“ನಾನು ಇಂದು ನನ್ನ ಸ್ನೇಹಿತನನ್ನು ಕಳೆದುಕೊಂಡೆ. ಮುಂದಿನ ಸರದಿ ನಿಮ್ಮದಾಗಬಹುದು” ಎಂಬ ಬೋರ್ಡ್ ಹಿಡಿದುಕೊಂಡ ಹುಡುಗನೊಬ್ಬ ರಸ್ತೆ ಹೊಂಡಗಳ ವಿರುದ್ಧ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದಾರೆ. ಕರ್ನಾಟಕದ ಮಂಗಳೂರಿನ ಬಿಕರ್ನಕಟ್ಟೆ-ಕಂಡೆಟ್ಟು ಕ್ರಾಸ್ ಬಳಿಯ ರಾಷ್ಟೀಯ ಹೆದ್ದಾರಿ-73 ರಲ್ಲಿ ಗುಂಡಿ ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಮೃತಪಟ್ಟ ಗೆಳೆಯನ ಅಗಲಿಕೆಯಿಂದ ಆಘಾತಗೊಂಡಿರುವ ಲಿಖಿತ್ ರೈ ರಸ್ತೆ ಗುಂಡಿಗಳ ವಿರುದ್ಧ ತಮ್ಮ ಹೋರಾಟವನ್ನು ದಾಖಲಿಸುತ್ತಿದ್ದಾರೆ. ಲಿಖಿತ್ ಸ್ನೇಹಿತ ಆಗಸ್ಟ್ 5 ರಂದು ಸಾವನ್ನಪ್ಪಿದ್ದರು.
ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ 21 ವರ್ಷದ ಆತಿಶ್ ವೈ ಎಂಬವರು ತಮ್ಮ ಕಚೇರಿಯಿಂದ ಜಿಮ್ಗೆ ತೆರಳುತ್ತಿದ್ದಾಗ ಗುಂಡಿ ತಪ್ಪಿಸುವ ಭರದಲ್ಲಿ ಬೈಕ್ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದಿತ್ತು. “ಸಮೀಪದ ಅಂಗಡಿಯವನು ಅವನನ್ನು ಆಸ್ಪತ್ರೆಗೆ ಸೇರಿಸುವವರೆಗೂ ಅವನು ಬಹಳ ಹೊತ್ತು ರಸ್ತೆಯಲ್ಲೇ ಬಿದ್ದಿಗಿದ್ದನು. ಮಂಗಳೂರಿನ ಕಳಪೆ ರಸ್ತೆಯಿಂದಾಗಿ ಅವನು ಸಾವನ್ನಪ್ಪಿದ್ದಾನೆ” ಎಂದು ಲಿಖಿತ್ ದಿ ನ್ಯೂಸ್ ಮಿನಿಟ್ ಗೆ ತಿಳಿಸಿದರು.
ಆತಿಶ್ ಕೂಡ ಇಂಜಿನಿಯರಿಂಗ್ ಮಾಡುತ್ತಿದ್ದು, ಅವನ ಮರಣದ ಐದು ದಿನಗಳ ನಂತರ ಆಗಸ್ಟ್ 10 ರಂದು ಅವನ ಅಂತಿಮ ವರ್ಷದ ಫಲಿತಾಂಶಗಳನ್ನು ಪ್ರಕಟಿಸಲಾಯಿತು. ಲಿಖಿತ್ ಈ ಹಿಂದೆ ಇಂಜಿನಿಯರಿಂಗ್ ಕಾಲೇಜಿನಿಂದ ಹೊರಗುಳಿದಿದ್ದ ಆದರೆ ಕೋರ್ಸ್ಗೆ ಮರಳಲು ಆತಿಶ್ ಲಿಖಿತ್ ನ ಮನವೊಲಿಸಿದ್ದ. “ಈ ವರ್ಷ ನಾನು ಅವನೊಂದಿಗೆ ಪದವಿ ಪಡೆಯಬೇಕೆಂದು ಅವನು ಬಯಸಿದ್ದ, ನಾವು ಒಟ್ಟಿಗೆ ಘಟಿಕೋತ್ಸವಕ್ಕೆ ಹಾಜರಾಗಲು ಉದ್ದೇಶಿಸಿದ್ದೆವು” ಎಂದು ಲಿಖಿತ್ ಹೇಳುತ್ತಾರೆ.
ಅತಿಶ್ ಸಾವಿನ ನಂತರ, ನಗರದ ಕಳಪೆ ರಸ್ತೆಗಳಿಗೆ ಕಾರಣವಾದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಲಿಖಿತ್ ಸಾಮಾಜಿಕ ಮಾಧ್ಯಮದಲ್ಲಿ ಅಭಿಯಾನವನ್ನು ಪ್ರಾರಂಭಿಸಿದರು ಮತ್ತು ಸುರಕ್ಷಿತ ರಸ್ತೆಗಳಿಗೆ ಒತ್ತಾಯಿಸಿದರು. ಮಂಗಳೂರು ಮಹಾನಗರ ಪಾಲಿಕೆ (ಎಂಸಿಸಿ) ಕಚೇರಿ ಎದುರು ‘ಅತಿಶ್ಗೆ ನ್ಯಾಯ ಕೊಡಿ’ ಎಂಬ ಫಲಕ ಹಿಡಿದು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.
“ನನ್ನ ಸ್ನೇಹಿತನಂತೆಯೇ ಜನರು ಅದೇ ದುರದೃಷ್ಟವನ್ನು ಎದುರಿಸಬೇಕೆಂದು ನಾನು ಬಯಸುವುದಿಲ್ಲ, ಅದಕ್ಕಾಗಿಯೇ ನಾನು ನನ್ನ ಸ್ನೇಹಿತನನ್ನು ಗೌರವಿಸಲು ಮತ್ತು ನಾಗರಿಕ ನಿರ್ಲಕ್ಷ್ಯದಿಂದ ಉಂಟಾಗುವ ಯಾವುದೇ ಸಾವುಗಳನ್ನು ತಡೆಯಲು #PotholesSeAzaadi ಅಭಿಯಾನವನ್ನು ಪ್ರಾರಂಭಿಸಿದ್ದೇನೆ” ಎಂದು ಅವರು ಹೇಳುತ್ತಾರೆ.
ಸರ್ಕಾರಿ ಅಧಿಕಾರಿಗಳು ತನ್ನ ಸ್ನೇಹಿತನನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿರುವ ಲಿಖಿತ್, “ಅಧಿಕಾರಿಗಳ ಅಸಮರ್ಥತೆಯಿಂದ ಸಾವು ಸಂಭವಿಸಿದೆ, ಆದರೂ ಇದು ಅಪಘಾತ ಎಂದು ವರದಿಯಾಗಿದೆ. ಅತೀಶ್ ಅಪಘಾತದಲ್ಲಿ ಸಾವನ್ನಪ್ಪಿಲ್ಲ, ಮಂಗಳೂರಿನ ಕಳಪೆ ರಸ್ತೆಯ ಉಸ್ತುವಾರಿ ವಹಿಸಿದ್ದವರು ಅವರನ್ನು ಹತ್ಯೆ ಮಾಡಿದ್ದಾರೆ.” ಎಂದು ಹೇಳುತ್ತಾರೆ.
ಆಗಸ್ಟ್ 11 ರಂದು, ಅತಿಶ್ ಅಪಘಾತದ ಸ್ಥಳದಲ್ಲಿ ಗುಂಡಿಯನ್ನು ತುಂಬಲಾಯಿತು. ಆದರೆ ಅದು ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಲಿಖಿತ್ ಹೇಳುತ್ತಾರೆ. “ಗುಂಡಿಗಳಿಂದಾಗಿ ಜನರು ಬಹಳ ಸಮಯದಿಂದ ಆಡಳಿತವನ್ನು ಟೀಕಿಸುತ್ತಿದ್ದಾರೆ, ಆದರೆ ಅಧಿಕಾರಿಗಳು ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದನ್ನು ಗಂಭೀರವಾಗಿ ಪರಿಗಣಿಸದೆ ಈಗ ಜನರ ಜೀವನದ ಜೊತೆ ಜೂಜಾಡುತ್ತಿದ್ದಾರೆ.” ಎಂದು ಆರೋಪಿಸಿದ್ದಾರೆ.
ತನ್ನ ಅಭಿಯಾನದ ಬೇಡಿಕೆಗಳನ್ನು ಪಟ್ಟಿ ಮಾಡುತ್ತಾ, ಲಿಖಿತ್ “ಚುನಾಯಿತ ಅಧಿಕಾರಿಗಳು ಈ ಘಟನೆಗೆ ಪ್ರತಿಕ್ರಿಯಿಸಿ ಕ್ರಮ ತೆಗೆದುಕೊಳ್ಳಬೇಕೆಂದು ನಾನು ಬಯಸುತ್ತೇನೆ. ನಗರದಲ್ಲಿನ ಗುಂಡಿಗಳನ್ನು ತುಂಬಲಾಗುವುದು ಎಂದು ಔಪಚಾರಿಕ ಹೇಳಿಕೆ ನೀಡಬೇಕೆಂದು ನಾನು ಒತ್ತಾಯಿಸುತ್ತೇನೆ. ಈ ಅಭಿಯಾನ ಕೊನೆಗೊಳ್ಳುತ್ತಿಲ್ಲ. ಒಟ್ಟಾಗಿ, ನಾವು ಈ ಅಭಿಯಾನವನ್ನು ಭೌತಿಕವಾಗಿ ಮತ್ತು ಡಿಜಿಟಲ್ ಆಗಿ ನಡೆಸುತ್ತೇವೆ.” ಎಂದು ಹೇಳಿದ್ದಾರೆ.
“ನಾವು ನಮ್ಮ ತೆರಿಗೆ ಮತ್ತು ರಸ್ತೆಗಳಿಗೆ ಸುಂಕವನ್ನು ಪಾವತಿಸುತ್ತೇವೆ, ಆದರೆ ಅಧಿಕಾರಿಗಳು ನಮಗೆ ಗುಂಡಿಗಳಿಲ್ಲದ ರಸ್ತೆಗಳನ್ನು ಏಕೆ ನೀಡಲು ಸಾಧ್ಯವಿಲ್ಲ? ಸರ್ಕಾರ ಅತಿಶ್ ಕುಟುಂಬಕ್ಕೆ ಪರಿಹಾರ ನೀಡಬೇಕು.” ಎಂದು ಲಿಖಿತ್ ಹೇಳಿದ್ದಾರೆ. ಏಕಾಂಗಿ ಪ್ರತಿಭಟನೆಯ ನಂತರ ಎಂಸಿಸಿ ಅಧಿಕಾರಿಗಳು ಲಿಖಿತ್ ಅವರೊಂದಿಗೆ ಮಾತನಾಡಿ ನಗರದ ರಸ್ತೆಗಳಲ್ಲಿನ ಗುಂಡಿಗಳನ್ನು ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ.