ಹುಬ್ಬಳ್ಳಿ: ಆಕೆ ತನ್ನ ಮಡಿಲಲ್ಲಿ ಎರಡು ಮುದ್ದಾದ ಕಂದಮ್ಮಗಳನ್ನು ಇಟ್ಟುಕೊಂಡು ಜೀವನ ನಡೆಸುತ್ತಿರುವ ಮಹಾತಾಯಿ, ಮನೆಯವರ ಕಿರುಕುಳಕ್ಕೆ ಬೇಸತ್ತು ಈಗ ಮಾಧ್ಯಮದ ಮುಂದೆ ಕಣ್ಣೀರು ಹಾಕುತ್ತಿದ್ದಾರೆ.
ಅಷ್ಟಕ್ಕೂ ಚೆಂದದ ಕುಟುಂಬಕ್ಕೆ ಬಂದಿರುವ ಕಷ್ಟವಾದರೂ ಏನು ಅಂತೀರಾ ಈ ಸ್ಟೋರಿ ನೋಡಿ. ಈ ಮಹಿಳೆಯ ಹೆಸರು ವಿದ್ಯಾರಾಣಿ ಹಬೀಬ. ಹೆಸರಿಗೆ ತಕ್ಕ ಹಾಗೇ ವಿದ್ಯೆ ವಿನಯ ಎರಡೂ ಇದೆ. ಆದರೆ ಬದುಕಿನಲ್ಲಿ ನೆಮ್ಮದಿ ಮಾತ್ರ ಇಲ್ಲ. ಇವಳ ಅತ್ತೆ ಮಾವ ಮನೆಯಿಂದ ನೀನು ಹೊರಗೆ ಹೋಗು ಅಂತ ಹಿರಿಯ ನಾಗರಿಕ ಕ್ಷೇಮಾಭಿವೃದ್ಧಿ ಇಲಾಖೆಯಿಂದ ನೋಟಿಸ್ ಜಾರಿ ಮಾಡಿದ್ದಾರೆ.
ಆದ್ದರಿಂದ ಇವಳು ದಿಕ್ಕು ತೋಚದೇ ಹೀಗೆ ತನ್ನ ಮಕ್ಕಳನ್ನ ಜೊತೆ ಜೊತೆಯಾಗಿ ಕರೆದುಕೊಂಡು ತಿರುಗುತ್ತಿದ್ದಾಳೆ. ಇನ್ನೂ ವಿದ್ಯಾರಾಣಿ ಹಬೀಬರ ಮನೆ ನಗರದ ಆರ್.ಎನ್. ಶೆಟ್ಟಿ ಫ್ಯಾಕ್ಟರಿ ಬಳಿ ಇದೆ ತುಂಬು ಸಂಸಾರ ಅತ್ತೆ ಮಾವ ಇಬ್ಬರು ಮೈದುನರು ಹೀಗೆ ಸಂಸಾರದೊಂದಿಗೆ ಚೆನ್ನಾಗಿ ಇದ್ದವರು.
ವಿದ್ಯಾರಾಣಿ ಪತಿ ಸಹ ಖಾಸಗಿ ಉದ್ಯೋಗ ಮಾಡಿಕೊಂಡು ಚೆನ್ನಾಗಿಯೇ ಇದ್ದರು. ನಂತರ ಸಹೋದರರ ಕಾಟದಿಂದ ಪತಿ ಮಾನಸಿಕ ಖಿನ್ನತೆಗೆ ಒಳಗಾದ್ರು ಎಂದು ಪತ್ನಿ ವಿದ್ಯಾರಾಣಿ ಹಬೀಬ ಆರೋಪಿಸಿದ್ದಾರೆ.
ಚಿಕ್ಕ ಮಕ್ಕಳಿದ್ದು, ಅವರ ಶಿಕ್ಷಣ ಹೇಗೆ ಎಂಬ ಚಿಂತೆ ಒಂದು ಕಡೆಯಾದರೆ ಇನ್ನೊಂದು ಕಡೆ ಮೊದಲೇ ಕೈಯಲ್ಲಿ ಹಣವಿಲ್ಲ. ಗಂಡನಿಗೆ ಈ ಸ್ಥಿತಿ. ಈಗ ನನಗೆ ಮನೆ ಖಾಲಿ ಮಾಡಿ ಎಂದರೆ ಹೇಗೆ ಮಾಡಲಿ ಎಂದು ನೊಂದ ವಿದ್ಯಾರಾಣಿ ಹಬೀಬ ಅಳಲನ್ನ ತೊಡಗಿಕೊಂಡಿದ್ದಾಳೆ.
ನನಗೆ ಹಣವಿಲ್ಲ ದುಡಿಯುವ ಗಂಡ ಸಹ ಈಗ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾನೆ. ಚಿಕ್ಕಮಕ್ಕಳು ಇಂತಹದರಲ್ಲಿ ಮನೆ ಖಾಲಿ ಮಾಡುವಂತೆ ಶೀಘ್ರವೇ ಗಡುವು ನೀಡಿದ್ದಾರೆ.
ಆದರೆ ಏನು ದಿಕ್ಕು ತೋಚದಾಗಿದೆ. ನನಗೆ ನ್ಯಾಯ ಕೊಡಿಸಿ ಎಂದು ನೊಂದ ಮಹಿಳೆ ಮಾಧ್ಯಮಕ್ಕೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾಳೆ.