ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ಪತನದ ಅಂಚಿಗೆ ಬಂದು ನಿಂತಿದೆ. ಈ ಹಿಂದೆ ಸಚಿನ್ ಪೈಲಟ್ ಬಣವು ಬಂಡಾಯವೆದ್ದು ಗೆಹ್ಲೋಟ್ ಸರ್ಕಾರವನ್ನು ಉರುಳುವ ಭೀತಿಯನ್ನು ಸೃಷ್ಟಿಸಿತ್ತು. ಸದ್ಯ, ರಾಜಸ್ಥಾನದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆ ಕಾಂಗ್ರೆಸ್ಗೆ ಸಂಪೂರ್ಣ ಬಿಕ್ಕಟ್ಟಾಗಿ ಪರಿಣಮಿಸಿದೆ. 90 ಕ್ಕೂ ಅಧಿಕ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಲು ಸ್ಪೀಕರ್ ಅವರನ್ನು ಭೇಟಿಗೆ ತೆರಳಿದ್ದಾರೆಂದು ವರದಿಯಾಗಿದೆ.
ಶಾಸಕರ ಸಾಮೂಹಿಕ ರಾಜೀನಾಮೆಯಿಂದ ರಾಜಸ್ಥಾನ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವ ಸಾಧ್ಯತೆ ಇದೆ. 92 ಶಾಸಕರ ರಾಜೀನಾಮೆಯಿಂದ ಸದನದ ಬಲವು 108ಕ್ಕೆ ಇಳಿಯಲಿದೆ, ಆಗ ಬಹುಮತ ಸಾಬೀತುಪಡಿಸಬೇಕಾದ ಮ್ಯಾಜಿಕ್ ನಂಬರ್ 55 ಆಗಲಿದೆ. ಬಿಜೆಪಿ 70 ಶಾಸಕರನ್ನು ಹೊಂದಿರುವುದರಿಂದ ಒಂದು ವೇಳೆ ಸರ್ಕಾರ ಪತನವಾದರೆ ಬಿಜೆಪಿ ಅನಾಯಾಸವಾಗಿ ಸರ್ಕಾರ ರಚಿಸಬಹುದು.
ʼಒಬ್ಬ ವ್ಯಕ್ತಿಗೆ ಒಂದು ಹುದ್ದೆʼ ಎಂಬ ಕಾಂಗ್ರೆಸ್ ನ ನೀತಿ ಅನ್ವಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಹಾಗೂ ಮುಖ್ಯಮಂತ್ರಿ ಗಾದಿ ಅಶೋಕ್ ಗೆಹ್ಲೋಟ್ ಒಬ್ಬರಲ್ಲೇ ಉಳಿಯುವುದಿಲ್ಲ. ಒಬ್ಬರಿಗೆ ಒಂದು ಹುದ್ದೆ ನೀತಿಯನ್ನು ಅನುಸರಿಸಬೇಕು ಎಂದು ರಾಹುಲ್ ಗಾಂಧಿ ಒತ್ತಾಯಿಸಿದ ನಂತರ ಗೆಹ್ಲೋಟ್ ನಿಷ್ಠಾವಂತರಿಂದ ಒತ್ತಡ ಬಂದಿದೆ. ಅಕ್ಟೋಬರ್ 17 ರಂದು ಚುನಾವಣೆ ನಡೆಯಲಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಗೆಹ್ಲೋಟ್ ಮುಂಚೂಣಿಯಲ್ಲಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಅಧ್ಯಕ್ಷರಾಗಿ ಗೆಹ್ಲೋಟ್ ಆಯ್ಕೆಯಾದರೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಅದನ್ನು ಗೆಹ್ಲೋಟ್ ನಿಷ್ಟಾವಂತರು ವಿರೋಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಿಕ್ಕಟ್ಟು ಉಂಟಾಗಿದೆ.
“ನಾವು ಅಶೋಕ್ ಗೆಹ್ಲೋಟ್ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕೆಂದು ಬಯಸುತ್ತೇವೆ” ಎಂದು ಗೆಹ್ಲೋಟ್ ನಿಷ್ಟಾವಂತ ಶಾಸಕರೊಬ್ಬರು ಹೇಳಿದ್ದು, ಗೆಹ್ಲೋಟ್ ಬಣದ ಶಾಸಕರು “ಒಬ್ಬ ವ್ಯಕ್ತಿ ಒಂದು ಹುದ್ದೆ” ವಿಷಯದ ಬಗ್ಗೆ ಕೇಂದ್ರ ನಾಯಕತ್ವದಿಂದ ರಿಯಾಯಿತಿಯನ್ನು ನಿರೀಕ್ಷಿಸುತ್ತಿದ್ದಾರೆ.
2020 ರಲ್ಲಿ ಸಚಿನ್ ಪೈಲಟ್ ಅವರ ಬಂಡಾಯದ ಸಮಯದಲ್ಲಿ ಗೆಹ್ಲೋಟ್ ಸರ್ಕಾರವನ್ನು ಬೆಂಬಲಿಸಿದವರಲ್ಲಿ ಬಹುತೇಕರು ಈಗಲೂ ಮುಖ್ಯಮಂತ್ರಿ ಸ್ಥಾನದಲ್ಲಿ ಗೆಹ್ಲೋಟ್ ಇರಬೇಕು ಎಂದು ಬಯಸುತ್ತಿದ್ದಾರೆ. ಶಾಸಕ ಶಾಂತಿ ಧರಿವಾಲ್ ಅವರ ಮನೆಯಲ್ಲಿ ನಡೆದ ಸಭೆಯ ನಂತರ ಅವರು ಈ ಬಗ್ಗೆ ನಿರ್ಣಯವನ್ನು ಅಂಗೀಕರಿಸಿದ್ದಾರೆ.
ಸಿಎಂ ಸ್ಥಾನಕ್ಕೆ ಕಣ್ಣಿಟ್ಟಿರುವ ತನ್ನ ಪ್ರತಿಸ್ಪರ್ಧಿ ಸಚಿನ್ ಪೈಲಟ್ ಅನ್ನು ದೂರವಿಡುವ ಸಲುವಾಗಿ ರಾಜಸ್ಥಾನದ ಸಿಎಂ ಹುದ್ದೆಯನ್ನು ತೊರೆಯಲು ಗೆಹ್ಲೋಟ್ ಹಿಂದೆ ಜಾರುತ್ತಿದ್ದಾರೆ. ಅವರು ಎರಡೂ ಹುದ್ದೆಗಳನ್ನು ಹಿಡಿದಿಟ್ಟುಕೊಳ್ಳಲು ವಿಫಲವಾದರೆ, ಅವರು ಮುಖ್ಯಮಂತ್ರಿ ಸ್ಥಾನವನ್ನು ತನ್ನ ನಿಷ್ಠಾವಂತರಿಗೆ ನೀಡಲು ಆದ್ಯತೆ ನೀಡುತ್ತಾರೆ ಎಂದು ಮೂಲಗಳು ಈ ಮೊದಲೇ ಸೂಚಿಸಿವೆ.
ಆದರೆ ಸಚಿನ್ ಪೈಲಟ್ ಅವರಿಗೆ ಈ ಬಾರಿ ಪಕ್ಷದ ಕೇಂದ್ರ ನಾಯಕತ್ವದ ಬೆಂಬಲವಿದೆ.
ಕೇಂದ್ರ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ನ ರಾಜಸ್ಥಾನ ಉಸ್ತುವಾರಿ ಅಜಯ್ ಮಾಕನ್ ಅವರ ಉಪಸ್ಥಿತಿಯಲ್ಲಿ ಸಂಜೆ 7 ಗಂಟೆಗೆ ನಿಗದಿಯಾಗಿದ್ದ ಶಾಸಕಾಂಗ ಪಕ್ಷದ ಸಭೆ ಇನ್ನೂ ನಡೆಯಬೇಕಿದೆ.
ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಗೆಲುವಿನ ರುವಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಸಚಿನ್ ಪೈಲಟ್ ಅವರನ್ನು ಸಿಎಂ ಸ್ಥಾನದ ಅಭ್ಯರ್ಥಿ ಎಂದು ನೋಡಲಾಗಿತ್ತು. ಆದರೆ ಗೆಹ್ಲೋಟ್ ಅವರ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲು ರಾಹುಲ್ ಗಾಂಧಿಯವರು ಪೈಲಟ್ ರನ್ನು ಮನವೊಲಿಸಿದ್ದರು. 2020 ರಲ್ಲಿ, ಅವರು ಬಂಡಾಯವೆದ್ದರು, 18 ಬೆಂಬಲಿಗರೊಂದಿಗೆ ದೆಹಲಿಯಲ್ಲಿ ಕ್ಯಾಂಪ್ ಮಾಡಿದರು. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಮಧ್ಯಸ್ಥಿಕೆಯಿಂದ ಒಂದು ತಿಂಗಳಿಗೂ ಹೆಚ್ಚು ಸಮಯದ ನಂತರ ಬಿಕ್ಕಟ್ಟು ಬಗೆಹರಿಯಿತು.