಾವುಲ್ ನಲ್ಲಿ ಉಂಡಾದ ಮೇಲೆ ಕೈತೊಳೆಯಲು ಉಪಯೋಗಿಸುತ್ತಿದ್ದೇವೆ. ಕೃತ್ರಿಮತೆಯು ಸಹಜವೆನ್ನುವಂತೆ ವ್ಯಾಪಿಸುತ್ತಿದೆ.
೨೨. ಸರಕಾರಿ ಸ್ವಾಮ್ಯದ ಲಾಭದಾಯಕ ಸಾರ್ವಜನಿಕ ಉದ್ಯಮಗಳು ಸರ್ವಸಗಟು ರಾಜಕೀಯ ಪಕ್ಷಗಳ ಚುನಾವಣೆಗೆ ಕಪ್ಪುಹಣ ದೇಣಿಗೆ ನೀಡುವ ಕಳ್ಳೋದ್ಯಮಿಗಳ ಪಾಲಾಗುತ್ತಿವೆ. ಈ ರೀತಿಯ ಖಾಸಗಿಕರಣದ ಮೂಲಕ ಶೋಷಿತ ಸಮುದಾಯಗಳ ಪಾಲಿನ ಮೀಸಲಾತಿ ಸೌಲಭ್ಯವನ್ನು ಉಪಾಯವಾಗಿ ಕೊನೆಗೊಳಿಸಲಾಗುತ್ತಿದೆ.
೨೩. ವಿಶೇಷವಾಗಿ ಶಿಕ್ಷಣ ವ್ಯವಸ್ಥೆ ಮತ್ತು ಅರ್ಥ ವ್ಯವಸ್ಥೆ ಇವೆರಡನ್ನು ಬಂಚ್ ಆಫ್ ಥಾಟ್ಸ್ ಅನ್ವಯ ವ್ಯವಸ್ಥಿತವಾಗಿ ತಿರುಚಲಾಗುತ್ತಿದೆ. ಬಡವ-ಬಲ್ಲಿದ ಹಾಗು ಅಕ್ಷರಸ್ತ-ಅನಕ್ಷರಸ್ತರ ನಡುವಿನ ಅಂತರ ಉದ್ದೇಶಪೂರ್ವಕವಾಗಿ ಹೆಚ್ಚಿಸಲಾಗುತ್ತಿದೆ.
೨೪. ಹಸಿವುˌ ಶಿಕ್ಷಣˌ ಬದುಕುˌ ಬಟ್ಟೆಗಳಿಗಿಂತ ಧರ್ಮ ಮಹತ್ವ ಪಡೆಯುತ್ತಿದೆ. ಬೆಲೆ ಏರಿಕೆˌ ಅಧಿಕ ತೆರಿಗೆ ಉಪಟಳ ಇವು ದೇಶದ ಅಭಿವೃದ್ಧಿಗಾಗಿ ಎಂದು ಬಿಂಬಿಸಲಾಗುತ್ತಿದೆ. ದೇವಸ್ಥಾನಗಳುˌ ಮಠಗಳು ವಾಣಿಜ್ಯಕರಣಗೊಂಡು ರಾಜಕೀಯ ಕ್ಷೇತ್ರದವರ ಹಾಗು ಸಮಾಜಘಾತುಕರ ಅಡಗುತಾಣಗಳಾಗಿ ಮಾರ್ಪಟ್ಟಿವೆ.
೨೫. ಸಾವಿರಾರು ವರ್ಷಗಳ ಹಿಂದೆ ಈ ದೇಶಕ್ಕೆ ದನ ವೇಯಿಸುತ್ತ ವಲಸೆ ಬಂದ ಹಾಗು ಈ ದೇಶಕ್ಕೆ ಎಂದೆಂದೆಗೂ ವಿಧೇಯರಾಗಿರದ ವಿದೇಶಿಗರು ತಾವೇ ಈ ನೆಲದ ಮೂಲನಿವಾಸಿಗಳು ಎಂದು ಹಕ್ಕು ಸಾಧಿಸುತ್ತಿದ್ದಾರೆ. ಮೂಲ ನಿವಾಸಿಗಳಿಗೆ ನಾಗರಿಕತೆಯ ದಾಖಲೆ ಕೇಳುತ್ತಿದ್ದಾರೆ. ಜಾತಿ ಪ್ರೀತಿಯನ್ನು ರಾಷ್ಟ್ರಭಕ್ತಿ ಎಂದು ಬಿಂಬಿಸಲಾಗುತ್ತಿದೆ. ಆದರೆ ಜಾತಿಪ್ರೀತಿ ಯಾವತ್ತಿಗೂ ದೇಶಭಕ್ತಿಯಾಗಲಾರದು ಎನ್ನುವ ಸತ್ಯ ಜನರು ಅರಿಯದಾಗಿದ್ದಾರೆ.
