ಬೀಬಿ ಬೆಟ್ಟದ ಅಕ್ರಮ ಗಣಿಗಾರಿಕೆ ಬಗ್ಗೆ ಭಾರೀ ಚರ್ಚೆಯಾಗುತ್ತಿರುವ ಹೊತ್ತಲ್ಲೇ ಮಂಡ್ಯದ ಜೆಡಿಎಸ್ ಶಾಸಕರಿಗೆ ಮತ್ತೊಂದು ಕಂಟಕ ಎದುರಾಗಿದೆ. 2009ರ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ (MUDA) ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣದಲ್ಲಿ ಮೇಲುಕೋಟೆ ಕ್ಷೇತ್ರದ ಶಾಸಕ ಸಿ.ಎಸ್ ಪುಟ್ಟರಾಜು, ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಂ. ಶ್ರೀನಿವಾಸ್, ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ಮುಡಾ ಮಾಜಿ ಅಧ್ಯಕ್ಷೆ ವಿದ್ಯಾ ನಾಗೇಂದ್ರ ಸೇರಿದಂತೆ 24 ಜನರಿಗೆ ಸಿಬಿಐ ವಿಶೇಷ ನ್ಯಾಯಲಯ ಸಮನ್ಸ್ ಜಾರಿಗೊಳಿಸಿದೆ.
ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣದಲ್ಲಿ 24 ಮಂದಿ ಪ್ರಮುಖ ಆರೋಪಿಗಳಿಗೆ ಸಮನ್ಸ್ ಜಾರಿಗೊಳಿಸಿರುವ ಸಿಬಿಐ ವಿಶೇಷ ನ್ಯಾಯಲಯ, ಜುಲೈ 20ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಕೋರ್ಟ್ ನೀಡಿರುವ ಸಮನ್ಸ್ ಈಗ ಜೆಡಿಎಸ್ ನಾಯಕರಿಗೆ ಭಾರೀ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ, ಜೆಡಿಎಸ್ ನಾಯಕರು ಹೇಗಾದರೂ ನಮ್ಮನ್ನು ಬಚ್ಚಾವ್ ಮಾಡಿ ಎಂದು ತಮ್ಮ ವಕೀಲರ ಮೊರೆ ಹೋಗಿದ್ದಾರೆ ಎನ್ನಲಾಗಿದೆ.
2009ರಲ್ಲಿ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ 107 ನಿವೇಶನಗಳ ಹಂಚಿಕೆ ವೇಳೆ ಸರ್ಕಾರದ ನಿಯಮ ಮತ್ತು ಷರತ್ತುಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಅಕ್ರಮಗಳ ಬಗ್ಗೆ ವಿವರಗಳನ್ನು ನೀಡುವಂತೆ ಬೆಂಗಳೂರು ಕೇಂದ್ರ ತನಿಖಾ ದಳದ ಅಧಿಕಾರಿಗಳು ಸಾರ್ವಜನಿಕರಿಗೆ ಮನವಿವೂ ಮಾಡಿದ್ದರು. ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಸಿಬಿಐ ವಿಶೇಷ ಕೋರ್ಟ್ ಕೇಸ್ ದಾಖಲಿಸಿಕೊಂಡಿತ್ತು.
ಸರ್ಕಾರದ ನಿಯಗಳನ್ನು ಉಲ್ಲಂಘಿಸಿ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಂದಿನ ಅಧ್ಯಕ್ಷರು ಸಿ.ಎಸ್ ಪುಟ್ಟರಾಜು ಸೇರಿದಂತೆ ಪ್ರಮುಖ ಜೆಡಿಎಸ್ ನಾಯಕರಿಗೆ ನಿವೇಶನ ನೀಡಿತ್ತು. ಈ ಪ್ರಕರಣದಲ್ಲಿ ಕೆಲವು ರಾಜಕೀಯ ವ್ಯಕ್ತಿಗಳೊಂದಿಗೆ ಪತ್ರಕರ್ತರು, ಅಧಿಕಾರಿಗಳು ಕೂಡ ಭಾಗಿಯಾಗಿದ್ದರು. ನಿವೇಶನಗಳ ಕುರಿತು ಯಾವುದೇ ಜಾಹೀರಾತು ನೀಡದೆ ಸಾರ್ವಜನಿಕರ ಗಮನಕ್ಕೂ ತರದೇ ಭ್ರಷ್ಟಚಾರ ಎಸಗಿದ್ದರು.
ಇನ್ನು, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ ಹಂಚಿಕೆ ಮಾಡಿದ್ದ 107 ಸೈಟುಗಳ ಬೆಲೆ ಅಂದು 30 ಕೋಟಿ ರೂ. ಇತ್ತು. ಇಂದು ಇದರ ಬೆಲೆ ಮತ್ತಷ್ಟು ಗಗನಕ್ಕೇರಿದೆ. ರಾಜಕೀಯ ವ್ಯಕ್ತಿಗಳು, ಪತ್ರಕರ್ತರು, ಅಧಿಕಾರಿಗಳು ಸೇರಿ ಮಾಡಿದ ಈ ಭ್ರಷ್ಟಚಾರದ ವಿರುದ್ಧ ರೈತ ಸಂಘ ಹೋರಾಟವೂ ಮಾಡಿತ್ತು.
ಇತ್ತೀಚೆಗೆ ಇಡೀ ಜೆಡಿಎಸ್ ನಾಯಕರು ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಸಂಸದೆ ಸುಮಲತಾ ವಿರುದ್ಧ ಕೆಂಡಕಾರುತ್ತಿದ್ದರು. ಸುಮಲತಾ ಅಂಬರೀಶ್ ಕೂಡ ಅಕ್ರಮ ಗಣಿಗಾರಿಕೆ ಕೇಸನ್ನು ಗಣಿ ಸಚಿವರೊಂದಿಗೆ ಚರ್ಚಿಸಿ ತನಿಖೆ ಹಂತಕ್ಕೆ ಕೊಂಡೊಯ್ಯುತ್ತಿದ್ದಾರೆ. ಹೀಗಿರುವಾಗಲೇ ಅಕ್ರಮ ಗಣಿಗಾರಿಕೆ ಕೇಸ್ ಮತ್ತು ಮಡ್ಯ ನಗರಾಭಿವೃದ್ಧಿ ಪ್ರಾಧಿಕಾರ ಸೈಟುಗಳ ಅಕ್ರಮ ಹಂಚಿಕೆ ಪ್ರಕರಣವೂ ಜೆಡಿಎಸ್ ನಾಯಕರಿಗೆ ಕಂಟಕವಾಗಿ ಪರಿಣಮಿಸಿದೆ. ಈ ಎರಡೂ ಕೇಸುಗಳಲ್ಲಿ ಇವರಿಗೆ ಶಿಕ್ಷೆಯಾಗಲಿದೆಯಾ? ಅಥವಾ ಕೇವಲ ರಾಜಕೀಯವೇ ಎಂದು ಕಾದು ನೋಡಬೇಕಿದೆ.