ಹೀಗೆ ಇನ್ನೂ ಅನೇಕ ಬಗೆಗಳಲ್ಲಿ ನನ್ನ ಭಾರತ ದೇಶವು ಬದಲಾಗುತ್ತಿದೆ. ವಿನಾಶವನ್ನು ವಿಕಾಸವೆಂದು ಕರೆಯಲಾಗುತ್ತಿದೆ. ಅಧರ್ಮವನ್ನು ಧರ್ಮವೆಂದು ಬಿಂಬಿಸಲಾಗುತ್ತಿದೆ. ಅಸತ್ಯವು ಸತ್ಯವನ್ನು ಅಳಿಸಿ ಹಾಕುತ್ತಿದೆ. ರಾಜಾರೋಷವಾಗಿ ಸುಳ್ಳು ಹೇಳುವವನನ್ನು ಅಭಿಮಾನದಿಂದ ನೋಡಲಾಗುತ್ತಿದೆ. ಯಾವುದೇ ಆದಾಯ ಮೂಲವಿಲ್ಲದˌ ಯಾವುದೇ ಉದ್ಯೋಗ-ಪದವಿಗಳಿಲ್ಲದ ಸುಳ್ಳು ಭಾಷಣದ ಟಿವಿ ಹಾಸ್ಯ ಕಲಾವಿದರು ದುಬಾರಿ ವಿದೇಶಿ ಕಾರಿನಲ್ಲಿ ಓಡಾಡುವಷ್ಟು ದೇಶ ಮುಂದುವರೆದಿದೆ. ಮಾನಸಿಕ ಅಸ್ವಸ್ತರುˌ ಬಾಡಿಗೆ ಭಾಷಣಕಾರರುˌ ಕೋಮುದ್ವೇಷ ಕಾರುವ ನಕಲಿ ಪತ್ರಕರ್ತರೆಲ್ಲ ಸಂಸದರು/ಪುಸ್ತಕ ಪ್ರಾಧಿಕಾರದ ಸದಸ್ಯರು/ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಸದಸ್ಯರಾಗಿ ನೇಮಕವಾಗುತ್ತಿದ್ದಾರೆ. ಅಪರಾಧಿಗಳು ಸಮಾಜದ ಗಣ್ಯವ್ಯಕ್ತಿಗಳಾಗಿದ್ದಾರೆ. ಮಂದಿರ-ಮಸಿದೆಗಳ ಮೇಲೆ ಕಲ್ಲು ತೂರಾಡಿ ಕೋಮು ಗಲಭೆ ಹುಟ್ಟುಹಾಕುವ ಕ್ರಿಮಿನಲ್ ಗಳ ಕೈಗಳು ದೇಶವನ್ನು ನಿಯಂತ್ರಿಸುತ್ತಿವೆ. ಸಜ್ಜನರು ಹೊರಗೆ ಬಂದು ಮಾತನಾಡಲು ಭಯಪಡುವಷ್ಟು ಭಯಂಕರವಾಗಿ ನನ್ನ ದೇಶ ಬದಲಾಗುತ್ತಿದೆ. ಮುಂದೆ ಮತ್ತೆಂದಿಗೂ ದುರಸ್ತಿಯಾಗಿ ಸಹಜ ಸ್ಥಿತಿಗೆ ಮರುಳದಷ್ಟು ಬದಲಾಗುತ್ತಿದೆ.
~ ಡಾ. ಜೆ ಎಸ್ ಪಾಟೀಲ.